Monday, January 30, 2012

ಆರ್ ಎಸ್ ಎಸ್ ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!


ಕನ್ನಡವನ್ನೇ ಧ್ಯಾನಿಸುವ ನೂರಾರು ಟೆಕಿಗಳು ಕಟ್ಟಿಕೊಂಡ ಸಂಘಟನೆ ಬನವಾಸಿ ಬಳಗ. ಇದು ಈಗ ದೊಡ್ಡಮಟ್ಟದಲ್ಲಿ ಬೆಳೆದಿದೆ. ಕನ್ನಡ ಭಾಷೆ, ಸಂಸ್ಕೃತಿ ಕುರಿತಾಗಿ ಬಳಗ ಕೈಗೊಂಡಿರುವ ಜಾಗೃತಿ ಕಾರ್ಯಗಳು ಶ್ಲಾಘನೀಯ. ಬನವಾಸಿ ಬಳಗದ ಬ್ಲಾಗ್ ಏನ್ ಗುರು ಕೂಡ ಕನ್ನಡದ ಜನಪ್ರಿಯ ಬ್ಲಾಗ್. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಗೆ ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿದೆ, ಹೇಗೆ ಇತರ ಧರ್ಮೀಯರ ಕುರಿತು ಅಸಹನೆ ಹೊಂದಿದೆ, ದೇಶೀಯ ಭಾಷೆಗಳ ಅಸ್ತಿತ್ವಕ್ಕೆ ಮುಳುವಾಗಿದೆ, ಸಾಮಾಜಿಕ ನ್ಯಾಯದ ವಿರೋಧವಾಗಿದೆ ಎಂಬ ಬಹುಮುಖ್ಯ ಅಂಶಗಳನ್ನು ಬ್ಲಾಗ್ ಆಧಾರ ಸಮೇತ ಮಂಡಿಸಿದೆ. ಪ್ರಾದೇಶಿಕ ಅಸ್ಮಿತೆಗಳನ್ನು ನಾಶಪಡಿಸುವ ಹುಸಿ ರಾಷ್ಟ್ರೀಯವಾದ ಎಷ್ಟು ಅಪಾಯಕಾರಿ ಎಂಬುದನ್ನು ಈ ಲೇಖನ ಸಮರ್ಪಕವಾಗಿ ವಿವರಿಸುತ್ತದೆ. ಸಂಪಾದಕೀಯದ ಓದುಗರಿಗೆ ಈ ಲೇಖನದ ಪೂರ್ಣ ಪಾಠ ಇಲ್ಲಿದೆ.
-ಸಂಪಾದಕೀಯ.

ಗೋಲ್ವಾಲ್ಕರ್
ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಒಂದು ದೊಡ್ಡ ಶಿಬಿರ ಹುಬ್ಬಳ್ಳಿಯಲ್ಲಿ ನಡೀತಿದೆ. ಈ ಶಿಬಿರದಲ್ಲಿ ಸಾವಿರಾರು ಆರೆಸ್ಸೆಸ್ಸಿಗರು ಪಾಲ್ಗೊಂಡಿದ್ದಾರೆ. ಸಮವಸ್ತ್ರ ಧರಿಸಿ, ಶಿಸ್ತಿನ ಸಿಪಾಯಿಗಳಾಗಿ ನಿನ್ನೆ ಇವರು ನಡೆಸಿದ ಪಥಸಂಚಲನವಂತೂ ನೋಡಿದವರ ಮೆಚ್ಚುಗೆಗೆ ಕಾರಣವಾಗುವಂತಿತ್ತು. ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣ, ಭಾರತೀಯ ಜನತಾ ಪಕ್ಷದ ಆಂತರಿಕ ಶಿಸ್ತು, ಭ್ರಷ್ಟಾಚಾರಗಳ ಬಗ್ಗೆಯೆಲ್ಲಾ ಅಲ್ಲಿ ಮಾತುಕತೆಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕನ್ನಡ - ಕನ್ನಡಿಗ- ಕರ್ನಾಟಕಗಳ ಬಗ್ಗೆಯಾಗಲೀ, ಭಾರತದ ಸಂವಿಧಾನದ ಬಗ್ಗೆಯಾಗಲೀ, ಒಕ್ಕೂಟ ವ್ಯವಸ್ಥೆಯ ಬಗ್ಗೆಯಾಗಲೀ, ಜಾತ್ಯಾತೀತತೆಯ ಬಗ್ಗೆಯಾಗಲೀ ಆರೆಸ್ಸೆಸ್ಸಿಗೆ ಇರುವ ನಿಲುವುಗಳನ್ನು ಅರಿತಾಗ ಈ ಸಂಭ್ರಮ ಆತಂಕವಾಗಿ ಬದಲಾಗುವುದರಲ್ಲಿ ಅಚ್ಚರಿಯಿಲ್ಲ!

