Thursday, June 30, 2011

ಚಿತ್ರದುರ್ಗ ಗೋಷ್ಠಿ: ಮಾಧ್ಯಮಗಳು ಜನರ ಪಕ್ಷಪಾತಿಯಾಗಿರಬೇಕು...

ಚಿತ್ರದುರ್ಗದಲ್ಲಿ ನಡೆದ ಮಾಧ್ಯಮ ಕರ್ನಾಟಕ ವಿಚಾರಗೋಷ್ಠಿಯ ಕುರಿತಂತೆ ಅದರಲ್ಲಿ ಭಾಗವಹಿಸಿದ್ದ ಪತ್ರಕರ್ತರೊಬ್ಬರು ಪುಟ್ಟ ವರದಿಯನ್ನು ಕಳುಹಿಸಿದ್ದಾರೆ. ಮಾಧ್ಯಮ ಸೆಮಿನಾರುಗಳಲ್ಲಿ ಕೇಳಿಬರುವ ಒಣ ಅಕಾಡೆಮಿಕ್ ಚರ್ಚೆಗಿಂತ ಹೊರತಾಗಿ ಈ ಗೋಷ್ಠಿ ನಡೆದಿರುವ ಬಗ್ಗೆ ವರದಿಯಲ್ಲಿ ಮಾಹಿತಿಯಿದೆ. ಇದು ಸಂತೋಷದ ವಿಷಯ. -ಸಂ

ಪತ್ರಿಕೆ ಉದ್ಯಮವಾಗಿ ಬಿಟ್ಟಿದೆ. ಮಾಲೀಕರ ಅಣತಿಯಂತೆ ಇಲ್ಲಿ ಎಲ್ಲವೂ ನಡೆಯುತ್ತೆ. ನಾವು ಇಲ್ಲಿ ಏನೋ ಮಾಡುವಂತಿಲ್ಲ. ಅಸಹಾಯಕ ಪರಿಸ್ಥಿತಿ ನಮ್ಮದು. ದೃಶ್ಯ ಮಾಧ್ಯಮದ್ದು ಇದೇ ಕಥೆ. ಟಿ.ಆರ್.ಪಿ. ರೇಟು ಆಧರಿಸಿಯೇ ಕಾರ್ಯಕ್ರಮ ರೂಪಿಸಬೇಕು. ನಾವು ಏನೋ ಮಾಡುವಂತಿಲ್ಲ.

ಚಿತ್ರದುರ್ಗದಲ್ಲಿ ಜೂನ್ ೨೫-೨೬ರಂದು ನಡೆದ ಮಾಧ್ಯಮ ಕರ್ನಾಟಕ ವಿಚಾರ ಸಂಕಿರಣದಲ್ಲಿ ಮಾತನಾಡಿದ ಹಲವು ಪತ್ರಕರ್ತರ ಅಸಹಾಯಕ ಗೊಣಗಾಟವಿದು.

ಅಷ್ಟೊಂದು ಪರಿಸ್ಥಿತಿ ಕೆಟ್ಟು ಹೋಗಿದ್ದರೆ ಅಲ್ಲಿಂದ ಹೊರಗೆ ಬನ್ನಿ, ಹೊಟ್ಟೆಪಾಡಿಗೆ ಏನಾದರೂ ಕೆಲಸ ಮಾಡಿ, ಕನಿಷ್ಠ ಮಾನವಂತರಾಗಿ ನಿಮಗೆ ತಿಳಿದಂತೆ ಕೆಲಸ ಮಾಡಲಾದರೂ ಸಾಧ್ಯವಾಗುತ್ತೆ ಎನ್ನುವ ಹತಾಶ ಪ್ರಶ್ನೆಯೂ ಸಭಿಕರಿಂದ ತೂರಿಬಂತು.

ಭಾಗವಹಿಸಿದ್ದ ಬಹುತೇಕರು ಪತ್ರಕರ್ತರೇ ಆಗಿದ್ದರಿಂದಲೂ ಏನೋ, ಇಡೀ ಗೋಷ್ಠಿಗೇ ಒಂದು ಬಗೆಯ ಆತ್ಮಾವಲೋಕನದ ಸ್ವರೂಪ ಬಂದಿತ್ತು. ಒಂದಷ್ಟು ಜನರದ್ದು ಏನೂ ಮಾಡಲಾಗದ ಅಸಹಾಯಕತೆಯಿಂದ ಹೊರಬರುವ ಹಳಹಳಿಕೆ. ಮತ್ತೆ ಕೆಲವರದು ಇದನ್ನು ಮೀರಿ ನಿಲ್ಲುವ ಉತ್ಸಾಹ. ಒಟ್ಟು ಗೋಷ್ಠಿ ಆಶಾವಾದವನ್ನೇ ಧ್ವನಿಸಿದ್ದು ಸಮಾಧಾನದ ಸಂಗತಿ.

ವಿಚಾರ ಸಂಕಿರಣದ ಆಶಯ ನುಡಿ ನುಡಿದು ಎರಡು ದಿನಗಳ ಕಾಲ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಎಲ್ಲವನ್ನೂ ಕೇಳಿ, ಆಗಾಗ ಪ್ರತಿಕ್ರಿಯಿಸುತ್ತಿದ್ದ ಪ್ರಜಾವಾಣಿ ಸಹಾಯಕ ಸಂಪಾದಕ ದಿನೇಶ್ ಅಮೀನ್ ಮಟ್ಟು ಪತ್ರಿಕೆ ಉದ್ಯಮವಾಗಿದ್ದರೂ ಅಲ್ಲಿ ಮಾಲೀಕರಿಗೂ ಕೆಲವು ಸಮಸ್ಯೆಗಳಿವೆ. ಪತ್ರಕರ್ತರಿಗೆ ತೀರಾ ಅಸಹಾಯಕರೇನಲ್ಲ. ಅದೊಂದು ನೆಪ ಅಷ್ಟೇ. ಸಾಮಾಜಿಕ ಸಮಸ್ಯೆಗಳ ಬಗ್ಗೆ, ಜನಪರವಾಗಿ ಬರೆಯಬೇಕೆಂದರೆ ಯಾರು ಬೇಡ ಎಂದು ಹೇಳುತ್ತಾರೆ. ಬರೆಯುವ ಮನಸ್ಸು ಇರಬೇಕಷ್ಟೇ. ಸ್ವಲ್ಪ ರಿಸ್ಕ್ ತಗೋಬೇಕು. ಅವಕಾಶ ಸೃಷ್ಟಿಸಿಕೊಳ್ಳಬೇಕು. ಪತ್ರಕರ್ತ ನಿಷ್ಪಕ್ಷಪಕ್ಷಪಾತಿಯಾಗಿರಬೇಕು ಎಂಬುದೇ ಸುಳ್ಳು, ಪತ್ರಕರ್ತ ಜನರ ಪಕ್ಷಪಾತಿಯಾಗಿರಬೇಕು ಎಂದರು.

ಹಣ ಮಾಡಬೇಕಿಂದಿದ್ದರೆ ಬೇರೆ ವೃತ್ತಿಗಳಿವೆ, ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಿ. ಆದರೆ ದುಡ್ಡು ಮಾಡಲು ಈ ವೃತ್ತಿಗೆ ಬರಬೇಡಿ. ಇಂದಿರಾಗಾಂಧಿ ಪತ್ರಕರ್ತರ ಹಕ್ಕುಗಳನ್ನು ನಿರ್ಬಂಧಿಸಿದ್ದರಿಂದಾಗಿ ದೇಶದ ಪತ್ರಕರ್ತರೆಲ್ಲರೂ ಒಂದಾದರು, ಹೋರಾಟ ನಡೆಸಿದರು. ಈಗ ಇಂದಿರಾಗಾಂಧಿಯಂಥವರು ಇಲ್ಲ. ಎಲ್ಲ ರಾಜಕಾರಣಿಗಳು ಪತ್ರಕರ್ತರ ಮಿತ್ರರಾಗುತ್ತಿದ್ದಾರೆ. ಪತ್ರಕರ್ತರಿಗೆ ಇಂದಿರಾ ಅವರಂಥ ಶತ್ರುಗಳಿಗಿಂತ ಈಗಿನ ರಾಜಕಾರಣಿಗಳಂಥ ಮಿತ್ರರು ಅಪಾಯಕಾರಿ.

ಇವತ್ತಿನ ಲಾಭಕೋರ, ಕೊಳ್ಳುಬಾಕ ಸಮಾಜದಲ್ಲಿ ಪತ್ರಕರ್ತರು ತಮ್ಮ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ನಿಮ್ಮನ್ನು ಅಪ್ರಮಾಣಿಕಗೊಳಿಸುವ ಒತ್ತಡ ಮನೆಯಲ್ಲೇ, ಕಚೇರಿಯಲ್ಲೇ ಆರಂಭವಾಗಬಹುದು. ಜನಪರ ಧ್ಯೇಯವುಳ್ಳ ಪತ್ರಕರ್ತ ಇದನ್ನು ಮೀರಬೇಕು... ಹೀಗೆ ಹೇಳುತ್ತ ಹೋದರು ದಿನೇಶ್ ಅಮೀನ್ ಮಟ್ಟು.

ವಿಚಾರ ಸಂಕಿರಣದ ಉದ್ಘಾಟನೆ ನಡೆಸಿದ ಹಿರಿಯ ಪತ್ರಕರ್ತ ಸತ್ಯ ಕಳೆದ ದಿನಗಳನ್ನು ನೆನಪು ಮಾಡಿಕೊಂಡು ವರ್ತಮಾನದ  ಪತ್ರಕರ್ತರಲ್ಲಿ ವೃತ್ತಿನಿಷ್ಠೆ ಕಾಣುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಸಮಯ ಸುದ್ದಿ ವಾಹಿನಿ ಮುಖ್ಯಸ್ಥ ಶಶಿಧರ್ ಭಟ್ ಹಿಂದೆ ನಾವೆಲ್ಲ ಈ ವೃತ್ತಿಗೆ ಬಂದಾಗ ರೈತ, ದಲಿತ, ಕನ್ನಡ ಚಳವಳಿಗಳು ಉತ್ತುಂಗದಲ್ಲಿದ್ದವು. ನಾವೆಲ್ಲರೂ ಅವುಗಳ ಪ್ರಭಾವದಿಂದ ಹೊರತಾಗಿರಲಿಲ್ಲ. ಹೀಗಾಗಿ ಪತ್ರಿಕಾ ವೃತ್ತಿ ಆಯ್ದುಕೊಂಡವರಲ್ಲಿ ಆದರ್ಶವಿತ್ತು, ಆದರೆ ಅದು ಈಗ ಇಲ್ಲ ಎಂದರು. ಟಿಆರ್‌ಪಿ ತಂದುಕೊಡದ ಕಾರ್ಯಕ್ರಮಗಳನ್ನು ನೀಡಿದರೆ ಪತ್ರಕರ್ತ ಉಳಿದುಕೊಳ್ಳುವುದು ಸಾಧ್ಯವಿಲ್ಲ ಎಂದು ತಮ್ಮ ಅನುಭವಗಾಥೆಯನ್ನು ಮಂಡಿಸಿದರು.

ಗೋಷ್ಠಿಯಲ್ಲಿ ಸಂಪಾದಕೀಯ ಬ್ಲಾಗ್‌ನ ಪ್ರಸ್ತಾಪವೂ ಆಯಿತು. ಕೆಜಿಎಫ್‌ನ ಮಲಹೊರುವವರ ಬಗ್ಗೆ ಪ್ರತಿಕ್ರಿಯಿಸಿದ ರವಿಕೃಷ್ಣಾರೆಡ್ಡಿ ಪರ್ಯಾಯ ಮಾಧ್ಯಮದ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು.

ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಎನ್.ಎ.ಎಂ.ಇಸ್ಮಾಯಿಲ್, ಸಿ.ಜಿ.ಮಂಜುಳ, ಕೆ.ಫಣಿರಾಜ್, ಪರುಶುರಾಮ ಕಲಾಲ್, ಲಕ್ಷ್ಮಣ ಹೂಗಾರ್, ರೂಪಾ ಹಾಸನ, ಲೋಕೇಶ್ ಅಗಸನಕಟ್ಟೆ, ದಿನೇಶ್ ಕುಮಾರ್ ಎಸ್.ಸಿ., ಬಿ.ಎನ್.ಮಲ್ಲೇಶ್, ಜಿ.ಜಡಿಯಪ್ಪ ಮತ್ತಿತರರು ಮಾತನಾಡಿದರು. ಸಂವಾದ, ಚರ್ಚೆ ಎರಡು ದಿನಗಳ ಕಾಲ ವೇದಿಕೆಯಲ್ಲಿ ಹಾಗೂ ಹೊರಗಡೆ ನಡೆದೇ ಇತ್ತು.

ಕಾರ್ಯನಿರತ (ಮರೆತ) ಪತ್ರಕರ್ತರ ಸಂಘ ಅಥವಾ ಪ್ರೆಸ್ ಕ್ಲಬ್ ಮಾಡಬೇಕಿದ್ದ ಇಂತಹ ವಿಚಾರ ಸಂಕಿರಣವನ್ನು ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ, ಚಿತ್ರದುರ್ಗದ ಗೆಳೆಯರ ಬಳಗ ಏರ್ಪಡಿಸಿ, ಸಮಕಾಲೀನ ಸಮಸ್ಯೆಗಳಿಗೆ ಮುಖಾಮುಖಿಯಾಗಿದ್ದು ಕೂಡಾ ಇಲ್ಲಿ ವಿಶೇಷವಾಗಿತ್ತು.

ಈ ವಿಚಾರ ಸಂಕಿರಣದೊಳಗೆ ಪತ್ರಕರ್ತ ಎಸ್.ಕುಮಾರ್ ರಚಿಸಿದ ಚಳಿಗಾಲದ ಎಲೆಸಾಲು ಕವನ ಸಂಕಲನ ಬಿಡುಗಡೆಯಾಗುವಾಗ ಮಳೆಯೂ ಮಳೆ. ಈ ಮಳೆಯ ನಡುವೆ ವಿಮರ್ಶಕ ಡಾ. ಟಿ. ರಾಮಲಿಂಗಪ್ಪ ಬೇಗೂರು ಪ್ರೇಮ ಕವಿತೆಗಳ ಕುರಿತು ಗುಡುಗು, ಸಿಡಿಲು ಸಿಡಿಸಿದ್ದು ಸಹ ವಿಶೇಷವಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಸವಿತಾ ನಾಗಭೂಷಣ ಅವರು ಗುಡಾಣವಾಗಿರುವ ಮನೆಯ ಸರಕುಗಳ ಪಟ್ಟಿ ನೀಡಿ, ಅವು ಕವಿತೆಯ ವಸ್ತುಗಳಾಗಬಹುದು ಎಂದಿದ್ದು ಮಾತ್ರ ಹೊರಗಡೆ ಹಾಗೇ ಸುಮ್ಮನೆ ಎನ್ನುವ ವಿಚಿತ್ರ ಚರ್ಚೆ, ಸಂವಾದಕ್ಕೆ ಕಾರಣವಾಯಿತು.

ಸಮಾರೋಪ ಭಾಷಣ ಮಾಡಿದ ಕುವೆಂಪು ವಿವಿ ಪ್ರಾಧ್ಯಾಪಕ ಹಾಗೂ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮೀಡಿಯಾ ಸ್ಟುಡಿಯೋಗಳು ಹುಸಿ ಪಾರ್ಲಿಮೆಂಟುಗಳಾಗುತ್ತಿರುವ, ಅಂಥ ಭ್ರಮೆ ಹುಟ್ಟಿಸುವ ಅಪಾಯಗಳ ಬಗ್ಗೆ ಮಾತನಾಡಿದರು. ಮಾಧ್ಯಮಗಳ ಬಗ್ಗೆ ನೋಮ್ ಚೊಮಸ್ಕಿ ನಡೆಸಿದ ಸಂಶೋಧನೆಯತ್ತ ಗಮನ ಹರಿಸುತ್ತಲೇ ಪತ್ರಕರ್ತರ ಹಾದಿ ಹೇಗಿರಬೇಕು ಎಂಬುದನ್ನು ನಿರೂಪಿಸಲು ಪ್ರಯತ್ನಿಸಿದರು.

ಇಡೀ ಗೋಷ್ಠಿಯನ್ನು ಸಾಕ್ಷೀಕರಿಸುವುದರ ಜತೆಗೆ ಎಲ್ಲರೊಂದಿಗೆ ಬೆರೆತು ಗೋಷ್ಠಿಯ ಸಾಕ್ಷಿಪ್ರಜ್ಞೆಯಾಗಿದ್ದವರು ದಿನೇಶ್ ಅಮೀನ್ ಮಟ್ಟು. ಪ್ರಜಾವಾಣಿಯ ಕಲ್ಲಿನ ಕಟ್ಟಡದಿಂದ ಹೊರಬಂದು ಸಮಾಜದ ಜತೆ ಮುಖಾಮುಖಿಯಾಗಲು ದಿನೇಶ್ ಹಿಂಜರಿಯುತ್ತಾರೆ ಎಂಬ ಸಣ್ಣ ಆರೋಪ ಅಲ್ಲಲ್ಲಿ ಕೇಳಿಬಂದಿತ್ತು. ಈ ಆರೋಪವನ್ನು ಅವರು ಹುಸಿಗೊಳಿಸಿದರು.

ಮಾಧ್ಯಮ ಲೋಕ ಆಗಾಗ ಇಂಥ ಅವಲೋಕನ ನಡೆಸಬೇಕು ಎಂಬುದು ಇತ್ತೀಚಿಗೆ ಹೆಚ್ಚುತ್ತಿರುವ ಪ್ರಾಜ್ಞರ ಒತ್ತಾಯ. ಇಂಥ ಬೇಡಿಕೆಗೆ ದುರ್ಗದ ಹುಡುಗರು ಪ್ರತಿಸ್ಪಂದಿಸಿರುವುದು ಸಂತೋಷದ ವಿಷಯ.

ಹಾಡು ಹುಟ್ಟಿದ ಸಮಯದಲ್ಲಿ ಕಲ್ಯಾಣ್ ಹೇಳಿಕೊಂಡ ಸುಳ್ಳು...


ಈ ಮಾಹಿತಿ ವಿಚಿತ್ರ ಆದರೂ ಸತ್ಯ. ಇಂದಿನ ವಿಜಯ ಕರ್ನಾಟಕ ಪತ್ರಿಕೆಯ ಹಾಡು ಹುಟ್ಟಿದ ಸಮಯ ಅಂಕಣದಲ್ಲಿ  ಆರ್.ಮಣಿಕಾಂತ್ ಒಂದು ಸುಂದರ ಹಾಡಿನ ಕುರಿತು ಪ್ರಸ್ತಾಪಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಅಗತ್ಯವಿಲ್ಲ. ತಮಿಳಿನ ಆಟೋಗ್ರಾಫ್ ಕನ್ನಡದಲ್ಲೂ ಯಶಸ್ಸು ಕಂಡಿತು. ಜೊತೆಗೆ ಅದರ ಒಂದು ಹಾಡು ಅನೇಕರಿಗೆ ಸ್ಪೂರ್ತಿ ನೀಡಿತು. ಇವತ್ತಿಗೂ ಅರಳುವ ಹೂವುಗಳೇ ಆಲಿಸಿರಿ ಎಂಬುದು ತನ್ನ ಮಾಧುರ್ಯದಿಂದ ಕೇಳುಗರಿಗೆ ಮುದ ನೀಡುತ್ತಿದೆ. ಅದೇನೆ ಇರಲಿ, ನಮ್ಮ ತಕರಾರಿರುವುದು ಈ ಹಾಡಿನ ಹುಟ್ಟಿನ ಕುರಿತು ಬರೆದ ಅಂಕಣದ ಮಾಹಿತಿಯ ಬಗ್ಗೆ. ಕನ್ನಡದಲ್ಲಿ ಈ ಹಾಡಿನ ಸಾಹಿತ್ಯ ಬರೆದವರು ಕೆ.ಕಲ್ಯಾಣ್. ಈ ಕುರಿತು ಆರ್. ಮಣಿಕಾಂತ್ ತಮ್ಮ ಅಂಕಣದಲ್ಲಿ ವಿವರವಾಗಿ ಪ್ರಸ್ತಾಪಿಸಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ..
ಎ.ಆರ್.ಮಣಿಕಾಂತ್

ಆ ವೇಳೆಗೆ ನನಗೆ ಕಾನ್ಫಿಡೆನ್ಸ್ ಬಂದಿತ್ತು. ಚಿಕ್ಕ ಚಿಕ್ಕ ಬೇಸರಕ್ಕೂ ಕಂಗಾಲಾಗುವ ದುಃಖಿಸುವ ಜನರನ್ನು ಸಂತೈಸಬೇಕು. ಅವರ ಬದುಕಿನೆಡೆಗೆ ತಿರುಗಿ ನೋಡುವಂಥ ಸ್ಫೂರ್ತಿ ತುಂಬಬೇಕು ಎಂದು ಯೋಚಿಸಿ ಎರಡನೇ ಚರಣವನ್ನು ಬರೆದೆ. ನನ್ನ ಸಂತೋಷ ಏನೆಂದರೆ ತಮಿಳುನಲ್ಲಿ ಹಾಡು ಬರೆದಿರುವ ವಿಜಯ್‌ರವರು ನನ್ನ ಬಳಿ ಬಂದು ತಮಿಳಿಗಿಂತ ನನ್ನ ಹಾಡೆ ಚೆನ್ನಾಗಿದೆ ಅಂದರು. ಅದು ನಾನು ಧನ್ಯತೆ ಅನುಭವಿಸಿದ ಕ್ಷಣ..ಇಷ್ಟು ಹೇಳಿ ಮೌನವಾದರು ಕಲ್ಯಾಣ್.

ಹೀಗಂತ ಮಣಿಕಾಂತ್ ಬರೆಯುತ್ತಾರೆ. ಬಹುಶಃ ಈ ಹಾಡಿನ ಹಿನ್ನೆಲೆ ಗೊತ್ತಿಲ್ಲದಿದ್ದರೆ ನಾವು ಕೂಡ ಓದಿ ಎಲ್ಲರಂತೆ ಮೌನವಾಗುತ್ತಿದ್ದೆವೇನೊ, ಆದರೆ ತಮಿಳು ಗೊತ್ತಿರುವವರಿಗೆ ಮಣಿಕಾಂತ್‌ರಿಗೆ  ಕೆ.ಕಲ್ಯಾಣ್ ಹಸಿ ಹಸಿ ಸುಳ್ಳುಗಳನ್ನು ಪೋಣಿಸಿ ಕನ್ನಡದ ಓದುಗರಿಗೆ ಮೋಸ ಮಾಡುತ್ತಿರುವುದು ಅರ್ಥವಾದ ಮೇಲೆ ಇದನ್ನು ಬರೆಯದಿರಲು ಆಗಲಿಲ್ಲ. ಇಲ್ಲಿ ಕಲ್ಯಾಣ್ ತಮ್ಮ ಪ್ರತಿಭೆಯ ಬಗ್ಗೆ ಸ್ವಪ್ರಶಂಸೆಗಿಳಿಯುವಷ್ಟು ಈ ಹಾಡಿಗಾಗಿ ಅವರು ಕಷ್ಟಪಟ್ಟಿಲ್ಲ. ಏಕೆಂದರೆ ಅರಳುವ ಹೂವುಗಳೇ ಹಾಡಿನ ಬರವಣಿಗೆಗೆ ಅವರೇ ಹೇಳಿಕೊಂಡಿರುವಂತೆ ಎಲ್ಲಿಯೂ ಅವರು ಕಷ್ಟಪಟ್ಟಿಲ್ಲ. ಬದಲಾಗಿ ತಮಿಳಿನ ಯುವ ಬರಹಗಾರ ಪಿ.ವಿಜಯ್ ಬರೆದಿರುವ ಮೂಲ ಹಾಡಿನ ಪದಪದಗಳನ್ನೇ ಎತ್ತಿಕೊಂಡು ಬಂದು ಹಿಂದೆ ಮುಂದೆ ಜೋಡಿಸಿರುವುದು ಈ ಎರಡೂ ಹಾಡು ಕೇಳಿದವರಿಗೆ ಅರ್ಥವಾಗುವ ಸತ್ಯ. ಈ ಕುರಿತು ಮಾತು ಮುಂದುವರೆಸುವ ಮುನ್ನ ಕೆಲವು ಮಾಹಿತಿಗಳು ಇಲ್ಲಿವೆ.

ಅರಳುವ ಹೂವುಗಳೇ ಹಾಡಿನ ಮೊದಲ ಪಲ್ಲವಿಗೆ ಬಂದರೆ..
ತಮಿಳು ಹಾಡು - ಒವ್ವ್ವೊರು ಪೂಕ್ಕಳುಮೇ ಸೊಲ್‌ಗಿರದೇ.. ವಾಳ್ವೆನ್ರಾಲ್ ಪೋರಾಡುಂ ಪೋರ್ಕಳಮೇ.. ಒವ್ವೊರು ವಿಡಿಯಲುಮೇ ಸೊಲ್ಗಿರದೇ.. ಇರವಾನಾಲ್ ಪಗಲ್ ಒನ್ರು ವಂದಿಡುಮೇ
ಕನ್ನಡ ಅನುವಾದ -  ಒಂದೊಂದು ಹೂಗಳೂ ಹೇಳುತ್ತಿವೆ, ಬಾಳೊಂದು ಹೋರಾಟದ ಭೂಮಿ, ಒಂದೊಂದು ಬೆಳಕಿನ ಕಿರಣವೂ ಹೇಳುತ್ತಿದೆ, ಕತ್ತಲೆ ಮುಗಿದ ಮೇಲೆ ಹಗಲು ಬಂದೇ ಬರುತ್ತದೆ
ಕಲ್ಯಾಣ್ ರಚನೆ - ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ, ಬೆಳಕಿನ ಕಿರಣಗಳೇ ಬಣ್ಣಿಸಿರಿ, ಇರುಳ ಹಿಂದೆ ಬೆಳಕುಂಟು ತೋರಿಸಿರಿ.

ಎರಡನೆ ಪಲ್ಲವಿಗೆ ಬಂದರೆ..
ತಮಿಳು ಹಾಡು - ನಂಬಿಕೈ ಎನ್ಬದು ವೇಂಡುಂ ನಮ್ ವಾಳ್ವಿಲ್.. ಲಚ್ಚಿಯಂ ನಿಚ್ಚಯಂ ವೆಲ್ಲುಂ ಒರು ನಾಳಿಲ್.. ಮನಮೇ ಓ ಮನಮೇ ನೀ ಮಾರಿ ವಿಡು..
ಕನ್ನಡ ಅನುವಾದ - ನಂಬಿಕೆ ಎಂಬುದು ಬೇಕು ನಮ್ಮ ಬದುಕಲಿ, ಲಕ್ಷ್ಯ ಯಾವತ್ತಿದ್ದರೂ ಗೆಲ್ಲುತ್ತದೆ.. ಮನಸೇ ಓ ಮನಸೇ ನೀ ಬದಲಾಗು
ವಿಜಯ್
ಕಲ್ಯಾಣ್ ರಚನೆ - ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಗುರಿಯಾಗಲಿ, ಮನವೇ ಓ ಮನವೇ ನೀ ಬದಲಾಗು..

ಹೀಗೆ ಒಂದೆರಡು ಪದಗಳನ್ನು ಹೊರತುಪಡಿಸಿ ಉಳಿದಂತೆ ಇಡೀ ಹಾಡಿನ ಸಾಲುಸಾಲುಗಳನ್ನೇ ಎಗರಿಸಿಕೊಂಡು ಬರೆದಿರುವ ಹಾಡಿನ ರಚನೆಗಾಗಿ ನಾನು ಎಷ್ಟೆಲ್ಲ ಕಷ್ಟಪಟ್ಟೆ ಎಂದು ಕಲ್ಯಾಣ್ ಹೇಳಿದರೆ ಓದುಗರು ನಂಬುವುದು ಹೇಗೆ?

ಇಲ್ಲಿರುವ ತಮಿಳಿನ ಪದಪದಗಳಿಗೆ ಕನ್ನಡದ ಅನುವಾದ ಮಾಡಿದರೆ ಕೆ. ಕಲ್ಯಾಣ್ ಅವರ ಅರಳುವ ಹೂವುಗಳೇ.. ಹಾಡು ಹುಟ್ಟುತ್ತದೆ. ಕನ್ನಡದ ಕೆಲವೇ ಉತ್ತಮ ಸಿನಿಮಾ ಸಾಹಿತಿಗಳ ಸಾಲಿನಲ್ಲಿ ಕೆ. ಕಲ್ಯಾಣ್ ಕೂಡ ಒಬ್ಬರು. ಈ ಹಿಂದೆ ಯಜಮಾನ ಚಿತ್ರದ ಹಾಡುಗಳನ್ನು ಇದೇ ಕಲ್ಯಾಣ್ ಕನ್ನಡದ ತರ್ಜುಮೆ ಮಾಡಿದ್ದರು. ಕಾದಲ್ ವೆನ್ನಿಲಾ ಕೈಯಿಲ್ ಸೇರುಮಾ ಸೊಲ್ಲುಂ ಪೂಂಗಾಟ್ರೆ ಎಂಬ ಹಾಡನ್ನು ಪ್ರೇಮಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿಯೆಂದೂ ನದಿಕರೈ ಮಳಲ್ ಮೀದು.. ಉನ್ ಪೆಯರ್ ನಾನ್ ಎಳುದ, ಮಳಲ್ ಎಲ್ಲಾಂ ಪೊನ್ನಾಯ್ ಪೋಲ ಮಾಯಮೆನ್ನ ಎಂಬುದನ್ನು ಕಾವೇರಿ ತೀರದಲಿ ಬರದೆನು ನಿನ್ ಹೆಸರ, ಮರಳೆಲ್ಲ ಹೊನ್ನಾಯ್ತು ಯಾವ ಮಾಯೆ  ಎಂದು ಸಾರಾಸಗಟಾಗಿ ಕದಿಯುವುದನ್ನು ಬದಿಗಿಟ್ಟು ನೋಡಿದರೆ ಅವರೊಬ್ಬ ಉತ್ತಮ ಬರಹಗಾರ. ಆದರೆ ಅವರ ಅದೆಷ್ಟೊ ಉತ್ತಮ ಸಾಹಿತ್ಯಗಳನ್ನು ಗೌರವಿಸುವವರಿಗೂ ಕಲ್ಯಾಣ್ ಪಬ್ಲಿಸಿಟಿಗಾಗಿ ಬೇರ‍್ಯಾರೊ ಬರೆದದ್ದನ್ನು ನಾನೇ ಹೊಳೆಯಿಸಿಕೊಂಡು, ಅನುಭವಿಸಿಕೊಂಡು ಬರೆದೆ ಎಂದು ಹೇಳಿಕೊಂಡರೆ ಅಸಹ್ಯ ಅಂತ ಅನ್ನಿಸುತ್ತದೆ.

ಕೆ. ಕಲ್ಯಾಣ್ ಎಲ್ಲಾ ಹಾಡುಗಳನ್ನೂ ಎಗರಿಸುತ್ತಾರೋ, ಅಥವಾ ತಮಿಳಿನ ಗೀತರಚನೆಕಾರ ಪಿ. ವಿಜಯ್‌ರ ಹಾಡುಗಳನ್ನು ಮಾತ್ರ ಎಗರಿಸುತ್ತಾರೋ ಗೊಂದಲಕಾರಿ ವಿಷಯ. ಏಕೆಂದರೆ ಪಿ.ವಿಜಯ್ ಬರೆದ ಹಾಡುಗಳಿರುವ ಚಿತ್ರ ಕನ್ನಡಕ್ಕೆ ರೀಮೇಕಾದರೆ ಅದಕ್ಕೆ ಕೆ. ಕಲ್ಯಾಣೇ ಹಾಡು ಬರೆಯುತ್ತಾರೆ, ಮತ್ತು ವಿಜಯ್‌ರ ಪದಗಳನ್ನು ಕನ್ನಡದಲ್ಲಿ ಅತ್ತಿತ್ತ ಸರಿಸಿ ತಮ್ಮ ಹೆಸರು ಹಾಕಿಕೊಳ್ಳುತ್ತಾರೆ. ಇದು ಹಲವು ಹಾಡುಗಳಲ್ಲಿ ಸಾಬೀತೂ ಸಹ ಆಗಿದೆ. ೧೯೯೬ರಿಂದ ಸಿನಿಮಾಗಳಿಗೆ ಹಾಡು ಬರೆಯುತ್ತಿರುವ ತಮಿಳುನಾಡಿನ ಕೊಯಮತ್ತೂರಿನ ಪಿ.ವಿಜಯ್ ತಮಿಳಿನ ಸುಪ್ರಸಿದ್ದ ಯುವ ಗೀತರಚನೆಕಾರರಲ್ಲಿ ಒಬ್ಬರು. ರಜನೀಕಾಂತರ ಶಿವಾಜಿ ಮತ್ತು ಇತ್ತೀಚಿನ ಎಂಧಿರನ್ ಚಿತ್ರದಲ್ಲಿಯೂ ವಿಜಯ್ ಬರೆದ ಗೀತೆಗಳಿವೆ. ಆಟೋಗ್ರಾಫ್ ಚಿತ್ರಕ್ಕೆ ಬರೆದ ಒವ್ವೊರು ಪೂಕ್ಕಳುಮೇ ಹಾಡಿಗೆ ೨೦೦೪ರಲ್ಲಿ ಉತ್ತಮ ಗೀತರಚನೆಗಾಗಿ ಇರುವ ರಾಷ್ಟ್ರಪ್ರಶಸ್ತಿಯನ್ನೂ ಇವರು ಪಡೆದಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಗೀತೆಯೊಂದನ್ನು ಈ ಮಟ್ಟಕ್ಕೆ ಹಿಂದುಮುಂದು ಮಾಡಿ ಶ್ರಮವೇ ಇಲ್ಲದ ಬರೆದ ಹಾಡೊಂದನ್ನು ಹಾಗೆ ಬರೆದೆ ಹೀಗೆ ಬರೆದೆ ಎಂದು ಮಣಿಕಾಂತರ ಮುಂದೆ ಅಲವತ್ತುಕೊಂಡಿರುವ ಕಲ್ಯಾಣ್‌ರ ಪ್ರಯತ್ನ ಹಾಸ್ಯಾಸ್ಪದವೆನಿಸುತ್ತದೆ.