ಸಂಘದ ಹೊರಮುಖ!

ಆರೆಸ್ಸೆಸ್ ಎನ್ನುವುದು ದೇಶದ ಅತ್ಯಂತ ಶಿಸ್ತುಬದ್ಧ ಸಾಮಾಜಿಕ ಸಂಘಟನೆ ಎಂದೇ ಗುರುತಾಗಿದೆ. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ಬಂದದ್ದಿದೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಹೆಸರುವಾಸಿಯಾಗಿದೆ. ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ, ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಇದೆಂಬ ಹೆಸರೂ ಸಂಘಕ್ಕಿದೆ. ಮನೆ ಮಠ ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇದರಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ತಮ್ಮದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವುದೂ ಕೂಡಾ ಸತ್ಯ. ಆದರೆ ವೈಯುಕ್ತಿಕ ಹಿರಿಮೆಗಳು, ಅನೇಕರ ನಿಸ್ವಾರ್ಥತೆ, ತ್ಯಾಗ, ಗಟ್ಟಿತನಗಳು ಬಳಕೆಯಾಗುತ್ತಿರುವ ಉದ್ದೇಶ ಮಾತ್ರಾ ದುರದೃಷ್ಟಕರವಾದುದ್ದಾಗಿದೆ.

ಸಂಘದ ಬೋಧನೆಯನ್ನು ಪ್ರಶ್ನಾತೀತವಾಗಿ ಒಪ್ಪುವ ಕಾರ್ಯಕರ್ತರ ಸೈನ್ಯವನ್ನೇ ಹೊಂದಿರುವ ಸಂಘವು, ಮೂಲತಃ ತಾನು ನಂಬಿರುವ ಸಿದ್ಧಾಂತಗಳಲ್ಲೇ ಪ್ರಜಾಪ್ರಭುತ್ವ ವಿರೋಧಿ, ವೈವಿಧ್ಯತಾ ವಿರೋಧಿ ನಿಲುವುಗಳನ್ನು ಹೊಂದಿರುವ ಪುರಾವೆಗಳನ್ನು, ಸಂಸ್ಥೆಯ ಪೂಜನೀಯ ಆದರ್ಶವಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಚಿಂತನಗಂಗಾ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧, ಪ್ರಕಾಶಕರು: ಸಾಹಿತ್ಯ ಸಂಗಮ ಪ್ರಕಾಶನ) ಪುಸ್ತಕದಲ್ಲಿ  ಕಾಣಬಹುದಾಗಿದೆ. ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಲುವಿನ ಸರಿತಪ್ಪುಗಳನ್ನು ವಿಶ್ಲೇಷಿಸದೆ, ರಾಷ್ಟ್ರೀಯ ಸ್ವಂಯಂಸೇವಕ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು!

ಭಾಷೆಗಳ ಬಗ್ಗೆ!

ವೈವಿಧ್ಯತೆಯನ್ನು ಹಳಿಯಲಾಗದ, ಆದರೆ ಒಪ್ಪಲಾಗದ ಮನಸ್ಥಿತಿಯನ್ನು, ಇಂತಹ ವೈವಿಧ್ಯತೆ ಇರುವುದರಿಂದಾಗಿಯೇ ಚಡಪಡಿಕೆ ಹೊಂದಿರುವುದನ್ನೂ ಈ ಕೆಳಗಿನ ಮಾತುಗಳು ಧ್ವನಿಸುತ್ತಿವೆ.
ನಮ್ಮ ರಾಷ್ಟ್ರೀಯ ಪರಂಪರೆಯ ವೈವಿಧ್ಯವು ಭಾಷೆಗಳ ಕ್ಷೇತ್ರಗಳಲ್ಲೂ ವ್ಯಕ್ತಗೊಂಡಿದೆ.. ಎಲ್ಲಾ ಭಾಷೆಗಳೂ ಮೂಲತಃ ಒಂದೇ. ವಾಸ್ತವವಾಗಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಸಂಸ್ಕೃತಿಯ ದಿವ್ಯ ಪರಿಮಳವನ್ನು ಹರಡುವ ನವವಿಕಸಿತ ಕುಸುಮಗಳಂತೆ. ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದರೆ ಭಾಷೆಗಳ ಆ ಸಾಮ್ರಾಜ್ಞಿ ದೇವವಾಣಿ ಸಂಸ್ಕೃತ. ಅದರ ಸಂಪನ್ನತೆ ಮತ್ತು ಪರಂಪರಾಗತ ಪಾವನ ಸಂಬಂಧಗಳಿಂದಾಗಿ ಅದೊಂದೇ ನಮ್ಮ ರಾಷ್ಟ್ರೀಯ ಏಕತೆಗೆ ಬಲನೀಡುತ್ತಿರುವ ಒಂದು ಮುಖ್ಯ ಅಂಶ. ಆದರೆ ದುರದೃಷ್ಟವಶಾತ್ ಅದು ಇಂದು ಸಾಮಾನ್ಯ ಬಳಕೆಯಲ್ಲಿಲ್ಲ. ಅದನ್ನು ಬಳಕೆಗೆ ತರುವ ನೈತಿಕ ಅಭಿಮಾನವಾಗಲೀ, ಕೆಚ್ಚೆದೆಯಾಗಲೀ ನಮ್ಮ ಇಂದಿನ ಆಡಳಿತಗಾರರಿಗಿಲ್ಲ.
 (ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಏಕೆ ತಲೆ ಎತ್ತುತ್ತಿವೆ ಗೊತ್ತಾಯ್ತಲ್ಲಾ?)

ಇಂಗ್ಲೀಶ್ ನಮ್ಮ ಮೇಲೆ ಹೇರಲ್ಪಟ್ಟ ಕೃತಕ ಹೊರೆ. ಇದನ್ನು ಕಿತ್ತೆಸೆಯಬೇಕು. ಇಂಗ್ಲೀಶ್ ಮುಂದುವರಿಕೆ ಮಾನಸಿಕ ದಾಸ್ಯದ ಲಕ್ಷಣ. ಸಂಪರ್ಕ ಭಾಷೆಯ ಸಮಸ್ಯೆಗೆ ಪರಿಹಾರವೇನು? ಸಂಸ್ಕೃತವು ಆ ಸ್ಥಾನವನ್ನು ಪಡೆಯುವವರೆಗೆ ಅನುಕೂಲದ ದೃಷ್ಟಿಯಿಂದ ಹಿಂದಿಗೆ ಆದ್ಯತೆ ನೀಡಬೇಕು. ಯಾಕೆಂದರೆ ದೇಶದ ಬಹುಭಾಗದ ಜನರು ಬಳಸುವುದು ಹಿಂದಿಯನ್ನೇ. ಕಲಿಯುವುದಕ್ಕೆ ಮತ್ತು ಆಡುವುದಕ್ಕೆ ಅತ್ಯಂತ ಸುಲಭವಾದ ಭಾಷೆಯೂ ಅದೇ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಕುಂಭ ಅಥವಾ ಬೇರಾವುದಾದರೂ ಮೇಳಕ್ಕೆ ಕಾಶಿಗಾಗಲೀ, ಪ್ರಯಾಗಕ್ಕಾಗಲೀ ಹೋದರೆ, ದೂರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳಿಂದ ಅಲ್ಲಿ ಕಿಕ್ಕಿರಿದು ನೆರೆಯುವ ಅಗಾಧ ಜನಸ್ತೋಮ ಹಿಂದಿಯನ್ನೇ, ಅದೆಷ್ಟೇ ಅಪಕ್ವವಾಗಿರಲೀ, ಬಳಸುವುದನ್ನು ಕಾಣುತ್ತೇವೆ.

ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು. ವಾಸ್ತವವಾಗಿ ಬ್ರಿಟೀಷರ ಆಳ್ವಿಕೆಯಲ್ಲೂ ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಒಂದೇ ಭಾಷೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇವೆಲ್ಲಾ ಭಾಷೆಗಳನ್ನೂ ನಾಶಮಾಡುವುದನ್ನು ಯಾವನೂ ಸಹಿಸಲಾರ. ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಶಂಕೆ, ಭೀತಿಗಳು ಕೇವಲ ಕಟ್ಟುಕತೆ, ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

ಒಟ್ಟು ಸಾರವೆಂದರೆ ಹಿಂದೀಯನ್ನು ನೀವೆಲ್ಲಾ ಒಪ್ಪಿ. ಬ್ರಿಟೀಷರು ಆಳುವಾಗಲೇ ಭಾರತೀಯ ಭಾಷೆಗಳು ಉದ್ಧಾರವಾಗಿದ್ದವು, ಹಿಂದೀಲಿ ಆಳಿದರೆ ಏನಾಗುತ್ತದೆ? ಎನ್ನುವ ನಿಲುವು ಕಾಣುತ್ತದೆ. ಇಂದು ಹಿಂದೀ ಬರದಿದ್ದರೆ ಕೆಲಸ ಕೊಡಲ್ಲಾ ಎಂದು ನಮ್ಮಲ್ಲಿ ಹುಟ್ಟಿಕೊಂಡಿರುವ ಪರಿಸ್ಥಿತಿ ಆಕ್ರಮಣವಲ್ಲವೇ? ಹಿಂದೀ ಯಜಮಾನಿಕೆಯಲ್ಲವೇ?