ಕೆ.ಕಲ್ಯಾಣ್
ಹಾಡು ಹುಟ್ಟಿದ ಸಮಯ ಎಂಬ ಉತ್ತಮ ಪರಿಕಲ್ಪನೆಯ ಅಂಕಣವನ್ನು ಪರಿಚಯಿಸಿದವರು ವಿಜಯಕರ್ನಾಟಕದ ಮಣಿಕಾಂತ್. ಅವರ ಬರವಣಿಗೆ, ಆಲೋಚನೆ ಕುರಿತು ಎಲ್ಲರಿಗೂ ಗೌರವವಿದೆ. ಆದರೆ ರಂಗಿನ ಲೋಕದ ಸಿನಿಮಾ ಮಂದಿ ಹೇಳಿದ್ದೆಲ್ಲವೂ ಸತ್ಯವಾಗಿರಲಾರದು ಎಂಬ ಸತ್ಯವೂ ಅವರಿಗೆ ಗೊತ್ತಿರಲಿ. ಎಲ್ಲರೂ ಇಷ್ಟಪಡುವಂತಹ ಮಣಿಕಾಂತ್‌ರ ಹಾಡು ಹುಟ್ಟಿದ ಸಮಯ ಅಂಕಣ  ಕಲ್ಯಾಣ್‌ರಂತಹವರ ಸುಳ್ಳುಗಳ ಹಂಗಿಲ್ಲದೆ ಯಶಸ್ವಿಯಾಗಿ ಮುಂದುವರೆಯಲಿ, ಯುವ ಬರಹಗಾರರಿಗೆ ಪ್ರೊತ್ಸಾಹ ಅಬಾಧಿತವಾಗಿರಲಿ, ಪುನಃ ಪುನಃ ನೋಡಿದರೂ ನಿನ್ನ ವಿನಃ ಏನಿಲ್ಲ ಎಂದು ಒಂದು ಕಾಲದಲ್ಲಿ ಅದ್ಭುತವಾದ ಸಾಲುಗಳನ್ನು ಬರೆಯುತ್ತಿದ್ದ ಕಲ್ಯಾಣ್‌ರಿಗೆ ಅವರ ಮೊದಲ ದಿನಗಳ ಬರವಣಿಗೆಯ ಬಿಸುಪು ಇನ್ನಾದರೂ ಮರುಕಳಿಸಲಿ.

-ಒಬ್ಬ ಕೇಳುಗ, ಓದುಗ

Monday, June 27, 2011

ಕೆಜಿಎಫ್ ಫಲಶ್ರುತಿ: ಸಂಪೂರ್ಣ ಮಾಹಿತಿ


ಕರ್ನಾಟಕ ಮಾನವ ಹಕ್ಕುಗಳ ಆಯೋಗ ಸಫಾಯಿಕರ್ಮಚಾರಿಗಳ ವಾಸಸ್ಥಳಕ್ಕೆ ಭೇಟಿ ನೀಡಿದಾಗ 
ಮಂಡಿಸಲಾದ ವಿಷಯಗಳು ಮತ್ತು ತೆಗೆದುಕೊಂಡ ತೀರ್ಮಾನಗಳು

ಸಭೆ ನಡೆದ ಸ್ಥಳ: ಕೆನಡಿಸ್ ಆಂದ್ರ ಲೈನ್, ಕೆಜಿಎಫ್ ದಿನಾಂಕ: ೨೪.೦೬.೨೦೧೧

ದಿನಾಂಕ ೨೪.೦೬.೨೦೧೧ ರಂದು ಮಾನವ ಹಕ್ಕುಗಳ ಆಯೋಗದ ಗೌರವಾನ್ವ್ವಿತ ಸದಸ್ಯರಾದ ಶ್ರೀ. ರಡ್ಡಿ,  ಸದಸ್ಯರು, ಕೆಜಿಎಫ್‌ನ ಕೆನಡಿಸ್ ಆಂದ್ರ ಲೈನ್‌ಗೆ ಭೇಟಿ ನೀಡಿ ಸಫಾಯಿಕರ್ಮಚಾರಿಗಳ ಬದುಕಿನ ಪರಿಸ್ಥಿತಿಯ ಬಗ್ಗೆ ಕೂಲಂಕುಶ ಅಧ್ಯಯನ / ತನಿಖೆ ನಡೆಸಿದರು. ಬೆಳಗ್ಗೆ ೧೧.೩೦ ರಿಂದ ೨.೩೦ ನಿಮಿಷದ ವರೆಗೆ ನಡೆದ ಮತ್ತು ಸಮಾಲೋಚನೆಯಲ್ಲಿ ಜಿಲ್ಲಾ ಮತ್ತು ನಗರಾಡಳಿತದ ವಿವಿಧ ಇಲಾಖೆ ಅಧಿಕಾರಿಗಳು, ಪಿಯುಸಿಎಲ್  ಕರ್ನಾಟಕದ ಪದಾಧಕಾರಿಗಳು ಸ್ಥಳೀಯ ಸಫಾಯಿಕರ್ಮಚಾರಿಗಳ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ಇತರ ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದು ಆಯೋಗದ ಕಲಾಪಗಳಲ್ಲಿ ಭಾಗವಹಿಸಿ ಕೆಲವರು ಸಾಕ್ಷ್ಯ ನೀಡಿದರು ಅದಕ್ಕೆ ಆಡಳಿತ ವರ್ಗ ಪ್ರತಿಕ್ರಿಯೆ ನೀಡಿತು. ಸಭೆಯ ಸಂಕ್ಷಿಪ್ತ ವರದಿ ಮತ್ತು ತೆಗೆದುಕೊಳ್ಳಲಾದ ತೀರ್ಮಾನಗಳ ವಿವರ ಕೆಳಗೆ ನೀಡಲಾಗಿದೆ.

ಭಾಗವಹಿಸಿದ್ದವರು:
ಶ್ರೀ. ಎಚ್.ಆರ್ ರೆಡ್ಡಿ, ಗೌರವಾನ್ವಿತ ಸದಸ್ಯರು, ಕರ್ನಾಟಕ ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಇವರ ನೇತೃತ್ವದಲ್ಲಿ ನಡೆಯಲಾದ ಸಭೆಯಲ್ಲಿ ಹಾಜರಿದ್ದ ಸರಕಾರಿ ಅಧಿಕಾರಿಗಳು, ಮಾನವ ಹಕ್ಕು ಸಂಘಟನೆ, ಜನ ಸಂಘಟನೆ ಮತ್ತು ಸಂಸ್ಥೆಗಳು
ಜಿಲ್ಲಾಡಳಿತದ ಅಧಿಕಾರಿಗಳು
೧. ಶ್ರೀ. ಮೀನ, ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ
೨. ಶ್ರೀ. ಪೆದ್ದಪ್ಪಯ್ಯ, ಸಹಾಯಕ ಆಯುಕ್ತರು / ವಿಭಾಗಾಧಿಕಾರಿಗಳು
೩. ಆಯುಕ್ತರು, ಕೆಜಿಎಫ್ ನಗರ ಸಭೆ, ಕೆಜಿಎಫ್, ಕೋಲಾರ ಜಿಲ್ಲೆ
೪. ಸಹಾಯಕ ಅಭಿಯಂತರ, ನಗರ ಸಭೆ, ಕೆಜಿಎಫ್
೫. ಆರೋಗ್ಯಾಧಿಕಾರಿ, ನಗರ ಸಭೆ, ಕೆಜಿಎಫ್, ಹೆಲ್ತ್ ಇನ್ಸಪೆಕ್ಟರ್, ನಗರ ಸಭೆ, ಕೆಜಿಎಫ್
೬. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, & ತಾಲೊಕು ಸಮಾಜ ಕಲ್ಯಾಣ ಅಧಿಕಾರಿಗಳು, ಬಂಗಾರ ಪೇಟೆ
ಸಫಾಯಿಕರ್ಮಚಾರಿಗಳ ಸಂಘಟನೆ
೭. ಶ್ರೀ. ಏಸುದಾಸ್, ಶ್ರೀ. ಪ್ರಸಾದ್ ಕುಟ್ಟಿ, ಶ್ರೀ. ಪ್ರಭು, ಪದಾಧಿಕಾರಿಗಳು, ಸಫಾಯಿಕರ್ಮಚಾರಿಗಳ ಹೋರಾಟ ಸಮಿತಿ, ಕೆನಡಿಸ್ ಆಂದ್ರ ಲೈನ್, ಕೆಜಿಎಫ್ ಹಾಗೂ ಸ್ಥಳೀಯ ಸದಸ್ಯರು ಮತ್ತು ಕೆಜಿಎಫ್‌ನ ವಿವಿಧ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಭಾಗವಹಿಸಿ ತಮ್ಮ ಅಹವಾಲುಗಳನ್ನು ಆಯೋಗದ ಮುಂದಿರಿಸಿದರು.

ಅಧ್ಯಯನದ ಅವಧಿಯಲ್ಲಿ ನಡೆದ ಸಂವಾದದ ಭಾಗವಾಗಿ ಹೊರಹೊಮ್ಮಿದ ಪ್ರಮುಖ ತೀರ್ಮಾನಗಳನ್ನು ಕೆಳಗೆ ನೀಡಲಾಗಿದೆ.


೧) ಸಫಾಯಿಕರ್ಮಚಾರಿಗಳು ತಮಗೆ ಖಾಯಂ ನೌಕರಿಯನ್ನು ನೀಡುವಂತೆ ಬೇಡಿಕೆ ಮುಂದಿಟ್ಟರು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಅದು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ ಅದು ಸಾಧ್ಯವಿಲ್ಲವೆಂದು ತಿಳಿಸಿ ಹಾಲಿ ಸಫಾಯಿಕರ್ಮಚಾರಿ ಕೆಲಸ ಮಾಡುತ್ತಿರುವ ಎಲ್ಲರನ್ನು ದಿನಗೂಲಿ ೧೬೪ ರೂಪಾಯಿಯಂತೆ (ತಿಂಗಳಿಗೆ ೪೨೫೦ ರೋಪಾಯಿ) ನಗರ ಸಭೆಯಲ್ಲಿ ಕೆಲಸ ನಿರ್ವಹಿಸಲು ದಿನಾಂಕ ೨೭.೦೬.೨೦೧೧ ಸೋಮವಾರದಿಂದಲೇ ತೆಗೆದುಕೊಳ್ಳುವುದಾಗಿ ಮತ್ತು ಅವರ ದಿನಗೂಲಿಯನ್ನು ನೇರವಾಗಿ ನಗರ ಸಭೆಯೇ ಪಾವತಿಸಲು ಜಿಲ್ಲಾಧಿಕಾರಿಗಳು ಸ್ಥಳದಲ್ಲೆ ತೀರ್ಮಾನ ತೆಗೆದುಕೊಂಡು ಮೌಖಿಕ ಆದೇಶವನ್ನು ನಗರಸಭೆ ಆಯುಕ್ತರಿಗೆ ನೀಡಿದರು ಸಫಾಯಿಕರ್ಮಚಾರಿ ಸಮಿತಿ ತೀರ್ಮಾನಕ್ಕೆ ಒಪ್ಪಿಗೆ ನೀಡಿತು.

೨) ಈಗಾಗಲೇ ಅಕಾಲಿಕ ಮರಣ ಹೊಂದಿರುವ ಸಫಾಯಿಕರ್ಮಚಾರಿಗಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಸಮಿತಿ ಒತ್ತಾಯವನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು ಇಂತಹ ಅಕಾಲಿಕ ಮರಣಹೊಂದಿರುವ ಕುಟುಂಬಕ್ಕೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೊಡಬಹುದಾದ ೧೦,೦೦೦ ರೂಪಾಯಿಗಳ ಪರಿಹಾರವನ್ನು ಕುಟುಂಬದ ವಾರಸುದಾರರಿಗೆ ನೀಡಲು ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಇದನ್ನು ಒಪ್ಪಿಕೊಂಡ ಸಮಿತಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಸರಕಾರಕ್ಕೆ ಪ್ರತ್ಯೇಕ ಅರ್ಜಿಸಲ್ಲಿಸುವುದಾಗಿ ತಿಳಿಸಿದರು.

೩) ಬಹಳ ವರ್ಷಗಳಿಂದ ಮಲ ಎತ್ತುವ ಕೆಲಸ ಮಾಡುತ್ತಿದ್ದ ಸಫಾಯಿಕರ್ಮಚಾರಿಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವುದನ್ನು ಗಮನಿಸಿದ ನಂತರ ಅಂತಹ ಎಲ್ಲರ ಆರೋಗ್ಯ ತಪಾಸಣೆಗೆ ಒಂದು ಶಿಬಿರವನ್ನು ಕೆನಡಿಸ್‌ನಲ್ಲಿ ಕೂಡಲೆ ಮಾಡಿಸುವುದಾಗಿ ಒಪ್ಪಿಕೊಂಡ ಜಿಲ್ಲಾಧಿಕಾರಿಗಳು ಉಚಿತ ಚಿಕಿತ್ಸೆ ಮತ್ತು ಔಷಧವನ್ನು ಸರಕಾರದಿಂದ ಭರಿಸಲಾಗುವುದೆಂದು ಭರವಸೆ ನೀಡಿದರು.

೪) ಬಹಳ ಜನ ವೃದ್ದ, ವಿಧವೆ ಮತ್ತು ಅಂಗವಿಕಲರಿರುವುದಾಗಿ ಅವರಲ್ಲಿ ಸುಮಾರು ಜನರಿಗೆ ಮಾಸಾಶನ  ಪಡೆಯಲು ಲಂಚ ನೀಡಬೇಕಾದ ಪರಿಸ್ಥಿತಿಯನ್ನು ಆಯೋಗದ ಗಮನಕ್ಕೆ ಹೋರಾಟ ಸಮಿತಿಯವರು ತಂದಾಗ ಇವರೆಲ್ಲರ ಪಟ್ಟಿ ನೀಡಿದರೆ ತಾವೇ ಖುದ್ದಾಗಿ ಪರಿಶೀಲಿಸಿ ಅಂತಹವರಿಗೆ ಕಾನೂನಿನ ರೀತಿ ಮಂಜೂರು ಮಾಡಿ ಆದೇಶ ಹೊರಡಿಸುವುದಾಗಿ ತೀರ್ಮಾನಿಸಿದ ಜಿಲ್ಲಾಧಿಕಾರಿಗಳು ಸ್ವತಃ ತಾವೇ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಆಯೋಗಕ್ಕೆ ತಿಳಿಸಿದರು. ಕೂಡಲೆ ಅರ್ಹ ವ್ಯಕ್ತಿಗಳ ಪಟ್ಟಿಯನ್ನು ಸಲ್ಲಿಸಲು ಸಮಿತಿಗೆ ಸೂಚಿಸಲಾಯಿತು.

೫) ಮಕ್ಕಳ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿವೇತನ ನೀಡುವ ಯೋಜನೆಗಳಿದ್ದರೂ ಅವೆಲ್ಲಾ ತಮ್ಮ ಮಕ್ಕಳಿಗೆ ದೊರೆಯದ ಪರಿಸ್ಥಿತಿ ಬಗ್ಗೆ ಸಮಿತಿ ಪ್ರಸ್ತಾಪಿಸಿದಾಗ, ಈಗಾಗಲೇ ಸರಕಾರಿ ಮತ್ತು ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ಸಫಾಯಿಕರ್ಮಚಾರಿ ಮಕ್ಕಳಿಗೆ ತಿಂಗಳ ವಿದ್ಯಾರ್ಥಿ ವೇತನವನ್ನು ಪ್ರತಿ ತಿಂಗಳು ಬಿಡುಗಡೆ ಮಾಡುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಆದೇಶ ನೀಡುವುದರೊಡನೆ ಶುಲ್ಕ ಪಾವತಿಸದ ವಿದ್ಯಾರ್ಥಿಗಳ ಶುಲ್ಕವನ್ನೂ ಸಹ ಆಯಾ ಶಾಲೆ ಮತ್ತು ಕಾಲೇಜುಗಳಿಗೆ ಕೂಡಲೆ ಕಳಿಸುವಂತೆ ಕ್ರಮಕೈಗೊಳ್ಳಲು ಸೂಚಿಸಿದರು. ಎಲ್ಲಾ ವಿವರಗಳನ್ನೊಳಗೊಂಡ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಕೂಡಲೇ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸಲು ಹೋರಾಟ ಸಮಿತಿಗೆ ಸೂಚಿಸಲಾಯಿತು.

೬) ಸಫಾಯಿಕರ್ಮಚಾರಿಗಳ ವಿದ್ಯಾವಂತ ಯುವಕರನೇಕರು ಉದ್ಯೋಗವಿಲ್ಲದೆ ಪೋಷಕರ ವೃತ್ತಿಯನ್ನೆ ಅವಲಂಬಿಸಿರುವ ಕುರಿತು ಹೋರಾಟ ಸಮಿತಿ ಆಯೋಗದ ಗಮನಕ್ಕೆ ತಂದಿತು. ಇದಕ್ಕೆ ಪ್ರತಿಕರಿಯಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ೧೦ನೆ ತರಗತಿಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಸಫಾಯಿಕರ್ಮಚಾರಿಗಳ ಮಕ್ಕಳಿಗೆ ಅವರ ಆಸಕ್ತಿಗನುಗುಣವಾಗಿ ಸ್ವಉದ್ಯೋಗ ಮಾಡಲು ಸಾಲ ಸೌಲಭ್ಯ ನೀಡುವುದಾಗಿ ತೀರ್ಮಾನಿಸಿ, ಸ್ಥಳದಲ್ಲೇ ಇದ್ದ ಡಾ. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲೆ ಆದೇಶ ನೀಡಿ ಅಂತಹ ಯುವಕರ ಪಟ್ಟಿಯನ್ನು ಕೂಡಲೇ ಅಧಿಕಾರಿಗಳಿಗೆ ಕೊಡುವಂತೆ ಸಫಾಯಿಕರ್ಮಚಾರಿಗಳ ಹೋರಾಟ ಸಮಿತಿಗೆ ಸೂಚನೆ ನೀಡಿದರು. ಅವರ ಸೂಚನೆಯಂತೆ ಮೂರು ದಿನಗಳ ಒಳಗಾಗಿ ಅಂದರೆ ೨೭.೬.೨೦೧೧ ರಂದು ನಿಗಮದ ಅಧಿಕಾರಿಗಳು ಕೆನಡಿಸ್‌ಗೆ ಭೇಟಿನೀಡಿ ಸದರಿ ಪಟ್ಟಿಯನ್ನು ಪಡೆದು ಕೂಡಲೆ ಕ್ರಮಕೈಗೋಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು.

೭) ಅಲ್ಲದೇ ಸಫಾಯಿಕರ್ಮಚಾರಿ ಕುಟುಂಬದ ವಿದ್ಯಾವಂತ ಯುವಕರು ನೌಕರಿ ಬಗ್ಗೆ ಒಲವು ತೋರಿಸಿದರೆ ಅಂತಹವರ ಪಟ್ಟಿಯನ್ನು ನೀಡಿದರೆ ಸಧ್ಯದಲ್ಲೇ ಆಯೋಜಿಸಲಿರುವ ಉದ್ಯೋಗ ಮೇಳಕ್ಕೆ ಅವರನ್ನು ಆಹ್ವಾನಿಸಿ ಭಾಗವಹಿಸುವಂತೆ ನೋಡಿಕೊಳ್ಳುವುದರ ಜೊತೆಗೆ ಅಂತಹವರಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಭರವಸೆ ನಿಡಿದರು. ಅರ್ಹ ವಿದ್ಯಾಥಿಗಳ ಪಟ್ಟಿಯನ್ನು ಕೂಡಲೇ ನೀಡಲು ಸಮಿತಿಗೆ ಸೂಚಿಸಲಾಯಿತು.

೮) ಬಿಜಿಎಂಎಲ್ ಮನೆಗಳಲ್ಲಿ ವಾಸಿಸುತ್ತಿರುವ ತಮಗೆ ಅಲ್ಲಿನ ಅಧಿಕಾರಿಗಳು ನೀಡುತ್ತಿರುವ ಕಿರುಕುಳವನ್ನು ಆಯೋಗದ ಗಮನಕ್ಕೆ ತರಲಾಯಿತು. ಸಫಾಯಿಕರ್ಮಚಾರಿಗಳು ವಾಸಿಸುತ್ತಿರುವ ಮನೆಗಳು ಮೈನ್ಸ್‌ಗೆ ಸೇರಿದ ಕ್ವಾರ‍್ಟರ‍್ಸ್‌ಗಳು ಮತ್ತು ಅದಕ್ಕೆ ತಿಂಗಳಿಗೆ ೪೫ ರೂಪಾಯಿಗಳ ಬಾಡಿಗೆ ನಿಗದಿ ಮಾಡಲಾಗಿದ್ದು, ಮೈನ್ಸ್ ಮುಚ್ಚ್ಚಿದ ನಂತರ ಉದ್ಯೋಗವಿಲ್ಲದೆ ಆದಾಯವಿಲ್ಲದೆ ಬಾಡಿಗೆ ಕಟ್ಟಲಾಗಿಲ್ಲವೆಂದೂ, ಭಾರಿ ಮೊತ್ತದ ಹಿಂದಿನ ಬಾಡಿಗೆ ಬಾಕಿ (ಸುಮಾರು ೭ರಿಂದ ೮ ಸಾವಿರ ರೂಪಾಯಿಗಳು) ಪಾವತಿ ಮಾಡಬೇಕೆಂದು ಒತ್ತಾಯಿಸಿ ಗಡುವು ನೀಡುತ್ತಿರುತ್ತಾರೆ, ಬಾಕಿ ಪಾವತಿ ಮಾಡದಿದ್ದರೆ ಅಲ್ಲಿಂದ ಎತ್ತಂಗಡಿ ಮಾಡಲಾಗುವುದೆಂಬ ಮೌಖಿಕ ಸೂಚನೆಯನ್ನು ನೀಡಿರುವುದಾಗಿ ತಾವೆಲ್ಲರೂ ಆತಂಕದಿಂದ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವುದಾಗಿ ಆಯೋಗಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಬಿಜಿಎಂಎಲ್ ನೀಡಿರುವ ನೋಟೀಸ್ ಪ್ರತಿಗಳನ್ನು ತಮಗೆ ನೀಡಿದರೆ ಬಾಕಿ ಹಣವನ್ನು ೨೨.೭೫% ಹಣದಿಂದ ಪಾವತಿಸುವುದಾಗಿ ಆಯೋಗಕ್ಕೆ ತಿಳಿಸಿದರು. ನೋಟೀಸ್ ಪ್ರತಿಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ತಲುಪಿಸಲು ಸಮಿತಿಗೆ ಸೂಚಿಸಲಾಯಿತು.

೯) ಮೂಲಭೂತ ಸೌಕರ್ಯ ಕುರಿತು ಹೋರಾಟ ಸಮಿತಿ ಸದಸ್ಯರು ಪ್ರಸ್ತಾಪಿಸಿದರು. ಒಂದು ಬಿಂದಿಗೆ ಕುಡಿಯುವ ನೀರಿಗೆ ೨ ರೂಪಾಯಿ ಪಾವತಿಸುತ್ತಿರುವುದಾಗಿ, ಮಹಿಳೆಯರಿಗೆ ಶೌಚಾಲಯ ಸೌಲಭ್ಯ ಇಲ್ಲದಿರುವುದನ್ನು ಆಯೋಗದ ಗಮನಕ್ಕೆ ತರಲಾಯಿತು. ಮಾನ್ಯ ಆಯೋಗದ ಸದಸ್ಯರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ಆಯುಕ್ತರು ಮತ್ತು ಅಭಿಯಂತರರನ್ನು ತರಾಟೆಗೆ ತೆದುಕೊಂಡರು. ಈ ಸೌಕರ್ಯಗಳನ್ನು ಒದಗಿಸುವುದು ನಗರಸಭೆ ಕರ್ತವ್ಯ ಎಂದು ಅವರಿಗೆ ನೆನಪಿಸಿ ಕುಡಿಯುವ ನೀರಿನ ಪೂರೈಕೆ ಮಾಡುವ ಕೆಲಸವನ್ನು ಕೂಡಲೇ ಮಾಡಬೇಕೆಂದು ಒಂದು ವೇಳೆ ಆ ಕೆಲಸ ಮಾಡದಿದ್ದರೆ ಆಯೋಗದ ಗಮನಕ್ಕೆ ತರುವಂತೆ ಮಾನ್ಯ ಸದಸ್ಯರು ಪಿಯುಸಿಎಲ್ ಮತ್ತು ಸಫಾಯಿಕರ್ಮಚಾರಿಗಳ ಹೋರಾಟ ಸಮಿತಿಗೆ ಸೂಚಿಸಿದರು.

೧೦) ೨೦೦೧ರಲ್ಲಿ ಬಿಜಿಎಂಎಲ್ ಕಾರ್ಯಾಚರಣೆ ನಿಲ್ಲಿಸಿದ ನಂತರ ಅಲ್ಲಿ ಕೆಲಸಮಾಡುತ್ತಿದ್ದ ಸಫಾಯಿಕರ್ಮಚಾರಿಗಳ ಸೇವೆಯನ್ನು ಕೆಜಿಎಫ್ ನಗರ ಸಭೆಗೆ ಒಪ್ಪಂದದ ಮೂಲಕ ವರ್ಗಾಯಿಸಲಾಯಿತು. ಒಪ್ಪಂದದ ಅನ್ವಯ ೨೦೭ ಸಫಾಯಿ ಕರ್ಮಚಾರಿಗಳಿಗೆ ನಗರಸಭೆಯಿಂದ ಕೆಲಸ ನಿಗಧಿಪಡಿಸಿ ೧೧ ತಿಂಗಳು ಕೆಲಸ ಮಾಡಿದರು, ೯ ವರ್ಷ ಕಳೆದರೂ ಅವರ ವೇತನವನ್ನು ಇಂದಿಗೂ ನೀಡದಿರುವ ವಿಷಯ ಬೆಳಕಿಗೆ ಬಂದ ನಂತರ ಆಯೋಗ ಗಂಭೀರವಾಗಿ ಪರಿಗಣಿಸಿ ಸೂಕ್ತ ಆದೇಶ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಎಲ್ಲವನ್ನು ಪರಿಗಣಿಸಿದ ಜಿಲ್ಲಾಧಿಕಾರಿ ವೇತನವನ್ನು ಕೂಡಲೆ ಪಾವತಿ ಮಾಡುವಂತೆ ಸ್ಥಳದಲ್ಲೆ ನಗರಸಭೆ ಆಯುಕ್ತರಿಗೆ ಆದೇಶ ನೀಡಿದರು.

೧೧) ಸುಮಾರು ೨೦ ಮನೆಗಳಿಗೆ ರೇಷನ್ ಕಾರ್ಡ್ ಇಲ್ಲದಿರುವುದು ಕಂಡುಬಂದಿತು. ಅಲ್ಲದೆ ಕಾರ್ಡ್ ಹೊಂದಿರುವ  ಬಹುಸಂಖ್ಯೆಯ ಸಫಾಯಿಕರ್ಮಚಾರಿಗಳಿಗೆ ಸರಿಯಾಗಿ ರೇಷನ್ ದೊರೆಯದಿರುವುದು, ಮೋಸ ಮಾಡುವ ಪ್ರಕರಣ ಬೆಳಕಿಗೆ ಬಂದ ನಂತರ ಸ್ವತಃ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲಿಸಿ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  

ಅಂತಿಮವಾಗಿ ಮಾತನಾಡಿದ ಆಯೋಗದ ಸದಸ್ಯರಾದ ಮಾನ್ಯ ರೆಡ್ಡಿಯವರು ಮಲ ಎತ್ತುವ ಪದ್ದತಿಯನ್ನು ಇಂದಿನಿಂದ ಕೊನೆಗೊಳಿಸುವಂತೆ ಸಫಾಯಿಕರ್ಮಚಾರಿಗಳಿಗೆ ಸೂಚಿಸಿದರಲ್ಲದೆ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವಂತೆ ಕರೆ ನೀಡಿದರು. ಜಿಲ್ಲಾಡಳಿತ ಮತ್ತು ನಗರಾಡಳಿತಗಳೆರಡು ಎಚ್ಚರದಿಂದ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದರು. ಒಂದು ವೇಳೆ ಇಂದು ತೆಗೆದುಕೊಂಡ ನಿರ್ಧಾರಗಳು ಅನುಷ್ಟ್ಟಾನಕ್ಕೆ ಬಾರದಿದ್ದರೆ ಅದನ್ನು ಆಯೋಗದ ಗಮನಕ್ಕೆ ತರುವಂತೆ ಸಫಾಯಿಕರ್ಮಚಾರಿ ಸಮಿತಿಗೆ ಮತ್ತು ಪಿಯುಸಿಎಲ್‌ಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಮುಖಂಡರು ಮಾನ್ಯ ರೆಡ್ಡಿಯವರನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಅಭಿನಂದಿಸುವ ಮುಖಾಂತರ ಸಭೆ ಮುಕ್ತಾಯವಾಯಿತು.

ಒಂದು ಪುಟ್ಟ ಅಭಿಯಾನ ಸಾರ್ಥಕಗೊಂಡ ಖುಷಿಯಲ್ಲಿ....


ಇದು ನಿಜಕ್ಕೂ ಸಮಾಧಾನದ ಸಂಗತಿ. ಕೆಜಿಎಫ್‌ನ ಮಲ ಹೊರುವವರ ಕುರಿತು ಕಳೆದೊಂದು ವಾರದಿಂದ ನಡೆದ ಚರ್ಚೆಯನ್ನು ನೀವು ಗಮನಿಸಿದ್ದೀರಿ. ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರು ಕಳೆದ ಮಂಗಳವಾರ ಅಲ್ಲಿಗೆ ಭೇಟಿ ನೀಡಿದ ಕುರಿತಾದ ಪತ್ರಿಕಾ ವರದಿಗಳನ್ನು ಗಮನಿಸಿದ್ದೀರಿ. ಎಲ್ಲರ ಪ್ರಯತ್ನಗಳು ಫಲ ಕೊಡುವ ಹಾಗೆ ಕಾಣುತ್ತಿವೆ.
ಸುರೇಶ್ ಕುಮಾರ್ ಅವರ ಭೇಟಿಯ ನಂತರ ಮಾನವ ಹಕ್ಕು ಆಯೋಗದ ಸದಸ್ಯ ಎಚ್.ಆರ್.ರೆಡ್ಡಿಯವರು ಭೇಟಿ ನೀಡಿದ್ದಾರೆ.

ಈ ನಡುವೆ ಕಳೆದ ಸೋಮವಾರ ಹೈಕೋರ್ಟ್ ಸಹ ಮಲಹೊರುವ ಪದ್ಧತಿ ಚಾಲ್ತಿಯಲ್ಲಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆಯಲ್ಲದೆ, ಸರ್ಕಾರದಿಂದ ಸ್ಪಷ್ಟನೆಯನ್ನೂ ಕೇಳಿದೆ. ಮಾಜಿ ಅಡ್ವೊಕೇಟ್ ಜನರಲ್ ನರಸಿಂಹಮೂರ್ತಿಯವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳ ಉಭಯ ಅಧ್ಯಕ್ಷರೂ ಜು.೧೧ರಂದು ನ್ಯಾಯಾಲಯಕ್ಕೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಆದೇಶಿಸಿದೆ.

ಕೆಜಿಎಫ್ ಭೇಟಿಯ ನಂತರ ಸುರೇಶ್ ಕುಮಾರ್ ಅವರು ಅಲ್ಲಿನ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರವೊಂದನ್ನು ಬರೆದಿದ್ದು, ಇನ್ನು ಹದಿನೈದು-ಇಪ್ಪತ್ತು ದಿನಗಳೊಳಗಾಗಿ ಮತ್ತೆ ಕೆಜಿಎಫ್‌ಗೆ ಭೇಟಿ ನೀಡುವೆ, ಅಷ್ಟರೊಳಗೆ ಮಲ ಹೊರುವ ಪದ್ಧತಿ ಸಂಪೂರ್ಣ ಸ್ಥಗಿತಗೊಂಡಿರಬೇಕು ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ತಮ್ಮ ಹೊಣೆಯನ್ನು ನಿಭಾಯಿಸದಿದ್ದರೆ ಕ್ರಮ ಕೈಗೊಳ್ಳಬೇಕಾದೀತು ಎಂದು ಅವರು ಎಚ್ಚರಿಸಿದ್ದಾರೆ.

ಸಚಿವರ ಕೆಜಿಎಫ್ ಭೇಟಿಯ ಫಲಶ್ರುತಿಯೂ ಸಮಾಧಾನಕರವಾಗಿದೆ. ಬೇಡಿಕೆಗಳು ಈಡೇರಿವೆ.

೧. ಮಲ ಹೊರುವ ಕಾಯಕ ನಡೆಸುತ್ತಿರುವವರಿಗೆ ನೇರ ನೇಮಕಾತಿಯ ಮೂಲಕ ದಿನಗೂಲಿ ಆಧಾರದಲ್ಲಿ ಕೋಲಾರ ಮತ್ತು ಕೆಜಿಎಫ್ ನಗರಸಭೆಗಳಲ್ಲಿ ಉದ್ಯೋಗ ನೀಡಲು ನಿರ್ಧರಿಸಲಾಗಿದೆ.

೨. ಮಲ ಹೊರುವ ಕಾಯಕದಿಂದಾಗಿ ಅಕಾಲಿಕವಾಗಿ ನಿಧನ ಹೊಂದಿದವರ ಕುಟುಂಬಕ್ಕೆ ತಲಾ ೧೦,೦೦೦ ರೂ.ಗಳ ಪರಿಹಾರವನ್ನು ನೀಡಲು ನಿರ್ಧರಿಸಲಾಗಿದೆ.

೩. ಎಸ್‌ಸಿಪಿ ಯೋಜನೆಯಡಿಯಲ್ಲಿ ಮೃತ ಪಟ್ಟ ಮಲಹೊರುವ ಕಾರ್ಮಿಕರ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಹೊಣೆಯನ್ನು ನಗರಸಭೆಯೇ ವಹಿಸಿಕೊಳ್ಳಲಿದೆ.

೪. ಮಲ ಹೊರುವ ಕಾಯಕ ನಡೆಸುತ್ತಿರುವವರು ವಾಸವಾಗಿರುವ ಕಾಲನಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. (ಈಗಾಗಲೇ ಡಾಂಬರೀಕರಣ ನಡೆಯುತ್ತಿದೆ.)

೫. ಮಲ ಹೊರುವ ಕಾಯಕದಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ನಿರ್ಧರಿಸಲಾಗಿದೆ.

೬. ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮಾಸಾಶನ ನೀಡಲಾಗುವುದು.

೭. ನಗರಸಭೆಯ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸಿ ನಂತರ ಕೆಲಸ ಕಳೆದುಕೊಂಡು ಮಲಹೊರುವ ಕಾಯಕ ನಡೆಸುತ್ತಿದ್ದ ಸಿಬ್ಬಂದಿಗೆ ೯ ತಿಂಗಳ ಬಾಕಿ ವೇತನವನ್ನು ನೀಡಲು (ನಾಳೆ ಮಂಗಳವಾರ) ನಿರ್ಧರಿಸಲಾಗಿದೆ.)

೮. ಸ್ವಂತದ ಕಾಯಕ ನಡೆಸಲು ಇಚ್ಛಿಸುವವರಿಗೆ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಬ್ಸಿಡಿ ಸಮೇತ ಸಾಲ ನೀಡಲು ನಿರ್ಧರಿಸಲಾಗಿದೆ.