ಒಕ್ಕೂಟದ ಬಗ್ಗೆ!

ಸ್ವಯಂನಿರ್ಣಯಾಧಿಕಾರದ ಘೋಷಣೆಯ ಈ ತಪ್ಪು ಅನ್ವಯವನ್ನು ಕಾಶ್ಮೀರಕ್ಕೆ ಮತ್ತು ಈಗ ಗೋವಾಕ್ಕೆ ವಿಸ್ತರಿಸಲಾಗಿದೆ. ಕಾಶ್ಮೀರಿಗಳೇ ತಮ್ಮ ಭವಿಷ್ಯವನ್ನು ತೀರ್ಮಾನಿಸಬೇಕು ಎಂದರೆ ದೇಶದ ಏಕತ್ವವನ್ನೂ ಭಾರತದ ಜನರ ಏಕತ್ವವನ್ನೂ ತಿರಸ್ಕರಿಸಿದಂತೆ.
ಆನಂತರ ಬಂತು ನಮ್ಮ ಸಂವಿಧಾನ. ಇದು ನಮ್ಮ ದೇಶವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತ್ಯೇಕವೇ ಆದ ಘಟಕಗಳಾಗಿ ಒಡೆದು ಪ್ರತಿಯೊಂದಕ್ಕೂ ಒಂದು ರಾಜ್ಯವನ್ನು ಕೊಟ್ಟು ಎಲ್ಲವನ್ನೂ ಒಂದು ಒಕ್ಕೂಟವಾಗಿ ಸಂಯುಕ್ತಗೊಳಿಸಿತು. ಪ್ರತಿಭಾಷೆಯ ಗುಂಪು ಒಂದು ಜನಾಂಗವಾಗಿ ತನ್ನದೇ ಪ್ರತ್ಯೇಕ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿಸಮೃದ್ಧವಾಗಿ ಸ್ವಯಮಾಧಿಕಾರವನ್ನು ಪಡೆದ ರಾಜ್ಯಗಳ ಒಕ್ಕೂಟದ ಗೀಳು ನಮ್ಮ ನಾಯಕರ ಮನಸ್ಸನ್ನೂ ವಿಚಾರಶಕ್ತಿಯನ್ನೂ ಆಕ್ರಮಿಸಿಬಿಟ್ಟಿತ್ತು.
ಇವು ನಿರಾಸೆಗೊಳಿಸುವ ಯೋಚನೆಗಳೇ. ಆದರೆ ನಾವು ನಿರಾಸೆಯಿಂದ ಕೈಕಾಲು ಸೋಲಬೇಕಾಗಿಲ್ಲ: ಏಕೆಂದರೆ ಇದಕ್ಕೆ ಒಂದು ಮದ್ದುಂಟು.
ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೇ ಸ್ವಯಮಾಧಿಕಾರವುಳ್ಳ ಅಥವಾ ಭಾಗಶಃ ಸ್ವಯಮಾಧಿಕಾರವುಳ್ಳ ರಾಜ್ಯಗಳ ಅಸ್ತಿತ್ವವನ್ನೇ ಅಳಿಸಿಹಾಕಬೇಕು.

ಸಾಮಾಜಿಕ ಸಮಸ್ಯೆಯ ಸರಳೀಕರಣ!

ಮೀಸಲಾತಿ ವ್ಯವಸ್ಥೆಯ ಬಗ್ಗೆ ಗುರೂಜಿಯವವರ ಅನಿಸಿಕೆ:
ನಮ್ಮ ಜನರಲ್ಲಿ ವಿವಿಧ ವಿಭಾಗಗಳವರಿಗೆ ಹರಿಜನರು, ನಿಮ್ನ ಜಾತಿಯವರು, ನಿಮ್ನ ಬುಡಕಟ್ಟಿನವರು ಹೀಗೆಲ್ಲಾ ಹೆಸರುಗಳನ್ನು ಕೊಡಾಲಾಗುತ್ತಿದೆ. ಹಣದಾಸೆ ತೋರಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿರುವುದು.
ಇದನ್ನು ಓದಿದಾಗ ಆರೆಸ್ಸೆಸ್ ಮೀಸಲಾತಿ ಬಗ್ಗೆ ಎಂತಹ ನಿಲುವನ್ನು ಹೊಂದಿದೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಇರಲಿಲ್ಲ ಎನ್ನುವಂತಹ ಅನಿಸಿಕೆಯನ್ನು ಗುರೂಜಿ ಮಾತುಗಳು ಧ್ವನಿಸುತ್ತಿರುವುದು ಸಂಘ ಇಡೀ ಸಮಾಜದ ಸಮಸ್ಯೆಗಳನ್ನು ಸರಳೀಕರಿಸುತ್ತಿರುವುದನ್ನು ತೋರುತ್ತದೆ. ಜಾತೀಯತೆ ತೊಲಗಬೇಕು ಅನ್ನುವ ನಿಲುವು ಸಂಘಕ್ಕಿದೆ ಎನ್ನಲಾಗುತ್ತದೆ, ಆದರೆ ಜಾತಿಯ ಕಾರಣದಿಂದಲೇ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಕ್ಕೆ ಸಂಘವು ದೇವಸ್ಥಾನಕ್ಕೆ ಪ್ರವೇಶ, ಬಾವಿನೀರು ಬಳಸಲು ಅನುಮತಿಯಂತಹ ಮೇಲ್ಮೇಲಿನ ಪರಿಹಾರಗಳಿಗಿಂತಲೂ ಮಿಗಿಲಾದ ಪರಿಹಾರವನ್ನು ನೀಡಲಾರದಾಗಿದೆ.

ಸಂಘದ ಧರ್ಮದೃಷ್ಟಿ!

ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ.

ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ.
ಕೆಲವು ಸಮಾಜ ಬಂಧುಗಳು ನಮ್ಮ ಜೊತೆ ಬಿಟ್ಟು ಕಳೆದ ಕೆಲವು ಶತಮಾನಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಿದ್ದವರು ಈಗ ಮರಳಿ ನಮ್ಮ ಬಳಿಗೆ ಬಂದಲ್ಲಿ ಅವರಿಗೆ ನಮ್ಮ ಪ್ರೀತಿ ಗೌರವಗಳನ್ನು ತೋರಿಸದೆ, ಸಂತೋಷ ಪಡದೆ ಹೇಗಿದ್ದೇವು? ಇಲ್ಲಿ ಬಲಾತ್ಕಾರವೇನೂ ಇಲ್ಲ. ವಿಷಯವನ್ನು ಸರಿಯಾಗಿ ತಿಳಿದುಕೊಂಡು ಅವರು ಹಿಂದಕ್ಕೆ ಬರಲಿ. ಉಡುಪು, ಸಂಪ್ರದಾಯ, ವಿವಾಹ ಪದ್ಧತಿ, ಅಂತ್ಯಸಂಸ್ಕಾರ ಇಂತಹವುಗಳಲ್ಲೆಲ್ಲ ಅವರು ತಮ್ಮ ಪೂರ್ವಿಕರ ಹಿಂದುಜೀವನ ವಿಧಾನವನ್ನು ಸ್ವೀಕರಿಸಲಿ ಎಂಬುದಷ್ಟೇ ನಮ್ಮ ಕರೆ, ಪ್ರಾರ್ಥನೆ.

ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!

ಈ ನಾಡಿನ ಒಳಗಿನ ಅಪಾಯಗಳೆಂದು ಇವರು ಬಗೆದಿರುವುದು ಮೂರನ್ನು. ಮೊದಲನೆಯದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು! ಹೀಗೆಂಬ ಮೂರು ಬೇರೆಬೇರೆ ಅಧ್ಯಾಯಗಳೇ ಈ ಪುಸ್ತಕದಲ್ಲಿದೆ. ಇದೇ ಇಂದಿಗೂ ಸಂಘದ ನಿಲುವಾಗಿದೆಯೇ?