ಇದು ಸಾಧ್ಯವಾಗಿದ್ದು ಸಫಾಯಿ ಕರ್ಮಚಾರಿಗಳ ಕುರಿತು ಅಧ್ಯಯನ ನಡೆಸುತ್ತಿರುವ ಪ್ರೊ. ವೈ.ಜೆ.ರಾಜೇಂದ್ರ ಮತ್ತು ತಂಡದವರ ಪರಿಶ್ರಮದಿಂದಾಗಿ. ಈ ತಂಡದ ಭಾಗವಾಗಿರುವ ಟಿ.ಕೆ.ದಯಾನಂದ್ ಕೆಂಡಸಂಪಿಗೆಯಲ್ಲಿ ಲೇಖನವೊಂದನ್ನು ಬರೆದು ಮಲ ಹೊರುವ ಕಾಯಕ ನಡೆಸುವ ಪ್ರಸಾದನ ನೋವಿನ ಕಥಾನಕಕ್ಕೆ ರೂಪ ಕೊಟ್ಟಿದ್ದರು. ಅದರ ಆಧಾರದ ಮೇಲೆ ಸುರೇಶ್ ಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದು, ಮೇಲ್ ಕಳುಹಿಸಿದ್ದೆವು. ಇವರೆಲ್ಲರ ಶ್ರಮವೂ ಸಾರ್ಥಕವಾಗಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೂರೇ ದಿನಗಳಲ್ಲಿ ಕೆಜಿಎಫ್‌ಗೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಸುರೇಶ್ ಕುಮಾರ್ ಅವರಿಗೆ, ಈ ಕುರಿತು ಬೆಳಕು ಚೆಲ್ಲಿದ ಪ್ರೊ.ವೈ.ಜೆ.ರಾಜೇಂದ್ರ, ಟಿ.ಕೆ.ದಯಾನಂದ್, ಚಂದ್ರಶೇಖರ್ ಪಿ.ಅತ್ತಿಬೆಲೆ ಮತ್ತವರ ಇಡೀ ತಂಡಕ್ಕೆ, ತಡವಾಗಿಯಾದರೂ ಈ ವಿದ್ಯಮಾನಗಳನ್ನು ವರದಿ ಮಾಡಿದ ಪತ್ರಿಕೆಗಳಿಗೆ, ಅದರಲ್ಲೂ ವಿಶೇಷವಾಗಿ ಮುಖಪುಟದಲ್ಲೇ ಈ ವರದಿಯನ್ನು ಪ್ರಕಟಿಸಿದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಮಾನವತೆಯಲ್ಲಿ ವಿಶ್ವಾಸವಿಟ್ಟ ಎಲ್ಲರ ಪರವಾಗಿ ಕೃತಜ್ಞತೆಗಳು ಮತ್ತು ಅಭಿನಂದನೆಗಳು.

ಮಲ ಹೊರುವವರ ಕಥೆ ಕೆಜಿಎಫ್‌ಗೆ ಸೀಮಿತವಲ್ಲ. ಇನ್ನೂ ಹಲವು ಜಿಲ್ಲೆಗಳಲ್ಲಿ ಅದು ಚಾಲ್ತಿಯಲ್ಲಿದೆ. ಸತ್ಯಶೋಧನಾ ತಂಡದ ಬಳಿ ಆ ಮಾಹಿತಿಗಳೂ ಇವೆ. ಕೋಲಾರ ಜಿಲ್ಲೆಯಲ್ಲಿ ಆದ ಸುಧಾರಣೆಗಳೂ ಈ ಜಿಲ್ಲೆಗಳಲ್ಲೂ ವಿಸ್ತರಿಸುವಂತಾಗಬೇಕು. ಆ ಕಡೆ ಈ ಎಲ್ಲರೂ ಗಮನಹರಿಸುವಂತಾಗಬೇಕು.

ಬ್ಲಾಗಿಂಗ್ ಮಾಡಲು ಆರಂಭಿಸಿ ಅರ್ಧ ವರ್ಷ ಕಳೆದೇ ಹೋಯಿತು. ಈಗ, ಕೆಜಿಎಫ್‌ನ ಬೆಳವಣಿಗೆಗಳ ನಂತರ ನಿಜವಾಗಲೂ ಇದು ಸಾರ್ಥಕವಾಗಿದೆ ಅನಿಸುತ್ತಿದೆ. ಈ ಸಂತೋಷವನ್ನು ನಿಮ್ಮೊಂದಿಗಲ್ಲದೆ ಯಾರೊಂದಿಗೆ ಹಂಚಿಕೊಳ್ಳುವುದು? ಯಾವುದೇ ಮೀಡಿಯಾ ಆದರೂ ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಮುಟ್ಟದಿದ್ದರೆ, ಅವನ ನೋವನ್ನು ಅಭಿವ್ಯಕ್ತಿಸದಿದ್ದರೆ ಅದು ಇದ್ದೂ ಪ್ರಯೋಜನವಿಲ್ಲ. ಮಾಧ್ಯಮಗಳು ಜನ ಪಕ್ಷಪಾತಿಯಾಗಿರಬೇಕು, ಮಾತ್ರವಲ್ಲ ನೋವುಂಡವರ, ಅಸಹಾಯಕರ, ದರಿದ್ರರ ಪಕ್ಷಪಾತಿಯಾಗಿರಬೇಕು. ಇಂಥ ಅಲ್ಲೊಂದು, ಇಲ್ಲೊಂದು ಪ್ರಕರಣಗಳು ನಮ್ಮನ್ನು ಆಶಾವಾದಿಗಳನ್ನಾಗಿಸುತ್ತವೆ. ಪ್ರಜಾಪ್ರಭುತ್ವದ ಸೌಂದರ್ಯವೇ ಇದು ಅನಿಸುತ್ತದೆ.

Friday, June 24, 2011

ರಾಜಕೀಯ ಪಕ್ಷಗಳ ಬಾಡಿಗೆ ಬಂಟರೇ ಪ್ರೇಕ್ಷಕರಾಗಿರುವ ಶಿವಪ್ರಸಾದ್ ಶೋ!

ಇಂಗ್ಲಿಷ್ ಚಾನಲ್‌ಗಳು ನಡೆಸುವ ಸಂವಾದ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಅನುಕರಿಸಿ ಕನ್ನಡ ನ್ಯೂಸ್ ಚಾನಲ್‌ಗಳೂ ಇಂಥ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ನಾಲ್ಕೈದು ಮಂದಿ ಅತಿಥಿಗಳು, ಸುಮಾರು ಐವತ್ತು ಮಂದಿ ಪ್ರೇಕ್ಷಕರು ಇಂಥ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ಸುವರ್ಣ ನ್ಯೂಸ್‌ನಲ್ಲಿ ಮೆಗಾ ಫೈಟ್ ಎಂಬ ಹೆಸರಿನಲ್ಲಿ ಹಿಂದೆ ರಂಗನಾಥ್ ಭಾರದ್ವಾಜ್ ಈ ಕಾರ್ಯಕ್ರಮ ನಡೆಸುತ್ತಿದ್ದರು. ನಂತರ ಅದನ್ನು ಹಮೀದ್ ಪಾಳ್ಯ ಮುಂದುವರೆಸಿದರು. ಟಿವಿ೯ ವಾಹಿನಿಯಲ್ಲಿ ಇದೇ ತರಹದ ಕಾರ್ಯಕ್ರಮ ನಡೆಸುವವರು ಶಿವಪ್ರಸಾದ್.

ಸಾಧಾರಣವಾಗಿ ರಾಜಕಾರಣಕ್ಕೆ ಸಂಬಂಧಿಸಿದ ವಿಷಯಗಳನ್ನೇ ಚರ್ಚೆಗೆ ಆಯ್ದುಕೊಳ್ಳಲಾಗುತ್ತದೆ. ಇತರ ವಿಷಯಗಳ ಚರ್ಚೆಯೂ ಇರುತ್ತದೆ. ಇಲ್ಲಿ ಪ್ರೇಕ್ಷಕರು ಎಂದರೆ ಜನಸಾಮಾನ್ಯರು ಎಂದರ್ಥ. ರಾಜಕೀಯ ಪಕ್ಷಗಳ ನಿಲುವನ್ನು ಹೇಳಲು ಅತಿಥಿಗಳಾಗಿ ರಾಜಕೀಯ ನಾಯಕರೇ ಇರುತ್ತಾರೆ. ಇವರನ್ನು ಪ್ರಶ್ನಿಸುವವರು ಸಹಜವಾಗಿಯೇ ನಿರೂಪಕರು ಮತ್ತು ಜನಸಾಮಾನ್ಯ ಪ್ರೇಕ್ಷಕರು.

ಆದರೆ ಶಿವಪ್ರಸಾದರ ಕಾರ್ಯಕ್ರಮಕ್ಕೆ ಆಗಮಿಸುವ ಪ್ರೇಕ್ಷಕರು ಜನಸಾಮಾನ್ಯರಲ್ಲ. ರಾಜಕೀಯ ಪಕ್ಷಗಳ ಬಾಡಿಗೆ ಬಂಟರು. ಇದು ನಮ್ಮ ಆರೋಪವಲ್ಲ. ಸ್ವತಃ ಶಿವಪ್ರಸಾದ್ ಅವರೇ ಈ ವಾರದ ಚರ್ಚೆಯಲ್ಲಿ ಬಹಿರಂಗಪಡಿಸಿದ ರಹಸ್ಯ.
ಸಾಧಾರಣವಾಗಿ ರಾಜಕೀಯ ಸಂಬಂಧಿ ಚರ್ಚೆಗಳಲ್ಲಿ ಪ್ರೇಕ್ಷಕರು ಅತಿಥಿಗಳ ಮೇಲೆ ಹರಿಹಾಯುವುದು, ಪ್ರೇಕ್ಷಕರೇ ಪರಸ್ಪರ ದೂಷಿಸಿಕೊಳ್ಳುವುದು, ಒಮ್ಮೊಮ್ಮೆ ಇದು ಹೊಡೆದಾಟದ ಹಂತಕ್ಕೂ ತಲುಪುವುದನ್ನು ನಾವು ನೋಡಿದ್ದೇವೆ. ನೀವು ಗಮನಿಸಿರಬಹುದು, ಇಂಥ ಸಂಘರ್ಷದ ಕ್ಲಿಪ್ಪಿಂಗ್‌ಗಳನ್ನೇ ಪ್ರೊಮೋಗಳಲ್ಲಿ ಬಳಸಲಾಗುತ್ತದೆ. ಅದರರ್ಥ ಚಾನಲ್‌ಗಳಿಗೆ ಇಂಥ ದೃಶ್ಯಗಳು ಬೇಕು ಮತ್ತು ಬೇಕೇಬೇಕು. ಸಾಮಾನ್ಯ ಜನರು ಬಂದು ಗದ್ದಲ ಮಾಡುತ್ತಾರೆ ಎಂದು ನಂಬುವಂತಿಲ್ಲ, ಹೀಗಾಗಿ ಅವರಿಗೆ ರಾಜಕೀಯ ಪಕ್ಷಗಳ ಪುಡಾರಿಗಳೇ ಬೇಕು.

ಬಿಜೆಪಿಯ ಧನಂಜಯ ಕುಮಾರ್, ಕಾಂಗ್ರೆಸ್‌ನ ಬಿ.ಎಲ್.ಶಂಕರ್, ಜೆಡಿಎಸ್‌ನ ಬಂಡೆಪ್ಪ ಕಾಶಂಪೂರ್ ಮತ್ತು ಓರ್ವ ಜ್ಯೋತಿಷಿ ಭಾಗವಹಿಸಿದ್ದ ಶಿವಪ್ರಸಾದ್ ಶೋನಲ್ಲಿ ಆಣೆ-ಪ್ರಮಾಣದ ಚರ್ಚೆ ನಡೆಯುತ್ತಿತ್ತು. ಬಿಜೆಪಿಯವರು ಮಾಡಿದ ಎಂಥದ್ದೇ ಪಾಪವನ್ನಾದರೂ ಸರಿ ಅದನ್ನು ಸಮರ್ಥಿಸಿಕೊಳ್ಳಲು ಸದಾ ತುದಿಗಾಲಲ್ಲಿ ನಿಲ್ಲುವ ಧನಂಜಯ ಕುಮಾರ್ ಯಾಕೋ ಅಪ್ ಸೆಟ್ ಆದಂತಿತ್ತು. ಪ್ರೇಕ್ಷಕರ ಕಡೆಯಿಂದ ಕೇಳಿಬಂದ ಮಾತುಗಳಿಗೆ ಅವರು ರಾಂಗ್ ಆಗಿ, ನಾಲಿಗೆ ಬಿಗಿ ಹಿಡಿದು ಮಾತನಾಡ್ರೀ ಎಂದು ಕಿರುಚುತ್ತಿದ್ದರು.

ಆದರೂ ಪ್ರೇಕ್ಷಕರ ಮಾತಿನ ಕೂರಂಬು ತಿವಿಯತೊಡಗಿದಾಗ ಹತಾಶರಾದ ಧನಂಜಯ ಕುಮಾರ್, ಅಲ್ರೀ ಶಿವಪ್ರಸಾದ್ ಹೀಗೆ ಒಂದೇ ಮಾಬ್ ತಂದು ಕೂರಿಸುವುದು ಸರಿನಾ? ಎಂದು ಪ್ರಶ್ನಿಸಿದರು.

ಶಿವಪ್ರಸಾದ್ ಈ ಆರೋಪವನ್ನು ಸೀರಿಯಸ್ಸಾಗಿ ತೆಗೆದುಕೊಂಡೇಬಿಟ್ಟರು. ನೋಡಿ ಸ್ವಾಮಿ, ನಿಮ್ಮ ಪಕ್ಷದ ಪಿಆರ್‌ಓ ಇದ್ದಾರಲ್ಲ, ಶಿವಾನಂದ್ ಅಂತ ಅವರಿಗೆ ಹತ್ತು ಸರ್ತಿ ಫೋನ್ ಮಾಡಿದೆವು. ಏನು ಕೆಲಸ ಮಾಡ್ತಾರೋ ಏನೋ ಅವರು. ಉತ್ತರ ಕೊಡಲಿಲ್ಲ. ಕಡೆಗೆ ನಾನೇ ಒಂದು ಎಸ್‌ಎಂಎಸ್ ಮಾಡಿದೆ. ನೀವು ನಮ್ಮ ಕರೆಗೆ ಉತ್ತರಿಸುತ್ತಿಲ್ಲ. ನೀವು ಕಳುಹಿಸುವ ಜನ ಇಲ್ಲದೆಯೇ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ. ಟಿವಿ೯ ಜತೆಗೆ ನಿಮ್ಮ ಅಸಹಕಾರಕ್ಕೆ ಧನ್ಯವಾದಗಳು ಅಂತ ಎನ್ನುತ್ತ ತಮ್ಮ ಮೊಬೈಲ್ ಹೊರತೆಗೆದು ಸೆಂಟ್ ಮೆಸೇಜ್ ತೋರಿಸಿಯೇ ಬಿಟ್ಟರು.

ಅಲ್ಲಿಗೆ ಶಿವಪ್ರಸಾದ್ ಅವರ ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರನ್ನು ಕಳುಹಿಸುವ ಹೊಣೆ ರಾಜಕೀಯ ಪಕ್ಷಗಳಿಗೇ ಸೇರಿದ್ದು ಎಂದಾಯಿತು. ಇವತ್ತಿನ ಕಾರ್ಯಕ್ರಮಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಪಿಆರ್‌ಓಗಳು ಮಾತ್ರ ತಮ್ಮ ಬಂಟರನ್ನು ಕಳುಹಿಸಿರಬಹುದು. ಹೀಗಾಗಿಯೇ ಧನಂಜಯ ಕುಮಾರ್ ಅಪ್‌ಸೆಟ್ ಆಗಿದ್ದಿರಬಹುದು.

ಹಾಗಿದ್ದ ಮೇಲೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಬಾಡಿಗೆ ಬಂಟರನ್ನು ಸಾಮಾನ್ಯ ಪ್ರೇಕ್ಷಕರು ಎಂಬಂತೆ ಬಿಂಬಿಸುವುದು ಏಕೆ? ಸಭಿಕರ ಆಸನಗಳನ್ನು ಮೂರು ವಿಭಾಗ ಮಾಡಿ, ಮೂರು ರಾಜಕೀಯ ಪಕ್ಷಗಳಿಗೆ ಹಂಚಿ, ಪ್ರತಿ ಭಾಗದಲ್ಲೂ ಆಯಾ ರಾಜಕೀಯ ಪಕ್ಷದ ಬಾವುಟ ನೆಟ್ಟು ಕಾರ್ಯಕ್ರಮ ನಡೆಸಬಹುದಲ್ಲ?

ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವ ರಾಜಕೀಯ ಪಕ್ಷದ ಕಾರ್ಯಕರ್ತರೂ ಅಲ್ಲದ ಸಾಮಾನ್ಯ ಜನರು ಭಾಗವಹಿಸಲು ಯಾಕೆ ಅವಕಾಶ ನೀಡುವುದಿಲ್ಲ? ಅಥವಾ ಇದೇ ಪ್ರಶ್ನೆಯನ್ನು ಇನ್ನೊಂದು ರೂಪದಲ್ಲಿ ಕೇಳುವುದಾದರೆ ರಾಜಕೀಯ ಪಕ್ಷಗಳ ನಿಲುವು ಹೇಳಲು ರಾಜಕಾರಣಿಗಳೇ ಅತಿಥಿಗಳಾಗಿರುವಾಗ ಪ್ರೇಕ್ಷಕರ ರೂಪದಲ್ಲಿ ರಾಜಕಾರಣಿಗಳ ಭಕ್ತರು, ಪುಡಿಗಳೇ ಬೇಕೆ?

ಎಲ್ಲರೂ ಬೇರೆ ಬೇರೆ ರಾಜಕೀಯ ಪಕ್ಷಗಳ ಹಿಂಬಾಲಕರೇ ಆಗಿರುವಾಗ ನೀವು ನಡೆಸುವ ಚರ್ಚೆ ವಸ್ತುನಿಷ್ಠವಾಗಿರಲು ಹೇಗೆ ಸಾಧ್ಯ? ಜನಸಾಮಾನ್ಯರ ಮಾತುಗಳನ್ನು ಆಡುವವರು ಯಾರು? ಅದು ಬೇಡ ಅನ್ನುವುದಾದರೆ ಇಂಥ ಚರ್ಚೆ ನಡೆಸುವ ಅಗತ್ಯವಾದರೂ ಏನು? ಅದನ್ನು ಬಡಪಾಯಿ ಪ್ರೇಕ್ಷಕರ ಮೇಲೆ ಹೇರುವುದಾದರೂ ಯಾಕೆ?

ಶಿವಪ್ರಸಾದ್ ಏನೇ ಕಾರ್ಯಕ್ರಮ ಮಾಡಿದರೂ ಹೋಮ್ ವರ್ಕ್ ಮಾಡಿಯೇ ಮಾಡುತ್ತಾರೆ. ಶ್ರದ್ಧೆ ಮತ್ತು ಶ್ರಮ ಎರಡನ್ನೂ ವಿನಿಯೋಗಿಸುವುದು ಕಣ್ಣಿಗೆ ಕಾಣುತ್ತದೆ. ಆದರೆ ತಮ್ಮ ಕಾರ್ಯಕ್ರಮಕ್ಕೆ ರಾಜಕೀಯ ಪಕ್ಷಗಳ ಬಂಟರನ್ನು ಕರೆಸಿ ಪ್ರೇಕ್ಷಕರನ್ನಾಗಿಸುವ ಅನಿವಾರ್ಯತೆ ಏನು ಎಂಬುದಕ್ಕೆ ಅವರೇ ಉತ್ತರಿಸಬೇಕು.

ಇವತ್ತಿನ ಎಪಿಸೋಡ್ ನೋಡಿದ ಮೇಲೆ ಇಂಥ ಕಾರ್ಯಕ್ರಮಗಳ ನಿರ್ಮಾಪಕರ ಮೇಲೆ ಸಿಟ್ಟೂ ಬರುತ್ತಿಲ್ಲ, ಬೇಸರವೂ ಆಗುತ್ತಿಲ್ಲ, ಕನಿಕರವಾಗುತ್ತಿದೆ.

ಆನಂದ ಕರ್ನಾಟಕವನ್ನು ಆನಂದ್ ಸಿಂಗ್ ಅವರೇ ಆರಂಭಿಸಲಿದ್ದಾರೆ


ವಿಜಯ ಸಂಕೇಶ್ವರರು ಆರಂಭಿಸಲಿರುವ ಪತ್ರಿಕೆಯ ಹೆಸರು ಏನು ಎಂದು ಬಹಳಷ್ಟು ಓದುಗರು ಕೇಳುತ್ತಿದ್ದಾರೆ. ಆನಂದ ಕರ್ನಾಟಕ ಎಂಬ ಹೆಸರು ಚಾಲ್ತಿಯಲ್ಲಿದ್ದದ್ದು ನಿಮಗೆ ಗೊತ್ತು. ಆದರೆ ಈ ಟೈಟಲ್ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಅವರ ಬಳಿ ಇದೆ ಎಂದು ನಾವು ಬರೆದಿದ್ದೂ ನಿಮಗೆ ಗೊತ್ತು. ಆದರೆ ಈ ಟೈಟಲ್‌ನ ಪತ್ರಿಕೆಯ ಪತ್ರಿಕೆಯನ್ನು ತಾವೇ ಪ್ರಾರಂಭಿಸುತ್ತಿರುವುದಾಗಿ ಸ್ವತಃ ಆನಂದ್ ಸಿಂಗ್ ಅವರೇ ಹೇಳಿದ್ದಾರೆ. ಸಂಪಾದಕೀಯಕ್ಕೆ ಆನಂದ್ ಸಿಂಗ್ ಅವರು ಬರೆದಿರುವ ಪತ್ರ ಇಲ್ಲಿದೆ. ಪತ್ರವೇ ಎಲ್ಲವನ್ನೂ ಬಿಡಿಸಿ ಹೇಳುತ್ತಿದೆ. ಆನಂದ್ ಸಿಂಗ್ ಅವರ ಪ್ರಯತ್ನಕ್ಕೆ ಶುಭಕೋರುತ್ತೇವೆ. - ಸಂ

ಮಾನ್ಯ ಸಂಪಾದಕರೇ,
ಸಂಪಾದಕೀಯ ಬ್ಲಾಗಿನಲ್ಲಿ ಸಂಕೇಶ್ವರರ ಹೊಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ತಿಮ್ಮಪ್ಪ ಭಟ್ಟರು.. ಎಂಬ ಶಿರೋನಾಮೆ ಲೇಖನದಲ್ಲಿ ನನ್ನ ಹೆಸರು ಪ್ರಸ್ತಾಪಿತಗೊಂಡಿದೆ. 
ಆನಂದ ಕರ್ನಾಟಕ ದಿನ ಪತ್ರಿಕೆಯ ಟೈಟಲ್‌ನ್ನು ನಾನು ರಿಜಿಸ್ಟರ್ ಮಾಡಿಸಿಕೊಂಡಿರುವುದು ನಿಜ. ಈ ಟೈಟಲ್‌ನ್ನು ವಿಜಯ ಸಂಕೇಶ್ವರ ಅವರು ಖರೀದಿಸಿದ್ದಾರೆ ಎನ್ನುವುದು ಮಾತ್ರ ಸುಳ್ಳಾಗಿದೆ. ಈ ಪತ್ರಿಕೆಯ ಟೈಟಲ್ ಬಗ್ಗೆ ವಿಜಯ ಸಂಕೇಶ್ವರ ಆಗಲಿ, ಅಥವಾ ಪತ್ರಿಕೆಗೆ ಸಂಬಂಧಿಸಿದವರಾಗಲಿ ಯಾರು ಇಲ್ಲಿಯವರೆಗೆ ಇದರ ಬಗ್ಗೆ ಚರ್ಚೆ ನಡೆಸಿಲ್ಲ. 
ದಿನ ಪತ್ರಿಕೆಯನ್ನು ಪ್ರಾರಂಭಿಸುವ ಮಹದಾಸೆಯನ್ನು ಇಟ್ಟುಕೊಂಡು ಸತ್ಯ, ನಿಷ್ಠತೆಯಿಂದ ಪತ್ರಿಕೆಯೊಂದನ್ನು ನಡೆಸಬೇಕೆಂದು ಟೈಟಲ್ ರಿಜಿಸ್ಟರ್ ಮಾಡಿಕೊಂಡಿರುವೆ. ಇದನ್ನು ಇನ್ನೊಬ್ಬರಿಗೆ ಮಾರಾಟ ಮಾಡುವ ಉದ್ದೇಶ ಹೊಂದಿಲ್ಲ. ಪತ್ರಿಕೆಯನ್ನು ಬೇಗನೇ ಪ್ರಾರಂಭಿಸಬೇಕೆಂದು ಕೊಂಡಿರುವೆ. ಯಾವ ಪ್ರಮಾಣದಲ್ಲಿ ಪತ್ರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ಚರ್ಚೆಯಲ್ಲಿ ಇರುವೆ ಎಂದು ವಿನಮ್ರವಾಗಿ ತಿಳಿಸುವೆ. 
ಸಂಪಾದಕೀಯ ಬ್ಲಾಗ್ ಬಗ್ಗೆ ಗೆಳೆಯರು ಗಮನ ಸೆಳೆದರು. ಈ ಬ್ಲಾಗ್ ಹೇಗೆ ಕೆಲಸ ನಿರ್ವಹಿಸುತ್ತಿದೆ ಎಂದು ವಿವರಿಸಿದರು. ನನಗೆ ತುಂಬಾ ಕುತೂಹಲವಾಯಿತು. ಬ್ಲಾಗ್ ಬರಹ ನೋಡಿ ಖುಷಿಯಾಯಿತು. ಈ ಖುಷಿ ಹಂಚಿಕೊಳ್ಳುವ ಜೊತೆಗೆ ನನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸುವುದು ಸರಿ ಎನ್ನಿಸಿ ಈ ಪತ್ರ ಬರೆಯುತ್ತಿರುವೆ. ಸಾಮಾಜಿಕ ವಿಷಯಗಳ ಬಗ್ಗೆ ಗಂಭೀರವಾಗಿ ವಿಷಯ ಪ್ರಸ್ತಾಪಿಸುವ ನಿಮ್ಮ ಬ್ಲಾಗ್ ನನಗೆ ಇಷ್ಟವಾಯಿತು. ನಮಸ್ಕಾರಗಳು. 
-ಆನಂದ್ ಸಿಂಗ್
ಶಾಸಕರು, ಹೊಸಪೇಟೆ. 

Wednesday, June 22, 2011

ಐಶ್ವರ್ಯಳ ಇನ್ನೂ ಹುಟ್ಟದ ಮಗುವಿನ ಸುದ್ದಿಯ ನಡುವೆ ಮಸುಕಾದ ಮಲ ಹೊರುವವರ ಸುದ್ದಿ...

ಐಶ್ವರ‍್ಯ ರೈ ಬಚ್ಚನ್ ಹೊಟ್ಟೆಯಲ್ಲಿ ಇನ್ನೂ ಹುಟ್ಟದ ಮಗುವಿಗೆ ಸಿಕ್ಕ ಪ್ರಚಾರ ಕೆಜಿಎಫ್‌ನಲ್ಲಿ ಮಲ ಹೊತ್ತು ನೂರಾರು ಖಾಯಿಲೆಗಳಿಂದ ಸತ್ತು ಹೋಗುತ್ತಿರುವ ಜನರಿಗೆ ಸಿಗುವುದಿಲ್ಲ. ಇದು ಕಠೋರ ವಾಸ್ತವ. ನಿನ್ನೆ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಾವು ಹೇಳಿದಂತೆಯೇ ಕೆಜಿಎಫ್ ನಗರಕ್ಕೆ ಭೇಟಿ ನೀಡಿದ್ದಾರೆ. ಮಲ ಹೊರುವಿಕೆಗೆ ನಿಷೇಧವಿದ್ದರೂ ಆ ಕಾರ್ಯ ಮಾಡುತ್ತಿರುವವರನ್ನು ಅವರು ಕಣ್ಣಾರೆ ಕಂಡಿದ್ದಾರೆ. ಅವರಿಗೆ ಪುನರ್ವಸತಿಯ ಭರವಸೆಯನ್ನೂ ನೀಡಿದ್ದಾರೆ. ಕ್ರಮ ಕೈಗೊಳ್ಳದ ಅಧಿಕಾರಿಗಳನ್ನೂ ಗದರಿದ್ದಾರೆ. ತಮಾಶೆಯೆಂದರೆ ಸಚಿವರು ಭೇಟಿ ನೀಡುವವರೆಗೆ ಇಲ್ಲಿ ಮಲ ಹೊರುವವರು ಇದ್ದಾರೆ ಎಂಬುದೇ ಜಿಲ್ಲಾಧಿಕಾರಿಗಳಿಗೆ ಗೊತ್ತಿರಲಿಲ್ಲವಂತೆ.

ವಿಶೇಷವೆಂದರೆ ಕೆಜಿಎಫ್‌ಗೆ ಸಚಿವರು ನೀಡಿರುವ ಭೇಟಿ ಪತ್ರಿಕೆಗಳ ಬೆಂಗಳೂರು ಆವೃತ್ತಿಗಳಲ್ಲಿ ಪ್ರಕಟವಾಗೇ ಇಲ್ಲ. ಅದು ಅಷ್ಟು ಮಹತ್ವದ ಸುದ್ದಿ ಎಂದು ಪತ್ರಿಕಾ ಪ್ರಪಂಚಕ್ಕೆ ಅನ್ನಿಸಿರಬಹುದು. ರಾಜಕಾರಣಿಗಳ ಪತ್ರಿಕಾ ಓದುಗರಿಗೆ ಆಣೆ-ಪ್ರಮಾಣದ ಸುದ್ದಿಗಳನ್ನು ಓದುವಷ್ಟು ಆಸಕ್ತಿ ಮಲ ಹೊರುವವರ ಕುರಿತಾದ ಸುದ್ದಿಯ ಬಗ್ಗೆ ಇಲ್ಲದೇ ಇರಬಹುದು, ಇರಲಿ ಬಿಡಿ.

ಟೈಮ್ಸ್ ಆಫ್ ಇಂಡಿಯಾ ಮಾತ್ರ ಈ ಸುದ್ದಿಗೆ ವಿಶೇಷ ಆದ್ಯತೆ ನೀಡಿ, ಮುಖಪುಟದಲ್ಲೇ ವರದಿ ಪ್ರಕಟಿಸಿದೆ. ಟೈಮ್ಸ್ ಆಫ್ ಇಂಡಿಯಾz ವರದಿಯನ್ನು ಓದಲು ಈ ಲಿಂಕನ್ನು ಬಳಸಿ. ಕನ್ನಡಪ್ರಭದ ಸ್ಥಳೀಯ ಆವೃತ್ತಿಯಲ್ಲಿ ಪ್ರಕಟಗೊಂಡ ವರದಿಯನ್ನು ಓದಲು ಈ ಲಿಂಕನ್ನು ಬಳಸಿ.

Tuesday, June 21, 2011

ಚಿತ್ರದುರ್ಗದಲ್ಲಿ `ಮಾಧ್ಯಮ ಕರ್ನಾಟಕ' ವಿಚಾರಗೋಷ್ಠಿ....


ಮಾಧ್ಯಮಗಳ ಕುರಿತು ರಾಜಧಾನಿ ಬೆಂಗಳೂರಿನಲ್ಲೇ ಚರ್ಚೆಗಳು ನಡೆಯದೇ ಇರುವಾಗ ಚಿತ್ರದುರ್ಗದಲ್ಲಿ ಎರಡು ದಿನಗಳ ವಿಚಾರಗೋಷ್ಠಿ ನಡೆಯುತ್ತಿದೆ. ಬಯಲು ಸಾಹಿತ್ಯ ವೇದಿಕೆ-ಕೊಟ್ಟೂರು, ಗೆಳೆಯರ ಬಳಗ ಸಂಘಟನೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿದೆ. ಗೋಷ್ಠಿ ಇರುವುದು ಬರುವ ಜೂನ್ ೨೫, ೨೬ರಂದು.

ಚಿತ್ರದುರ್ಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದರೂ ಬೆಂಗಳೂರಿನ ಹಲವಾರು ಪತ್ರಕರ್ತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಈ ಕಾರ್ಯಕ್ರಮದಲ್ಲಾದರೂ ಕರ್ನಾಟಕ ಮಾಧ್ಯಮ ರಂಗದ ಆತ್ಮಶೋಧನೆಯ ಮಾತುಗಳು ಕೇಳಿಬರಲಿ ಎಂಬುದು ನಮ್ಮ ಆಶಯ. ಮಾಧ್ಯಮ ವಿದ್ಯಾರ್ಥಿಗಳಿಗೆ, ಹೊಸದಾಗಿ ಕ್ಷೇತ್ರಕ್ಕೆ ಕಾಲಿಟ್ಟವರಿಗೆ ಗೋಷ್ಠಿಯಿಂದ ಅನುಕೂಲ ಆಗಲಿ ಎಂಬುದು ನಿರೀಕ್ಷೆ. ಸಂಪಾದಕೀಯ ಬಳಗ ಹಾಗು ಓದುಗರನ್ನು ಆಹ್ವಾನಿಸಿ ಮೇಲ್ ಕಳುಹಿಸಿದ ಚಿತ್ರದುರ್ಗದ ಗೆಳೆಯರಿಗೆ ಒಂದು ಥ್ಯಾಂಕ್ಸ್.


Monday, June 20, 2011

ಸಂಕೇಶ್ವರರ ಹೊಸ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ತಿಮ್ಮಪ್ಪ ಭಟ್ಟರು....


ವಿಜಯ ಸಂಕೇಶ್ವರರ ಹೊಸ ಪತ್ರಿಕೆಯ ಸಾರಥಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಹಿಂದೆಯೇ ಬರೆದಂತೆ ಉದಯವಾಣಿಯ ಮಾಜಿ ಸಂಪಾದಕ ತಿಮ್ಮಪ್ಟ ಭಟ್ಟರು ಸಂಕೇಶ್ವರರ ಭಾವಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ಇವತ್ತು ಹುಬ್ಬಳ್ಳಿಯಲ್ಲಿ ತಿಮ್ಮಪ್ಪಭಟ್ಟರು ಹೊಸ ಪತ್ರಿಕೆಯ ಚಾರ್ಜು ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿಯ ವಿಆರ್‌ಎಲ್ ಕಚೇರಿಯಲ್ಲಿ ಔಪಚಾರಿಕ ಸಭೆಯಲ್ಲಿ ಭಟ್ಟರು ಹೊಸ ಜವಾಬ್ದಾರಿಯನ್ನು ಪಡೆಯುವುದರೊಂದಿಗೆ ಸಂಕೇಶ್ವರರ ಹೊಸ ಸಾಹಸಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ.

ಈಗ್ಗೆ ಸರಿಸುಮಾರು ಮೂರು ವಾರಗಳ ಹಿಂದೆ ಸಂಕೇಶ್ವರರ ಹೊಸ ಪತ್ರಿಕೆಯ ಸಾರಥಿ ಯಾರು ಎಂಬ ಲೇಖನದಲ್ಲಿ (ಮೇ ೨೭) ತಿಮ್ಮಪ್ಪಭಟ್ಟರು ಪತ್ರಿಕೆಯಲ್ಲಿ ಇರುತ್ತಾರೆ ಎಂಬುದನ್ನು ಖಚಿತಪಡಿಸಿದ್ದೆವು. ಅದರಂತೆಯೇ ಅವರು ಹೊಸ ಪತ್ರಿಕೆ ಸಾರಥ್ಯ ವಹಿಸಿಕೊಂಡಿದ್ದಾರೆ.