ಆರೆಸ್ಸೆಸ್ ಮತ್ತು ಕರ್ನಾಟಕ 

ಇಂತಹ ನಿಲುವುಗಳ ಸಂಘವು ಕರ್ನಾಟಕದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಷ್ಟೂ ಕನ್ನಡ ಕನ್ನಡಿಗ ಕರ್ನಾಟಕಗಳ ಅಸ್ತಿತ್ವಕ್ಕೇ ಎರವಾದೀತು. ಏಕೆಂದರೆ ನಾಡಿನ ಆಡಳಿತದಲ್ಲಿ ಭಾಷೆಯಾಗಿ ಕನ್ನಡಕ್ಕಿಂತಾ ಹಿಂದೀಗೆ ಪ್ರಾಮುಖ್ಯತೆ. ನಾಡಾಗಿ ಒಗ್ಗೂಡಿದ ಕರ್ನಾಟಕಕ್ಕಿಂತಾ ಕನ್ನಡನಾಡನ್ನು ಪುಟ್ಟ ಪುಟ್ಟ ರಾಜ್ಯಗಳಾಗಿ ಒಡೆಯುವುದಕ್ಕೇ ಪ್ರಾಮುಖ್ಯತೆ ಮತ್ತು ಕನ್ನಡಿಗನಿಗಿಂತಾ ಕನ್ನಡಿಗರ ನಿಷ್ಠೆಯನ್ನೆಲ್ಲಾ ಧರ್ಮದ ಹೆಸರಲ್ಲಿ ಪುಟಕ್ಕಿಟ್ಟು ನೋಡುವುದಕ್ಕೆ ಪ್ರಾಮುಖ್ಯತೆ. ಕನ್ನಡಿಗ ಮುಸಲ್ಮಾನ, ಕನ್ನಡಿಗ ಕ್ರೈಸ್ತನಿಗಿಂತಾ ನಮಗೆ ಸಂಬಂಧವೇ ಇರದ ಹೊರನಾಡಿನ ಹಿಂದುವಿಗೆ ಪ್ರಾಮುಖ್ಯತೆ!

ಸಂಘ ರಾಜಕೀಯಕ್ಕಿಳಿಯಲಿ!

ಇದೇ ಸಂಘದವರಿಗೆ ಬಿಜೆಪಿಯೆನ್ನುವ ಇನ್ನೊಂದು ಮುಖವಿದೆ. ಬಿಜೆಪಿಯೂ ಆರೆಸ್ಸೆಸ್ಸೂ ಒಂದೇ ಎನ್ನುವುದಕ್ಕೆ ಗಣವೇಶ ಧರಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಫೋಟೋಗಳಿರುವುದೇ ಸಾಕು! ಈ ಮುಖವಾಡ ಧರಿಸಿದ ಪಕ್ಷದ ಸಿದ್ಧಾಂತ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತಾಡುತ್ತದೆ, ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತಾಡುತ್ತದೆ. ಮೀಸಲಾತಿಯ ಪರವಾಗಿ ಮಾತಾಡುತ್ತದೆ, ಚುನಾವಣೆ ಹತ್ತಿರ ಬಂದಾಗ, ಮುಸ್ಲಿಂರ ಮತಕ್ಕಾಗಿ ಗೆದ್ದ ಮೇಲೆ ಮುಸ್ಲಿಂವೊಬ್ಬರನ್ನು ಮಂತ್ರಿ ಮಾಡುತ್ತೇನೆ ಎನ್ನುತ್ತಾ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತದೆ... ಸಂಘವೇನೂ ಕಮ್ಮಿಯಿಲ್ಲ, ಬಿಜೆಪಿ ನಾಯಕರುಗಳಿಗೆ ಶಿಸ್ತಿನ ಪಾಠ ಹೇಳುತ್ತೆ, ಕೇಶವಶಿಲ್ಪಕ್ಕೆ ಕರೆಸಿ ಬುದ್ಧಿ ಹೇಳುತ್ತೆ. ತೆಪ್ಪಗಿರಲು ಆಜ್ಞೆ ಮಾಡುತ್ತದೆ...ವಿಪರ್ಯಾಸವೆಂದರೆ ಹೀಗೆ ಕೈಗೊಂಬೆಯಂತೆ ಆಡಾಡಿಸುತ್ತಲೇ ಸೋನಿಯಾ ಗಾಂಧಿಯ ಕೈಗೊಂಬೆ ಕಾಂಗ್ರೆಸ್ ಎನ್ನುವ ಆರೋಪವನ್ನೂ ಮಾಡುತ್ತದೆ. ಸಂಘ ಹೀಗೆ ಬಿಜೆಪಿಯ ಮೂಲಕ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದುದನ್ನು ಹೇಳಿಸಿ, ಸೀಟು ಗೆಲ್ಲಿಸಿ, ಸರ್ಕಾರ ಮಾಡಿಸಿ, ಆಮೇಲೆ ತಮ್ಮ ಸಿದ್ಧಾಂತದ ಜಾರಿ ಮಾಡುವ ಮೋಸಗಾರಿಕೆಗಿಂತಾ ನೇರವಾಗಿ ತಾನೇ, ತನ್ನ ಸಿದ್ಧಾಂತಗಳನ್ನು ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ರಾಜಕಾರಣಕ್ಕೆ ಇಳಿಯುವುದು ಪ್ರಾಮಾಣಿಕತೆಯೆನ್ನಿಸುತ್ತದೆ!

ಕೃಪೆ: ಏನ್ ಗುರು? ಕಾಫಿ ಆಯ್ತಾ? (ಬನವಾಸಿ ಬಳಗದ ಬ್ಲಾಗ್)

Friday, January 27, 2012

ವಿವೇಕಾನಂದ, ಅಮೀನ್ ಮಟ್ಟು ಮತ್ತು ಅವಿವೇಕಿಗಳು...


ಬಡಿಗೆ ಕೈಗೆ ಕೊಟ್ಟು ಬಡಿಸಿಕೊಂಡಂತಾಗಿದೆ ಕೆಲವು ಅವಿವೇಕಿಗಳಿಗೆ.

ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯ ತಮ್ಮ ಅನಾವರಣ ಅಂಕಣದಲ್ಲಿ ವಿವೇಕಾನಂದರನ್ನು ಕುರಿತು ಬರೆದ ಲೇಖನಕ್ಕೆ ಕೆಟ್ಟಾಕೊಳಕು ರೀತಿಯಲ್ಲಿ ಪ್ರತಿಕ್ರಿಯಿಸಿದ ಅವಿವೇಕಿಗಳು ಈಗ ಪ್ರಾಯಶ್ಚಿತ್ತ ಅನುಭವಿಸುವಂತಾಗಿದೆ.

ವಿವೇಕಾನಂದರು ಹೇಗೆ ಒಬ್ಬ ಸಾಮಾನ್ಯ ಮನುಷ್ಯರಾಗಿದ್ದುಕೊಂಡೇ ಮಹಾನ್ ಚೇತನವಾಗಲು ಸಾಧ್ಯವಾಯಿತು ಎಂಬುದನ್ನಷ್ಟೇ ಅಮೀನ್ ಮಟ್ಟು ಬರೆದಿದ್ದರು. ತಿಳಿಗೇಡಿಗಳು ಶಿವಮೊಗ್ಗದ ಪ್ರಜಾವಾಣಿ ಕಚೇರಿಯಲ್ಲಿ ಗೂಂಡಾಗಿರಿ ನಡೆಸಿದರು. ಬೆಂಗಳೂರಿನ ಪ್ರಜಾವಾಣಿ ಕಚೇರಿ ಮುಂದೆಯೂ ಕೆಲವರು ಮೌನ ಮೆರವಣಿಗೆ ನಡೆಸಿದರು. ಅಸಹ್ಯವೆಂದರೆ ದಿನೇಶ್ ಅವರ ಮೊಬೈಲ್ ನಂಬರಿಗೆ ಪ್ರಾಣ ಬೆದರಿಕೆಯ ಮೆಸೇಜುಗಳ ರವಾನೆಯಾಯ್ತು, ಕೆಲವರು ಕರೆ ಮಾಡಿಯೂ ಬೆದರಿಕೆಯೊಡ್ಡಿದರು. ಫೇಸ್ ಬುಕ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿ ದಿನೇಶ್ ಅವರನ್ನು ನಿಂದಿಸುವ ಬರಹಗಳು ಪ್ರಕಟವಾದವು.