ಪತ್ರಿಕೆಯ ಹೆಸರು ಏನು ಎಂಬುದಿನ್ನೂ ಬಹಿರಂಗಗೊಂಡಿಲ್ಲ. ಆನಂದ ಕರ್ನಾಟಕ ಎಂಬ ಹೆಸರು ಹೆಚ್ಚು ಓಡುತ್ತಿರುವುದಂತೂ ನಿಜ. ಈ ಟೈಟಲನ್ನು ರಿಜಿಸ್ಟರ್ ಮಾಡಿಕೊಂಡವರು ಆನಂದ್ ಸಿಂಗ್; ಹೊಸಪೇಟೆಯ ಶಾಸಕ. ಇವರಿಂದ ಈಗಾಗಲೇ ಟೈಟಲ್ ಖರೀದಿಸಲಾಗಿದೆ ಎಂಬ ಮಾತುಗಳೂ ಇವೆ. ಇದು ಆನಂದ ಕರ್ನಾಟಕವಾಗುತ್ತಾ ಅಥವಾ ಸಂಕೇಶ್ವರರು ಹೊಸ ಹೆಸರು ಹುಡುಕುತ್ತಾರಾ ಕಾದು ನೋಡಬೇಕು.

ಸದ್ಯಕ್ಕೆ ಹೊಸ ಪತ್ರಿಕೆ ನೇತೃತ್ವ ವಹಿಸಿರುವ ತಿಮ್ಮಪ್ಪ ಭಟ್ಟರು ಹೊಸತನ್ನು ಕೊಡಲಿ. ಕನ್ನಡ ಪತ್ರಿಕೆಗಳು ಹೆಡ್ಡಿಂಗು ಕೊಡುವುದರಲ್ಲಿ ತೋರುತ್ತಿರುವ ಪೈಪೋಟಿಯನ್ನು ಸುದ್ದಿಯ ಗುಣಮಟ್ಟಕ್ಕೂ ವಿಸ್ತರಿಸಿದೇ ಇರುವುದು ಬೇಸರದ ವಿಷಯ. ಇಂಥ ಸಂದರ್ಭದಲ್ಲಿ ಕನ್ನಡಿಗರ ಒಟ್ಟು ಆಶೋತ್ತರಗಳನ್ನು ಧ್ವನಿಸುವ ಪತ್ರಿಕೆಯನ್ನು ಭಟ್ಟರು ರೂಪಿಸುವಂತಾಗಲಿ. ಹೊಸ ಪತ್ರಿಕೆ ಬಡವರ, ನೊಂದವರ, ನಿರ್ಲಕ್ಷಿತರ ಪರವಾಗಿ ಧ್ವನಿ ಎತ್ತಲಿ. ಇದು ನಮ್ಮ ಆಶಯ.

ವಿಜಯ ಸಂಕೇಶ್ವರರಿಗೂ, ತಿಮ್ಮಪ್ಪ ಭಟ್ಟರಿಗೂ ಹಾರ್ದಿಕ ಅಭಿನಂದನೆಗಳು.

ಮಲದಲ್ಲೇ ಅನ್ನ ಕಾಣುತ್ತಿರುವವರ ದಾರುಣ ಬದುಕು....


ರಾಜ್ಯಾದ್ಯಂತ ಸಫಾಯಿ ಕರ್ಮಚಾರಿಗಳ ಕುರಿತು ನಡೆಸುತ್ತಿರುವ ಸಂಶೋಧನಾ ತಂಡ ಸದಸ್ಯರಾದ ಚಂದ್ರಶೇಖರ್.ಪಿ ಅತ್ತಿಬೆಲೆ ಅಧ್ಯಯನ ಸಂದರ್ಭದಲ್ಲಿ ತಾವು ಕಂಡ ಕೆಲವು ಅಂಶಗಳನ್ನು ಇಲ್ಲಿ ಮಂಡಿಸಿದ್ದಾರೆ.- ಸಂಪಾದಕೀಯ

ಮುಖ್ಯವಾಗಿ ಸಂಪಾದಕೀಯ ಬ್ಲಾಗ್‌ನ ಬಳಗವಾಗಲಿ, ನಾನಾಗಲಿ. ದಯಾನಂದ ಆಗಲಿ ಮಲಹೊತ್ತವರಲ್ಲ. ಕೇವಲ ಕಾಳಜಿಯಿಂದ ಒಂದು ಸೇರಿರುವರು ನಾವು. ಆದರೆ ಮಲ ಹೊರುವ ಸಮುದಾಯದವರು ಸಚಿವರಾದ ಸುರೇಶ್ ಕುಮಾರ್‌ರವರನ್ನು ಪ್ರಶ್ನೆ ಮಾಡುವ ವಿಧಾನವೇ ಬೇರೆಯಾಗಿರುತ್ತಿತ್ತು. ಆದರೂ ಕಳೆದ ೮ ತಿಂಗಳಿನಿಂದ ಸಫಾಯಿ ಕರ್ಮಚಾರಿಗಳ ಕುರಿತಾಗಿ ರಾಜ್ಯದಾದ್ಯಂತ ಅಧ್ಯಯನ ನಡೆಸುವ ಸಂದರ್ಭದಲ್ಲಿ ಇವರನ್ನೆಲ್ಲ ಹತ್ತಿರದಿಂದ ನೋಡಿರುವುದರಿಂದ ನನ್ನ ಮನಸ್ಸಿನಲ್ಲೂ ಹಲವು ಪ್ರಶ್ನೆಗಳಿವೆ.

೧. ೩೧-೮-೨೦೧೦ರಂದು ಸಫಾಯಿ ಕರ್ಮಚಾರಿಗಳ ಬಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸುದ್ದಿಯಾಗಿತ್ತು.

೨. ಸಂಯುಕ್ತ ಕರ್ನಾಟಕದಲ್ಲಿ ೧೭-೮-೨೦೧೦ರಂದು ಅಮೃತಧಾರೆ ಎಂಬ ಪುಟದಲ್ಲಿ ವೈ.ಶಿವಶಂಕರ್‌ವರು ಬರೆದಿರುವ ಸಫಾಯಿಗಳಿಗೆ ಸಿಗದ ಸ್ವಾತಂತ್ರ್ಯ ಎಂಬ ಲೇಖನದಲ್ಲಿ ಈ ಸಮುದಾಯಗಳ ಇತಿಹಾಸದಿಂದ ಇವತ್ತಿನ ವಾಸ್ತವದವರೆಗೆ ಸಂಪೂರ್ಣ ಚಿತ್ರ ಕಟ್ಟಿಕೊಡಲಾಗಿತ್ತು.

೩. ವಾರ್ತಾಭಾರತಿ ಪತ್ರಿಕೆಯಲ್ಲಿ ಸಂಪಾದಕೀಯ ಪುಟದಲ್ಲಿ ಇದೇ ಕೆ.ಜಿ.ಎಫ್ ಬಗ್ಗೆ ಲೇಖನಗಳನ್ನು ಮಾಡಲಾಗಿತ್ತು.

ಇದು ಒಂದೆರಡು ಉದಾಹರಣೆಗಳು ಮಾತ್ರ. ಆದರೆ ಸರ್ಕಾರದ ಆಡಳಿತ ಯಂತ್ರಕ್ಕೆ ಕಣ್ಣಿದ್ದೂ ಕುರುಡು. ಸುಳ್ಳು ಅಫಿಡೆವಿಟ್ಟುಗಳನ್ನು ಸಲ್ಲಿಸಿದ ತಪ್ಪಿಗೆ ಅಧಿಕಾರಿಗಳು ಇಂಥದ್ದಕ್ಕೆ ಕುರುಡಾಗಿಯೇ ಇರುತ್ತಾರೆ.

ಕಳೆದ ಎರಡು ತಿಂಗಳ ಹಿಂದೆ ಇದೇ ಕೆ.ಜಿ.ಎಫ್‌ನ ಕೆನಡಿಸ್ ತೆಲುಗು ಲೈನ್‌ನಲ್ಲಿರುವ ಮಲ ಹೊರುವವರು ಸೇರಿ ನಗರಸಭೆಗೆ ಮುತ್ತಿಗೆ ಹಾಕಿ ಪುನರ್ವಸತಿಗಾಗಿ ಒತ್ತಾಯಿಸಿದ್ದರು. ಈ ವಿಷಯವು ನಿಮ್ಮ ಅಧಿಕಾರಿಗಳು ಮತ್ತು ಮಾನ್ಯ ಸಚಿವರಿಗೆ ತಿಳಿದಿಲ್ಲವೆಂದರೆ ನಂಬಲು ಸಾಧ್ಯವೆ? (ಇದು ಸಹ ಪ್ರತಿಕೆಗಳಲ್ಲಿ ಸುದ್ದಿಯಾಗಿತ್ತು)

ಮಲ ಹೊರುವ ಕೆಲಸ ಮಾಡುತ್ತಿದ್ದ ನಾಗರಾಜು ಎಂಬುವರನ್ನು ಕಳೆದ ೩ ತಿಂಗಳ ಹಿಂದೆ ಮಾತನಾಡಿಸಿಕೊಂಡು ಅವರ ಸಂದರ್ಶವನ್ನು ತೆಗೆದುಕೊಂಡು ಬಂದಿದ್ದೆವು. ಇತ್ತೀಚಿಗೆ ಅವರು ತೀರಿಕೊಂಡಿದ್ದಾರೆ. ನಾಗರಾಜುರವರ ತಮ್ಮನಾದ ಬಾಬುರವರು ಸಹ ತೀರಿಕೊಂಡಿದ್ದಾರೆ. ಬಾಬುರವರ ಹೆಂಡತಿ, ಮಕ್ಕಳು ಅನಾಥರಾಗಿದ್ದಾರೆ. ದೊಡ್ಡ ಮಗ ೧೦ನೇ ತರಗತಿ ಓದಿ ನಾನು ಕೆಲಸಕ್ಕೆ ಹೊಗುತ್ತೇನೆ ಎಂದು ತಾಯಿ ಹೆಗಲು ಕೊಡಲು ನಿರ್ಧರಿಸಿದ್ದಾನೆ.

ತಾವೇ ತಮ್ಮ ಎರಡು ಗಂಡು ಮಕ್ಕಳನ್ನು ಮಣ್ಣಿಗೆ ಹಾಕಿದ ಮಾರ್ಥಮ್ಮರವರ ಪರಿಸ್ಥಿತಿ ಏನು? ಇವತ್ತು ಮಾರ್ಥಮ್ಮರವರು ಸಹ ಅನಾಥರಾಗಿದ್ದಾರೆ. ಆನಾರೋಗ್ಯದಿಂದ ಚಿಕಿತ್ಸೆಗಾಗಿ ಕೆ.ಜಿ.ಎಫ್‌ನಿಂದ ಹುಬ್ಬಳ್ಳಿಗೆ ಹೋಗಿ ತಮ್ಮ ಸಂಬಂಧಿಗಳ ಸಹಕಾರದಿಂದ ಕಾಯಿಲೆಯನ್ನು ವಾಸಿಮಾಡಿಕೊಳ್ಳುವ ಅಶಯ ಆವರದಾಗಿದೆ. ಇಂತಹ ಪರಿಸ್ಥಿತಿಗಳು ಒಂದೊಂದು ಜಿಲ್ಲೆ, ನಗರ, ಹಳ್ಳಿಯಲ್ಲೂ ಇವೆ. ಪ್ರತಿಯೊಬ್ಬ ವ್ಯಕ್ತಿಯೂ ನರಕಸದೃಶವಾದ ಜೀವನ ನಡೆಸುತ್ತಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರುನಲ್ಲಿ ಭಂಗಿ ಜನರು ತಮ್ಮ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದಾಗ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ (ಇದಕ್ಕೂ ಹಿಂದೆಯೇ ಹಾವೇರಿ ಜಿಲ್ಲೆಯಲ್ಲಿ ಮಲಹೋರುವರು ಯಾರು ಇಲ್ಲ ಎಂದು ಸುಪ್ರಿಂಕೋರ್ಟ್‌ಗೆ ಅಫಿಡೇವಿಟ್ ನೀಡಲಾಗಿತ್ತು.) ನಂತರ ಪರಿಹಾರ ಮತ್ತು ಕಾಯಂ ಕೆಲಸ ನೀಡುವುದಾಗಿ ತಿಳಿಸಿ ಸ್ವಲ್ಪ ದಿನದ ನಂತರ ಗುತ್ತಿಗೆ ಕೆಲಸ ನೀಡಿ ಮೋಸಮಾಡಲಾಯಿತು. ಇದೇ ಸಮಯದಲ್ಲಿ ಮಳೆ ಬಂದರೆ ಸುರಿಯುವ ಇಕ್ಕಟ್ಟಾದ ಜಾಗದಲ್ಲಿ ಜೀವನ ಸಾಗಿಸುತ್ತಿರುವ ಜನರಿಗೆ ಪುನರ್ವಸತಿ ಹೆಸರಿನಲ್ಲಿ ಬಲವಂತವಾಗಿ ಕುರಿ. ಮೇಕೆಗಳನ್ನು ನೀಡಲಾಯಿತು. ಜನರೇ ವಾಸ ಮಾಡಲು ಜಾಗವಿಲ್ಲದ ಮನೆಗಳಲ್ಲಿ ಈ ಪ್ರಾಣಿಗಳನ್ನು ಎಲ್ಲಿ ಕಟ್ಟುವುದು, ಇದು ಪರಿಹಾರ/ಪುನರ್ವಸತಿ ಎನ್ನಲು ಸಾಧ್ಯವೆ? ಇದು ಸರ್ಕಾರವನ್ನು ಪ್ರತಿನಿಧಿಸುತ್ತಿರುವರ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮನಸ್ಥಿತಿ.

ಹಾವೇರಿ ಜಿಲ್ಲಾಧಿಕಾರಿಗಳು ನೇರವಾಗಿ ಭಂಗಿ ಜನರ ಮನೆಯ ಬಾಗಿಲಿಗೆ ಹೋಗಿ ನಿಮಗೆ ಕೆಲಸ ಕೊಡುವುದಕ್ಕೆ ಆಗುವುದಿಲ್ಲ, ಇಲ್ಲ್ಲೇ ಟಾಟಾರವರು ಒಂದು ಕಂಪನಿ ಪ್ರಾರಂಭಿಸುತ್ತಿದ್ದಾರೆ ಅದರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿರುತ್ತಾರೆ. ಇದಾದ ನಂತರ ಸವಣೂರಿನ ೯ ಜನರು ತಮ್ಮ ಗುತ್ತಿಗೆ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ನಂತರ ಹಾವೇರಿ ಜಿಲ್ಲೆಯಲ್ಲಿನ ೭೫-೮೦ ಜನ ಸಫಾಯಿ ಕರ್ಮಚಾರಿಗಳು ಮತ್ತು ಕುಟುಂಬದವರು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಒಂದು ದಿನದ ಧರಣಿ ಕುಳಿತುಕೊಂಡರು. ನಂತರ ಸವಣೂರಿನ ಒಂಭತ್ತು ಕುಟುಂಬಗಳಿಗೆ ಕೆಲಸ ನೀಡಲಾಯಿತು,  ಆದರೆ ಹಾವೇರಿ ಜಿಲ್ಲೆಯಲ್ಲಿರುವ ಉಳಿದ ಮಲಹೊರುವ ಜನರ ಸುಳಿವಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಗುಲ್ಬರ್ಗದಲ್ಲಿ ಒಬ್ಬ ಮಲಹೊರುವ ವ್ಯಕ್ತಿ ಮಲ ಸುರಿದುಕೊಂಡು ಪ್ರತಿಭಟಿಸಿದ್ದಾಗ ಅತನ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ದೂರನ್ನು ದಾಖಲು ಮಾಡಲಾಯಿತು, ಆತ ಊರನ್ನೇ ಬಿಡಬೇಕಾಯಿತು.
ಖೊಟ್ಟಿ ಪ್ರಮಾಣ ಪತ್ರಗಳನ್ನು ಕೊಟ್ಟ ಅಧಿಕಾರಿಗಳ ಮೇಲೆ ಯಾವ ಕ್ರಮವನ್ನೂ ಜರುಗಿಸಲಾಗಲಿಲ್ಲ ಸರ್ಕಾರಕ್ಕ.

ಇದೇ ಸಂದರ್ಭದಲ್ಲಿ ಈ ವಿಷಯದ ಗಂಭೀರತೆಯನ್ನು  ಅರಿಯದ ಪತ್ರಿಕೆಗಳು  ತಲೆ ಮೇಲೆ ಮಲ ಸುರಿದುಕೊಳ್ಳುವುದು ಒಂದು ಟ್ರೆಂಡ್ ಆಗೋಗಿದೆ ಎಂದು ವ್ಯಂಗ್ಯ ಮಾಡಲು ಪ್ರಾರಂಭಿಸಿದವು. ಇದು ಒಂದು ರೀತಿಯ ಹೀನ ಮನಸ್ಥಿತಿ. ತನ್ನ ತಲೆಯ ಮೇಲೇ ಮಲ ಸುರಿದುಕೊಳ್ಳುವಂಥ ಸ್ಥಿತಿ ತಲುಪಿರುವ ವ್ಯಕ್ತಿ ಅನುಭವಿಸುತ್ತಿರುವ ಸಮಸ್ಯೆಗಳೇನು ಎಂಬುದನ್ನು ಅರಿಯದ ವಿಕೃತ ಮನಸ್ಸುಗಳು ಇದನ್ನೂ ಒಂದು ಟ್ರೆಂಡ್ ಎಂದು ಮೂದಲಿಸಿದವು.

ಕರ್ನಾಟಕದ ರಾಜಧಾನಿಯಾದ ಬೆಂಗಳೂರುನಲ್ಲೇ ಯು.ಜಿ.ಡಿ ಇಲ್ಲದ ಸ್ಥಳಗಳಲ್ಲಿ ಇದೇ ಸಫಾಯಿ ಕರ್ಮಚಾರಿಗಳು ಪಿಟ್‌ಗಳನ್ನು ಕ್ಲೀನ್ ಮಾಡುತ್ತಿದ್ದಾರೆ. ಇನ್ನೂ ಹಳ್ಳಿ. ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಯಾವ ಮಟ್ಟದಲ್ಲಿರಬಹುದು ಎಂಬುದನ್ನು ನೀವೆ ಯೋಚಿಸಬಹುದು.

ಮಲಹೋರುವ ಪದ್ಧತಿಯನ್ನು ನಿಷೇಧಿಸಲಾಗಿದೆ, ಆದರೆ ಪುನರ್ವಸತಿ ಸಹ ಕಡ್ಡಾಯವಾಗಿ ನಡೆಯಬೇಕು ಎಂಬ ಮೂಲಭೂತ ಚಿಂತನೆ ಸರ್ಕಾರಕ್ಕೆ ಇದ್ದ ಹಾಗಿಲ್ಲ.  ಆದರೆ ಪುನರ್ವಸತಿ ಬಗ್ಗೆ ಯಾವುದೇ ಅಧಿಕಾರಿಗಳು, ರಾಜಕಾರಣಿಗಳು ಮಾತನಾಡಿಲ್ಲ.

ಪ್ರಧಾನ ಮಂತ್ರಿಯವರು ಇನ್ನು ೬ ತಿಂಗಳಲ್ಲಿ ಮಲಹೋರುವ ಪದ್ಧತಿ ನಾಶವಾಗಬೇಕು ಎಂದು ಎಲ್ಲಾ ರಾಜ್ಯಗಳಿಗೂ ಪತ್ರವನ್ನು ಬರೆದಿದ್ದಾರೆ. ಇದಕ್ಕೆ ನಮ್ಮ ಮುಖ್ಯಮಂತ್ರಿಗಳು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಎಷ್ಟೋ ಕುಟುಂಬಗಳು ಮಲದಲ್ಲಿ ಅನ್ನ ಕಾಣುತ್ತಿದ್ದಾವೆ. ಹೇಲೆತ್ತುವ ಕೆಲಸವೂ ಸಿಗದೆ ಹಸಿವಿನಿಂದ ನರಳುವ ಕುಟುಂಬಗಳು ಇವೆ. ಅದೇ ಸಂದರ್ಭದಲ್ಲಿ ಹೇಲೆತ್ತುವ ಕೆಲಸದಿಂದ ಎಷ್ಟೋ ಜೀವನಗಳ ನಾಶವಾಗಿವೆ.

ಪ್ರೊ|| ವೈ.ಜೆ ರಾಜೇಂದ್ರ ಮತ್ತು ನಮ್ಮನ್ನು ಒಳಗೊಂಡ ಸಂಶೋಧನಾ ತಂಡ ಸಂಪೂರ್ಣ ಅಧ್ಯಾಯದ ವರದಿಯನ್ನು ಸಿದ್ಧಪಡಿಸುತ್ತಿದ್ದು, ಸದ್ಯದಲ್ಲೇ ವರದಿಯನ್ನು ಜನರ ಮುಂದೆ ತರಲಾಗುವುದು.

Saturday, June 18, 2011

ಮಲ ಹೊರುವ ಪ್ರಕರಣ: ಸಚಿವ ಸುರೇಶ್ ಕುಮಾರ್ ಉತ್ತರಿಸಿದ್ದಾರೆ...


ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ. ಸಂವೇದನಾಶೀಲರಾದ ಸುರೇಶ್ ಕುಮಾರ್ ಅವರು ನಮ್ಮ ಬಹಿರಂಗ ಪತ್ರಕ್ಕೆ ಉತ್ತರಿಸಿದ್ದಾರೆ. ನಿನ್ನೆ ಪತ್ರವನ್ನು ಅವರಿಗೆ ಮೇಲ್ ಮಾಡಿದ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ್ದಾರೆ. ಇದು ಅವರ ಸೌಜನ್ಯ ಮತ್ತು ಕಳಕಳಿಗೆ ಸಾಕ್ಷಿ. ನಗರಾಭಿವೃದ್ಧಿ ಸಚಿವರು ಕೆ.ಜಿ.ಎಫ್‌ಗೇ ತೆರಳಿ ಖುದ್ದು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ಕೆಜಿಎಫ್‌ನ ಆ ಅಸಹಾಯಕ ಜನರಿಗೆ ನ್ಯಾಯ ದೊರಕಲಿ ಎಂದು ಆಶಿಸೋಣ.

ಸುರೇಶ್ ಕುಮಾರ್ ಅವರು ಬರೆದ ಪತ್ರ ಹೀಗಿದೆ.

ಪ್ರಿಯ ಸಂಪಾದಕರೆ


ನಿಮ್ಮ ಪತ್ರ ಓದಿದ್ದೇನೆ. ಮಲ ಹೊರುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿರುವ ಬಗ್ಗೆ ನಾನು ಹೇಳಿರುವುದು  ನಿಜ. ಸರ್ಕಾರವೂ ಈ ಅಮಾನವೀಯ ಪದ್ದತಿಯ ನಿಷೇಧದ ಬಗ್ಗೆ ಗಂಭೀರ ಕ್ರಮಗಳನ್ನೇ ಕೈಗೊಂಡಿದೆ. ಆದರೂ ನಿಮ್ಮ ಇ- ಮೇಲ್ ನಲ್ಲಿ ವಿವರಿಸಿರುವ ಅಂಶಗಳು ನನ್ನನ್ನು ನಿಜಕ್ಕೂ ಚಿಂತೆಗೀಡು ಮಾಡಿದೆ. ನಾನು ಇಷ್ಟರಲ್ಲಿಯೇ ಕೆಜಿಎಫ್‌ನ ಈ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿಯುವ, ತಕ್ಷಣ ಪರಿಹಾರ ದೊರಕಿಸುವ ಪ್ರಯತ್ನ ಮಾಡುತ್ತೇನೆ. 


ನಿಮ್ಮ/ಅಧ್ಯಯನ ಕೈಗೊಂಡಿರುವ ಪರಿಣಿತರ ಸಂಪರ್ಕ ಸಂಖ್ಯೆ ನೀಡಿದಲ್ಲಿ ನಿಜಕ್ಕೂ ಉತ್ತಮವಾದೀತು. 


ಅದರಗಳೊಂದಿಗೆ


ಎಸ್ ಸುರೇಶ್ ಕುಮಾರ್

ದಯಾನಂದ್
ಕೆ.ಜಿ.ಎಫ್ ಮಾತ್ರವಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಮಲಹೊರುವ ಪದ್ಧತಿ ಸಂಪೂರ್ಣ ತೊಲಗಬೇಕಿದೆ. ಸುರೇಶ್ ಕುಮಾರ್‌ರಂಥ ಸಚಿವರು ಈ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ, ನಮ್ಮ ಅಧಿಕಾರಿಗಳು ಸುಳ್ಳು ಮಾಹಿತಿ ಕೊಡುತ್ತ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ದಯಾನಂದ್ ಮತ್ತು ಅವರ ತಂಡದವರ ಅಧ್ಯಯನದ ವಿವರಗಳು ಅನುಕೂಲಕ್ಕೆ ಬರಬಹುದು. ದಯಾನಂದ್ ಈಗಾಗಲೇ ಕೆ.ಜಿ.ಎಫ್‌ಗೆ ಸಂಬಂಧಿಸಿದ ಅಧ್ಯಯನ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗಳ ಮಾಹಿತಿಗಳನ್ನು ಸಚಿವರಿಗೆ ಒದಗಿಸುವ ಮೂಲಕ ಮಲ ಹೊರುವ ಪದ್ಧತಿ ಸಂಪೂರ್ಣ ಕಿತ್ತೊಗೆಯುವ, ಆ ಕಾಯಕ ನಡೆಸುತ್ತಿರುವವರಿಗೆ ಸೂಕ್ತ ಜೀವನೋಪಾಯ ಕಲ್ಪಿಸುವ ಕಾರ್ಯಕ್ಕಾಗಿ ಸಾಮಾಜಿಕ ಸಂಘಟನೆಗಳು ಮುಂದಾಗಬೇಕಿದೆ. ಸದ್ಯಕ್ಕಂತೂ ಸಚಿವರಿಗೆ ಸೂಕ್ತ ಮಾಹಿತಿ, ದಾಖಲೆಗಳನ್ನು ಒದಗಿಸುವ ಕಾರ್ಯ ಮಾಡಲಿದ್ದೇವೆ.

ಅಂದ ಹಾಗೆ ಬರುವ ಮಂಗಳವಾರವೇ (21-6-2011) ಸಚಿವರು ಕೆ.ಜಿ.ಎಫ್ ಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ಈ ಗಂಭೀರ ವಿದ್ಯಮಾನದ ಕುರಿತು ಬೆಳಕು ಚೆಲ್ಲಿದ ದಯಾನಂದ್ ಅವರಿಗೆ ಹಾಗು ಈ ಬಗ್ಗೆ ನಮ್ಮ ಪತ್ರಕ್ಕೆ ಶೀಘ್ರವಾಗಿ ಸ್ಪಂದಿಸಿದ ಸಚಿವ ಸುರೇಶ್ ಕುಮಾರ್ ರವರಿಗೆ ಸಂಪಾದಕೀಯ ತಂಡ ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತದೆ.

Friday, June 17, 2011

ಸರ್ಕಾರದ ಸುಳ್ಳೇ ಅಮೇಧ್ಯಕ್ಕಿಂತ ಹೊಲಸೆದ್ದು ನಾರುತ್ತಿರುವಾಗ....

ಕರ್ನಾಟಕ ಸರ್ಕಾರದ ಗೌರವಾನ್ವಿತ ಸಚಿವರಾದ ಶ್ರೀ ಸುರೇಶ್ ಕುಮಾರ್‌ರವರೇ,
ನಮಸ್ಕಾರ.
ನೀವು ಸಜ್ಜನರು, ಸುಸಂಸ್ಕೃತರು, ಸಂಭಾವಿತರು. ಕರ್ನಾಟಕ ಸರ್ಕಾರದ ಇಡೀ ಸಂಪುಟದಲ್ಲಿ ನಿಮ್ಮಂಥವರ ಸಂಖ್ಯೆ ಕಡಿಮೆ.  ಈ ರಾಜ್ಯದ ಸಾಮಾನ್ಯ ನಾಗರಿಕರಾಗಿ ನಾವು ಬರೆಯುತ್ತಿರುವ ಈ ಪತ್ರವನ್ನು ನೀವು ಗಂಭೀರವಾಗಿ ಪರಿಗಣಿಸುತ್ತೀರೆಂಬ ನಂಬುಗೆ ಇದೆ.

ಇದು ಮನುಕುಲದ ಮಾನವೀಯತೆಗೆ ಸಂಬಂಧಿಸಿದ ವಿಷಯ, ನಾಗರಿಕ ಸಮಾಜದ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿಷಯ. ಇದು ನಾವೆಲ್ಲರೂ ಒಪ್ಪಿ ನಡೆಯುವ ಸಮಾನತೆಯ ಕನಸಿಗೆ ಅಡ್ಡಿಯಾಗುತ್ತಿರುವ ಅನಿಷ್ಠಗಳ ಕುರಿತಾದ ವಿಷಯ. ಇದು ನೀವು ನಿರ್ವಹಿಸುತ್ತಿರುವ ಖಾತೆಗೆ ಸಂಬಂಧಿಸಿದ ವಿಷಯ.

ನಿಮಗೆ ಬಿ.ಬಸವಲಿಂಗಪ್ಪನವರು ಗೊತ್ತು. ಅವರು ಸಚಿವರಾಗಿದ್ದಾಗ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದು ಗೊತ್ತು. ಬಸವಲಿಂಗಪ್ಪನವರು ಮಂತ್ರಿಯಾಗುವವರೆಗೆ ಇಂಥ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕೆಂದು ಹಿಂದೆ ಇದ್ದ ಸರ್ಕಾರಗಳು ಯಾಕೆ ಯೋಚಿಸಲಿಲ್ಲ ಎಂಬುದರ ಚರ್ಚೆ ಬೇಡ. ನಂತರದ ದಿನಗಳಲ್ಲಾದರೂ ಮಲ ಹೊರುವ ಪದ್ಧತಿ ನಿಂತು ಹೋಯಿತಾ ಎಂದರೆ ಅದೂ ಇಲ್ಲ.

ನೀವು ನಗರಾಭಿವೃದ್ಧಿ ಮಂತ್ರಿಗಳಾದಿರಿ. ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇಲ್ಲವೇ ಇಲ್ಲ, ಮಲ ಹೊರುವವರ‍್ಯಾರೂ ಇಲ್ಲ ಎಂದು ಹೇಳಿಕೆ ನೀಡಿದಿರಿ. (ನಿಮ್ಮ ಹೇಳಿಕೆ ಪ್ರಕಟವಾಗಿರುವ ಉದಯವಾಣಿಯ ಲಿಂಕ್ ಇಲ್ಲಿದೆ.) ಈ ಮಾಹಿತಿಯನ್ನು ನಿಮಗೆ ನಿಮ್ಮ ಅಧಿಕಾರಿಗಳು ಕೊಟ್ಟಿರಬಹುದು. ಆದರೆ ಇದನ್ನು ಹೇಳುವ ಮುನ್ನ ಅದರಲ್ಲಿ ಸತ್ಯ ಇದೆಯೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದಿತ್ತು.

ಕೇಂದ್ರ ಸರ್ಕಾರ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದು ೨೦೦೭ರಲ್ಲಿ.  ಆನಂತರವೂ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸುಪ್ರೀಂ ಕೋರ್ಟ್ ಈ ಸಂಬಂಧ ಎಲ್ಲ ರಾಜ್ಯಗಳಿಗೂ ಕಠಿಣವಾದ ನಿರ್ದೇಶನಗಳನ್ನು ನೀಡಿದೆ.

ನಿಮ್ಮ ಅಧಿಕಾರಿಗಳು ಕೊಟ್ಟ ಗಿಳಿಪಾಠವನ್ನು ನಿಮ್ಮ ಸರ್ಕಾರ ನೀವು ಸುಪ್ರೀಂ ಕೋರ್ಟಿನಲ್ಲಿ ಮತ್ತು ಇತ್ತೀಚಿಗೆ ಹೈಕೋರ್ಟಿನಲ್ಲಿ ಪ್ರಮಾಣಪತ್ರಗಳನ್ನು ಸಲ್ಲಿಸಿ, ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇಲ್ಲ ಎಂದು ಹಸಿಹಸಿ ಸುಳ್ಳು ಹೇಳಿದೆ. (ಹೈಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿರುವ ಕುರಿತಾದ ವಾರ್ತಾಭಾರತಿ ಪತ್ರಿಕೆಯ ವರದಿಯ ಲಿಂಕ್ ಇಲ್ಲಿದೆ.)

ಸತ್ಯ ಇಲ್ಲಿದೆ ನೋಡಿ. ಅದು ಕಹಿಯಾಗಿದೆ ಮತ್ತು ಅರಗಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಕ್ರೂರವಾಗಿದೆ. ಇಲ್ಲಿ ಚಿತ್ರದಲ್ಲಿ ನೋಡುತ್ತಿರುವ ವ್ಯಕ್ತಿ ಕೆ.ಜಿ.ಎಫ್‌ನ ಪ್ರಸಾದ್. ಆತ ಮಲ ಹೊರುವ ಕಾಯಕವನ್ನೇ ಮಾಡುತ್ತಿದ್ದಾನೆ. ಈತ ತನ್ನ ಬಗ್ಗೆ, ತನ್ನಂತೆ ಮಲಹೊರುವವರ ಬಗ್ಗೆ ಸಾಮಾಜಿಕ ಹೋರಾಟಗಾರ, ಕ್ಷೇತ್ರ ಕಾರ್ಯಕರ್ತ ದಯಾನಂದ್ ಅವರೊಂದಿಗೆ ಮಾತನಾಡಿದ್ದಾನೆ. ಅದು ಕೆಂಡಸಂಪಿಗೆ ವೆಬ್ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದೆ. ಅವನ ಕಥಾನಕ ಘೋರವಾಗಿದೆ ಮತ್ತು ಸತ್ಯಗಳನ್ನು ಹಸಿಹಸಿಯಾಗಿ ಬಿಡಿಸಿಡುತ್ತಿದೆ.

ಅದರರ್ಥ ಸರ್ಕಾರ ಹೇಳಿದ ಸುಳ್ಳು ಅಮೇಧ್ಯದ ವಾಸನೆಗಿಂತ ಗಬ್ಬು ನಾರುತ್ತಿದೆ.

ಇದು ಒಂದು ಕೆ.ಜಿ.ಎಫ್‌ನ ಕಥೆಯಲ್ಲ. ಇದೇ ದಯಾನಂದ್, ಚಂದ್ರಶೇಖರ್ ಮತ್ತವರ ತಂಡ ಇಡೀ ರಾಜ್ಯ ಸುತ್ತಿ ಮಲ ಹೊರುವವರ ಕುರಿತು ಅಧ್ಯಯನ ನಡೆಸಿದೆ. ಚಿತ್ರಗಳನ್ನು ಸಂಗ್ರಹಿಸಿದೆ, ವಿಡಿಯೋಗಳನ್ನು ಮಾಡಿದೆ. ಸರ್ಕಾರದ ಅಫಿಡೆವಿಟ್ ಸುಳ್ಳು ಎಂದು ಸಾರಲು ಸಾಲುಸಾಲು ಸಾಕ್ಷಿಗಳಿವೆ.

ಪೋಲೀಸ್ ಪೇದೆಗಳೇ ಮಲಹೊರಲು ಒತ್ತಾಯಿಸುವ ಸ್ಥಿತಿಯಿರುವ ಚಾಮರಾಜನಗರ, ನಾಡಿಗೆ ಟನ್ನುಗಟ್ಟಲೆ ಚಿನ್ನ ಹೆಕ್ಕಿಕೊಟ್ಟು ಇವತ್ತಿಗೆ ಬೀದಿಗೆ ಬಿದ್ದು ಮಲ ಬಳಿಯುತ್ತಿರುವ ಕೆಜಿಎಫ್ ನ ಚಿನ್ನದ ಗಣಿ ಕಾರ್ಮಿಕರು, ೧೫ ಅಡಿ ಆಳದ ಕಕ್ಕಸು ಗುಂಡಿಯೊಳಗೆ ೨೦೦ ರೂಪಾಯಿ ಮಜೂರಿಗೆ ಮುಳುಗಿ ಏಳುವ ರಾಯಚೂರಿನ ದಲಿತರು, ಮಕ್ಕಳ ಸ್ಕೂಲಿನ ಫೀಸಿಗೆ ಸಾರ್ವಜನಿಕ ಶೌಚಾಲಯದ ಗುಂಡಿಗಿಳಿದು ಸ್ವಚ್ಛ ಮಾಡುವ ಗುಲ್ಬರ್ಗದ ಮುಸ್ಲಿಂ ಮಹಿಳೆಯರು, ಹೇಲೆತ್ತುವ ಕೆಲಸ ಮಾಡುವರೆಂಬ ಕಾರಣಕ್ಕೆ ಇವತ್ತಿಗೂ ಸಾಮಾಜಿಕ ಬಹಿಷ್ಕಾರದಲ್ಲಿ ನರಳುತ್ತಿರುವ ಉಡುಪಿಯ ಕೊರಗರು, ಪ್ರೀತಿಸಿದ ಕೆಳಜಾತಿ ಹುಡುಗಿಯನ್ನು ಒಪ್ಪದ ಪೋಷಕರನ್ನು ಧಿಕ್ಕರಿಸಿ ಮದುವೆ ಮಾಡಿಕೊಂಡು ಗುಂಡಿ ಬಳಿಯುವ ಕೆಲಸಕ್ಕಿಳಿದ ಕುಂದಾಪುರದ ಲಿಂಗಾಯತರ ಹುಡುಗ, ಶಿಕಾರಿಪುರದ ಯಡಿಯೂರಪ್ಪನವರ ಕಂಟ್ರಿ ಟಾಯ್ಲೆಟ್ ಇರುವ ಮನೆಯಲ್ಲೇ ಕಕ್ಕಸು ಬಳಿದಿದ್ದೇನೆ ಎಂದ ಶಿಕಾರಿಪುರದ ಪೆಂಚಾಲಯ್ಯ, ಗುಂಡಿಯೊಳಗೆ ಇಳಿದು ಅಲ್ಲಿನ ವಿಷಗಾಳಿ ಕುಡಿದು ಹತ್ತು ಪೈಸೆ ಪರಿಹಾರಕ್ಕೂ ಬೆಲೆಯಿಲ್ಲದೆ ಸತ್ತ ಮಂಗಳೂರಿನ ಪದುವಿನಮಿತ್ತುವಿನ ಸ್ಟಾಲಿನ್ ಮತ್ತು ಭೋಜ ಎಂಬ ಯುವಕರು. ಹೊಟ್ಟೆಯಲ್ಲಿ ಹುಟ್ಟಿದ ಮಗ ನನ್ನಂತೆ ಮಲ ಬಳಿಯುವನಾಗಬಾರದೆಂದು ಇಂಗ್ಲೀಶ್ ಮೀಡಿಯಂನಲ್ಲಿ ಪಿಯುಸಿವರೆಗೆ ಮಗನನ್ನು ಓದಿಸಿ ಕೊನೆಗೆ ಬದುಕಿನ ಹೊಡೆತಕ್ಕೆ ಸಿಕ್ಕು ತನ್ನ ಜೊತೆಗೇ ಮಗನನ್ನೂ ಹೇಲು ಬಳಿಯಲು ಕರೆದುಕೊಂಡು ಹೋಗುತ್ತಿರುವ ಮೈಸೂರಿನ ನಾರಾಯಣ ಹೀಗೆ ಹಲವರ ಕಥೆಗಳು ದಯಾನಂದ ಅವರ ಬಳಿ ಇದೆ. ಮತ್ತವರು ಈ ಎಲ್ಲ ಕಥೆಗಳನ್ನು ಒಂದೊಂದಾಗಿ ನಾಗರಿಕ ಸಮಾಜದ ಮುಂದೆ ಇಡಲು ಆರಂಭಿಸಿದ್ದಾರೆ. ಕೆ.ಜಿ.ಎಫ್‌ನ ಕಥೆ ಒಂದು ಸ್ಯಾಂಪಲ್ ಅಷ್ಟೆ. ರಾಜ್ಯದ ಯಾವ ಯಾವ ಪಟ್ಟಣ, ನಗರಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ ಎಂಬುದನ್ನು ಅವರು ಬಿಚ್ಚಿಡಲಿದ್ದಾರೆ. ಈ ಎಲ್ಲವನ್ನು ಕೇಳುವ ಎದೆಗಾರಿಕೆ ಮತ್ತು ತಾಳ್ಮೆ ನಮ್ಮಲ್ಲಿ ಇರಬೇಕು ಅಷ್ಟೆ.

ಇನ್ನು ಇದನ್ನೆಲ್ಲ ಮುಚ್ಚಿಡಲಾಗದು. ನಮಗನ್ನಿಸುವ ಪ್ರಕಾರ ಮಾಧ್ಯಮಗಳೂ ಈ ಕುರಿತು ಬೆಳಕು ಚೆಲ್ಲುತ್ತವೆ. ನೀವು ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಈ ಅನಿಷ್ಠ, ಅಮಾನವೀಯ ಪದ್ಧತಿಯನ್ನು ಬೇರು ಸಮೇತ ಕಿತ್ತುಹಾಕಲು ಏನನ್ನಾದರೂ ಮಾಡಬೇಕು.

ಒಬ್ಬ ಮನುಷ್ಯನ ಮಲವನ್ನು ಇನ್ನೊಬ್ಬ ಹೊತ್ತು ಒಯ್ಯುವ ಸ್ಥಿತಿ ಯಾವುದೇ ದೇಶದಲ್ಲೂ, ಯಾವುದೇ ಕಾಲದಲ್ಲೂ ಇರಕೂಡದು. ಅದು ಅಮಾನವೀಯತೆಯ ಪರಮಾವಧಿ. ಮನುಷ್ಯ ಇಷ್ಟು ನಿರ್ಲಜ್ಜನಾದರೆ ಆತನ ಮನುಷ್ಯತ್ವಕ್ಕೆ ಯಾವ ಅರ್ಥವೂ ಉಳಿದಿರುವುದಿಲ್ಲ. ಸೂಕ್ಷ್ಮಜ್ಞರಾದ ತಾವು ಇದನ್ನು ಖಚಿತವಾಗಿ ಅರ್ಥಮಾಡಿಕೊಳ್ಳಬಲ್ಲಿರಿ ಎಂಬುದು ನಮ್ಮ ವಿಶ್ವಾಸ.

ಕೆಜಿಎಫ್‌ನಲ್ಲಿ ಮಲ ಎತ್ತುವವರು ಗಣಿ ಮುಚ್ಚಿದ ನಂತರ ಕೆಲಸವಿಲ್ಲದಂತಾದರೂ ಕಳ್ಳರಾಗಲಿಲ್ಲ, ದರೋಡೆಕೋರರಾಗಲಿಲ್ಲ. ಬೆಂಗಳೂರಿನಲ್ಲಿ ಕೆಲಸ ಮಾಡಲೆಂದು ಟಿಕೆಟ್ ಇಲ್ಲದೆ ಟ್ರೈನು ಹತ್ತಿ ಚೆಕ್ಕಿಂಗ್ ಮಾಡುವವರು ಬಂದಾಗ ರೈಲಿನಿಂದ ಜಿಗಿದು ಪ್ರಾಣ ಕಳೆದುಕೊಂಡ ಸ್ವಾಭಿಮಾನಿಗಳು ಇವರು. ಇವರ ಸರಾಸರಿ ಬದುಕು ಕೇವಲ ೪೦ ವರ್ಷ. ಮಲ ಹೊರುವ ಕಾಯಕದಿಂದ ತಂದುಕೊಂಡ ಖಾಯಿಲೆಗಳ ಪರಿಣಾಮ ಇದು.

ಎಂಥ ವಿಚಿತ್ರ ನೋಡಿ. ನಿಮ್ಮದೂ ಸೇರಿದಂತೆ ಆಗಿ ಹೋದ ಎಲ್ಲ ಸರ್ಕಾರಗಳಿಗೂ ಕೆಜಿಎಫ್‌ನಂಥ ಪಟ್ಟಣ, ನಗರಗಳಲ್ಲಿ ಇನ್ನೂ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಇತ್ತ ಬೆಂಗಳೂರಿಗೆ ಸಾವಿರ ಸಾವಿರ ಕೋಟಿ ರೂಪಾಯಿಗಳನ್ನು ತಂದು ಸುರಿಯುತ್ತೀರಿ.

ಇಂಥ ನಗರಗಳ ಒಳಚರಂಡಿ ವ್ಯವಸ್ಥೆಗಾಗಿಯೇ ಇರುವ ಕೇಂದ್ರ ಸರ್ಕಾರದ ಯೋಜನೆಗಳ ಹಣ ಎಲ್ಲಿಗೆ ಹೋಯಿತು? ರಾಜ್ಯ ಸರ್ಕಾರದ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಮಲ ಹೊರುವವರ ಪುನರ್ವಸತಿಗಾಗಿ ಎಷ್ಟು ಹಣ ಖರ್ಚು ಮಾಡಿದ್ದೀರಿ? ಮಲ ಹೊರುವವರ ನೆರವಿಗಾಗಿ ಬಿಡಿಗಾಸು ಸಹ ಖರ್ಚು ಮಾಡದ ನೀವು ಮಲ ಹೊರುವವರೇ ಇಲ್ಲ ಎಂದು ಹೇಳಲು ಸಾಧ್ಯವಾಗಿದ್ದಾದರೂ ಹೇಗೆ? ನಿಮ್ಮ ಅಧಿಕಾರಿಗಳು ಹೊಟ್ಟೆಗೆ ಏನನ್ನು ತಿನ್ನುತ್ತಾರೆ?

ಸುರೇಶ್ ಕುಮಾರ್‌ರವರೇ,
ನಿಜವಾಗಲೂ ನಿಮ್ಮ ಬಗ್ಗೆ ಗೌರವವಿದೆ. ನೀವು ಸಾರ್ವಜನಿಕ ಜೀವನದಲ್ಲಿ ಹೆಸರು ಕೆಡಿಸಿಕೊಂಡವರಲ್ಲ. ಅಕ್ರಮ, ಅನ್ಯಾಯ ಎಸಗಿದವರಲ್ಲ. ಆದರೆ ಇದಿಷ್ಟೇ ನೀವು ಕುಳಿತಿರುವ ಸ್ಥಾನಕ್ಕೆ ಜೀವ ತುಂಬಲು ಸಾಕಾಗುವುದಿಲ್ಲ. ಒಂದೇ ವಾರದಲ್ಲಿ ನೀವು ಇಡೀ ರಾಜ್ಯ ಸುತ್ತಬಹುದು. ಎಲ್ಲಿ ಏನಾನಾಗುತ್ತಿದೆ ಎಂಬುದನ್ನು ನಿಮ್ಮ ಕಣ್ಣಾರೆ ನೋಡಬಹುದು. ನಿಮಗೆ ಸುಳ್ಳು ಮಾಹಿತಿ ಕೊಟ್ಟ ಅಧಿಕಾರಿಗಳ ಬೇಜವಾಬ್ದಾರಿಯನ್ನೂ ಕಾಣಬಹುದು. ಇದೆಲ್ಲವನ್ನು ಮಾಡಲು ರಾಜಕೀಯ ಇಚ್ಛಾಶಕ್ತಿ ಬೇಕು, ಪ್ರಾಮಾಣಿಕವಾದ ಕಾಳಜಿ ಬೇಕು. ಅದು ನಿಮಗಿದೆ ಎಂದು ಭಾವಿಸಿದ್ದೇವೆ.

ದಯವಿಟ್ಟು ಏನಾದರೂ ಮಾಡಿ. ರಾಜ್ಯದಲ್ಲಿ ಮಲ ಹೊರುತ್ತಿರುವ ಸಾವಿರಾರು ಕುಟುಂಬಗಳ ನೆರವಿಗೆ ಬನ್ನಿ. ಮಾತೆತ್ತಿದರೆ ಖಜಾನೆಯ ಹಣವನ್ನು ಸತ್ಯನಾರಾಯಣ ಪೂಜೆಯ ಪ್ರಸಾದದಂತೆ ಸಿಕ್ಕವರಿಗೆ ಹಂಚುವ ಮುಖ್ಯಮಂತ್ರಿಗಳು, ಈ ಜನರಿಗೂ ಕೈ ಎತ್ತಿ ಕೊಡಲಿ, ಎಷ್ಟಾದರೂ ಅದು ಈ ನಿಷ್ಪಾಪಿ ಜನರದೇ ಹಣವಲ್ಲವೇ?

ನಿಜ, ನಿಮಗೆ ಕೆಲಸ ಮಾಡಲು ಸರಿಯಾದ ಸಮಯವೇ ಸಿಕ್ಕಿಲ್ಲ. ಒಂದೆಡೆ ರೆಡ್ಡಿ-ರೇಣುಕರ ಕಾಟದಿಂದ ಪಾರಾಗಲು ನಿಮ್ಮ ಮುಖ್ಯಮಂತ್ರಿಗಳಿಗೆ ಸಾಕುಸಾಕಾಗಿ ಹೋಯಿತು. ಮತ್ತೊಂದೆಡೆ ರಾಜ್ಯಪಾಲರ ವಿರುದ್ಧ ನಿಮ್ಮ ಸಮರ. ಇನ್ನು ವಿರೋಧ ಪಕ್ಷದವರ ಭ್ರಷ್ಟಾಚಾರದ ದಾಖಲೆಗಳನ್ನು ಹುಡುಕುವಷ್ಟರಲ್ಲಿ ನಿಮ್ಮ ಅಧಿಕಾರಿಗಳು ಹೈರಾಣಾಗಿ ಹೋಗಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ದಿಲ್ಲಿಗೆ ಹೋಗಿ ಬಂದು ಮಾಡುವಷ್ಟರಲ್ಲಿ ಮೂರು ವರ್ಷ ಮುಗಿದಾಗಿದೆ. ಇನ್ನೂ ಎರಡು ವರ್ಷಗಳಿವೆ. ಈ ಅವಧಿಯಲ್ಲಾದರೂ ರಾಜ್ಯದ ಮೂಲೆಮೂಲೆಯಲ್ಲಿ ಸಾವಿನಂಥ ಬದುಕನ್ನು ಬದುಕುತ್ತಿರುವ ಜನರ ಕಥೆಗಳನ್ನು ಕೇಳಿ, ಅವರ ನೆರವಿಗೆ ನಿಲ್ಲಿ ಎಂದು ಬೇಡಿಕೊಳ್ಳುತ್ತೇವೆ.

ಈ ಬಹಿರಂಗ ಪತ್ರವನ್ನು ನಿಮ್ಮ ಇ-ಮೇಲ್ ಐಡಿಗೆ ಕಳುಹಿಸುತ್ತಿದ್ದೇವೆ ಮತ್ತು ಈ ಲೇಖನದ ಲಿಂಕನ್ನು ನಿಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡುತ್ತಿದ್ದೇವೆ. ನಿಮ್ಮ ಉತ್ತರವನ್ನು ನಿರೀಕ್ಷಿಸುತ್ತೇವೆ.

ಆದರಗಳೊಂದಿಗೆ,
ಸಂಪಾದಕೀಯ

ಜಿಲ್ಲಾ ಪತ್ರಿಕೆಗಳ ಸಂಪಾದಕರ ಗಮನಕ್ಕೆ,
ಸಂಪಾದಕೀಯದ ಲೇಖನಗಳನ್ನು ರಾಜ್ಯದ ಹಲವಾರು ಜಿಲ್ಲಾ ಪತ್ರಿಕೆಗಳು ಪ್ರಕಟಿಸುತ್ತಿರುವುದನ್ನು ಗಮನಿಸುತ್ತ ಬಂದಿದ್ದೇವೆ. ಇದು ಸಂತೋಷದ ವಿಷಯ. ಜನಪರ ಕಾಳಜಿಯ ಲೇಖನಗಳು ಹೆಚ್ಚು ಜನರನ್ನು ತಲುಪುವಂತಾದರೆ ಅದು ಪರಿಣಾಮಕಾರಿಯಾಗುತ್ತದೆ. ಆದರೆ ಲೇಖನ ಬಳಸಿಕೊಳ್ಳುವಾಗ ಪೂರ್ಣ ಲೇಖನವನ್ನು ಬಳಸಿಕೊಳ್ಳಿ, ಲೇಖನದ ಪೂರ್ಣ ಆಶಯ ಧ್ವನಿಸದೇ ಹೋದರೆ ಅದನ್ನು ಪ್ರಕಟಿಸಿ ಪ್ರಯೋಜನವಿಲ್ಲ. ಲೇಖನ ಪ್ರಕಟವಾದರೆ ಅದರ ಸ್ಕಾನ್ ಮಾಡಿದ ಸಾಫ್ಟ್ ಕಾಪಿಯನ್ನು ನಮ್ಮ ಇ-ಮೇಲ್ ಐಡಿಗೆ ಕಳುಹಿಸಿಕೊಡಿ. ಹಾಗೆಯೇ ಲೇಖನದ ಕಡೆಯಲ್ಲಿ ಬ್ಗಾಗ್‌ನ ವಿಳಾಸ ನಮೂದಿಸಿದರೆ ಒಳ್ಳೆಯದು. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ಇಲ್ಲಿ ಸಚಿವ ಸುರೇಶ್ ಕುಮಾರ್ ಅವರಿಗೆ ಬರೆದಿರುವ ಬಹಿರಂಗ ಪತ್ರವನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ವಿನಂತಿಸುತ್ತೇವೆ.
-ಸಂಪಾದಕೀಯ.

Thursday, June 16, 2011

ಮತ್ತೆ ಬಂದಿದ್ದಾರೆ ನರೇಂದ್ರ ಶರ್ಮ, ಜ್ಯೋತಿಷಿಗಳಿಗೆ ಜಟಕಾ ಬಂಡಿಯೇ ಆಸರೆ


ಪ್ರಳಯಾಂತಕ ಜ್ಯೋತಿಷಿ ನರೇಂದ್ರ ಬಾಬು ಶರ್ಮ ಮತ್ತೆ ಜೀ ಟಿವಿಯಲ್ಲಿ ಹಾಜರಾಗಿದ್ದಾರೆ. ಇಷ್ಟು ದಿನಗಳ ಕಾಲ ನರೇಂದ್ರ ಶರ್ಮ ಅವರ ಹಳೆಯ ಎಪಿಸೋಡುಗಳನ್ನೇ ತೋರಿಸಲಾಗುತ್ತಿತ್ತು. ಇವತ್ತು ಮತ್ತೆ ಲೈವ್ ಕಾರ್ಯಕ್ರಮ ಪ್ರಸಾರವಾಗಿದೆ.

ನರೇಂದ್ರ ಶರ್ಮ ಬದಲಾಗಿ ಬನಶಂಕರಿ ದೇಗುಲದ ಅರ್ಚಕ ಆನಂದ್ ಗುರೂಜಿ ಎಂಬುವವರ ಕಾರ್ಯಕ್ರಮ ಪ್ರಸಾರವಾಗುತ್ತದೆ ಎಂಬ ಮಾಹಿತಿಯಿತ್ತು. ಆನಂದ್ ಗುರೂಜಿಯ ಕಾರ್ಯಕ್ರಮ ಭಾನುವಾರಗಳಂದು ಪ್ರಸಾರವಾಗುತ್ತಿದೆ. ಧರ್ಮ ದರ್ಪಣ ಎಂಬ ಈ ಕಾರ್ಯಕ್ರಮದಲ್ಲಿ ಕೈಯಲ್ಲಿ ಪಾದರಸ ಕೊಟ್ಟು ಭವಿಷ್ಯ ಹೇಳುವ ಹೊಸ ಟೆಕ್ನಿಕ್ಕು ಪ್ರಯೋಗಿಸಲಾಗುತ್ತಿದೆ. ಒಟ್ಟಾರೆ ಈಗ ಜೀ ಟಿವಿಯಲ್ಲಿ ಡಬ್ಬಲ್ ಧಮಾಕ. ಅತ್ತ ಆನಂದ ಗುರೂಜಿ, ಇತ್ತ ನರೇಂದ್ರ ಗುರೂಜಿ. ಜೀ ಟಿವಿ ಉದ್ಧಾರವಾಗುವುದಕ್ಕೆ ಇನ್ನೇನು ಬೇಕು?

ಹಾಗೆ ನೋಡಿದರೆ ನರೇಂದ್ರ ಶರ್ಮ ಅವರಷ್ಟೇ ಅಪಾಯಕಾರಿಯಾಗಿ ಇತರ ಚಾನಲ್ ಗಳ ಜ್ಯೋತಿಷಿಗಳೂ ಬೆಳೆಯುತ್ತಿದ್ದಾರೆ. ಮನಸ್ಸಿಗೆ ಬಂದದ್ದನ್ನು ಹೇಳುವ ಇವರಿಗೆ ಲಂಗುಲಗಾಮು ಏನೂ ಇಲ್ಲದಂತಾಗಿದೆ.

ಚಂದ್ರಗ್ರಹಣದ ಕುರಿತಾಗಿ ನಿನ್ನೆ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ, ಸೋಮಯಾಜಿ ಹೇಳಿದ್ದನ್ನು ನೀವು ಕೇಳಿರಬಹುದು. ಚಂದ್ರಗ್ರಹಣದ ಪರಿಣಾಮವಾಗಿ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತದಂತೆ. ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತವಂತೆ. ಒಬ್ಬ ಪತ್ರಕರ್ತ ಕೊಲೆಯೂ ಆಗುತ್ತಾನಂತೆ. ಅಂದ ಹಾಗೆ ಕೊಲೆಯಾಗುವ ಪತ್ರಕರ್ತ ಯಾರು ಎಂಬುದನ್ನೂ ಈತ ಮೊದಲೇ ಹೇಳಿದರೆ ಆತನ ಸಮಾಧಿಯನ್ನೂ ಈಗಲೇ ನಿರ್ಮಿಸಿಬಿಡಬಹುದಿತ್ತು, ಶ್ರದ್ಧಾಂಜಲಿ ಸಭೆಗಳಿಗೂ ಈಗಲೇ ತಯಾರಿ ನಡೆಸಬಹುದಿತ್ತು. ಇವರು ಜ್ಯೋತಿಷಿಗಳಲ್ಲ, ಸ್ಯಾಡಿಸ್ಟ್‌ಗಳು ಎನಿಸುವುದಿಲ್ಲವೇ ನಿಮಗೆ?

ನಿನ್ನೆಯ ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ ಡಿವೈನ್ ಹೀಲಿಂಗ್ ಮಾಡುತ್ತೇನೆಂದು ಹೇಳಿಕೊಳ್ಳುವ ಗುರೂಜಿಯೊಬ್ಬನನ್ನು ಪ್ರಮೋಟ್ ಮಾಡುವ ಕಸರತ್ತು ನಡೆಸಲಾಯಿತು. ಹಿಂದೆ ನರೇಂದ್ರ ಶರ್ಮ ಜತೆ ನಡೆಸಿದ ಸಂವಾದದ ಸಂದರ್ಭದಲ್ಲಿ ಉಪಯೋಗಿಸಿದ ತಂತ್ರವನ್ನೇ ನಿನ್ನೆಯ ಕಾರ್ಯಕ್ರಮದಲ್ಲೂ ಹೆಣೆಯಲಾಗಿತ್ತು. ಮೊದಲು ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ಪುತ್ರ ಪಚ್ಚೆಯನ್ನು ಮಾತನಾಡಿಸಿ ಗುರೂಜಿಯ ಠೊಳ್ಳುತನವನ್ನು ಬಹಿರಂಗಪಡಿಸಲಾಯಿತು. ನಂಜುಂಡಸ್ವಾಮಿಯವರ ಕಡೆದಿನಗಳಲ್ಲಿ ಇದೇ ಗುರೂಜಿಯಿಂದ ದೈವಿಕ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಪ್ರೊಫೆಸರ್ ಬದುಕುಳಿಯಲಿಲ್ಲ. ಪಚ್ಚೆ ಖಾರವಾಗಿಯೇ ಮಾತನಾಡಿದರು. ಅಧ್ಯಾತ್ಮ ಪ್ರವಚನ ಮಾಡಿಕೊಂಡಿರಿ, ಚಿಕಿತ್ಸೆ ಮಾಡುತ್ತೇನೆಂದು ನಂಬಿಸಿ ಯಾರನ್ನೂ ಮೋಸ ಮಾಡಬೇಡಿ ಎಂದು ಹೇಳಿದರು.

ಆಮೇಲೆ ಮಾಳವಿಕಾ ಅವರ ರಿಯಲ್ ಶೋ ಆರಂಭವಾಯಿತು. ನಾಲ್ಕೈದು ಮಂದಿಯನ್ನು ಮಾತನಾಡಿಸಿ ಅವರ ಖಾಯಿಲೆಗಳೆಲ್ಲವೂ ಗುಣವಾಗಿದೆ ಎಂದು ಹೇಳಿಸಲಾಯಿತು. ಒಬ್ಬಳಿಗೆ ಬಿದ್ದು ಹೋದ ಕೈ ಕಾಲುಗಳು ಬಂದಿದ್ದವು. ಮತ್ತೊಬ್ಬನಿಗೆ ಡಯಾಬಿಟಿಸ್ ಕಣ್ಮರೆಯಾಗಿತ್ತು. ಕಡೆಗೆ ಮಾಳವಿಕಾ ಕೊಟ್ಟ ಫೈನಲ್ ಜಡ್ಜ್‌ಮೆಂಟ್: ಪೇಶೆಂಟ್ ಸತ್ತೋದ್ರು ಅಂತ ನಾವು ಯಾವುದಾದರೂ ಆಸ್ಪತ್ರೆಗೆ ಹೋಗೋದು ಬಿಡ್ತೀವಾ? ಹಾಗೆ ಇದೂನು.

ಗುರೂಜಿ ಕ್ಯಾನ್ಸರ್, ಎಚ್.ಐ.ವಿ. ಇತ್ಯಾದಿ ಎಲ್ಲಾ ಖಾಯಿಲೆಗಳನ್ನೂ ವಾಸಿ ಮಾಡುತ್ತಾರಂತೆ. ಬೇಕಿದ್ದರೆ ಹತ್ತು ಜನ ರೋಗಿಗಳನ್ನು ನೀವೇ ನನಗೆ ಕೊಡಿ. ಎಪ್ಪತ್ತು ಪರ್ಸೆಂಟ್ ರಿಸಲ್ಟ್ ಕೊಡಲಿಲ್ಲವೆಂದರೆ ಬೀದಿಯಲ್ಲಿ ನಿಲ್ಲಿಸಿ ಕಲ್ಲಿನಲ್ಲಿ ಹೊಡೆದು ನನ್ನನ್ನು ಸಾಯಿಸಿ ಎಂದು ಅವರು ಸವಾಲು ಹಾಕಿದರು. ಹತ್ತು ಲಕ್ಷ ರೂಪಾಯಿ ಬೆಟ್ ಬೇಕಾದರೆ ಕಟ್ಟುತ್ತೇನೆ ಎಂದು ಹೇಳಿಕೊಂಡರು. ಒಟ್ಟಾರೆ ಈ ಗುರೂಜಿಗೆ ಜೀ ಟಿವಿಯಲ್ಲಿ ಫುಲ್ ಜಾಹೀರಾತು. ಜಾಹೀರಾತು ದರ ಎಷ್ಟು ಎಂದು ಮಾತ್ರ ಕೇಳಬೇಡಿ.

ಆನಂದ್ ಗುರೂಜಿ
ಬದುಕು ಜಟಕಾ ಬಂಡಿ ಅಗ್ಗದ ಜನಪ್ರಿಯತೆಗಾಗಿ ಸಿದ್ಧವಾಗುವ ಕಾರ್ಯಕ್ರಮ. ವಾರಕ್ಕೆ ಎರಡು ಮೂರು ಬಾರಿಯಾದರೂ ಕಾರ್ಯಕ್ರಮಕ್ಕೆ ಬರುವ ಜನರು ಪರಸ್ಪರ ಚಪ್ ಚಪ್ಪಲಿಯಲ್ಲಿ ಹೊಡೆದಾಡುತ್ತಾರೆ. ಅಥವಾ ಅವರುಗಳು ಚಪ್ಪಲಿಯಲ್ಲಿ ಹೊಡೆದಾಡುವಂಥ ಸನ್ನಿವೇಶಗಳನ್ನು ನಿರ್ಮಿಸಲಾಗುತ್ತದೆ. ಇದನ್ನು ಯಾವ ಹಿಂಜರಿಕೆ, ಮಾನ, ಮರ್ಯಾದೆಯೂ ಇಲ್ಲದೆ ಯಥಾವತ್ತಾಗಿ ಪ್ರಸಾರ ಮಾಡಲಾಗುತ್ತದೆ. ಬಡಜನರ ಖಾಸಗಿ ಬದುಕು, ಅವರ ನೋವು, ಅವರ ಕುಟುಂಬಗಳ ಒಳಗಿನ ಜಗಳ, ವೈಷಮ್ಯಗಳು ಇವರ ಪಾಲಿಗೆ ಹಣತರುವ ಕಲ್ಪವೃಕ್ಷಗಳು.

ಇದನ್ನು ಹೊರತುಪಡಿಸಿ ಜಟಕಾ ಬಂಡಿಯನ್ನು ಓಡಿಸುವುದು ಪ್ರಳಯಾಂತಕ ಜ್ಯೋತಿಷಿಗಳನ್ನಿಟ್ಟುಕೊಂಡು. ನರೇಂದ್ರ ಶರ್ಮ, ಆನಂದ್ ಗುರೂಜಿ ಮತ್ತೀಗ ಡಿವೈನ್ ಹೀಲಿಂಗ್ ಗುರೂಜಿ. ಎಲ್ಲದರಲ್ಲೂ ಅತ್ತಂಗೆ ಮಾಡು, ಹೊಡೆದಂತೆ ಮಾಡುತ್ತೇನೆ ಎಂಬ ವಿಕಾರ ತಂತ್ರಗಳು. ಕಪಟ ಜ್ಯೋತಿಷಿಗಳನ್ನು ಪ್ರಮೋಟ್ ಮಾಡುವುದೊಂದೇ ಕಾರ್ಯಕ್ರಮಗಳ ಗುರಿ.

ಕನ್ನಡ ಚಾನಲ್‌ಗಳು ದುರಾಸೆಗೆ ಬಿದ್ದಿವೆ. ಜನರಿಗೆ ಸುಳ್ಳು ಹೇಳಾದರೂ ಸರಿ, ಭೀತಿ ಹುಟ್ಟಿಸಿಯಾದರೂ ಸರಿ ಹಣ ದೋಚುವುದೊಂದೇ ಅವುಗಳ ಕಾಯಕವಾಗಿದೆ. ಯಾರು ಎಷ್ಟೇ ಏನೇ ಹೇಳಿದರೂ ಈ ಚಾನಲ್‌ಗಳು ಸುಧಾರಿಸುವುದಿಲ್ಲ. ಕೊಳಚೆಯಲ್ಲೇ ಬಿದ್ದು ಸಾಯುತ್ತೇವೆ ಎನ್ನುವ ಹಂದಿಗಳನ್ನು ತಂದು ಬೀದಿಗೆ ಬಿಟ್ಟರೂ ಅವರು ಮತ್ತೆ ಕೊಳಚೆ ಹುಡುಕಿಕೊಂಡೇ ಹೋಗುತ್ತವೆ.

ಈ ಹಂದಿಗಳ ಹಾವಳಿಯನ್ನು ನಿಯಂತ್ರಿಸುವುದು ಹೇಗೆ? ಯಾರು?

Wednesday, June 15, 2011

ಕಾರ್ಗತ್ತಲಲ್ಲಿ ಮರೆಯಾದ ಜ್ಯೋತಿರ್ಮಯ್ ಡೇ...



ವೃತ್ತಿನಿಷ್ಠೆ, ಪ್ರಾಮಾಣಿಕತೆ, ನಿಷ್ಠುರತೆ, ನಿಸ್ವಾರ್ಥತೆಯ ಮೌಲ್ಯಗಳಿಗೆ ಈ ದೇಶದ ಭೂಗತಜಗತ್ತು-ರಾಜಕೀಯ-ಪೋಲೀಸ್‌ವ್ಯವಸ್ಥೆಗಳ ಮೈತ್ರಿಕೂಟ ಮತ್ತೊಂದು ಬಲಿ ಪಡೆದಿದೆ. ಅದು ಜ್ಯೋತಿರ್ಮಯ್ ಡೇ ಅವರ ಕಗ್ಗೊಲೆಯ ರೂಪದಲ್ಲಿ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಈ ದೇಶದಲ್ಲಿ ಇಂತಹ ಮೌಲ್ಯಗಳನ್ನು ಎತ್ತಿಹಿಡಿಯುವ ಪತ್ರಕರ್ತರು ಎಂತಹಾ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಜ್ಯೋತಿರ್ಮಯ್ ಡೇಯವರ ಹತ್ಯೆ ಬಿಚ್ಚಿಟ್ಟಿದೆ. ಎಲ್ಲಕ್ಕಿಂತ ವಿಷಾದದ ಸಂಗತಿ ಎಂದರೆ ಅವರ ಹತ್ಯೆಯಾದ ಬಳಿಕ ಅಧಿಕಾರಸ್ಥರು, ಅಧಿಕಾರಿಗಳು ಆಡುತ್ತಿರುವ ನಾಟಕಗಳು. ಸೋನಿಯಾ, ಮನಮೋಹನರಾದಿಯಾಗಿ ಎಲ್ಲರೂ ಕಣ್ಣೀರಿಟ್ಟರು, ಎಂಥಾ ಮನುಷ್ಯ. ಹೀಗಾಗಬಾರದಿತ್ತು, ಛೆ! ಎಂದು ಮಿಡೀಯಾಗಳ ಮುಂದೆ ಮರುಗಿದರು. ಆದರೆ, ತನಿಖಾವರದಿ ಬರೆದ ಕಾರಣಕ್ಕೆ ಸ್ಥಾಪಿತ ಹಿತಾಸಕ್ತಿಗಳ ಕ್ರೌರ‍್ಯಕ್ಕೆ ಪ್ರಾಣವನ್ನೇ ತೆರಬೇಕಾಗಿ ಬಂದಿರುವ ಈ ಸರ್ವತಂತ್ರ ರಾಷ್ಟ್ರದಲ್ಲಿರುವ ದುಸ್ಥಿತಿಯ ಬಗ್ಗೆ ಯಾರೂ ಮಾತಾಡಲಿಲ್ಲ. ತಮ್ಮದೇ ಪಕ್ಷದ ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್‌ಗೆ ಹೇಳಿ ಡೇ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಲು ಇವರ ಕೈಯಿಂದಸಾಧ್ಯವಿರಲಿಲ್ಲವೇ?

ಇಡೀ ದೇಶದ ಪತ್ರಕರ್ತ ಸಮುದಾಯ ಒಕ್ಕೊರಲಿನಿಂದ ಡೇ ಹತ್ಯೆಯನ್ನು ಕೂಡಲೇ ಸಿಬಿಐಗೊಪ್ಪಿಸಿ ಎಂದು ಹೇಳಿದರೂ ಅದಾಗದು  ಎಂದು ದಾರ್ಷ್ಟ್ಯ ಪ್ರದರ್ಶಿಸುತ್ತಿರುವ ಚವಾಣ್ ಹಿಂದಿನ ಶಕ್ತಿಗಳಾವುವು? ಇಂತದನ್ನು ತಡೆಯಲು ಹೊಸ ಕಾನೂನು ರಚಿಸುವ ಮಾತನ್ನಾಡುತ್ತಿದ್ದಾರೆ ಇವರು. ಇರುವ ಕಾನೂನುಗಳನ್ನೇ ಸರಿಯಾಗಿ ಬಳಸಲಾರದ ಇವರ ಕೈಯಲ್ಲಿ ಹೊಸ ಕಾನೂನು ಏನು ಮಾಡಲು ಸಾಧ್ಯ? ಹೀಗೆ ದೇಶ ಕಂಡ ಅತ್ಯುತ್ತಮ ತನಿಖಾ ವರದಿಗಾರನೊಬ್ಬ ಗುಂಡಿನ ದಾಳಿಗೆ ಹತನಾದಾಗ ಸತ್ಯವನ್ನು ಬಯಲಿಗೆಳೆಯಬಯಸುವ ಸಾವಿರಾರು ಯುವಪತ್ರಕರ್ತರಿಗೆ ಉಳಿಯುವ ಭರವಸೆಯಾದರೂ ಏನು? ಕೊಲೆಮಾಡಿದವರನ್ನು ಕೂಡಲೇ ಹಿಡಿಯಲಾಗದಿದ್ದರೂ ಕನಿಷ್ಠ ಪಕ್ಷ ಗಂಭೀರ ತನಿಖೆ ನಡೆಸುವ ಬದ್ಧತೆಯನ್ನಾದರೂ ಸರ್ಕಾರ ತೋರಿದ್ದರೆ ದೇಶದ ಸಂವಿಧಾನ ತನ್ನ ೧೯(೧) (ಎ) ವಿಧಿಯಾನುಸಾರ ಕೊಡಮಾಡಿರುವ ಪತ್ರಿಕಾ ಸ್ವಾತಂತ್ರ್ಯಕ್ಕೆ ಕಿಂಚಿತ್ತಾದರೂ ಘನತೆ ಇರುತ್ತಿತ್ತು. ಆದರೆ ಇಲ್ಲಿ ನಡೆಯುತ್ತಿರುವುದೇನು?

ಅವರು ಕಮಾಂಡರ್ ಡೇ.

ಪತ್ರಕರ್ತರ ಬಳಗದಲ್ಲಿ ಟೇಯವರ ಹತ್ತಿರದವರೆಲ್ಲಾ ಕಮಾಂಡರ್ ಡೇ ಎಂದೇ ಕರೆಯುತ್ತಿದ್ದರು. ಜೆ.ಡೇ. ಎಂಬ ಹೆಸರಿನಲ್ಲಿ ಅವರ ಎಲ್ಲಾ ಬರೆಹಗಳು ಪ್ರಕಟವಾಗುತ್ತಿದ್ದವು. ಇಪ್ಪತ್ತು ವರ್ಷಗಳ ಹಿಂದೆ ಹಿಂದೂಸ್ತಾನ್ ಲಿವರ್ ಮೂಲಕ ತಮ್ಮ ವೃತಿಜೀವನಕ್ಕೆ ಕಾಲಿರಿಸಿದ್ದ ಡೇ ಹವ್ಯಾಸಿ ಛಾಯಾಗ್ರಾಹಕರಾಗಿದ್ದವರು. ಅದರಲ್ಲೂ ವನ್ಯಜೀವಿಗಳ ಬಗ್ಗೆ ಇನ್ನಿಲ್ಲದ ಆಸಕ್ತಿ ಅವರಿಗೆ. ಹೀಗೆ ಎಲ್ಲೆಲ್ಲಿ ವನ್ಯಜೀವಿಗಳಿಗಳಿವೆಯೋ ಅಲ್ಲೆಲ್ಲ ಛಾಯಾಗ್ರಹಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವನ್ಯಪ್ರಣಿಗಳ ಬದುಕನ್ನು ಮನುಷ್ಯ ಸಮಾಜ ಕಿತ್ತುಕೊಳ್ಳುತ್ತಿರುವ ಕುರಿತು ಬಹಳ ನೋವಾಗುತ್ತಿತ್ತವರಿಗೆ. ಮಹಾರಾಷ್ಟ್ರ ಸರ್ಕಾರವು ರಾಷ್ಟ್ರೀಯ ಉದ್ಯಾನ ಎಂದು ಮೀಸಲಿಟ್ಟಿದ್ದ ಜಾಗವನ್ನೇ ವಾಣಿಜ್ಯ ಕಾರಣಗಳಿಗಾಗಿ ಬಳಸಿಕೊಳ್ಳಲೆತ್ನಿಸಿದಾಗ ತಡೆಯಲಾಗದೇ ಆ ಕುರಿತು ಒಂದು ವಿವರವಾದ ಲೇಖನ ಬರೆದರು. ಇದು ಡೇ ಬರೆದ ಮೊತ್ತಮೊದಲ ತನಿಖಾ ವರದಿ. ಈ ವರದಿ ಪ್ರಕಟವಾದಾದ್ದೇ ತಡ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗದ್ದಲವಾಗಿ ಸರ್ಕಾರ ಮುಖಭಂಗವನ್ನೆದುರಿಸಬೇಕಾಯಿತು.

ನಂತರದಲ್ಲಿ ಡೇಯವರು ಅಫ್ಟರ್‌ನೂನ್ ಡಿಸ್ಪಾಚ್ ಹಾಗೂ ಕೊರಿಯರ್ ಎಂಬ ಪತ್ರಿಕೆಗಳಿಗೆ ಫೋಟೋಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸಿದರು. ನಂತರ ಮಿಡ್ ಡೇ ಪತ್ರಿಕೆಗೆ ಫ್ರೀಲ್ಯಾನ್ಸ್ ಪತ್ರಕರ್ತರಾದರು. ಕೊನೆಗೆ ಅವರು ಪೂರ್ಣಾವಧಿ ಪತ್ರಕರ್ತನಾಗಿ ಕಾರ್ಯಾರಂಭ ಮಾಡಿದ್ದು ೧೯೯೬ರಲ್ಲಿ, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಮೂಲಕ. ಅಲ್ಲಿ ಆವರ ಆಸಕ್ತಿ ವಿಷಯ ಕ್ರೈಂ ರಿಪೋರ್ಟಿಂಗ್ ಆಗಿತ್ತು. ಮುಂಬೈಯಂಥ ಮುಂಬೈಯಲ್ಲಿ ಕ್ರೈಂ ರಿಪೋರ್ಟಿಂಗ್ ಎಂದರೆ ಮಕ್ಕಳಾಟಿಕೆಯೇ? ಯಾವ ಗಲ್ಲಿಯಲ್ಲಿ ಎಡವಿದರೂ ಹೋಗಿ ಬೀಳುವುದು ದಾವೂದ್ ಇಬ್ರಾಹಿಂ ಇಲ್ಲವೇ ಚೋಟಾ ಶಕೀಲ್ ಕಾಲಬುಡದಲ್ಲೇ. ಅಲ್ಲಿ ಬಾಯಿ ಮಾತನಾಡುವುದಿಲ್ಲ. ಬಂದೂಕು ಮಾತನಾಡುತ್ತವೆ!. ಆದರೂ ಅಂಜದೇ ಭೂಗತ ಜಗತ್ತಿನ ಅಪರಾಧಗಳ ಕುರಿತು, ಅದು ಹೊರಗಿನ ಅಧಿಕಾರಸ್ಥರೊಂದಿಗೆ ಹೊಂದಿರುವ ನಂಟಿನ ಕುರಿತು ತನಿಖಾ ವರದಿ ಆರಂಭಿಸಿದ ಡೇ ಅದರಲ್ಲಿ ಪಕ್ಕಾ ವೃತಿಪರತೆ ಮೆರೆದರು. ಮುಂದೆ ೨೦೦೫ರಲ್ಲಿ ಎಕ್ಸ್‌ಪ್ರೆಸ್‌ನ್ನು ಬಿಟ್ಟು ಹಿಂದೂಸ್ತಾನ್ ಟೈಮ್ಸ್ ಸೇರಿದರು. ನಂತರ ಅದನ್ನೂ ಬಿಟ್ಟು ಮತ್ತೆ ತಾವು ಆರಂಭದಲ್ಲಿ ವೃತ್ತಿಯನ್ನಾರಂಭಿಸಿದ್ದ ಮಿಡ್‌ಡೇಯಲ್ಲಿ ಹಿರಿಯ ವಿಶೇಷ ತನಿಖಾ ವರದಿ ಸಂಪಾದಕರಾಗಿ ಸೇರಿಕೊಂಡರು.

ಡೇ, ಎರಡು ದಶಕಗಳಿಂದ ಅವರು ತನಿಖಾ ಪತ್ರಿಕೋದ್ಯಮವನ್ನು ಆವಾಹಿಸಿಕೊಂಡುಬಿಟ್ಟಿದ್ದರು. ದೇಶದ ಭೂಗತ ಲೋಕ ರಾಜಕಾರಣದ ರಾಜಧಾನಿಯೇ ಆಗಿರುವ ಮುಂಬೈನ ಭೂಗತ ಲೋಕದ ಅಣುರೇಣುಗಳನ್ನೂ ಬಲ್ಲವರಾಗಿದ್ದರವರು. ಆದರೆ ಒಮ್ಮೆಯೂ ತಮ್ಮ ವರದಿಗಳ ಮೂಲವನ್ನು ಅಪ್ಪಿತಪ್ಪಿಯೂ ಬಿಟ್ಟುಕೊಡದ ವೃತಿಪರತೆ ಅವರದು. ಈ ಕ್ಷೇತ್ರದಲ್ಲಿ ತಾವು ಗಳಿಸಿಕೊಂಡ ಅಪಾರ ಅನುಭವಗಳ ಮೂಸೆಯಲ್ಲಿ ಖಲಾಸ್ ಮತ್ತು ಝೀರೋ ಡಯಲ್: ದ ಡೇಂಜರಸ್ ವರ್ಲ್ಡ್ ಆಫ್ ಇನ್‌ಫಾರ್ಮರ‍್ಸ್ ಎಂಬೆರಡು ಕೃತಿಗಳನ್ನೂ ಬರೆದಿದ್ದರು.

ಮುಂಬೈ ಭೂಗತ ಜಗತ್ತಿನೊಂದಿಗೇ ನೇರ ಸಂಪರ್ಕ ಹೊಂದಿದ್ದರೂ, ಪತ್ರಿಕಾ ಲೋಕದಲ್ಲಿ ಪ್ರಸಿದ್ಧಿ ಪಡೆದಿದ್ದರೂ ಎಂದೂ ಅಹಂನಿಂದ ಬೀಗಿದವರಲ್ಲ ಡೇ. ಅವರೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳು, ಡೇಯವರ ಆಪ್ತ ಸ್ನೇಹಿತರು ಹೇಳುವ ಪ್ರಕಾರ ಅವರೊಬ್ಬ ಅತ್ಯಂತ ವಿನಮ್ರ ಮನುಷ್ಯ. ತಮ್ಮೆದುರಿಗಿರುವವರು ಹಿರಿಯ ಕಿರಿಯರು ಎಂದು ಭಾವಿಸದೇ ಇಂದೇ ಬಗೆಯಲ್ಲ್ಲೂ ಕಾಣುವ ವಿನಯವಂತಿಕೆ ಅವರದ್ದು. ಯಾರಾದರೂ ಕಷ್ಟದಲ್ಲಿರುವವರು ಕಂಡರೆ ಮಮ್ಮಲ ಮರುಗಿ ಕೂಡಲೇ ತನ್ನಿಂದಾದ ಸಹಾಯಕ್ಕೆ ಹೊರಡುವ ಉದಾತ್ತ ವ್ಯಕ್ತಿತ್ವ ಡೇಯವರದ್ದು. ಯಾರಿಗೆ ಏನೇ ಆದರೂ ಓಡಿ ಹೋಗಿ ಸಹಾಯಕ್ಕೆ ನಿಲ್ಲುತ್ತಿದ್ದ ನಿನ್ನನ್ನು ಉಳಿಸಲು ಯಾರೂ ಬರಲಿಲ್ಲವಲ್ಲೋ..... ಎಂದು ಡೇಯವರ ತಾಯಿ ಬೀನಾ ಡೇ ಮೊನ್ನೆ ಅವರ ಶವಕ್ಕೆ ಮುಖವಿಟ್ಟು ಮುಗಿಲು ಮುಟ್ಟುವಂತೆ ರೋಧಿಸುತ್ತಿದ್ದದ್ದು ಅದಕ್ಕೇನೆ.

ಇತ್ತೀಚೆಗೆ ಡೇ ಬರೆಯತೊಡಗಿದ್ದು ಮುಂಬೈಯಲ್ಲಿ ಮೇರೆ ಮೀರಿದ್ದ ಆಯಿಲ್ ಮಾಫಿಯಾದ ಬಗ್ಗೆ. ಅದರಲ್ಲೂ ಭೂಗತ ಲೋಕದ ದೊರೆಗಳು ಸೇರಿಕೊಂಡು ಡೀಸೆಲ್ ಕಲಬೆರೆಕೆ ಮಾಡುತ್ತಿದ್ದ ವಿಷಯಗಳ ಕುರಿತಾಗಿ ತನಿಖಾವರದಿ ಬರೆಯತೊಡಗಿದ್ದರು. ಈ ಮಾಫಿಯಾದಲ್ಲಿ ಭೂಗತ ಕ್ರಿಮಿನಲ್‌ಗಳೊಂದಿಗೆ ಹೊರಜಗತ್ತಿನ ಅಧಿಕಾರಶಾಹಿ ಶಾಮೀಲಾಗಿರುವ ಚಿತ್ರಣವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ಸಾವಿರಾರು ಕೋಟಿ ರೂಪಾಯಿಯ ವ್ಯವಹಾರಗಳಲ್ಲಿ ತೊಡಗಿರುವ ಒಂದು ಕ್ರಿಮಿನಲ್ ವ್ಯವಸ್ಥೆ ಇದನ್ನು ಹೇಗೆ ತಾನೇ ಸಹಿಸೀತು ಹೇಳಿ. ಪ್ರಾಯಶಃ ಇವರ ಮೇಲೆ ನೀಡಿದ್ದ ಸುಪಾರಿಗೆ ಅವರ ಲಾಭದ ಒಂದಂಶದ ಪಾಲೂ ಆಗಿರಲಿಕ್ಕಿಲ್ಲ. ಅಂದು ಮುಂಬೈನ ಘಾಟ್‌ಕೋಪರ್‌ನ ಅಮೃತನಗರದಲ್ಲಿರುವ ತನ್ನ ತಾಯಿಯ ಮನೆಯಿಂದ ತಾನು ಪೊವಾಯಿಯಲ್ಲಿ ಪತ್ನಿ ಹಾಗೂ ಪತ್ರಕರ್ತೆ ಶುಭಾಶರ್ಮರೊಂದಿಗೆ ವಾಸಿಸುತ್ತಿದ್ದ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದಂತೆಯೇ ಮಧ್ಯಾಹ್ನ ೨.೪೫ಕ್ಕೆ ಇವರ ಹಿಂದಿನಿಂದ ಬೈಕಿನಲ್ಲಿ ಬಂದ ಪಾತಕಿಗಳು ಹಾರಿಸಿದ ಗುಂಡಿಗೆ ಡೇ ಹಿಡಿತ ತಪ್ಪಿ ಬಿದ್ದಿದ್ದಾರೆ. ಅವರು ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲಿ ಮತ್ತೂ ಎಂಟು ಗುಂಡುಗಳು ಇವರ ಶರೀರವನ್ನು ಬಗೆದಿವೆ. ಕೂಡಲೇ ಸ್ಥಳೀಕರು ಕೂಗಿಕೊಂಡದ್ದು ಕೇಳಿ ಪಾತಕಿಗಳು ಓಟಕಿತ್ತಿದಾರೆ. ಇನ್ನು ಜೀವ ಹಿಡಿದುಕೊಂಡಿದ್ದ ಡೇಯವರನ್ನು ಕೂಡಲೇ ಅಲ್ಲಿದ್ದವರು ಹತ್ತಿರದ ಪೂವಾಯಿ ಪಾಲಿಕ್ನಿಕ್‌ಗೆ ಕರೆದೊಯ್ದರೂ ಅಲ್ಲಿದ್ದ ವೈದ್ಯರು ತಮ್ಮಲ್ಲಿ ಅವರ ಶುಷ್ರೂಷೆಗೆ ಬೇಕಾದ ಸಾಧನಗಳಿಲ್ಲವೆಂದು ಹೇಳಿ ತುರ್ತುಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಕೊನೆಗೆ ಹಿರಾನಂದಿನಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಡೇ ಯವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆಗ ಸರಿಯಾಗಿ ೩ಗಂಟೆ ೫ ನಿಮಿಷ.

ವ್ಯವಸ್ಥೆಯ ದೋಷಗಳನ್ನು ತಮ್ಮ ತನಿಖಾ ವರದಿಗಳ ಮೂಲಕ ತೋರಿಸಲು ಯತ್ನಿಸಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವ ಪತ್ರಕರ್ತರಲ್ಲಿ ಡೇ ಮೊದಲಿಗರೂ ಅಲ್ಲ. ಕೊನೆಯವರೂ ಅಲ್ಲ. ಈ ವರ್ಷದಲ್ಲೇ ಮೂವರು ಪತ್ರಕರ್ತರು ಕೊಲೆಗೀಡಾಗಿದ್ದಾರೆ. ಈ ಹತ್ಯೆಗಳಲ್ಲದೆ ಪತ್ರಕರ್ತರ ಮೇಲೆ ದೊಡ್ಡ ಮಟ್ಟದಲ್ಲಿ ಹಲ್ಲೆಗಳಾದ ೧೪ ಪ್ರಕರಣಗಳು ದಾಖಲಾಗಿವೆ.

೨೦೧೦ರ ಡೆಸೆಂಬರ್ ೨೦ ರಂದು ಛತ್ತೀಸ್‌ಗಢದ ಬಿಲಾಸ್‌ಪುರದ ದೈನಿಕ್ ಭಾಸ್ಕರ್ ಪತ್ರಿಕೆಯ ಸುಶಿಲ್ ಪಾಠಕ್‌ರನ್ನು ಅವರು ತಡರಾತ್ರಿ ಪಾಳಿ ಮುಗಿಸಿ ಮನೆಗೆ ಮರಳುವಾಗ ಪಾತಕಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ವಿಲಾಸ್‌ಪುರ ಪ್ರೆಸ್‌ಕ್ಲಬ್‌ನ ಪ್ರಧನ ಕಾರ್ಯದರ್ಶಿಯೂ ಆಗಿದ್ದ ಇವರ ಹತ್ಯೆ ಕುರಿತು ತನಿಖೆ ನಡೆಸುವ ಆಶ್ವಾಸನೆಯನ್ನು ಯಥಾಪ್ರಕಾರ ನೀಡಲಾಗಿತ್ತು. ಇದುವರೆಗೂ ಅಂತಹ ಯಾವ ಕುರುಹುಗಳೂ ಕಂಡುಬಂದಿಲ್ಲ. ಕೊನೆಗೆ ಪತ್ರಕರ್ತ ಸಮೂಹದಿಂದ ವ್ಯಾಪಕ ಟೀಕೆ ಒತ್ತಾಯ ಬಂದ ನಂತರ ಮುಖ್ಯಮಂತ್ರಿ ರಮಣ್‌ಸಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದಾರೆ.

೨೦೧೧ರ ಜನವರಿ ೨೩ರಂದು ರಾಯ್‌ಪುರದ ನಯೀ ದುನಿಯಾ ಪತ್ರಿಕೆಯ ವರದಿಗಾರ ಉಮೇಶ್ ರಜಪೂತ್‌ರನ್ನೂ ದುಷ್ಕರ್ಮಿಗಳು ಹತ್ಯೆಗೈದಿದದರು. ಅವರ ಶವದ ಪಕ್ಕದಲ್ಲಿ ಖಬರ್ ಚಾಪಾ ಬಂದ್ ನಹೀ ಕರೋಗೆ ತೊ ಮಾರೆ ಜಾವೋಗೆ (ಸುದ್ದಿ ಪ್ರಕಟಿಸುವುದನ್ನು ನಿಲ್ಲಿಸದಿದ್ದಲ್ಲಿ ಕೊಲೆಯಾಗ್ತೀರಿ) ಎಂಬ ಎಚ್ಚರಿಕೆಯನ್ನೂ ಉಳಿದ ಪತ್ರಕರ್ತರಿಗೆ ಬಿಟ್ಟು ಹೋಗಿದ್ದರು.

ಜನವರಿ ತಿಂಗಳಲ್ಲಿ, ಭುವನೇಶ್ವರದ ಶಹೀದ್‌ನಗರದ ಡಿಸಿಪಿ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯೊಂದರಲ್ಲಿ ಭಾಗವಹಿಸಲು ಹೊರಟಿದ್ದ ಧರಿತ್ತಿ ಪತ್ರಿಕೆಯ ವರದಿಗಾರ ಸೋಮನಾಥ್ ಸಾಹು ಎಂಬುವವರನ್ನು ತಡೆದು ನಿಲ್ಲಿಸಿ ಪೋಲೀಸರ ವಿರುದ್ಧ ಏನಾದರೂ ಬರೆದರೆ ಹುಷಾರ್ ಎಂದು ಧಮಕಿ ಹಾಕಲಾಗಿತ್ತು.

ಫೆಬ್ರವರಿಯಲ್ಲಿ ಒರಿಸ್ಸಾದ ಸಂವಾದ್ ದಿನಪತ್ರಿಕೆಯ ವರದಿಗಾರ ರಜತ್ ರಂಜನ್ ಸಿಂಗ್ ಮೇಲೆ ಆಡಳಿತದಲ್ಲಿರುವ ಬಿಜು ಜನತಾದಳದ ಪೀಪ್ಲಿಯ ಮುಖಂಡ ಸೈಖ್ ಬಾಬುವಿನ ಬೆಭಲಿಗರು ಮಾಡಿದರೆನ್ನಲಾದ ಹಲ್ಲೆಯಲ್ಲಿ ರಜತ್ ಮೂಳೆ ಮುರಿಯಲಾಗಿತ್ತು.

ಫೆಬ್ರವರಿಯಲ್ಲೇ, ಎಂಬಿಸಿ ಟಿವಿಯ ವರದಿಗಾರ ಕಿರಣ್ ಕನುಂಗೋ ಕಾಗೂ ಕೆಮೆರಾ ಮನ್ ಜೆನಾ ಮೇಲೆ ಅದೇ ಬಿಜೆಡೆ ಪಕ್ಷದ ಕಾರ್ಯಕರ್ತರು ಬಾಂಕಿಯಲ್ಲಿ ಹಲ್ಲೆ ನಡೆಸಿದ್ದರು. ಅದೇ ದಿನ ಪ್ರತ್ಯೇಕ ಘಟನೆಯೊಂದರಲ್ಲಿ ಓಟಿವಿ ವರದಿಗಾರ ಎನ್.ಎಂ.ವೈಶಾಖ್ ಹಾಗೂ ಅವರ ಕೆಮೆರಾ ಮನ್ ಅನುಪ್ ರಾಯ್ ಎಂಬುವವರ ಮೇಲೆ ಇವರು ಸ್ಥಳಿಯ ಜನರು ಉದ್ಯೋಗ, ಪರಿಹಾರಕ್ಕಾಗಿ ಐಒಸಿಎಲ್ ಗೇಟಿನ ಹೊರಗೆ ಮುಷ್ಕರ ನಡೆಸುತ್ತಿದ್ದುದನ್ನು ಸೆರೆಹಿಡಿಯುತ್ತಿದ್ದಾಗ ಸಮಾಜವಿರೋಧಿ ಶಕ್ತಿಗಳು ಹಲ್ಲೆ ನಡೆಸಿದ್ದರು.

ಫೆಬ್ರವರಿಯಲ್ಲಿ ಎನ್‌ಡಿಟಿವಿಯ ವದರಿಗಾರರು ಮತ್ತು ಕೆಮೆರಾಮನ್‌ಗಳು ಗುಜರಾತ್‌ನ ಮುಂಡ್ರಾದಲ್ಲಿ ಕಂಪನಿಯೊಂದು ಬಂದರು ನಿರ್ಮಿಸಲು ಮ್ಯಾಂಗ್ರೋ ಕಾಡುಗಳನ್ನು ನಾಶ ಮಾಡುತ್ತಿದ್ದುದರ ಬಗ್ಗೆ ಚಿತ್ರೀಕರಿಸಿಕೊಳ್ಳುತ್ತಿದ್ದಾಗ ಆದಾನಿ ಗ್ರೂಪ್‌ನ ಗೂಂಡಾಗಳು ಹಿಡಿದು ಕಟ್ಟಿಹಾಕಿ ಹಲ್ಲೆ ನಡೆಸಿದ್ದರು.

ಏಪ್ರಿಲ್‌ನಲ್ಲಿ, ಒಡಿಯಾ ದಿನಪತ್ರಿಕೆಯಾದ ಸೂರ್ಯಪ್ರಭದ ಪ್ರಕಾಶಕರಾದ ವಿಕಾಸ್ ಸ್ವೈನ್‌ರನ್ನು ಅವರ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟಣೆಗೊಂಡ ಕಾರಣಕ್ಕಾಗಿ ಪೋಲೀಸರು ಮನಬಂದಂತೆ ನಿಂದಿಸಿದ್ದರು. ಇದಕ್ಕೂ ಮುನ್ನ ಕಳೆದ ಸೆಪ್ಟೆಂಬರ್‌ನಲ್ಲಿ ವಿಕಾಸ್‌ರನ್ನು ಪೋಲೀಸರನ್ನು ಬಂಧಿಸಿದ್ದರು. ಆಗ ಪತ್ರಕರ್ತರು ತೀವ್ರವಾಗಿ ಪ್ರತಿಭಟಿಸಿದ್ದ ಮೇಲೂ ಮತ್ತೆ ಅವರನ್ನು ಮಾನಸಿಕ ಹಿಂಸೆಗೆ ಗುರಿಪಡಿಸಿದ್ದಾರೆ.

ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ಬರ್ದ್‌ವಾನ್‌ನಲ್ಲಿ ಸಿಪಿಎಂ ಬೆಂಬಲಿಗರು ಮೂವರು ಪತ್ರಕರ್ತರನ್ನು ಥಳಿಸಿದ್ದರು.

ಮೇ ೩ ರಂದು (ಅಂದೇ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ) ಗೀವಾದಲ್ಲಿ ಪತ್ರಕರ್ತ ಗ್ಯಾರಿ ಅಜಾವೆಡೋ ಎಂಬುವವರನ್ನು ಕಾವೇರಂನ ಗಣಿ ಕಂಪನಿಯೊಂದರ ಸಿಬ್ಬಂದಿಗಳು ಬಂಧಿಸಿದ್ದರು. ಅಲ್ಲಿ ಗಣಿಗಾರಿಕೆಯ ವಿರುದ್ಧ ನಡೆಯುತ್ತಿದ್ದ ಜನಹೋರಾಟವನ್ನು ವರದಿ ಮಾಡಲು ಗ್ಯಾರಿ ತೆರಳಿದ್ದರು.

ಮೇ ೮ ರಂದು ಅರುಣಾಚಲ್ ಪ್ರದೇಶದ ಇಟಾನಗರದಲ್ಲಿ ಅರುಣಾಚಲ ಪ್ರದೇಶ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಲೋಕೋಪಯೋಗಿ ಸಚಿವ ನಾಬುಮ್ ತುಕಿಯ ಬೆಂಬಲಿಗರು ಸ್ಥಳೀಯ ಪಿಟಿಐ ಕಛೇರಿ ಹಾಗೂ ಅರುಣಾಚಲ್ ಪ್ರಂಟ್ ಪತ್ರಿಕಾ ಕಛೇರಿಗಳನ್ನೂ ಒಳಗೊಂಡಂತೆ ಹಲವಾರು ಮಾಧ್ಯಮ ಕಛೇರಿಗಳಿಗೆ ನುಗ್ಗಿ ದಾಂಧಲೆ ನಡೆಸಿದರು. ತಮ್ಮ ನಾಯಕನ ಬಗ್ಗೆ ಪ್ರಕಟವಾಗಿದ್ದ ವರದಿಯೇ ಅದಕ್ಕೆ ಕಾರಣವಾಗಿತ್ತು.

ಮೇ ೧೯ರಂದು ಮಿಡ್ ಡೇಯ ವರದಿಗಾರ ತಾರಾಕಾಂತ್ ದ್ವಿವೇದಿ (ಪರಿಚಿತ ಹೆಸರು - ಅಕೇಲಾ)ಯವರನ್ನು ಅಫಿಷಿಯಲ್ ಸೀಕ್ರೆಟ್ಸ್ ಕಾಯ್ದೆಯ ಅಡಿಯಲ್ಲಿ ಮಹಾರಾಷ್ಟ್ರ ಸರ್ಕಾರದ ರೈಲ್ವೇ ಪೋಲೀಸರು ಒಂದು ವರ್ಷದ ಹಿಂದೆ ಪ್ರಕಟವಾಗಿದ್ದ ಲೇಖನವೊಂದರ ನೆಪವೊಡ್ಡಿ ಬಂಧಿಸಿದ್ದರು. ಸೆಪ್ಟೆಂಬರ್ ೨೫ರ ಉಗ್ರರ ದಾಳಿಯ ದಿನ ರೈಲ್ವೆ ಠಾಣೆಯಲ್ಲಿದ್ದ ಶಸ್ತ್ರಾಸ್ತ್ರಗಳ ಕಳಪೆಯಾಗಿದ್ದವು ಎಂದು ಆ ವರದಿಯಲ್ಲಿ ತಿಳಿಸಲಾಗಿತ್ತು. ಈ ತಾರಾಕಾಂತ್‌ರನ್ನು ಬಂಧನದಿಂದ ಬಿಡುಗಡೆಗೊಳಿಸಲು ಜ್ಯೋತಿರ್ಮಯ್ ಡೇ ಬಹಳಷ್ಟು ಪ್ರಯಾಸ ಪಟ್ಟಿದ್ದರು.

ಮೇ ೨೧ರಂದು ಕೇರಳದ ಮಾತೃಭೂಮಿ ಪತ್ರಿಕೆಯ ವರದಿಗಾರ ವಿ.ಬಿ.ಉನ್ನಿಧನ್ ಅವರ ಮೇಲೆ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಲಾಗಿತ್ತು.

ವ್ಯವಸ್ಥೆಯ ನಾಲ್ಕನೆಯ ಸ್ಥಂಭ (ಫೋರ್ತ್ ಎಸ್ಟೇಟ್) ಎಂದೇ ಕರೆಯಲ್ಪಡುವ ಪತ್ರಿಕಾ ರಂಗದಲ್ಲಿ  ಜ್ಯೋತಿರ್ಮಯ್‌ರಂತವರು ವೃತಿಪರತೆ, ನಿಷ್ಠುರತೆ, ಪ್ರಾಮಾಣಿಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿ ವ್ಯವಸ್ಥೆಯನ್ನು ಸಹ್ಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಅದೇ ವ್ಯವಸ್ಥೆ ಅಂತಹವರ ಬಲಿಯನ್ನೇ ಸದಾ ಕೇಳುತ್ತಿರುತ್ತದೆ. ಎಂಥಹ ವಿಪರ‍್ಯಾಸ!

Sunday, June 12, 2011

ಕನ್ನಡಿಗರೇಕೆ ತಮ್ಮದಲ್ಲದ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕು?

Dear Sir, 
I have committed big mistake by putting loose comments on Facebook. I never meant any disrespect to language or people but unknowingly I have hurt peoples emotions and feelings. 
I am speaking from the core of my heart that I do not have any disregard towards Karnataka and its heritage i.e. language, people etc. I truly respect Kannadigas and also have so many good friends in Bangalore. 
I know I have committed a huge mistake and I am apologizing from the bottom of my heart. I am ready to do anything which is necessary to show my respect to the people and language of Karnataka. I cannot even express how much I am regretting after making this mistake. I would go myself and learn Kannada in next one year to show how much I respect the people and language. Please...Please...Please forgive me.  
 Thanks,
Chugh Robin


ಕನ್ನಡ ಕಲಿಕೆಯ ಪ್ರಸ್ತಾಪಕ್ಕೆ ಫಕ್ ಆಫ್ ಎಂದು ತಮ್ಮ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದ ಸಾಫ್ಟ್‌ವೇರ್ ಇಂಜಿನಿಯರ್ ರಾಬಿನ್ ಚುಗ್ ಸಂಪಾದಕೀಯಕ್ಕೆ ಕಳುಹಿಸಿರುವ ಇ-ಮೇಲ್ ಇದು. ಈಗಾಗಲೇ ರಾಬಿನ್ ಚುಗ್ ತನ್ನೊಂದಿಗೆ ಮಾತನಾಡಿದವರ ಬಳಿಯೂ ತನ್ನ ಅವಹೇಳನಕಾರಿ ನಿಲುವು-ಭಾಷೆಗೆ ಕ್ಷಮೆ ಯಾಚಿಸಿದ್ದಾನೆ. ತನ್ನ ಫೇಸ್‌ಬುಕ್ ನಲ್ಲೂ ಸಹ ಇಂಥದ್ದೇ ಸಾಲುಗಳನ್ನು ಬರೆದಿದ್ದಾನೆ. ಇಷ್ಟಾದ ಮೇಲೂ ವಿಷಯವನ್ನು ಬೆಳೆಸುವುದರಲ್ಲಿ ಯಾವ ಅರ್ಥವೂ ಇಲ್ಲ. ಇದು ನಮ್ಮ ಗೆಳೆಯರನೇಕರ ಅಭಿಪ್ರಾಯ. ನಮ್ಮ ನಿಲುವು ಸಹ ಅದೇ ಆಗಿದೆ.

ರಾಬಿನ್ ಚುಗ್ ಕರ್ನಾಟಕದಲ್ಲೇ ಇರಲಿ, ಇಲ್ಲೇ ತಮ್ಮ ಕೆಲಸ ಮಾಡಿಕೊಂಡು ಇರಲಿ. ಆತನೇ ಹೇಳಿಕೊಂಡಂತೆ ವರ್ಷದೊಳಗೆ ಕನ್ನಡ ಕಲಿಯಲಿ. ಇಲ್ಲಿನ ಜನರೊಂದಿಗೆ ಬೆರೆಯಲಿ. ಇದು ನಮ್ಮ ಆಶಯ.

ಆದರೆ ಬಹುಮುಖ್ಯ ಪ್ರಶ್ನೆ ಹಾಗೇ ಉಳಿದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರಭಾಷಿಕರಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಿರುವ ವರದಿಯ ಕುರಿತು ಹಲವರು ಪ್ರಶ್ನಿಸುತ್ತಿದ್ದಾರೆ. ಇವರ ಪೈಕಿ ಕನ್ನಡಿಗರೂ ಇದ್ದಾರೆ. ಮೊದಲ ಲೇಖನದಲ್ಲೇ ನಾವು ಭಾಷೆಯನ್ನು ಯಾರ ಮೇಲೂ ಹೇರುವುದು ಸರಿಯಲ್ಲ, ಕಡ್ಡಾಯಗೊಳಿಸುವುದರಿಂದ ಎಲ್ಲ ಸಮಸ್ಯೆಗಳೂ ಬಗೆಹರಿಯುವುದಿಲ್ಲ ಎಂದು ಬರೆದಿದ್ದೆವು.

ಆದರೆ, ಕನ್ನಡ ನಾಡಿನಲ್ಲಿ ಹಿಂದಿ ಕಡ್ಡಾಯವಾಗಿದ್ದು ಹೇಗೆ ಮತ್ತು ಯಾಕೆ ಎಂಬ ಪ್ರಶ್ನೆಗೆ ಯಾರಾದರೂ ದಯವಿಟ್ಟು ಉತ್ತರ ಕೊಡಿ. ಹಿಂದಿಯೂ ಸಹ ಕನ್ನಡದ ಹಾಗೆ ಈ ದೇಶದ ಭಾಷೆಗಳಲ್ಲಿ ಒಂದು. ಅದರ ಹೆಚ್ಚುಗಾರಿಕೆ ಏನೆಂದರೆ ಮೂರ‍್ನಾಲ್ಕು ರಾಜ್ಯಗಳಲ್ಲಿ ಆ ಭಾಷೆ ಅಥವಾ ಅದರ ಉಪಭಾಷೆಗಳು ಚಾಲ್ತಿಯಲ್ಲಿವೆ. ಕರ್ನಾಟಕಕ್ಕೆ ಮತ್ತು ದಕ್ಷಿಣ ಭಾರತಕ್ಕೆ ಈ ಭಾಷೆಯ ಜತೆ ಯಾವ ಸಂಬಂಧವೂ ಇರಲಿಲ್ಲ. ಇಂಥ ಹಿಂದಿಯನ್ನು ಇಲ್ಲಿ ಕಡ್ಡಾಯಗೊಳಿಸಿದ್ದು ಯಾಕೆ? ನಮ್ಮ ಮಕ್ಕಳೆಲ್ಲ ಹಿಂದಿ ಕಲಿಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಯಾಕೆ?

ಕನ್ನಡ ಕಲಿಕೆ ಕಡ್ಡಾಯಗೊಳಿಸುವುದು ಸಂವಿಧಾನ ವಿರೋಧಿ ಎಂದು ನಮ್ಮ ಗೆಳೆಯರೊಬ್ಬರು ಹೇಳಿದ್ದಾರೆ. ಹಾಗಿದ್ದರೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಿಂದಿ ಕಲಿಕೆ ಕರ್ನಾಟಕದಲ್ಲಿ ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಜಾರಿಯಾಗಿದ್ದು ಸಂವಿಧಾನಪರವಾದ ನಿರ್ಣಯವೇ? ಯಾವುದೇ ಕೇಂದ್ರ ಸರ್ಕಾರ ಬಂದರೂ ಕೇಂದ್ರ ಸರ್ಕಾರದ ಇಲಾಖೆಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಹಿಂದಿಯನ್ನು ಬಲವಂತವಾಗಿ ತುರುಕಲಾಗುತ್ತದೆ. ಇದು ಸಂವಿಧಾನ ಬಾಹಿರವಲ್ಲವೆ? ಹಿಂದಿಯೇತರ ಸಿಬ್ಬಂದಿಗೆ ಬ್ಯಾಂಕುಗಳಲ್ಲಿ, ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕಡ್ಡಾಯವಾಗಿ ಹಿಂದಿಯನ್ನು ಕಲಿಸಲಾಗುತ್ತಿಲ್ಲವೇ?

ಹಾಗೆ ನೋಡಿದರೆ, ಕರ್ನಾಟಕದಲ್ಲಿ ಕನ್ನಡೇತರರು ಕನ್ನಡ ಕಲಿಯಲಿ ಎಂದು ಅಪೇಕ್ಷಿಸುವುದು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದಕ್ಕಿಂತ ಹೆಚ್ಚು ಯೋಗ್ಯವಾದ ಕ್ರಮವಲ್ಲವೇ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೀಡಿರುವುದು ವರದಿಯಷ್ಟೆ. ಇಂಥ ವರದಿಗಳನ್ನು ಚಂಪಾ, ಬರಗೂರು ಮತ್ತಿನ್ನಿತರರು ನೀಡಿದ್ದರು. ಯಾರ ಶಿಫಾರಸುಗಳೂ ಇನ್ನೂ ಜಾರಿಯಾಗಿಲ್ಲ. ಚಂದ್ರು ಅವರ ಶಿಫಾರಸುಗಳು ಜಾರಿಯಾದೀತೆಂಬ ನಿರೀಕ್ಷೆಗಳೂ ಇಲ್ಲ.

ಆದರೆ ಇಂಥ ಪ್ರಸ್ತಾಪಗಳು ಬಂದಾಗ ಇಂಗ್ಲಿಷ್ ಮೀಡಿಯಾ ಮೈಕೊಡವಿ ಎದ್ದು ನಿಲ್ಲುವುದು, ವಲಸೆ ಬಂದವರು ಬಾಯಿಗೆ ಬಂದಂತೆ ಮಾತನಾಡುವುದು ನಡೆದೇ ಇದೆ.  ಹಿಂದೆ ಇಂಥದ್ದೇ ಒಂದು ಗುಂಪು ಬೆಂಗಳೂರು ಬಿಟ್ಟು ಹೋಗುತ್ತಿದ್ದೇವೆ (ಐ ಆಮ್ ಲೀವಿಂಗ್ ಬ್ಯಾಂಗಲೋರ್) ಎಂಬ ಅಭಿಯಾನ ಆರಂಭಿಸಿತ್ತು.

ಭಾಷೆಯ ಆಧಾರದಲ್ಲಿಯೇ ರಾಜ್ಯಗಳ ವಿಂಗಡಣೆಯಾಗಿದೆ. ಕನ್ನಡಿಗರು ಇರುವ ಪ್ರದೇಶವೇ ಕರ್ನಾಟಕವಾಗಿದೆ. ಭಾರತ ಒಕ್ಕೂಟದ ಭಾಗವಾಗಿ ಕರ್ನಾಟಕ ತನ್ನ ಭಾಷೆ-ಉಪಭಾಷೆಗಳನ್ನು ಉಳಿಸಿಕೊಳ್ಳುವ ಹಕ್ಕು ಹೊಂದಿದೆ. ಅದನ್ನು ಎಲ್ಲರೂ ಅರಿತುಕೊಳ್ಳುವುದು ಒಳ್ಳೆಯದು.

Saturday, June 11, 2011

ಕನ್ನಡ ಕಲಿಕೆಯೂ, ಬೆಂಗಳೂರು ಮಿರರ್ ಎಂಬ ಪತ್ರಿಕೆಯೂ....


ಸೋಷಿಯಲ್ ನೆಟ್ ವರ್ಕ್ ಸೈಟುಗಳಲ್ಲಿ ಇರುವ ಅತಿಯಾದ ಸ್ವಾತಂತ್ರ್ಯವನ್ನು ಸ್ವೇಚ್ಛೆಯನ್ನಾಗಿ ಬಳಸಿಕೊಳ್ಳುವವರ ಸಂಖ್ಯೆಗೇನು ಕೊರತೆಯಿಲ್ಲ. ಕೊಳಕರು ಇಲ್ಲಿ ಸುಲಭವಾಗಿ ಬಯಲಾಗುತ್ತಾರೆ. ಯಾಕೆಂದರೆ ಕೊಳಕನ್ನು ಹಾಗೆ ಮುಚ್ಚಿಟ್ಟುಕೊಳ್ಳುವುದು, ಹತ್ತಿಕ್ಕಿಕೊಳ್ಳುವುದು ಕಷ್ಟದ ಕೆಲಸ. ಬಾಬಾ ರಾಮದೇವರ ಮ್ಯಾಚ್ ಫಿಕ್ಸಿಂಗ್ ಸತ್ಯಾಗ್ರಹದ ಕುರಿತು ಬರೆದ ನಂತರ ನಮ್ಮ ಫೇಸ್‌ಬುಕ್‌ನಲ್ಲೂ ಇಂಥವರು ಕೊಳಕರು ತಮ್ಮ ಹುಳುಕುಗಳನ್ನೆಲ್ಲ ಪ್ರದರ್ಶಿಸಿದರು. ಅನಿವಾರ್ಯವಾಗಿ ಕನಿಷ್ಠ ೧೦ ಜನರನ್ನು ಬ್ಲಾಕ್ ಮಾಡಿ ದೂರವಿಡಬೇಕಾಯಿತು.

ಯಾಕೆ ಈ ಪ್ರಸ್ತಾಪ ಮಾಡಬೇಕಾಯಿತು ಎಂದರೆ, ಮೂಲತಃ ಚಂಡಿಗಢದವನಾಗಿದ್ದು ಸದ್ಯ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರಾಬಿನ್ ಚುಗ್ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಕನ್ನಡ ಕಲಿಕೆ ಕಡ್ಡಾಯ ಪ್ರಸ್ತಾಪಕ್ಕೆ ಫಕ್ ಆಫ್ ಎಂದು ಬರೆದುಕೊಂಡು ಫಜೀತಿಗೆ ಸಿಲುಕಿದ್ದಾನೆ.

ಇದನ್ನು ಶುರು ಮಾಡಿದವರು ಬೆಂಗಳೂರು ಮಿರರ್ ಎಂಬ ಪತ್ರಿಕೆಯೋರು. ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಪರಭಾಷಿಗರು ಕಡ್ಡಾಯವಾಗಿ ಕನ್ನಡ ಕಲಿತುಕೊಳ್ಳುವಂಥ ಕಾನೂನೊಂದನ್ನು ರೂಪಿಸಬೇಕು ಎಂಬ ಅಂಶವೂ ವರದಿಯಲ್ಲಿತ್ತು. ಈ ವರದಿಯನ್ನು ಕುರಿತಾಗಿ ಮಿರರ್ ವರದಿಯೊಂದನ್ನು ಪ್ರಕಟಿಸಿತು.

ಇಂಗ್ಲಿಷ್ ಪತ್ರಿಕೆಗಳಿಗೆ ಪರಭಾಷಾ ಓದುಗರನ್ನು ಓಲೈಸುವ ವಿಚಿತ್ರ ಖಾಯಿಲೆ ಮೊದಲಿನಿಂದಲೂ ಇದೆ. ಪರಭಾಷಿಗರನ್ನು ಓಲೈಸಲು ಕನ್ನಡಿಗರನ್ನು ಹಣಿಯುವ ಅವಕಾಶವನ್ನು ಈ ಪತ್ರಿಕೆಗಳು ಯಾವತ್ತೂ ಕಳೆದುಕೊಂಡೇ ಇಲ್ಲ. ಟೈಮ್ಸ್ ಆಫ್ ಇಂಡಿಯಾ ಮೊದಲಿನಿಂದಲೂ ಇದನ್ನು ಮಾಡುತ್ತಲೇ ಬಂದಿದೆ. ಹಿರಿಯಣ್ಣನ ಚಾಳಿ ಮನೆ ಮಕ್ಕಳಿಗೆಲ್ಲ ಬಂದಿದೆ. ಮಿರರ್ ಕೂಡ ಅದನ್ನೇ ಮಾಡಲು ಹೋಗಿದೆ.

ವರದಿಯ ಇತರ ಅಂಶಗಳಿಗಿಂತ ಮಿರರ್ ಹೆಚ್ಚು ಒತ್ತು ನೀಡಿರುವುದು ಈ ಕನ್ನಡ ಕಲಿಕೆಯ ಪ್ರಸ್ತಾಪಕ್ಕೆ. ಈ ಮೂಲಕ ಬೆಂಗಳೂರಿನಲ್ಲಿರುವ ಪರಭಾಷಿಗರನ್ನು ಪ್ರಚೋದಿಸುವ ಉದ್ದೇಶ ಮಿರರ್‌ಗೆ ಇತ್ತಾ, ಗೊತ್ತಿಲ್ಲ. ಆದರೆ ಬೆಂಗಳೂರು ಮಿರರ್‌ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟವಾಗಿರುವ ಕಮೆಂಟುಗಳನ್ನು ನೋಡಿದರೆ ಈ ಉದ್ದೇಶ ಇದ್ದಿರಬೇಕು ಎಂಬುದು ಸ್ಪಷ್ಟವಾಗಿದೆ. ಕೆಲವು ಕನ್ನಡ ಪರ ಅಂತರ್ಜಾಲಿಗರ ಪ್ರಕಾರ ಕನ್ನಡಿಗರನ್ನು ನಿಂದಿಸುವ ಕಮೆಂಟುಗಳನ್ನು ಹಾಗೆ ಬಿಟ್ಟಿರುವ ಪತ್ರಿಕೆ, ಕನ್ನಡಿಗರ ಪ್ರತಿಕ್ರಿಯೆಗಳಿಗೆ ಕತ್ತರಿ ಆಡಿಸಿದೆ.

ಅಲ್ಲಿ ಕಮೆಂಟು ಮಾಡಿರುವವರು, ಮಿರರ್‌ನಂಥ ಪತ್ರಿಕೆಗಳ ಪತ್ರಕರ್ತರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಹೊರರಾಜ್ಯಗಳಿಂದ ಇಲ್ಲಿ ಬಂದು ನೆಲೆ ನಿಂತವರು ಕನ್ನಡ ಭಾಷೆ ಕಲಿತು ಇಲ್ಲಿಯವರೊಂದಿಗೆ ಬೆರೆಯಬೇಕು ಎಂದು ಅಪೇಕ್ಷಿಸುವುದು ಅಪರಾಧವೂ ಅಲ್ಲ, ಅನೈತಿಕವೂ ಅಲ್ಲ. ಭಾರತ ಒಂದು ಗಣರಾಜ್ಯ ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. ಯಾರು ಬೇಕಾದರೂ ಎಲ್ಲಾದರೂ ಬದುಕಬಹುದು ಎಂಬುದು ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯ. ಯಾರು, ಎಲ್ಲಿ, ಹೇಗೆ ಬೇಕಾದರೂ ಬದುಕಬಹುದು ಎಂದು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿಲ್ಲ.

ಕನ್ನಡಿಗರಿಗೆ ಅಗತ್ಯವಿಲ್ಲದ ಹಿಂದಿ ಭಾಷೆಯನ್ನು ಕನ್ನಡಿಗರು ಕಡ್ಡಾಯವಾಗಿ ಕಲಿಯುತ್ತಿದ್ದಾರೆ. ಯಾವುದೋ ರಾಜ್ಯದ ಒಂದು ಭಾಷೆಯನ್ನು ನಾವು ತ್ರಿಭಾಷಾ ಸೂತ್ರ ಒಪ್ಪಿಕೊಂಡ ಒಂದೇ ಕಾರಣಕ್ಕೆ ಕಡ್ಡಾಯವಾಗಿ ಕಲಿಯುತ್ತಿರುವಾಗ, ಹೊರ ರಾಜ್ಯಗಳಿಂದ ಬಂದವರು ಕನ್ನಡ ಕಲಿಯಲಿ ಎಂದರೆ ಯಾಕೆ ಇಂಗ್ಲಿಷ್ ಪತ್ರಿಕೆಗಳು ಎಗರಾಡುತ್ತವೆ? ಕನ್ನಡಿಗರ ಮೇಲೆ ನಡೆಯುತ್ತಿರುವ ಹಿಂದಿ ಹೇರಿಕೆಯನ್ನು ಇದೇ ಇಂಗ್ಲಿಷ್ ಪತ್ರಿಕೆಗಳು ಯಾಕೆ ಪ್ರಶ್ನಿಸುವುದಿಲ್ಲ? ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಏನನ್ನೇ ಮಾಡಿದರೂ ಇಂಗ್ಲಿಷ್ ಪತ್ರಿಕೆಗಳಿಗೆ ಅದು ಅಪ್ರಿಯವಾಗಿ ಕಾಣುತ್ತದೆ. ಯಾಕೆ ಇಂಥ ನಿಲುವು? ಏನಿದರ ಮರ್ಮ.

ಕನ್ನಡಿಗರು ಉದಾರವಾಗಿ ಹೊರಗಿನಿಂದ ಬಂದವರ ಭಾಷೆಗಳನ್ನು ಕಲಿಯುತ್ತಿರುವಾಗ, ಹೊರಗಿನಿಂದ ಬಂದವರು ಇಲ್ಲಿನ ಭಾಷೆಯನ್ನು ಕಲಿಯಬಾರದೇ? ತಮಿಳುನಾಡಿನಂಥ ರಾಜ್ಯಗಳಲ್ಲೂ ಉತ್ತರ ಭಾರತೀಯರು ತಮಿಳು ಕಲಿಯದೆ ಬದುಕಬಲ್ಲರೆ? ನಿಜ, ಭಾಷೆಯನ್ನು ಯಾರ ಮೇಲೂ ಹೇರಲಾಗದು. ಕಡ್ಡಾಯಗೊಳಿಸುವುದರಿಂದ ಸಮಸ್ಯೆ ಬಗೆ ಹರಿದೀತೆಂದೂ ಸಹ ಹೇಳುವಂತಿಲ್ಲ. ಆದರೆ ಈಗ ಇಂಗ್ಲಿಷ್ ಮೀಡಿಯಾ ಎಬ್ಬಿಸಿರುವ ಹುಯಿಲು ಪರಭಾಷಿಗರು ಕನ್ನಡ ಕಲಿಯಬೇಕೆಂದು ಹೇಳಲೇಬಾರದೆಂದು ನಿರ್ದೇಶಿಸುವಂತಿದೆ.

ಇಂಥ ಸಂದರ್ಭದಲ್ಲಿ ರಾಬಿನ್ ಚುಗ್ ತರಹದವರು ಎದ್ದು ನಿಲ್ಲುತ್ತಾರೆ. ಹಿಂದೆ ಸಾಸ್ಕೆನ್ ಎಂಬ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕನ್ನಡವನ್ನು ಗೇಲಿ ಮಾಡುವ ನಕಲಿ ರಾಷ್ಟ್ರಗೀತೆ ಬರೆದು, ಅದನ್ನು ಕನ್ನಡಿಗರಿಂದ ಹಾಡಿಸಿ ವಿಕೃತ ಖುಷಿ ಅನುಭವಿಸುತ್ತಿದ್ದ ವಿದೇಶೀಯನೊಬ್ಬ ಕನ್ನಡಿಗರ ಪ್ರತಿಭಟನೆಯಿಂದ ವಾಪಾಸು ಅವನ ದೇಶಕ್ಕೆ ಹೋಗಬೇಕಾಯಿತು. ಕನ್ನಡಿಗರ ಹಾಗು ದಕ್ಷಿಣ ಭಾರತೀಯರ ಆಚಾರ-ವಿಚಾರಗಳ ಕುರಿತು ಗೇಲಿ ಮಾಡಿದ್ದ ಇನ್ನೊಬ್ಬ ಟೆಕಿಯೊಬ್ಬ ತನ್ನ ರೇಸಿಸ್ಟ್ ನಿಲುವುಗಳಿಗಾಗಿ ಹೊರಹೋಗಬೇಕಾಯಿತು.

ಈಗ ರಾಬಿನ್ ಚುಗ್ ಸರದಿ.

Wednesday, June 8, 2011

`ನೆರಳು ಕೊಟ್ಟು ಹೋದ ಮನುಷ್ಯ' ಲಿಂಗದೇವರು ಹಳೆಮನೆ


ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆ ಇನ್ನಿಲ್ಲ. ಸಂಡೆ ಇಂಡಿಯನ್ ಪತ್ರಿಕೆಗಾಗಿ ಅವರನ್ನು ಹಿಂದೆ ಸಂದರ್ಶಿಸಿದ್ದ ಪತ್ರಕರ್ತ ಹರ್ಷಕುಮಾರ್ ಕುಗ್ವೆ ತಮ್ಮ ನೆನಪುಗಳ ಜತೆಗೆ, ಸಂದರ್ಶನದ ಪೂರ್ಣಪಾಠವನ್ನು ಒದಗಿಸಿದ್ದಾರೆ. ಲಿಂಗದೇವರು ನಮ್ಮ ನೆನಪಿನಲ್ಲಿ ಸದಾ ಉಳಿಯುತ್ತಾರೆ- ಸಂಪಾದಕೀಯ

ಲಿಂಗದೇವರು ಹಳೆಮನೆ ಇನ್ನಿಲ್ಲ ಎಂದು ಮೈಸೂರಿನ ಪ್ರಜಾವಾಣಿಯಲ್ಲಿರುವ ಗೆಳೆಯ ನಾಗರಾಜ ಬುರಡಿಕಟ್ಟಿ ಮುಂಜಾನೆ ೪ ಘಂಟೆಗೆ ಕಳಿಸಿದ್ದ ಮೆಸೇಜನ್ನು ಐದು ಗಂಟೆಗೆ ಎದ್ದು ನೋಡಿದ ನನಗೆ ನಂಬಿಕೆಯೇ ಬರಲಿಲ್ಲ. ಮತ್ತೆ ಕೂಡಲೇ ಕಾಲ್ ಮಾಡಿ ಕೇಳೀದೆ.

ನಾಗು.., ಅದು ನಿಜವೇನೋ?.

ಹೌದು ಮಾರಾಯಾ, ರಾತ್ರಿ ಹನ್ನೆರಡೂ ಮುಕ್ಕಾಲಿನ ಸುಮಾರಿಗೆ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡು ಬಿಟ್ಟರು.....

ಆಘಾತವೇ ಆಯಿತು. ಇತರೆ ಗೆಳೆಯರಿಗೆ ಮೆಸೇಜ್ ಫಾರ್ವರ್ಡ್ ಮಾಡುತ್ತಾ, ಈ ಇದುವರಗೆ ನನಗೆ ಪ್ರೀತಿಪಾತ್ರರಾದವರು ಈ ಕ್ರೂರಹೃದಯಾಘಾತದ ದಾಳಿಗೆ ಈಡಾದವರ ಲೆಕ್ಕ ಹಾಕತೊಗಿದೆ. ದೊಡ್ಡಪ್ಪ- ಹನುಮಂತಪ್ಪ, ಮಾವ- ನಾರಾಯಣಪ್ಪ, ಗೆಳೆಯ ಶರತ್, ಪ್ರೀತಿಯ ನೋಸಂತಿ ಮೇಸ್ಟ್ರು, ಅಚ್ಚುಮೆಚ್ಚಿನ ಗೆಳೆಯ, ರಂಗಕರ್ಮಿ, ಹಾಡುಗಾರ ಗೋಪಾಲಣ್ಣ, ಕಿರಂ ಮೇಸ್ಟ್ರು............ ಈಗ ಮತ್ತೆ.........

ಶಿವಮೊಗ್ಗದಲ್ಲಿ ರಂಗಾಯಣದ ಘಟಕವನ್ನು ಆರಂಭಿಸುವುದಾಗಿ ಮೊನ್ನೆಯಷ್ಟೇ ಲಿಂಗದೇವರು ಹಳೆಮನೆಯವರು ನಡೆಸಿದ್ದ ಪತ್ರಿಕಾ ಗೋಷ್ಠಿಯನ್ನು ನೋಡಿ ಸಂತಸವಾಗಿತ್ತು. ಒಂದು ಕರೆ ಮಾಡಿ ಅವರಿಗೊಂದು ಥ್ಯಾಂಕ್ಸ್ ಹೇಳೋಣ ಎಂದು ಯೋಚಿಸುತ್ತಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಇರುವ ಹೆಗ್ಗೋಡಿನ ನೀನಾಸಂ, ತುಮರಿಯ ಕಿನ್ನರ ಮೇಳ ಗಳ ಜೊತೆಗೆ ಅಲ್ಲೊಂದು ರಂಗಾಯಣವೂ ಆರಂಭವಾದರೆ ಎಷ್ಟು ಚೆನ್ನ ಎನ್ನಿಸಿತ್ತು. ಹವ್ಯಾಸಿ ನಾಟಕದ ಕೆಲವಾರು ಗೆಳೆಯರೂ ಹುರುಪಿನಲ್ಲಿದ್ದರು.

ಲಿಂಗದೇವರು ಅನುವಾದಿಸಿದ್ದ ಜೀನ್ ಪಾಲ್ ಸಾರ್ತರ್‌ನ ನೆರಳಿಲ್ಲದ ಮನುಷ್ಯರು ನಾಟಕವನ್ನು ರಂಗಾಯಣದ ಭಾರತೀಯ ರಂಗಶಾಲೆಯ ವಿದ್ಯಾರ್ಥಿಗಳು ನೆನ್ನೆಯಷ್ಟೇ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಅಭಿನಯಿಸಿದ್ದರು. ನೆನ್ನೆ ಮಧ್ಯಾಹ್ನದವರೆಗೂ ಶಿವಮೊಗ್ಗದಲ್ಲೇ ಇದ್ದ ಹಳೇಮನೆಯವರು ರಾತ್ರಿ ಮೈಸೂರಿನ ಮನೆಗೆ ಬಂದು ಚಿರನಿದ್ರೆಗೆ ಜಾರಿದ್ದಾರೆ.

ಈಗ್ಗೆ ಕೆಲವು ತಿಂಗಳ ಹಿಂದೆ ಅವರನ್ನು ಸಂದರ್ಶಿಸಲು ಮೈಸೂರಿಗೆ ಹೋಗಿದ್ದಾಗಲಷ್ಟೇ ಅವರು ನನಗೆ ವೈಯುಕ್ತಿಕವಾಗಿ ಪರಿಚಯವಾದದ್ದು. ಅತ್ಯಂತ ಪ್ರೀತಿಪೂರ್ವಕವಾಗಿ ಮಾತಾಡಿ ಕಳುಹಿಸಿದ್ದರು. ಆ ದಿನ ಅವರು ಅದೆಷ್ಟು ಬ್ಯುಸಿಯಾಗಿದ್ದರು ಎಂದರೆ ನನ್ನೊಂದಿಗೆ ಅವರು ಕುಳಿತು ಒಂದೈದು ನಿಮಿಷ ಮಾತಾಡುವುದೂ ಸಾಧ್ಯವಿಲ್ಲವೇನೋ ಎಂದುಕೊಂಡಿದ್ದೆ. ಆದರೆ ಕೊನೆಗೆ ರಂಗಾಯಣದ ಅವರ ಛೇಂಬರ್‌ನಲ್ಲಿ, ಅವರೆದುರು ಕುಳಿತು ನಾನು ಕೇಳಿದ ಪ್ರತಿಯೊಂದು ಪ್ರಶ್ನೆಗೂ ತುಂಬಾ ತಾಳ್ಮೆಯಿಂದಾ ಗಂಟೆಗೂ ಹೆಚ್ಚು ಕಾಲ ಉತ್ತರಿಸಿದ್ದರು. ಈ ಮಾತುಕತೆಯನ್ನು ಅವರ ಕುರ್ಚಿಯ ಹಿಂದುಗಡೆಯ ಗೋಡಯ ಮೇಲಿದ್ದ ಬಿ.ವಿ.ಕಾರಂತರು ದಿಟ್ಟಿಸಿ ನೋಡುತ್ತಿದ್ದರು. ಮತ್ತೆ ಸಂಜೆ ರ ಗಂಟೆಗೆ ಅವರಿಗೆ ಕಾರ್ಯಕ್ರಮ ನಿಗದಿಯಾಗಿತ್ತಾದ್ದರಿಂದ ಇನ್ನೂ ಹೆಚ್ಚು ಹೊತ್ತು ಮಾತನಾಡಲಾಗಲಿಲ್ಲ.


ಅವರ ಸಂದರ್ಶನ ದ ಸಂಡೇ ಇಂಡಿಯನ್ನಲ್ಲಿ ಪ್ರಕಟವಾದ ಮೇಲೆ ಅವರಾಗಿಯೇ ಕಾಲ್ ಮಾಡಿ ‘ಥ್ಯಾಂಕ್ಸ್ ಹರ್ಷ. ಎಲ್ಲಾ ಸರಿಯಾಗಿಯೇ ಬಂದಿದೆ ಎಂದಿದ್ದರು.

ವಿವಾದದ ಗೂಡಾಗಿದ್ದ ರಂಗಾಯಣವನ್ನು ಕಳೆದ ಒಂದೂವರೆ ವರ್ಷದಲ್ಲಿ ಅವರು ಸಂಘಟಿಸಿದ ಬಗೆ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ತರಹೇವಾರಿಯ ರಂಗಯೋಜನೆಗಳನ್ನು ಸಿದ್ಧಪಡಿಸಿದರು. ಇತ್ತೀಚೆಗೆ ವೃತ್ತಿರಂಗಭೂಮಿಯ ಸದಾರಮೆಯನ್ನು ಹವ್ಯಾಸಿ ರೆಪರ್ಟಿರಿ ರಂಗಾಯಣದಲ್ಲಿ ಪ್ರದರ್ಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅವರು ನಡೆಸಿದ ಕಾಲೇಜು ರೋಗೋತ್ಸವ ಅನೇಕ ತರುಣ ರಂಗಕರ್ಮಿಗಳ ಪಾಲಿಗೆ ಆಶಾದಾಯಕವಾಗಿ ಪರಿಣಮಿಸಿತ್ತು. ನಾಲ್ಕು ವಿಶ್ವವಿದ್ಯಾಲಯಗಳ ೩೦ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಏಕಕಾಲದಲ್ಲಿ ರಂಗೋತ್ಸವ ನಡೆಸಿದರು. ಈ ಹಿಂದೆ ಭಾರತೀಯ ಭಾಷಾ ಸಂಸ್ಥಾನದಲ್ಲಿದ್ದಾಗಲೂ ಅವರ ಸೇವೆ ಸ್ಮರಣೀಯ. ನಾಡಿನ ಹಿರಿಮೆಯನ್ನು ಸಾರುವ ಸುಮಾರು ನೂರಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು ಲಿಂಗದೇವರು ಹಳೆಮನೆಯವರಿದ್ದಾಗಲೇ. ಹಾಗೇನೇ ಕನ್ನಡ ಕಂಪ್ಯೂಟರ್ ಭಾಷೆಯನ್ನು ಅಭಿವೃದ್ಧಿಪಡಿಸಲು ತೇಜಸ್ವಿಯವರೊಂದಿಗೆ ಸೇರಿ ಅವರು ಆರಂಭಿಸಿದ್ದ ಪ್ರಯತ್ನವೂ ಕೂಡಾ ಮನನೀಯ.

ಲಿಂಗದೇವರನ್ನು ರಂಗಾಯಣ ನಿರ್ದೇಶಕರಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಅವರು ನಕ್ಸಲ್ ಬೆಂಬಲಿಗ ಎಂದು ಯಾರೋ ಕಾಮಾಲೆ ಕಣ್ಣಿನವರು ಹುಯಿಲೆಬ್ಬಿಸಿದ್ದುಂಟು. ಆದರೆ ಲಿಂಗದೇವರು ಹಳೆಮನೆಯವರ ಬರೆಹ, ವಿಚಾರ, ಮಾತು, ಕೃತಿಗಳನ್ನೆಲ್ಲಾ ನೋಡಿದಾಗ ಅವರು ನಮ್ಮ ನಾಡು ನಮ್ಮ ಕಾಲದಲ್ಲಿ ಕಂಡ ಒಬ್ಬ ಮಾನವತಾವಾದಿ ಹಾಗೂ ಮಾನವೀಯ ಸಂವೇದನೆಯುಳ್ಳ ಸಹೃದಯಿ ಎಂಬುದಷ್ಟೇ ಅರಿವಾಗುತ್ತದೆ.

ಮನುಷ್ಯನ ದೇಹ ನಶಿಸಿದ ಮೇಲೆ ಮುಖ್ಯವಾಗಬೇಕಾದದ್ದು ಆತನ ವಿಚಾರಗಳು. ಅವುಗಳೇ ಆ ವ್ಯಕ್ತಿಯನ್ನು ಮತ್ತಷ್ಟು ಕಾಲ ಜೀವಂತವಾಗಿರಿಸುತ್ತವೆ. ಈ ದಿಸೆಯಲ್ಲಿ ಲಿಂಗದೇವರು ಹಳೇಮನೆ ಇನ್ನೂ ನಮ್ಮೊಂದಿಗಿದ್ದಾರೆ.

ದ ಸಂಡೆ ಇಂಡಿಯನ್ ಪತ್ರಿಕೆಗಾಗಿ ಹರ್ಷ ಕುಗ್ವೆ ನಡೆಸಿದ ಸಂದರ್ಶನ

ಒಂದು ಬಗೆಯ ವಿವಾದದ ವಾತಾವರಣದಲ್ಲೇ ತಾವು ರಂಗಾಯಣದ ಸಾರಥ್ಯ ವಹಿಸಿದಿರಿ. ಈಗ ಏನೆನ್ನಿಸಿದೆ?
ಸರ್ಕಾರ ನನ್ನನ್ನು ರಂಗಾಯಣದ ನಿರ್ದೇಶಕ ಎಂದು ಪ್ರಕಟಿಸಿತು. ಆದರೆ ತಕ್ಷಣ ಮಾಡಲಿಲ್ಲ. ೭ ತಿಂಗಳ ತೆಗೆದುಕೊಳ್ತು ಅದಕ್ಕೆ ಅವರದ್ದೇ ಕಾರಣಗಳಿರಬಹುದು. ನನಗಿದ್ದ ಒಂದು ಶಕ್ತಿ ಏನೆಂದರೆ ನಾನು ರಂಗಾಯಣ ಪ್ರಾರಂಭವಾದ ದಿನದಿಂದಲೂ ರಂಗಾಯಣದ ಜೊತೆಯಲ್ಲಿದ್ದವನು. ರಂಗಾಯಣದ ಪ್ರಮುಖ ತೀರ್ಮಾನ ಕೈಗೊಂಡಾಗ ಆಗಾಗಿನ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿದವನು. ಇಲ್ಲಿರುವ ಕಲಾವಿದರೂ ಸಹ ನನಗೆ ಪರಿಚಯವಿದ್ದು ಅವರ ಸಮಸ್ಯೆಗಳ ಪರಿಚಯವೂ ಇತ್ತು. ಹಾಗಾಗಿ ಇದನ್ನು ಸಮರ್ಥವಾಗಿ ನಡೆಸುವ ವಿಶ್ವಾಸ ಇತ್ತು. ಇಲ್ಲಿ ಕಲಾವಿದರ ಸೇವಾವಧಿಗೆ ಸಂಬಧಿಸಿ ಕೆಲ ಸಮಸ್ಯೆಗಳಿವೆ. ಇಲ್ಲಿರುವ ಖಾಯಂ ಕಲಾವಿದರಿಗೆ ಕೊಡಬೇಕಾದ ಆರ್ಥಿಕ ಸೌಲಭ್ಯಗಳನ್ನು ಇನ್ನೂ ನೀಡಿಲ್ಲ ಎನ್ನುವ ಅಸಮಧಾನ ಅವರಿಗಿದೆ. ಕಳೆದ ೯ ತಿಂಗಳಲ್ಲಿ ಕಲಾವಿದರ ವಿಶ್ವಾಸಗಳಿಸಿಕೊಳ್ಳುವಲ್ಲಿ ನಾನು ಸಫಲನಾಗಿದ್ದೇನೆ. ನಾನು ನಿರ್ದೇಶಕನಾದ ಮೇಲೆ ಯಾವುದೇ ವಿವಾದಗಳು ಆಗಿಲ್ಲ.

ತಾವು ಈಗ ರಂಗಾಯಣದಲ್ಲಿ ನಿರ್ದೇಶಕರಾಗಿದ್ದೀರಿ. ಕರ್ನಾಟಕದಲ್ಲಿ ರಂಗಭೂಮಿ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ನಿಮ್ಮ ಅವಗಾಹನೆ?
ನನ್ನ ಅಭಿಪ್ರಾಯದಲ್ಲಿ ಇಂದು ರಂಗಭೂಮಿ ಸಾಕಷ್ಟು ಪ್ರಾಧಾನ್ಯತೆ ಪಡೆದುಕೊಳ್ತಾ ಇದೆ. ಹವ್ಯಾಸಿ ತಂಡಗಳು ಹಾಗೂ ವೃತ್ತಿನಿರತ ತಂಡಗಳು ಹೆಚ್ಚೆಚ್ಚು ಸಕ್ರಿಯರಾಗ್ತಾ ಇದ್ದಾರೆ. ಇತ್ತೀಚೆಗೆ ಪ್ರೇಕ್ಷಕರು ಕೂಡಾ ಹೆಚ್ಚು ನಾಟಕಗಳೆಡೆ ಬರುತ್ತಿದ್ದಾರೆ. ಸಾಣೆಹಳ್ಳಿಯಂತ ಕಡೆ ಮೂರ‍್ನಾಲ್ಕು ಸಾವಿರ ಜನ, ಮಲ್ಲಾಡಿ ಹಳ್ಳಿಯಂತಹ ಕಡೆ ೨-೩ ಸಾವಿರ ಜನ ನಾಟಕ ನೋಡ್ತಾರೆ. ಹೆಗ್ಗೋಡಿನಲ್ಲಿ ಯಾವಾಗಲೂ ನಾಟಕ ಚಟುವಟಿಕೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಒಂದೆಡೆ ಪ್ರತಿದಿನ ರಂಗಶಂಕರ ಭರ್ತಿ ಇರುತ್ತದೆ, ರವೀಂದ್ರ ಕಲಾಕ್ಷೇತ್ರ ಮತ್ತಿತರ ಕಡೆ ಸಹ ಆಗಾಗ ನಾಟಕಗಳು ನಡೀತವೆ. ಪ್ರೇಕ್ಷಕರು ಸಹ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಕುಂದಾಪುರ, ದಾರವಾಡಗಳಲ್ಲಿ ನಾಟಕಗಳು ನಡೆಯುತ್ತವೆ. ಇದರ ಜೊತೆ ರಂಗಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯತ್ತಿವೆ. ರಂಗ ಶಿಕ್ಷಣ, ರಂಗ ಪ್ರದರ್ಶನೆಗಳೆಡಡೂ ಬೆಳವಣಿಗೆಯಲ್ಲಿವೆ. ತರಬೇತಿ ಪಡೆದವರಿಗೆ ಅವಕಾಶಗಳೂ ವಿಫುಲವಾಗಿವೆ. ಕೇವಲ ನಾಟಕ ಪ್ರದರ್ಶನವೆ ಅಲ್ಲದೆ ಜಾಹೀರಾತು ಏಜೆನ್ಸಿ, ಕಾರ್ಪೋರೇಟ್ ಸಂಸ್ಥೆಗಳೂ ತಮ್ಮ ಉಪಯೋಗಕ್ಕೆ ರಂಗ ಚಟುವಟಿಕೆಗಳನ್ನು ಬಳಸ್ತಿದಾರೆ.

ನೀವು ನಿರ್ದೇಶಕರಾಗಿ ಬಂದ ಮೇಲೆ ರಂಗಾಯಣಕ್ಕೆ ಯಾವು ದಿಕ್ಕು ನೀಡುವ ಪ್ರಯತ್ನ ಮಾಡಿದ್ದೀರಿ? ಮುಂದಿನ ಚಟುವಟಿಕೆಗಳೇನು?
ಈ ಹಿಂದೆ ತೆಗೆದುಕೊಂಡ ನಿರ್ಣಯಗಳನ್ನು ಅನುಷ್ಟಾನಕ್ಕೆ ತರಬೇಕಿತ್ತು. ಉದಾಹರಣೆಗೆ ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ಗೆ ಒಂದು ಚೌಕಟ್ಟು ತಂದು ಅದೀಗ ಯಶಸ್ವಿಯಾಗಿ ನಡೀತಿದೆ. ಪ್ರತಿ ವರ್ಷದ ಗ್ರೀಷ್ಮ ರಂಗೋತ್ಸವವನ್ನು ಪ್ರಸಿದ್ಧ ರಂಗಕರ್ಮಿಗಳ ಹೆಸರಲ್ಲಿ ನಡೆಸಲು ತೀರ್ಮಾನಿಸಿ ಮೈಸೂರಿನಲ್ಲಿ ನಡೆದ ಉತ್ಸವಕ್ಕೆ ಸಿಜಿಕೆ ನೆನಪಿನ ನಾಟಕೋತ್ಸವ ಹಾಗೂ ದಾರವಾಡದಲ್ಲಿ ನಡೆದ ಉತ್ಸವಕ್ಕೆ ಜಿ.ಬಿ.ಜೋಷಿ ನೆನಪಿನ ನಾಟಕೋತ್ಸವ ಎಂದು ಹೆಸರಿಟ್ಟು ಯಶಸ್ವಿಯಾಗಿ ನಡೆಸಿದೆವು. ಈ ವರ್ಷದ ನಮ್ಮ ದೊಡ್ಡ ಸಾಧನೆ ಎಂದರೆ ನವರಾತ್ರಿಯ ಸಂದರ್ಭದಲ್ಲಿ ಮೈಸೂರಿನಲ್ಲಿ ಮಾತ್ರ ನಡೆಯುತ್ತಿದ್ದ ಕಾಲೇಜು ನಾಟಕೋತ್ಸವವನ್ನು ಈ ಸಲ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ನಡೆಸಿದ್ದು. ಪ್ರತಿಯೊಂದು ಕಡೆ ೯ ಕಾಲೇಜುಗಳನ್ನು ಆಯ್ಕೆ ಮಾಡಿ ನಮ್ಮ ನಿರ್ದೇಶಕರನ್ನು ಕಳುಹಿಸಿ ಆ ಕಾಲೇಜುಗಳಲ್ಲಿ ನಾಟಕ ಸಿದ್ಧಪಡಿಸಿ ನವರಾತ್ರಿ ಸಂದರ್ಭದಲ್ಲಿ ವಿವಿಗಳ ಕೇಂದ್ರಸ್ಥಾನದಕ್ಕೆ ಕರೆಸಿ ಒಂಭತ್ತು ದಿನಗಳ ಕಾಲ ನಡೆಸಿದ್ವಿ. ಏಕ ಕಾಲದಲ್ಲಿ ೩೬ ನಾಟಕ ಪ್ರದರ್ಶನ ನಡೆದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈಗ ವೃತ್ತಿ ರಂಗಭೂಮಿಯ ಸದಾರಮೆ ನಾಟಕ ಕೈಗೊಂಡಾಗ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು. ಅದೀಗ ಅತ್ಯಂತ ಯಶಸ್ವೀಯಾಗಿ ನಡೆಯುತ್ತಿದೆ. ಅತ್ಯಂತ ಸಮಾಜ ಮುಖಿಯಾಗಿ ರಂಗಭೂಮಿ ಬೆಳೆಸುವುದು ನನ್ನ ಉದ್ದೇಶ. ಹವ್ಯಾಸಿ ಕಲಾವಿದರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದೇವೆ.

ರಂಗಾಯಣವು ಮಲೆಗಳಲ್ಲಿ ಮದುಮಗಳು ನಂತಹ ವಿನೂತನ ಪ್ರಯೋಗ ನಡೆಸಿ ಮೆಚ್ಚುಗೆಯನ್ನೂ ಗಳಿಸಿತು. ಆದರೆ, ಇಂತಹ ಬಿಗ್ ಬಜೆಟ್ ನಾಟಕಗಳನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ರಾಜ್ಯದ ಹವ್ಯಾಸಿ ರಂಗಭೂಮಿ ಇದೆಯೇ?
ಈ ಆತಂಕವನ್ನು ನನ್ನ ಬಳಿ ಈಗಾಗಲೇ ಅನೇಕರು ವ್ಯಕ್ತಪಡಿಸಿದ್ದಾರೆ. ಆದರೆ ಮಲೆಗಳಲ್ಲಿ ಮದುಮಗಳು ನಂತಹದ್ದು ಅಪರೂಪಕ್ಕೆ ನಡೆಯುವ ಒಂದು ರಂಗಕ್ರಿಯೆ. ಅದು ಒಂದು ಥಿಯೇಟ್ರಿಕಲ್ ಇವೆಂಟ್ ಮಾತ್ರ. ಯಾವಾಗಲೂ ನಡೆಯುವಂತಹದ್ದಲ್ಲ. ನಡುನಡುವೆ ಅಂತಹದ್ದು ನಡೆಯುವುದು ರಂಗಭೂಮಿಗೆ ಪೂರಕವಾಗಿರುತ್ತೆ ಎನ್ನುವುದು ನನ್ನ ಅಭಿಪ್ರಾಯ.

ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ಕಥೆ, ಕಾದಂಬರಿಗಳಲ್ಲಿ ನಡೆಯುತ್ತಿರುವ ಪ್ರಯೋಗಗಳು ನಾಟಕ ಸಾಹಿತ್ಯದಲ್ಲಿ ಕಂಡು ಬರುತ್ತಿಲ್ಲ. ಕಾರಣವೇನು?
ನಡುವೆ ಆ ರೀತಿಯ ಮಾತು ಕೇಳಿ ಬಂತು. ಆದರೆ ಇತ್ತೀಚೆಗೆ ಅನೇಕ ನಾಟಕಗಳು ಬರ‍್ತಾ ಇದ್ದಾವೆ. ನಮ್ಮ ನಂತರದ ತಲೆಮಾರಿನಲ್ಲೂ ಅನೇಕರು ಹುಟ್ಟಿಕೊಂಡಿದ್ದಾರೆ. ಉದಾಹರಣೆಗೆ ಲಕ್ಷ್ಮೀಪತಿ ಕೋಲಾರ, ಕೆ.ವೈ.ನಾರಾಯಣ ಸ್ವಾಮಿ, ವೇಣುಗೋಪಾಲ್ ಮೂತಾದವರು. ಕಾವ್ಯ, ಕಥೆಗಳಲ್ಲಿನ ಪ್ರಯೋಗಗಳಿಗೆ ಹೋಲಿಸಿದರೆ ನಾಟಕ ಪ್ರಯೋಗಗಳು ಕಡಿಮೆಯಾಗಿವೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ತಮ್ಮ ನಾಟಕ ಪ್ರಯೋಗಗೊಳ್ಳುತ್ತದೆಯೋ ಇಲ್ಲವೋ ಎನ್ನುವ ಆತಂಕ ಬರಹಗಾರರಿಗೆ ಇರುತ್ತದೆ. ಇಂದು ನಾಟಕದ ಸಾರ್ಥಕತೆ ಇರೋದೂ ಅದು ಪ್ರಯೋಗಕ್ಕೆ ಹೋದಾಗಲೇನೇ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಹೀಗಾಗಿ ಮೊದಲಿನಂತೆ ಬರುತ್ತಿಲ್ಲ. ಆದರೆ ಹೊಸ ರೀತಿ ನಾಟಕಗಳೂ ಬರುತ್ತಿವೆ ಉದಾಹರಣೆಗೆ ಕೆ.ವಿ.ಅಕ್ಷರ ಅವರ ಮದುವೆ ಡಾಟ್ ಕಾಂ, ಪರಿಸರ ಬಗ್ಗೆ, ಇತ್ತೀಚೆಗೆ ಅಲೆಮಾರಿ ಸಮುದಾಯದ ಕುರಿತ, ದಲಿತರ ಕುರಿತ ನಾಟಕಗಳು ಬರ‍್ತಾ ಇವೆ. ಹಿಂದೆ ನಗರ ಕೇಂದ್ರಿತ, ಅಥವಾ ಇತಿಹಾಸ ಸಂಬಂಧಿತ ನಾಟಕಗಳೇನು ಬರ‍್ತಾ ಇದ್ದಂತೆ  ಇಂದು ಅಲಕ್ಷ್ಯಕ್ಕೆ ಒಳಗಾದವರ ಬಗ್ಗೆ ನಾಟಕ ಬರುತ್ತಿವೆ.

ಒಂದು ಪ್ರಭುತ್ವವನ್ನು ಪ್ರತಿಭಟಿಸುವ ಕೆಲಸ ಮಾಡುತ್ತಿದ್ದ ಬೀದಿನಾಟಕಗಳು ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ಸೀಮಿತವಾಗಿವೆಯಲ್ಲಾ?
ನಿಜ. ಬೀದಿನಾಟಕದ ಇತಿಹಾಸವೇ ಅದೊಂದು ಪ್ರತಿಭಟನಾ ರಂಗ ರೂಪವಾಗಿದ್ದದ್ದು. ಕಾರ್ಮಿಕರಲ್ಲಿ, ರೈತರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕಗಳು ಬಂದವು. ಸಮುದಾಯದಂತಹ ತಂಡ ಬೀದಿ ನಾಟಕವನ್ನೇ ಪ್ರಧಾನವಾಗಿಟ್ಟುಕೊಂಡು ಜಾಥಾ ನಡೆಸಿತ್ತು. ನಂತರ ಎ.ಎಸ್ ಮೂರ್ತಿ,ವಿಜಯಾ ಮುಂತಾದವರು ಚಿತ್ರಾ ತಂಡದ ಮೂಲಕ ಆಗಿನ ರಾಜಕೀಯ ಸಮಸ್ಯೆಗಳ ವಿರುದ್ಧ ಜನ ಜಾಗೃತಿಗೆ ಪ್ರಯತ್ನಿಸಿದ್ದು ನಿಜ. ಆದರೆ ಬೀದಿ ನಾಟಕದಂತಹ ಮಾಧ್ಯಮ ತುಂಬಾ ದುರ್ಬಲ ಸಂರಚನೆ ಹೊಂದಿದ್ದು ಅದನ್ನು ಪ್ರಗತಿಪರರೂ ಬಳಸಿಕೊಳ್ಳಬಹುದು, ಪ್ರಗತಿ ವಿರೋಧಿಗಳೂ ಬೆಳೆಸಿಕೊಳ್ಳಬಹುದು. ಈಗ ಆಗಿರೋದು ಇದೇನೇ. ಇಂದು ಅದೊಂದು ಅಣಕು ಪ್ರದರ್ಶನವಾಗಿ ಮಾತ್ರ ಬಳಕೆಯಾಗಿ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಈಗ ಅದನ್ನು ಮತ್ತೆ ರಿವೈವ್ ಮಾಡೆಉವುದು ಕಷ್ಟ.  ಅದಾಗಬೇಕೆಂದರೆ ಸಾಮಾಜಿಕ ಚಳುವಳಿಗಳು ಜೋರಾಗಿ ಬರಬೇಕು.

ಕನ್ನಡದ ಭಾಷಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೀರಿ. ಜಾಗತೀಕರಣದ ಈ ಸಂದರ್ಭದಲ್ಲಿ ಒಂದು ರಾಜ್ಯ ಭಾಷೆಯಾಗಿ ಕನ್ನಡದ ಪ್ರಗತಿ ಯಾವ ದಿಕ್ಕಿನಲ್ಲಿ ಸಾಗಿದೆ ಎಂದು ಗುರುತಿಸುತ್ತೀರಿ?
ಜಾಗತೀಕರಣ ಎನ್ನುವುದು ದೇಸೀ ಭಾಷೆಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಅದು ದೇಶಗಳ ಗಡಿಗಳನ್ನು ಒಡೆದು ಎಲ್ಲಾ ಕಡೆ ಆರ್ಥಿಕ ಪ್ರಾಬಲ್ಯ ಸ್ಥಾಪಿಸುವ ವ್ಯವಸ್ಥೆ. ದೇಸೀ ಭಾಷೆಗಳು ನಿರ್ದಿಷ್ಟ ಚೌಕಟ್ಟಿನೊಳಗಡೆಯಲ್ಲೇ ತಮ್ಮ ಸಾಮರ್ಥ್ಯ, ಸಾರ್ಥಕ್ಯ ಕಂಡುಕೊಳ್ಳಬೇಕಿರುತ್ತದೆ. ಏನಾಗ್ತಿದೆ ಎಂದರೆ ಜಾಗತೀಕರಣದ ಭಾಷೆಯಾಗಿ ಇಂಗ್ಲಿಷ್ ಮತ್ತು ತಂತ್ರಜ್ಞಾನ ಎರಡೂ ಒಟ್ಟೊಟ್ಟಿಗೇ ನಮ್ಮ ಮೇಲೆ ದಾಳಿ ಮಾಡುತ್ತಿವೆ. ಸಹಜವಾಗಿಯೇ ನಮ್ಮ ಯುವ ಪೀಳಿಗೆ ಇಂಗ್ಲಿಷ್ ಭಾಷೆ ಕಡೆ ಮತ್ತು ತಂತ್ರಜ್ಞಾನದ ಕಡೆ ಮನಸ್ಸು ಮಾಡುತ್ತಿವೆ. ನಮ್ಮ ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸದಿರುವುದರಿಂದಾಗಿಯೇ ಇಂಗ್ಲಿಷನ್ನು ಅವರು ಬಳಸ ಬೇಕಾಗಿದೆ. ತಂತ್ರಜ್ಞಾನದಲ್ಲಿ ಇಂಗ್ಲಿಷ್ ಬಳಸ ಬೇಕೆಂದ ಕೂಡಲೇ ಅದು ನಮ್ಮ ಶಿಕ್ಷಣದ ಮೇಲೆ ಬೀಳುತ್ತದೆ. ಇಂಗ್ಲಿಷ್ ಮಾಧ್ಯಮದ ಮೂಲಕವೇ ಮಕ್ಕಳು ಕಲಿಯಬೇಕು, ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಬೇಕು ಎಂಬೆಲ್ಲಾ ಬೇಡಿಕೆ ಶುರುವಾಗುತ್ತದೆ. ಖಾಸಗಿ ಶಾಲೆಗಳು ಹೆಚ್ಚುತ್ತವೆ. ಇದೆಲ್ಲಾ ಬೆಳವಣಿಗೆ ನಮ್ಮಲ್ಲಿ ಈಗ ಆಗಿದೆ. ಯಾವುದೇ ದೇಸೀ ಭಾಷೆಯನ್ನು ಮಾತನಾಡುವ ಸಮುದಾಯ ತನಗೆ ಸಿಗುವ ಅವಕಾಶಗಳಲ್ಲಿ ತನ್ನ ಭಾಷೆಯನ್ನು ಬಳಸಿಯೇ ತೀರುತ್ತೇನೆ ಎಂದು ನಿರ್ಧರಿಸಬೇಕು. ಅದು ಸಾರ್ವಜನಿಕ ಸ್ಥಳ ಇರಬಹುದು, ಖಾಸಗಿ ಸ್ಥಳ ಇರಬಹುದು, ಅಥವಾ ನಾವು ಕೆಲಸ ಮಾಡುವ ಕಡೆ ಇರಬಹುದು ನಾನು ಕನ್ನಡವನ್ನೇ ಬಳಸುತ್ತೇ ಎನ್ನುವ ದೃಢ ಮನಸ್ಸು ಮಾಡಿದರೆ ಆ ದೇಸೀ ಭಾಷೆಗೆ ಆತಂಕ ಇರಲ್ಲ. ಉದಾಹರಣೆಗೆ ನನಗೆ ಸಿಕ್ಕುವ ಎಲ್ಲ ಬಳಕೆಯ ವಲಯಗಳಲ್ಲಿ ಬಳಸದೇ ಹೋದರೆ ಆ ವಲಯದಲ್ಲಿ ಬಳಕೆಯಾಗುವ ಕನ್ನಡ ಪದಗಳನ್ನು ನಾವು ನಿಷ್ಕ್ರಿಯಗೊಳಿಸುತ್ತಾ ಹೋಗ್ತೇವೆ. ಹೊಸದಾಗಿ ಸೃಷ್ಟಿ ಮಾಡಬಹುದಾದ ಕನ್ನಡ ಪದಗಳನ್ನು ನಾವು ಸೃಷ್ಟಿ ಮಾಡುವುದಿಲ್ಲ. ಹಾಗೆ ಸೃಷ್ಟಿ ಮಾಡಬೇಕಿದ್ದ ಜಾಗದಲ್ಲಿ ಅನಾಯಾಸವಾಗಿ ಇಂಗ್ಲಿಷ್ ಪದ ಎತ್ತಿ ಹಾಕಿಕೊಳ್ತೀವೆ. ಅದರಿಂದಾಗಿ ಕನ್ನಡ ಪದಕೋಶ ಕುಗ್ಗುತ್ತಾ ಹೋಗುತ್ತದೆ. ಅದು ಕನ್ನಡ ಭಾಷೆಗೆ ಬಹಳ ದೊಡ್ಡ ಹೊಡೆತವಾಗುತ್ತದೆ. ಅದಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಕನ್ನಡವ್ನನು ಬಳಸುವವರು ಬಹಳ ನಿಕೃಷ್ಟರು. ಇಂಗ್ಲಿಷ್ ಗೊತ್ತಿಲ್ಲದೇ ಇರೋರು ನಿಕೃಷ್ಟರು ಎಂಬಂತಹ ಸಾಮಾಜಿಕ ಭೇದ ಸೃಷ್ಟಿಯಾಗುತ್ತದೆ. ಅದೂ ಸಹ ಆಗಬಾರದು. ಇಂದು ನಾವು ಇಂಗ್ಲಿಷಲ್ಲು ಕಲಿಯಬೇಕು. ಕನ್ನಡದಲ್ಲೂ ಕಲಿಯಬೇಕು. ಆದರೆ ಕರ್ನಾಟಕದಲ್ಲಿ ಭಾಷೆಯ ಬಳಕೆಯ ವಲಯಗಳು ಮಾತ್ರ ಕನ್ನಡದಲ್ಲೇ ಆಗಬೇಕು. ಇದಕ್ಕೆ ಸರ್ಕಾರ ಕೈಗೊಳ್ಳುವ ನಿರ್ಧಾರವೂ ಮುಖ್ಯ. ಕನ್ನಡದವರಿಗೆ ಹುದ್ದೆಗಳು ಸೃಷ್ಟಿಯಾಗಬೇಕು.

ರಾಜ್ಯದಲ್ಲಿ ತಮ್ಮ ಐಡೆಂಟಿಟಿಯನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಅಗತ್ಯವಿರುವ ನಿಲುವು,ಕ್ರಮಗಳೇನಾಗಿರಬೇಕು?
ನಮ್ಮ ಸರ್ಕಾರದ ನಿಲುವು ಬಹಳ ಪ್ರಜಾಸತ್ತಾತ್ಮಕವಾಗಿವೆ. ಏಕೆಂದರೆ ಕರ್ನಾಟಕದೊಳಗೇ ಇರುವ ನಾವು ಹೇಗೆ ಇಂಗ್ಲಿಷ್ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದೆ ಎಂದು ಆತಂಕ ಪಡುತ್ತೇವೋ ಹಾಗೇ ತುಳು, ಕೊಡವ, ಬ್ಯಾರಿ, ಕೊಂಕಣಿ ಮುಂತಾದ ಭಾಷಿಕ ಸಮುದಾಯಗಳಿಗೆ ಕನ್ನಡ ನಮ್ಮ ಮೇಲೆ ಸವಾರಿ ಮಾಡುತ್ತೆ ಎನ್ನುವ ಆತಂಕ ಇರುತ್ತದೆ. ಈ ಆತಂಕವನ್ನು ಹೋಗಲಾಡಿಸುವ ಜವಾಬ್ದಾರಿ ನಮಗಿರುತ್ತದೆ. ನಾವು ದೊಡ್ಡಣ್ಣನಾಗಿ ಅವರ ಮೇಲೆ ದಬ್ಬಾಳಿಕೆ ನಡೆಸಬಾರದು. ಬದಲು ಪ್ರೀತಿ- ವಾತ್ಸಲ್ಯ ತೋರಬೇಕು. ಆ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಒಂದೊಳ್ಳೆ ಕೆಲಸ ಮಾಡ್ತಾ ಇದೆ. ಆಯಾ ಭಾಷೆಗಳ ಅಕಾಡೆಮಿ ಸ್ಥಾಪಿಸಿ ಆ ಭಾಷೆ ಸಂಸ್ಕೃತಿಗಳ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಭೂಮಾಫಿಯಾ, ಅಪರೇಷನ್ ಕಮಲದಂತಹ ಬೆಳವಣಿಗೆಗಳಿಗೆ ನಾಡಿನ ಒಬ್ಬ ಪ್ರಮುಖ ಚಿಂತಕರಾಗಿ ನಿಮ್ಮ ಪ್ರತಿಕ್ರಿಯೆ ಏನು?
Most Disgusting!  ಒಂದೇ ಮಾತಲ್ಲಿ ಹೇಳಬಹುದಾದರೆ ಇದು ಈ ರೀತಿಯ ಬೆಳವಣಿಗೆ ಎಲ್ಲರಿಗೂ ಅಸಹ್ಯ ತರುವ ಮಟ್ಟದಲ್ಲಿ ನಡೆಯುತ್ತಿದೆ. ಈ ರೀತಿಯ ಗಣಿಗಾರಿಕೆಯಿಂದ ಯಾರೋ ಕೆಲವರು ಕೋಟ್ಯಾದಿಪತಿಗಳಾಗಬಹುದು. ಆದರೆ ಮುಂಬರುವ ಜನಾಂಗ ಆ ಪ್ರದೇಶದಲ್ಲಿ ಮಾಡುವಾಗ ಅನುಭವಿಸುವ ಕಷ್ಟಕೋಟಲೆಗಳಿಗೆ ಯಾರು ಜವಾಬ್ದಾರರು?. ಇಂದು ಮನುಷ್ಯ ಮೈಂಡ್‌ಲೆಸ್ ಆಗಿದಾನೆ. ಮುಂದಿನ ಜನಾಂಗದ ಬಗ್ಗೆ ತನ್ನ ಪಾತ್ರ ಏನೂ ಇಲ್ಲ ಎಂಬಂತೆ ವರ್ತಿಸುತ್ತಿದ್ದಾನೆ. ಈಗಿನ ಸರ್ಕಾರಗಳೇ ವಿವೇಚನೆ ಕಳೆದುಕೊಂಡಿವೆ. ಇನ್ನು ಸಾಮಾನ್ಯ ಜನ ಏನು ಮಾಡುತ್ತಾರೆ? ಪರಿಸರದ ಮೇಲೆ ಬಹಳಷ್ಟು ಹಾನಿಯಾಗುತ್ತಿದೆ. ನಾನೂ ಆ ಪ್ರದೇಶದಿಂದಲೇ ಬಂದಿರೋನು. ಅಲ್ಲಿ ಇಂದು ಏನೂ ಬೆಳೆಯಲಾಗದ ಸ್ಥಿತಿ ಇದೆ. ಇದೆಲ್ಲದರ ಪರಿಣಾಮವೇ ಅನೈತಿಕ ರಾಜಕಾರಣ. ಇಷ್ಟೆಲ್ಲಾ ನಡೆಯುತ್ತೆ ಎಂದರೆ ಅದು ನೈತಿಕ ರಾಜಕಾರಣವಾಗಿರಲು ಸಾಧ್ಯವೇ ಇಲ್ಲ. ಅನೈತಿಕ ರಾಜಕಾರಣದ ಕೂಸುಗಳೇ ಅಪರೇಷನ್ ಕಮಲ ಮತ್ತು ನಂತರದ ರಾಜಕೀಯ ಬೆಳವಣಿಗೆಗಳು. ನಮ್ಮ ಜನ ಇನ್ನೂ ಇದನ್ನು ಪ್ರೋತ್ಸಾಹ ಕೊಡ್ತಿದಾರಲ್ಲಾ ಎನ್ನೋದೇ ನೋವಿನ ಸಂಗತಿ. ಪ್ರಜಾ ಪ್ರಭುತ್ವದಲ್ಲಿ ಅಂತಿಮವಾಗಿ ಪ್ರಜೆಗಳೇ ಅಲ್ಲವೇ. ಆದರೆ ನಮ್ಮ ಜನ ಯಾವಾಗ ರಿಯಲೈಸ್ ಆಗ್ತಾರೆ ಎಂದ್ರೆ ಎಲ್ಲಾ ಹಾಳಾದ ಮೇಲೆ. ಇಡೀ ಊರೆಲ್ಲಾ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕು ಅನ್ನೋ ಗಾದೆ ಇದೆಯಲ್ಲಾ ಆ ರೀತಿ. ಪ್ರಾರಂಭದಲ್ಲಿ ನಮ್ಮ ಅಜ್ಞಾನ, ಅನಕ್ಷರತೆ, ಇಂದು ಹಣದ ವ್ಯಾಮೋಹ, ಎಲ್ಲದರಿಂದ ನಾವು ನಮ್ಮ ಗೋರಿಗಳನ್ನು ತೋಡೊಕೊಳ್ತಾ ಇದೀವಿ. ನನಗನ್ನಿಸುತ್ತೆ. ಇಡೀ ಜಗತ್ತಿನಲ್ಲಿ ಅತ್ಯಂತ ಭ್ರಷ್ಟ ಮತದಾರರಿರುವುದು ನಮ್ಮ ದೇಶದಲ್ಲಿ. ಅದೂ ರಾಜಕಾರಣಿಗಳು ನೀಡುವ ಹಣ,ಹೆಂಡಗಳ ಕ್ಷುಲ್ಲಕ ಆಸೆಗಳಿಗೆ ಬಿದ್ದು  ಇವರು ತಮ್ಮ ಜವಾಬ್ದಾರಿಯನ್ನೇ ಅರ್ಥ ಮಾಡಿಕೊಳ್ಳುತ್ತಿಲ್ಲ.

ಇತ್ತೀಚೆಗೆ ಸರ್ಕಾರ ಸಂಸ್ಕೃತ ವಿಶ್ವವಿದ್ಯಾಲಯ, ಮಹಿಳಾ ವಿಶ್ವ ವಿದ್ಯಾಲಯ ಹಾಗೂ ಜಾನಪದ ವಿಶ್ವವಿದ್ಯಾಲಯಗಳನ್ನು ಆರಂಭಿಸಿದೆ. ರಾಜ್ಯದಲ್ಲಿ ಇವು ಒಂದೊಂದೂ ಯಾವ ಪಾತ್ರ ವಹಿಸಬಹುದು?
ಮಹಿಳಾ ವಿವಿ ಬಗ್ಗೆ ನಮ್ಮ ವಿರೋಧವಿಲ್ಲ. ಯಾಕಂದ್ರೆ ಕಳೆದ ಒಂದೆರಡು ದಶಕಗಳಲ್ಲಿ ಮಹಿಳಾ ಅಧ್ಯಯನ ಜಾಗತಿಕವಾಗಿಯೂ, ಕರ್ನಾಟಕದಲ್ಲೂ ಬೆಳೆಯುತ್ತಿದೆ. ಜಾನಪದ ವಿವಿ ಕೂಡಾ ನಮ್ಮ ಜನಪದ ಸಂಸ್ಕೃತಿಯನ್ನು ಇನ್ನಷ್ಟು ಸಮಗ್ರವಾಗಿ ಅಧ್ಯಯನ ನಡೆಸಲು ಇಂತಹ ಒಂದು ಸ್ಪೇಸ್ ಬೇಕಿತ್ತು. ಇದು ಸ್ವಾಗತಾರ್ಹ. ಆದರೆ ನನ್ನ ಮತ್ತು ನನ್ನಂಥವರ ವಿರೋಧವಿದ್ದದ್ದು ಸಂಸ್ಕೃತ ವಿವಿ ತೆರೆಯುವುದರ ಬಗ್ಗೆ. ಏಕೆಂದರೆ ಈಗಾಗಲೇ ೧೨ ಸಂಸ್ಕೃತ ವಿವಿಗಳು, ಸುಮಾರು ೨೨ ಸಂಸ್ಕೃತ ಕುರುಕುಲಗಳಿದ್ದಾರೆ. ಅದೆಲ್ಲಾ ಸೇರಿ ಕೇಂದ್ರ ಸರ್ಕಾರ ಸು.೩೨ ಕೋಟಿ ಹಣ ಬಿಡುಗಡೆ ಮಾಡುತ್ತಿದೆ. ಸಂಸ್ಕೃತದ ಅಧ್ಯಯನ ಪ್ರಾದೇಶಿಕವಾಗಿ ನಿರ್ಧಾರವಾಗುವಂತದ್ದಲ್ಲ. ಹಾಗೂ ನಿಮಗೆ ಅದನ್ನು ಆರಂಭಿಸಲೇಬೇಕೆಂದಿದ್ದರೆ ಪ್ರಾಚ್ಯ ಭಾಷಾ ವಿಶ್ವವಿದ್ಯಾಲಯ ತೆರೆಯಿರಿ ಎಂದು ಬೇಡಿಕೆ ಇಟ್ಟೆವು. ಎಕೆಂದರೆ ಹಿಂದಿನ ಜ್ಞಾನ ಎನ್ನುವುದು ಕೇವಲ ಸಂಸ್ಕೃತದಲ್ಲಿಲ್ಲ. ಅದು ಪ್ರಾಕೃತ ಭಾಷೆಗಳಲ್ಲಿದೆ, ಪೈಶಾಚಿಕ ಭಾಷೆಗಳಲ್ಲಿದೆ, ಬ್ರಾಹ್ಮೀ ಭಾಷೆಯಲ್ಲಿದೆ, ಸಂಸ್ಕೃತದಲ್ಲಿಯೂ ಇದೆ. ಇದೆಲ್ಲವೂ ಸೇರಿದಂತೆ ಅಧ್ಯಯನ ನಡೆಸಲು ಪ್ರಾಚ್ಯಭಾಷಾ ವಿಶ್ವವಿದ್ಯಾಲಯ ತೆತರೆಯಿರಿ ಎಂದೆವು. ಈ ಬಗೆಯ ವಿವಿ ಇಡೀ ದೇಶದಲ್ಲೇ ಇಲ್ಲ. ಆದರೆ ಸರ್ಕಾರಕ್ಕೆ ಅದರದ್ದೇ ಆದಂತಹ ಅಜೆಂಡಾ ಒಂದು ಇತ್ತು ಎಂದು ಕಾಣತ್ತೆ. ಹಾಗಾಗಿ ಅದು ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ.

ನೀವು ನಿಮ್ಮ ವಿಚಾರ, ಕೃತಿಗಳಲ್ಲಿ ಎಡಪಂಥೀಯರಾಗಿ ಗುರುತಿಸಿಕೊಂಡವರು. ಆದರೆ ಬಲಪಂಥೀಯ ಸರ್ಕಾರವೊಂದರ ಆಳ್ವಿಕೆಯ ಅವಧಿಯಲ್ಲಿ ಸರ್ಕಾರಿ ಪೋಷಿತ ರಂಗಾಯಣದ ಸಾರಥ್ಯ ವಹಿಸಿದಿರಿ. ಇದರ ಬಗ್ಗೆ ಗೊಂದಲ ಸಾರ್ವಜನಿಕರಲ್ಲಿದೆ?
ನನಗೂ ಇದೆ... (ನಗು)

I am also confused. How this government has appointed me as the director of Rangayana. This is the question for me also... I dont know who will answer it...     (ನಗು)

photo By Harsha Kugwe