ಇದೆಲ್ಲ ನಡೆಯುವಾಗ ಸ್ವಲ್ಪ ತಡವಾಗಿ ಪ್ರಗತಿಪರ ಸಂಘಟನೆಗಳು ಕಾರ್ಯಾಚರಣೆಗಿಳಿದವು. ದಿನೇಶ್ ಅವರ ಬರಹವನ್ನು ಸಮರ್ಥಿಸಿಕೊಂಡು ಪ್ರಗತಿಪರರೂ ಚಳವಳಿಗೆ ಇಳಿದರು. ಶಿವಮೊಗ್ಗದಲ್ಲಿ ಗೂಂಡಾಗಿರಿ ನಡೆಸಿದ್ದವರನ್ನು ಅಲ್ಲಿನ ಜನರೇ ಮನೆಮನೆಯಿಂದ ಎಳೆತಂದು ಪೊಲೀಸರಿಗೆ ಒಪ್ಪಿಸಿದರು. ಬೆಂಗಳೂರಿನಲ್ಲೂ ವಿವೇಕಾನಂದರ ಅಭಿಮಾನಿಗಳೆಂದು ಹೇಳಿಕೊಂಡವರು ನಡೆಸಿದ ಮೆರವಣಿಗೆಯನ್ನು ಮೀರಿಸುವ ದೊಡ್ಡ ಪ್ರತಿಭಟನೆಯೂ ನಡೆಯಿತು. ವಿವೇಕಾನಂದರ ಕುರಿತು ದಲಿತ ಸಂಘಟನೆಗಳು ಎರಡು ವಿಚಾರ ಸಂಕಿರಣಗಳನ್ನು ನಡೆಸಿದವು. ಪ್ರಜಾವಾಣಿ ಪತ್ರಿಕೆ ಸ್ವಲ್ಪ ತಡವಾಗಿಯಾದರೂ ಶಿವಮೊಗ್ಗ ಘಟನೆಯನ್ನು ಖಂಡಿಸುವ ಕಟುವಾದ ಸಂಪಾದಕೀಯ ಬರೆದು ದಿನೇಶ್ ಅವರ ಬೆನ್ನಿಗೆ ನಿಂತಿತು. ಪ್ರಜಾವಾಣಿಯ ವಾಚಕರ ವಾಣಿಯಲ್ಲೂ ಅವಿವೇಕಿಗಳನ್ನು ಖಂಡಿಸುವ ಪತ್ರಗಳು ಪ್ರಕಟಗೊಂಡವು. ಬ್ಲಾಗು, ಫೇಸ್ ಬುಕ್ ಗಳಲ್ಲಿ ಅಸಲಿ ವಿವೇಕಾನಂದರನ್ನು ಪರಿಚಯಿಸುವ ಅಭಿಯಾನವೂ ನಡೆಯಿತು. ಎಲ್ಲಕ್ಕಿಂತ ಮುಖ್ಯವಾಗಿ ತಮಗೆ ಬೆದರಿಕೆ ಕರೆ, ಎಸ್‌ಎಂಎಸ್‌ಗಳನ್ನು ಹಾಕಿದ್ದವರ ದೂರವಾಣಿ ಸಂಖ್ಯೆಗಳನ್ನೆಲ್ಲ ಪಟ್ಟಿ ಮಾಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಿನೇಶ್ ಅವರು ದೂರೊಂದನ್ನು ದಾಖಲಿಸಿದ್ದಾರೆ ಎಂಬ ಮಾಹಿತಿ ಇದೆ.

ವಿವೇಕಾನಂದರನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದವರಿಗೆ ಈ ಎಲ್ಲ ಬೆಳವಣಿಗೆಗಳು ದೊಡ್ಡ ಸೋಲು. ದಿನೇಶ್ ಅವರ ಲೇಖನದಲ್ಲಿ ಆಕ್ಷೇಪಾರ್ಹವಾದ ಅಂಶಗಳಿದ್ದರೆ ಅದನ್ನು ಪ್ರಶ್ನಿಸುವ, ದಾಖಲೆ ಆಧಾರವಾಗಿಟ್ಟುಕೊಂಡು ಪ್ರತಿವಾದ ಮಾಡುವ ಎಲ್ಲ ಅವಕಾಶವೂ ಇದ್ದರೂ ಕಚೇರಿಗೆ ನುಗ್ಗಿ ಧ್ವಂಸ ಮಾಡುವ, ಬೆದರಿಕೆ ಕರೆ ಮಾಡುವ ಕುಚೇಷ್ಟೆಗೆ ಇಳಿದವರು ತಕ್ಕ ಪಾಠವನ್ನೇ ಕಲಿತಿದ್ದಾರೆ.

ನಿಮಗೆ ನೆನಪಿರಬಹುದು. ಸಂಪಾದಕೀಯದಲ್ಲಿ ಹಿಂದೆ ಧರ್ಮ-ಜಾತಿಯ ಜಿಜ್ಞಾಸೆ ಶುರುವಾಗಿದ್ದಾಗ ವಿವೇಕಾನಂದರ ನುಡಿಗಳನ್ನು ಬಳಸಿ ವಿವೇಕ ಮೂಡಿಸುವ ಪ್ರಯತ್ನವೊಂದನ್ನು ನಡೆಸಿದ್ದೆವು. ವಿವೇಕಾನಂದರು ನಿಸ್ಸಂಶಯವಾಗಿ ಭಾರತಕ್ಕೆ ಬೆಳಕು ಕೊಟ್ಟ ಮಹಾಪುರುಷರು. ಅವರನ್ನು ಕೆಲವರ ಕಪಿಮುಷ್ಠಿಯಿಂದ ಬಿಡಿಸುವ ಕೆಲಸವನ್ನು ಮಾಡಬೇಕಿದೆ. ದಿನೇಶ್ ಅವರು ಆ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸಬೇಕು.