Sunday, May 29, 2011

ಜೀ ಟಿವಿಯಿಂದ ನರೇಂದ್ರ ಶರ್ಮ ಹೊರಗೆ: ಜಗನ್ಮಾತೆಗೆ ಕೋಟಿ ವಂದನೆ


ಮತ್ತೊಂದು ಸಂತಸದ ವಿಷಯ. ಜೀ ಟಿವಿಯ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಿಂದ ನರೇಂದ್ರ ಶರ್ಮ ಅವರನ್ನು ತೊಲಗಿಸಲಾಗಿದೆ. ಇದು ನಮಗೆ ಗೊತ್ತಾಗಿರುವ ಮಾಹಿತಿ. ಜೀ ಟಿವಿಗೆ ಒಂದು ಥ್ಯಾಂಕ್ಸ್ ಹಾಗು ಜಗನ್ಮಾತೆಗೆ ಕೋಟಿ ವಂದನೆ. ಬಾಯಿಬಡುಕ ನರೇಂದ್ರ ಶರ್ಮನನ್ನು ತೊಲಗಿಸಿ ಎಂದು ನಾವೆಲ್ಲರೂ ಆರಂಭಿಸಿದ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಕಡೆಗೂ ಯಶಸ್ವಿಯಾಗಿದೆ. ಜೀ ಟಿವಿ ಮುಖ್ಯಸ್ಥರಿಗೆ ಸಾವಿರಾರು ಪತ್ರಗಳನ್ನು ಬರೆದು ಈ ಕೊಳಕು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೋರಿದ ಎಲ್ಲರ ಶ್ರಮವೂ ಸಾರ್ಥಕಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು.

ನರೇಂದ್ರ ಶರ್ಮ ಅನಾಮತ್ತಾಗಿ ಮೂರು ಚಾನಲ್‌ಗಳನ್ನು ಸುತ್ತಾಡಿ ಮುಗಿಸಿಯಾಗಿದೆ. ಕಸ್ತೂರಿ, ಸುವರ್ಣ ಹಾಗು ಜೀ ಟಿವಿಗಳ ಪ್ರಯಾಣ ಮುಗಿದಾಗಿದೆ. ಮುಂದೆ ಆತ ಇನ್ನ್ಯಾವ ಚಾನಲ್ ಹಿಡಿಯುತ್ತಾರೋ ಕಾದು ನೋಡಬೇಕು. ಆದರೆ ಈತನ ವಿರುದ್ಧ ಎದ್ದಿರುವ ಆಕ್ರೋಶವನ್ನು ಗಮನಿಸಿರುವ ಇತರ ಚಾನಲ್‌ಗಳು ಈ ಸೆರಗಿನ ಕೆಂಡವನ್ನು ಕಟ್ಟಿಕೊಂಡರೆ ಎದುರಿಸುವ ಅಪಾಯಗಳನ್ನು ಈಗಾಗಲೇ ಊಹಿಸಿರಬಹುದು. ಇನ್ನುಳಿದದ್ದು ಅವರಿಗೆ ಸೇರಿದ್ದು.

ನರೇಂದ್ರ ಶರ್ಮ ಕಸ್ತೂರಿ ಮತ್ತು ಸುವರ್ಣಗಳಲ್ಲಿ ಕಾರ್ಯಕ್ರಮ ನಡೆಸುವಾಗಲೇ ತಮ್ಮ ಬಾಯಿಬಡುಕತನವನ್ನು ತೋರಿಸಿ ಅಪಹಾಸ್ಯಕ್ಕೆ ಈಡಾಗಿದ್ದರು. ಜನರನ್ನು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳನ್ನು ಹೆದರಿಸುತ್ತಲೇ ಬಂದ ಶರ್ಮ, ಇಡೀ ಜಗತ್ತೇ ತನ್ನ ಆಣತಿಯ ಮೇರೆಗೆ ನಡೆಯುತ್ತದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ನಾನು ಹೇಳುವ ಡೇಟಿಗೆ ಸರಿಯಾಗಿ ಪ್ರಳಯ ಆಗುತ್ತದೆ. ಒಂದೊಮ್ಮೆ ಆಗುವ ಸಂದರ್ಭ ಇಲ್ಲದಿದ್ದರೂ ನಾನು ಹೇಳಿದ್ದೇನೆಂಬ ಕಾರಣಕ್ಕೆ, ನನ್ನ ಮಾತು ಉಳಿಸುವ ಸಲುವಾಗಿ ಜಗನ್ಮಾತೆ ಪ್ರಳಯ ನಡೆಸುತ್ತಾಳೆ ಎಂದು ಶರ್ಮ ಹೇಳಿಕೊಂಡಿದ್ದರು. ಪ್ರಳಯ ಜೀ ಟಿವಿಯ ಕಚೇರಿಯಲ್ಲೇ ಆಗಿದೆ. ನರೇಂದ್ರ ಶರ್ಮ ಕೈಯಲ್ಲಿ ಹಿಡಿದ ತ್ರಿಶೂಲದ ತರಹದ ಐಟಮ್ ಸಮೇತ ಹೊಟ್ಟೆ ನೀವಿಕೊಂಡು ಹೊರಗೆ ಬಿದ್ದಿದ್ದಾರೆ.

ನರೇಂದ್ರ ಶರ್ಮ ಉಪಟಳಗಳು ಹೆಚ್ಚಾಗುತ್ತಿದ್ದಂತೆ ಈತನ ಕುರಿತು ಸಂಪಾದಕೀಯದಲ್ಲಿ ಬರೆದೆವು. ಹಲವಾರು ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ಈತನ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಚೂಡಿದಾರ್, ಜೀನ್ಸ್ ಪ್ಯಾಂಟು ಹಾಕುವ ಹೆಣ್ಣುಮಕ್ಕಳಿಗೆ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿ ನರೇಂದ್ರ ಶರ್ಮ  ತನ್ನ ತಿಕ್ಕಲುತನದ ಪರಮಾವಧಿ ತಲುಪಿದ್ದ. ಜಗನ್ಮಾತೆ ಬರುತ್ತಾಳೆ, ಇಳಿಯುತ್ತಾಳೆ ಎಂದು ನರೇಂದ್ರ ಶರ್ಮ ಕೊಟ್ಟ ಡೇಟುಗಳೆಲ್ಲ ಪೂರೈಸಿದವು. ಕಡೆಗೆ ಪ್ರಳಯ ಶುರುವಾಗುತ್ತ ನೋಡಿ ಎಂದು ಹೇಳಿದ್ದ ಮೇ ೨೧ ಸಹ ಕಳೆದುಹೋಯಿತು. ಅಲ್ಲಿಗೆ ನರೇಂದ್ರ ಶರ್ಮ ಅವರ ಆಟಗಳೆಲ್ಲವೂ ಮುಗಿದಿದ್ದವು.

ಈತನನ್ನು ಇನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದನಿಸಿದ ನಂತರ ಒಂದು ಅಭಿಯಾನವನ್ನೇ ನಾವೆಲ್ಲರೂ ಆರಂಭಿಸಬೇಕಾಯಿತು. ಇದಕ್ಕಾಗಿ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಎಂಬ ಗುಂಪನ್ನು ಫೇಸ್‌ಬುಕ್‌ನಲ್ಲಿ ಸೃಷ್ಟಿಸಿದೆವು. ನರೇಂದ್ರ ಶರ್ಮ ಅವರ ಪ್ರವಚನಗಳ ವಿಕೃತಿಗಳ ಕುರಿತು ಜೀ ಟಿವಿ ಮುಖ್ಯಸ್ಥರಿಗೊಂದು ಬಹಿರಂಗ ಪತ್ರವನ್ನೂ ಬರೆದೆವು. ಈ ಪತ್ರವನ್ನು ಕನ್ನಡದ ಹಲವು ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಮರು ಪ್ರಕಟಿಸಿದರು. ಈ ಪತ್ರವನ್ನು ಜೀ ಟಿವಿಯ ಇಮೇಲ್ ವಿಳಾಸಕ್ಕೆ ಕಳುಹಿಸಲು ವಿನಂತಿಸಿದ್ದೆವು. ನಮ್ಮ ವಿನಂತಿಯನ್ನು ಪುರಸ್ಕರಿಸಿ ಸಾವಿರಾರು ಮಂದಿ ಜೀ ಟಿವಿಗೆ ಪತ್ರ ಬರೆದರು.

ಜೀ ಟಿವಿಯವರು ಸಕಾರಾತ್ಮಕವಾಗಿ ಸ್ಪಂದಿಸಲೇಬೇಕಿತ್ತು. ಹೀಗಾಗಿ ಅವರು ಸಂಪಾದಕೀಯ ಎತ್ತಿದ ಪ್ರಶ್ನೆಗಳನ್ನಿಟ್ಟುಕೊಂಡು ಬದುಕು ಜಟಕಾ ಬಂಡಿಯ ಕಾರ್ಯಕ್ರಮದಲ್ಲಿ ನರೇಂದ್ರ ಶರ್ಮ ಅವರನ್ನು ಮಾಳವಿಕಾ ಮೂಲಕ ನಿಕಷಕ್ಕೆ ಒಡ್ಡಿತು. ನರೇಂದ್ರ ಶರ್ಮ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವುದಿರಲಿ, ಹೊಸ ಹೊಸ ಭೀಕರ ಡೈಲಾಗುಗಳನ್ನು ಹೊಡೆದು ಇನ್ನಷ್ಟು ಸಮಸ್ಯೆಗೆ ಸಿಕ್ಕಿಬಿದ್ದರು. ತನ್ನನ್ನು ಧರ್ಮದರ್ಶಿ ಎಂದು ಕರೆದುಕೊಂಡ ನರೇಂದ್ರ ಶರ್ಮ ತನ್ನನ್ನು ತಾನು ಬದಲಾಯಿಸಿಕೊಳ್ಳುವುದಿಲ್ಲ, ಹೆಣ್ಣು ಮಕ್ಕಳನ್ನು ಮುಂಡೇವಾ ಎನ್ನುವುದರಲ್ಲಿ ತಪ್ಪಿಲ್ಲ, ಜೀನ್ಸು, ಚೂಡಿ ಧರಿಸುವವರಿಗೆ ಕ್ಯಾನ್ಸರ್ ಬರುವುದು ಖಡಾಖಂಡಿತ ಇತ್ಯಾದಿಯಾಗಿ ಹೇಳಿಕೊಂಡುಬಿಟ್ಟರು.

ಕಾರ್ಯಕ್ರಮ ಮುಂದುವರೆದರೆ ಇನ್ನೊಂದು ಹಂತದ ಹೋರಾಟ ನಡೆಸಲು ತಯಾರಿಗಳು ನಡೆದಿದ್ದವು. ಈ ಕುರಿತು ನಾವು ಹಲವು ಜನಪರ ಸಂಘಟನೆಗಳನ್ನೂ ಸಂಪರ್ಕಿಸಿದ್ದೆವು. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು, ಧರಣಿ ನಡೆಸುವುದು ಇತ್ಯಾದಿ ಹೋರಾಟಗಳ ಯೋಜನೆ ಸಿದ್ಧವಾಗಿತ್ತು. ಆದರೆ ಯಕಶ್ಚಿತ್ ಇಂಥ ಕೆಟ್ಟ ಕಾರ್ಯಕ್ರಮ ನಿಲ್ಲಿಸಲು ಇಷ್ಟೆಲ್ಲ ನಡೆಸಬೇಕಾ? ಸೆನ್ಸಿಬಲಿಟಿ ಇರುವ ಜೀ ಟಿವಿಯ ಬಳಗದವರು ಇದನ್ನು ಅರ್ಥ ಮಾಡಿಕೊಂಡು ಕಾರ್ಯಕ್ರಮ ನಿಲ್ಲಿಸಲಾರರೆ ಎಂಬ ನಂಬಿಕೆಯೂ ಇತ್ತು. ಬಹುಶಃ ಆ ನಂಬಿಕೆಯೇ ಫಲ ಕೊಟ್ಟಿದೆ.

ನರೇಂದ್ರ ಶರ್ಮ ಅವರನ್ನು ಬೃಹತ್ ಬ್ರಹ್ಮಾಂಡದ ಕುರ್ಚಿಯಿಂದ ಎದ್ದು ಹೋಗಲು ಸೂಚಿಸಲಾಗಿದೆ. ಆ ಜಾಗಕ್ಕೆ ಆನಂದ್ ಗುರೂಜಿ ಎಂಬುವವರು ಬಂದಿದ್ದಾರಂತೆ.

ಎಲ್ಲರಿಗೂ ಅಭಿನಂದನೆಗಳು.

ಹಾಗಂತ ನಮ್ಮ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಇಲ್ಲಿಗೆ ಮುಗಿಯುವುದಿಲ್ಲ. ನರೇಂದ್ರ ಶರ್ಮ ಅಂಥವರ ವಿರುದ್ಧ ನಮ್ಮ ಹೋರಾಟ ಮುಂದುವರೆಸೋಣ.

Saturday, May 28, 2011

ಡಬ್ಬಿಂಗ್ ಸಿನಿಮಾಗಳು ಬೇಕು ಎನ್ನುವ ವಾದ ನಮ್ಮದು; ನಿಮ್ಮದು?


ಡಬ್ಬಿಂಗ್ ಸಿನಿಮಾಗಳು ಬೇಕೇ ಬೇಡವೇ ಎಂಬ ವಾದವಿವಾದ ಮತ್ತೆ ನಡೆಯುತ್ತಿದೆ. ಬೇಕೆ ಬೇಡವೇ ಎನ್ನುವುದನ್ನು ಕನ್ನಡ ಚಿತ್ರರಂಗದ ಪಂಡಿತರಷ್ಟೇ ನಿರ್ಧರಿಸಬೇಕೆ? ಅಥವಾ ಸಿನಿಮಾಗಳನ್ನು ನೋಡುವ ಪ್ರೇಕ್ಷಕರೂ ಈ ಚರ್ಚೆಯಲ್ಲಿ ಯಾಕಿರಬಾರದು ಎಂಬ ಮೂಲಭೂತ ಪ್ರಶ್ನೆ ನಮ್ಮದು. ಆದರೆ ಕನ್ನಡ ಪ್ರೇಕ್ಷಕರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವಂತೆಯೇ ನೋಡಿಕೊಂಡು ಬಂದಿರುವ ಸಿನಿಮಾ ಮಂದಿ ಈ ಚರ್ಚೆಯನ್ನು ಸಾರ್ವಜನಿಕಗೊಳಿಸಲು ಹಿಂದೂ ಮನಸ್ಸು ಮಾಡಿವರಲ್ಲ, ಇಂದೂ ಕೂಡ.

ಡಾ.ರಾಜಕುಮಾರ್ ಅವರು ಡಬ್ಬಿಂಗ್ ಸಿನಿಮಾಗಳನ್ನು ವಿರೋಧಿಸಿದ ಬೀದಿಗಳಿದ ಸಂದರ್ಭ ಬೇರೆಯದೇ ಆಗಿತ್ತು. ಆಗ ಕನ್ನಡ ಚಲನಚಿತ್ರರಂಗ ಇನ್ನೂ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕನ್ನಡ ಚಿತ್ರರಂಗ ಆಗಿನ್ನೂ ಬೆಳೆಯುತ್ತಿದ್ದ ಪುಟ್ಟ ಉದ್ಯಮವಾಗಿತ್ತು. ಆದರೆ ಈಗ ಹಾಗಿಲ್ಲ. ಯಾವುದಕ್ಕೂ ಯಾರನ್ನೂ ಅವಲಂಬಿಸುವ ಸ್ಥಿತಿ ಇಲ್ಲ. ಸ್ಟುಡಿಯೋಗಳನ್ನು ಹುಡುಕಿಕೊಂಡು ಚೆನ್ನೈಗೋ, ಮುಂಬೈಗೋ ಹೋಗುವ ಸ್ಥಿತಿಯೂ ಇಲ್ಲ. ಕನ್ನಡ ಚಿತ್ರಗಳಿಗೂ ವ್ಯಾಪಕವಾದ ಮಾರುಕಟ್ಟೆ ಇದೆ. ಒಳ್ಳೆಯ ಕನ್ನಡ ಸಿನಿಮಾಗಳನ್ನು ನೋಡುವ ಜನರು ಎಲ್ಲೆಡೆ ಇದ್ದಾರೆ. ಕಾಲದ ಅಗತ್ಯಕ್ಕೆ ರೂಪಿಸಿಕೊಂಡ ನಿಯಮಗಳು ಸಾರ್ವಕಾಲಿಕ ಆಗಬೇಕಿಲ್ಲ. ಈಗ ಕಾಲ ಬದಲಾಗಿದೆ. ನಿಲುವುಗಳ ಕುರಿತು ಪುನರ್‌ವಿಮರ್ಶೆ ಯಾಕಾಗಬಾರದು?

ಡಬ್ಬಿಂಗ್ ವಿರೋಧಿಸುವವರು ಬಹಳ ಮುಖ್ಯವಾಗಿ ಎತ್ತುವ ಪ್ರಶ್ನೆ ಏನೆಂದರೆ ಡಬ್ಬಿಂಗ್ ಸಿನಿಮಾಗಳು ಬಂದರೆ ಕನ್ನಡ ಚಲನಚಿತ್ರ ರಂಗದಲ್ಲಿ ಕಲಾವಿದರು, ತಂತ್ರಜ್ಞರು ಬೀದಿಪಾಲಾಗುತ್ತಾರೆ, ಅವರ ಅನ್ನಕ್ಕೆ ಕುತ್ತು ಬರುತ್ತದೆ ಎಂಬುದು. ಎರಡನೆಯದಾಗಿ ಅವರು ಕನ್ನಡ ಸಂಸ್ಕೃತಿ, ಭಾಷೆಯ ಕುರಿತಾದ ಪ್ರಶ್ನೆಗಳನ್ನು ಎತ್ತುತ್ತಾರೆ.

ಡಬ್ಬಿಂಗ್ ಸಿನಿಮಾಗಳನ್ನು ಕರ್ನಾಟಕದಲ್ಲಿ ನಿಷೇಧಿಸಿರುವ ಕ್ರಮವೇ ಕಾನೂನು ಬಾಹಿರ ಮತ್ತು ಅಪ್ರಜಾಸತ್ತಾತ್ಮಕ. ಹಾಗೆ ಸುಖಾಸುಮ್ಮನೆ ಏನನ್ನಾದರೂ ನಿಷೇಧಿಸುವ ಕ್ರಮವನ್ನು ದೇಶದ ಸಂವಿಧಾನ ಒಪ್ಪುವುದಿಲ್ಲ, ಯಾವ ನ್ಯಾಯಾಲಯಗಳೂ ಒಪ್ಪುವುದಿಲ್ಲ. ಜನರು ಏನನ್ನು ನೋಡಬಾರದು, ನೋಡಬೇಕು ಎಂದು ನಿರ್ದೇಶಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾಗಲೀ, ಇನ್ನೊಂದು ಸಂಸ್ಥೆಗಾಗಲೀ ಯಾರೂ ಅನುಮತಿಯನ್ನು ಕೊಟ್ಟಿಲ್ಲ. ಕಾನೂನಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧದ ಕ್ರಿಯೆಗೆ ಯಾವ ಮಾನ್ಯತೆಯೂ ಇಲ್ಲ.

ಡಬ್ಬಿಂಗ್ ಸಿನಿಮಾಗಳಿಂದ ಕನ್ನಡ ಸಿನಿಮಾರಂಗದ ತಂತ್ರಜ್ಞರು, ಕಲಾವಿದರು ಕೆಲಸ ಕಳೆದುಕೊಂಡು ಬೀದಿಪಾಲಾಗುತ್ತಾರೆ ಎಂಬ ವಾದಕ್ಕೆ ಯಾವ ಅರ್ಥವೂ ಇಲ್ಲ, ಪುರಾವೆಯೂ ಇಲ್ಲ. ಇದು ಒಂದು ರೀತಿಯ ಹೇಡಿತನದ, ಪಲಾಯನಾವಾದಿ, ಅಂಜುಗುಳಿ ವಾದ. ಡಬ್ಬಿಂಗ್ ಸಿನಿಮಾ ಬರಲಿ ಅಂದರೆ ಕನ್ನಡ ಸಿನಿಮಾಗಳು ನಿಲ್ಲಲಿ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ಹಾಗೆ ನೋಡಿದರೆ, ಡಬ್ಬಿಂಗ್ ಸಿನಿಮಾಗಳು ಪೂರ್ತಿಯಾಗಿ ಕನ್ನಡ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಕನ್ನಡ ಪ್ರೇಕ್ಷಕರು ನೇಟಿವಿಟಿಯನ್ನು ಬಯಸುತ್ತಾರೆ. ಶಿವಣ್ಣ, ದರ್ಶನ್, ಸುದೀಪ್ ಇತ್ಯಾದಿಗಳಾದಿಯಾಗಿ ಲೂಸ್ ಮಾದನವರೆಗೆ ಎಲ್ಲ ನಟರ ಜತೆಗೆ ಅವರಿಗೊಂದು ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಒಳ್ಳೆಯ ಕನ್ನಡ ಸಿನಿಮಾಗಳನ್ನು ಕೊಟ್ಟರೆ ನೋಡೇನೋಡುತ್ತಾರೆ. ತಮ್ಮನ್ನು ಸೆಳೆಯದ ಚಿತ್ರಗಳು ಡಬ್ಬಿಂಗ್ ಆಗಲಿ, ರೀಮೇಕ್ ಆಗಲೀ, ಸ್ವಮೇಕ್ ಆಗಲಿ ಪ್ರೇಕ್ಷಕರು ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಅದರರ್ಥ ತಮಿಳಿನಲ್ಲಿ, ತೆಲುಗಿನಲ್ಲಿ ಮೆಗಾಹಿಟ್ ಆದ ಸಿನಿಮಾಗಳೆಲ್ಲವೂ ಕನ್ನಡದಲ್ಲಿ ಡಬ್ ಆದಾಗ ಅದೇ ಪ್ರಮಾಣದಲ್ಲಿ ಹಿಟ್ ಆಗುತ್ತದೆ ಎಂದು ಕುರುಡಾಗಿ ನಂಬಿಕೊಳ್ಳಬೇಕಾಗಿಲ್ಲ. ಯೋಗರಾಜ ಭಟ್, ದುನಿಯಾ ಸೂರಿ, ಗುರುಪ್ರಸಾದ್ ಹಾಗು ಈ ಸಾಲಿಗೆ ಸೇರುವ ಒಂದು ಡಜನ್‌ಗೂ ಹೆಚ್ಚು ನಿರ್ದೇಶಕರು ನಮ್ಮ ಪ್ರೇಕ್ಷಕರನ್ನು ಸೆಳೆಯಬಲ್ಲ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ. ಮುಂದೆಯೂ ಇಂಥ ಸಿನಿಮಾಗಳನ್ನು ಕೊಡುವ ಆತ್ಮವಿಶ್ವಾಸವೂ ಅವರಿಗಿದೆ. ಹೀಗಿರುವಾಗ ಕಲಾವಿದರು, ತಂತ್ರಜ್ಞರು ಬೀದಿಪಾಲಾಗುತ್ತಾರೆ ಎಂದು ಕಣ್ಣೀರು ಹಾಕುತ್ತ ಕುಳಿತುಕೊಳ್ಳುವುದರಲ್ಲಿ ಯಾವ ಅರ್ಥವಿದೆ?

ಡಬ್ಬಿಂಗ್ ವಿರೋಧಿಗಳು ತಮ್ಮ ವಾದ ಸಮರ್ಥನೆಗಾಗಿ ಭಾಷೆ, ಸಂಸ್ಕೃತಿಯ ಹೆಸರನ್ನು ಗುರಾಣಿಯಾಗಿ ಬಳಸುತ್ತ ಬಂದಿದ್ದಾರೆ. ಇದು ದೊಡ್ಡ ಆತ್ಮವಂಚನೆ. ಹಾಗೆ ನೋಡಿದರೆ ಡಬ್ಬಿಂಗ್ ಸಿನಿಮಾಗಳು ಕನ್ನಡ ಭಾಷೆಯನ್ನು ಬೆಳೆಸುತ್ತವೆ ಎಂದೇ ಸ್ಪಷ್ಟವಾಗಿ ಹೇಳುವ ಸಮಯ ಬಂದಿದೆ. ರಜನಿಕಾಂತ್, ಚಿರಂಜೀವಿ, ಅಭಿಷೇಕ್ ಬಚ್ಚನ್‌ರ ಸಿನಿಮಾಗಳನ್ನು ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನೋಡುವ ಬದಲು ಕನ್ನಡ ಭಾಷೆಯಲ್ಲಿ ನೋಡಿದರೆ, ಭಾಷೆ ಬೆಳವಣಿಗೆಯಾಗುವುದಿಲ್ಲವೇ? ಗುಣಮಟ್ಟದ ಕಾರಣಕ್ಕಾಗಿ ಕನ್ನಡಿಗರೇ ಇಂದು ತಮ್ಮದಲ್ಲದ ಭಾಷೆಗಳಾದ ತಮಿಳು, ತೆಲುಗು ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇಂಥವರು ಇದೇ ಸಿನಿಮಾಗಳನ್ನು ಕನ್ನಡ ಭಾಷೆಯಲ್ಲಿ ನೋಡಲು ಬಯಸಿದರೆ ತಪ್ಪೇನಿದೆ?

ಇನ್ನು ಸಂಸ್ಕೃತಿಯ ವಿಷಯ ಎತ್ತುವ ನೈತಿಕತೆ ನಮ್ಮ ಸಿನಿಮಾ ರಂಗಕ್ಕೆ ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಲ್ಲಿ ಅವರು ಸಾಲುಮೇರೆ ರೀಮೇಕ್ ಸಿನಿಮಾಗಳನ್ನು ಮಾಡುತ್ತಿರಲಿಲ್ಲ. ಮೂರು ತಮಿಳು-ತೆಲುಗು ಸಿನಿಮಾಗಳ ಡಿವಿಡಿಗಳನ್ನು ನಿರ್ದೇಶಕರ ಕೈಗೆ ಕೊಟ್ಟು ಒಂದು ಕನ್ನಡ ಸಿನಿಮಾ ಮಾಡಿಕೊಡಿ ಎಂದು ನಮ್ಮ ನಿರ್ಮಾಪಕರು ಹೇಳುತ್ತಿರಲಿಲ್ಲ. ರೀಮೇಕ್‌ನ ಹೆಸರಲ್ಲಿ ತಮಿಳುನಾಡಿನ ಮೀಸೆ, ನಾಮಗಳಿಂದ ಹಿಡಿದು ಎಲ್ಲವನ್ನೂ ತಂದು ಕನ್ನಡ ಪ್ರೇಕ್ಷಕರಿಗೆ ಕೊಟ್ಟ ಜನರಲ್ಲವೇ ಇವರು? ಸಿನಿಮಾ ಶೂಟಿಂಗ್ ನಡೆಯುವಾಗಲೇ ಮೂಲ ಸಿನಿಮಾದ ಡಿವಿಡಿ ಪ್ಲೇ ಮಾಡಿಕೊಂಡು, ಪ್ರತಿ ಶಾಟ್‌ಗಳನ್ನು ಶೂಟ್ ಮಾಡಿದ ಪ್ರಭೃತಿಗಳು ಇವರೇ ಅಲ್ಲವೇ? ಇವರು ಸಂಸ್ಕೃತಿಯ ವಿಷಯವನ್ನೇಕೆ ಮಾತನಾಡುತ್ತಾರೆ?

ತಮಿಳಿಗರು ರಾಮಾಯಣವನ್ನೂ, ಮಹಾಭಾರತವನ್ನೂ ತಮಿಳಿನಲ್ಲೇ ನೋಡಿದರು. ಜುರಾಸಿಕ್ ಪಾರ್ಕ್, ಟೈಟಾನಿಕ್, ೨೦೧೨ನಂಥ ಸಿನಿಮಾಗಳನ್ನು ಸಹ ತಮಿಳಿನಲ್ಲೇ ನೋಡಿದರು. ಕನ್ನಡಿಗರಿಗೆ, ಅದರಲ್ಲೂ ಕನ್ನಡ ಹೊರತು ಬೇರೆ ಯಾವ ಭಾಷೆಯೂ ಬಾರದ ಹಳ್ಳಿಗಾಡಿನ ಅಪ್ಪಟ ಕನ್ನಡಿಗರಿಗೆ ಈ ಸಿನಿಮಾಗಳನ್ನು ತಮ್ಮದೇ ಭಾಷೆಯಲ್ಲಿ ನೋಡುವ ಅವಕಾಶವನ್ನು ನಾವೇ ತಪ್ಪಿಸಿದೆವಲ್ಲವೆ? ಹೋಗಲಿ, ಜುರಾಸಿಕ್ ಪಾರ್ಕ್ ಸಿನಿಮಾವನ್ನು ರೀಮೇಕ್ ಮಾಡುವ ಶಕ್ತಿ ನಮ್ಮ ನಿರ್ಮಾಪಕರಿಗೆ ಇದೆಯೇ? ಇಲ್ಲವಾದರಲ್ಲಿ ಅದರ ಡಬ್ಬಿಂಗ್ ಸಿನಿಮಾ ನೋಡುವ ವೀಕ್ಷಕರ ಹಕ್ಕನ್ನು ಕಿತ್ತುಕೊಂಡಿದ್ದು ಎಷ್ಟು ಸರಿ?

ತಮಿಳಿನ ಬಹುತೇಕ ಸಿನಿಮಾಗಳು ತೆಲುಗಿಗೆ, ತೆಲುಗಿನ ಬಹುತೇಕ ಸಿನಿಮಾಗಳು ತಮಿಳಿಗೆ ಡಬ್ ಆಗುತ್ತಲೇ ಇವೆ. ಹಾಗಂತ ತಮಿಳು ಇಂಡಸ್ಟ್ರಿಯೂ ಬಿದ್ದು ಹೋಗಿಲ್ಲ, ತೆಲುಗು ಇಂಡಸ್ಟ್ರಿಯೂ ಮಲಗಿಕೊಂಡಿಲ್ಲ. ಇವರಿಗೆ ಯಾರಿಗೂ ಇರದ ಭಯ ಕನ್ನಡ ಚಿತ್ರರಂಗಕ್ಕೆ ಏಕೆ?

ಒಂದು ಸಿನಿಮಾಗೆ ತಮಿಳು, ತೆಲುಗಿನವರು ನೂರಾರು ಕೋಟಿ ರೂ. ತೊಡಗಿಸುತ್ತಾರೆ. ನಮ್ಮ ಇಂಡಸ್ಟ್ರಿ ಅಷ್ಟು ಬೆಳೆದಿಲ್ಲ ಎಂದು ಪದೇ ಪದೇ ನಮ್ಮವರು ತಮ್ಮ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಯಾಕೆ ಈ ಕೊರಗು? ಕಡಿಮೆ ಬಜೆಟ್‌ನ ಸಿನಿಮಾಗಳು ಹಿಟ್ ಆಗೋದೇ ಇಲ್ಲವೇ? ಸಿನಿಮಾಗಳನ್ನು ಹೊರತುಪಡಿಸಿದ ಪರ‍್ಯಾಯ ಮಾಧ್ಯಮಗಳು ಸಿನಿಮಾಗಳ ಹೊಡೆತವನ್ನು ಎದುರಿಸಿಯೂ ಉಳಿದುಕೊಂಡಿಲ್ಲವೇ? ಹವ್ಯಾಸಿ ರಂಗಭೂಮಿ, ಕಂಪನಿ ರಂಗಭೂಮಿ, ಬಯಲಾಟ, ಯಕ್ಷಗಾನ ಎಲ್ಲವೂ ಉಳಿದುಕೊಂಡಿಲ್ಲವೇ? ಅವರುಗಳೂ ಸಹ ಸಿನಿಮಾದವರ ಹಾಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಲು ನಮ್ಮಲ್ಲಿ ಹಣವಿಲ್ಲ. ಹೀಗಾಗಿ ಸಿನಿಮಾಗಳನ್ನೇ ಬ್ಯಾನ್ ಮಾಡಿ ಎಂದು ಎಂದಾದರೂ ಕೇಳಿದ್ದಾರೆಯೇ?

ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಕಿರುತೆರೆಯೂ ಸಹ ದೊಡ್ಡದಾಗಿ ಬೆಳೆದಿದೆ. ಹಲವಾರು ಚಾನಲ್‌ಗಳಿಂದಾಗಿ ಕಲಾವಿದರಿಗೆ, ತಂತ್ರಜ್ಞರಿಗೆ ವಿಪುಲವಾದ ಅವಕಾಶಗಳು ಸೃಷ್ಟಿಯಾಗಿವೆ. ಇವುಗಳಲ್ಲದೆ ನಮ್ಮ ತಂತ್ರಜ್ಞರು, ನಟರು ಇತರ ಭಾಷೆಯ ಉದ್ಯಮಗಳಲ್ಲೂ ತೊಡಗಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ನಮ್ಮ ಇಂಡಸ್ಟ್ರಿಯೇ ನಾಶವಾಗುತ್ತದೆ, ನಮ್ಮ ಜನರೆಲ್ಲ ಬೀದಿಗೆ ಬೀಳುತ್ತಾರೆ ಎಂದು ಹೇಳುವುದೇ ನಗೆಪಾಟಲಿನ ವಿಷಯ.

ಜಾಗತೀಕರಣದ ಕಾಲವಿದು. ಗುಲ್ಬರ್ಗದ ಹಳ್ಳಿಯೊಂದರಿಂದ ಗಾರೆ ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಬಡ ಕೂಲಿಕಾರ್ಮಿಕ ತಮಿಳುನಾಡಿನ, ಉತ್ತರಪ್ರದೇಶದ ಕೂಲಿ ಕಾರ್ಮಿಕರಿಂದ ಪೈಪೋಟಿ ಎದುರಿಸುತ್ತಾನೆ. ನಮ್ಮ ಹಳ್ಳಿಯ ರೈತರು ಇನ್ನ್ಯಾವುದೋ ದೇಶದ ರೈತರ ಜತೆ ತಮಗೆ ಗೊತ್ತಿಲ್ಲದಂತೆಯೇ ಪೈಪೋಟಿ ನಡೆಸಿ ತನ್ನ ಬದುಕನ್ನು ಕಾಪಾಡಿಕೊಳ್ಳಲು ಹೆಣಗುತ್ತಿದ್ದಾರೆ. ಇದೇ ಮಾತನ್ನು ಎಲ್ಲ ಉದ್ಯಮಗಳಿಗೂ, ಅವುಗಳಲ್ಲಿ ಕೆಲಸ ಮಾಡುವ ನೌಕರರಿಗೂ ಅನ್ವಯಿಸಿ ಹೇಳಬಹುದು. ಆದರೆ ಬಣ್ಣದ ಲೋಕದ ಮಂದಿ ಮಾತ್ರ ವಿನಾಯಿತಿಗಳನ್ನು ಬಯಸುತ್ತಾರೆ. ಅದೂ ಕೂಡ ತಾವು ಬಣ್ಣದ ಲೋಕದವರು ಎಂಬ ಒಂದೇ ಕಾರಣಕ್ಕೆ!

ಡಬ್ಬಿಂಗ್ ಸಂಸ್ಕೃತಿಯನ್ನೇ ಇವರು ಸಾರಾಸಗಟಾಗಿ ವಿರೋಧಿಸುವುದಾದರೆ ಕನ್ನಡ ಸಿನಿಮಾಗಳೆಲ್ಲ ತೆಲುಗಿಗೆ ಡಬ್ ಆಗುವುದು ಯಾವ ಕಾರಣಕ್ಕೆ? ಹೀಗೆ ಡಬ್ ಮಾಡಿ ಆಂಧ್ರಪ್ರದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುವವರು ಅಥವಾ ಡಬ್ಬಿಂಗ್ ಹಕ್ಕನ್ನು ಮಾರುವವರು ಇದೇ ಇಂಡಸ್ಟ್ರಿಯವರಲ್ಲವೇ? ಹಣ ಬರುವುದಾದರೆ ಡಬ್ಬಿಂಗ್ ಬೇಕು, ಇಲ್ಲವಾದರೆ ಬೇಡ. ಇದು ಯಾವ ನೈತಿಕತೆ?

ಕನ್ನಡ ಚಿತ್ರರಂಗದವರು ಈ ಫ್ಯೂಡಲ್ ಮನೋಭಾವವನ್ನು ಬಿಟ್ಟು, ಆರೋಗ್ಯಕರ ಸ್ಪರ್ಧೆಗೆ ಒಡ್ಡಿಕೊಳ್ಳುವುದಾದರೂ ಯಾವಾಗ?

ಡಬ್ಬಿಂಗ್ ಸಿನಿಮಾ ಮೇಲಿನ ನಿಷೇಧ ಸರಿಯಲ್ಲ ಮತ್ತು ಡಬ್ಬಿಂಗ್ ಸಿನಿಮಾಗಳು ಮತ್ತೆ ಬರುವಂತಾಗಲಿ ಎಂದು ನಮಗಂತೂ ಅನಿಸಿದೆ. ನಿಮಗೆ? ದಯವಿಟ್ಟು ಓಟ್ ಮಾಡಿ.




Friday, May 27, 2011

ವಿಜಯ ಸಂಕೇಶ್ವರರ ಹೊಸ ಪತ್ರಿಕೆಗೆ ಸಾರಥಿ ಯಾರು?

ವಿಆರ್‌ಎಲ್ ಸಂಸ್ಥೆಯ ಮಾಲೀಕರಾದ ವಿಜಯ ಸಂಕೇಶ್ವರರು ಆರಂಭಿಸಲಿರುವ ಹೊಸ ದಿನಪತ್ರಿಕೆಗೆ ತಿಂಗಳುಗಣನೆ ಆರಂಭವಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರರ ಎರಡನೇ ಇನ್ನಿಂಗ್ಸ್ ಇದು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿದ ಭರ್ಜರಿ ಯಶಸ್ಸು ಈಗ ಇತಿಹಾಸ. ವಿಜಯ ಕರ್ನಾಟಕದ ಮೂಲಕ ಸಂಕೇಶ್ವರರು ಎಬ್ಬಿಸಿದ ಬಿರುಗಾಳಿ ಕರ್ನಾಟಕದ ಪತ್ರಿಕಾಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿತ್ತು. ಸಂಕೇಶ್ವರರು ತಮ್ಮ ವ್ಯಾವಹಾರಿಕ ಜಾಣ್ಮೆಯನ್ನು ಪ್ರಯೋಗಿಸಿ ವಿಜಯ ಕರ್ನಾಟಕವನ್ನು ನಂ.೧ ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಶ್ವೇಶ್ವರ ಭಟ್ಟರಂಥ ಪ್ರಯೋಗಶೀಲ ಸಂಪಾದಕರು  ಲಭಿಸಿದ್ದೂ ಸಹ ಅವರಿಗೆ ಅನುಕೂಲಕರವಾಗಿತ್ತು. ಕನ್ನಡ ಪತ್ರಿಕಾರಂಗದಲ್ಲಿ ಹಿಂದೆಂದೂ ಕಾಣದಂಥ ಬೆಲೆಸಮರವನ್ನು ಆರಂಭಿಸಿ, ಇತರ ಎಲ್ಲ ಪತ್ರಿಕೆಗಳಿಗೆ ಹೊಡೆತ ಕೊಡುವಲ್ಲಿ ಸಂಕೇಶ್ವರರು ಯಶಸ್ವಿಯಾಗಿದ್ದರು. ಇವತ್ತಿನ ಪತ್ರಿಕೆಯನ್ನು ನಾಳೆ ಓದುವಂಥ ವ್ಯವಸ್ಥೆಯಿದ್ದ ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಗೆ ಬೆಳಿಗ್ಗೆ ೬ ಗಂಟೆಗೆಲ್ಲ ತಮ್ಮ ವಿಶಾಲ ನೆಟ್‌ವರ್ಕ್‌ನ ಮೂಲಕ ತಲುಪಿಸಿದ್ದು ಸಂಕೇಶ್ವರರ ಮಹತ್ವಪೂರ್ಣ ಸಾಧನೆ. ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಳ್ಳುವುದರ ಜತೆಜತೆಗೆ ಹೊಸ ಓದುಗರನ್ನು ಸೃಷ್ಟಿಸಿದ್ದು ವಿಜಯ ಕರ್ನಾಟಕದ ಹೆಮ್ಮೆ. ಆದರೆ ವಿಜಯ ಕರ್ನಾಟಕ ತನ್ನ ಬೆಲೆ ಸಮರದ ಮೂಲಕ ಸಣ್ಣ ಪತ್ರಿಕೆಗಳ ಬೇರುಗಳನ್ನೇ ಅಲ್ಲಾಡಿಸಿಬಿಟ್ಟಿತು. ಹಲವಾರು ಪತ್ರಿಕೆಗಳು ಮುಚ್ಚಿಹೋಗುವಂಥ ಪರಿಸ್ಥಿತಿ ನಿರ್ಮಾಣವಾಯಿತು.

ಸಂಕೇಶ್ವರರು ತಮ್ಮ ವಿಜಯ ಕರ್ನಾಟಕವನ್ನು ಅದರ ಜತೆಗೆ ಉಷಾಕಿರಣ ಎಂಬ ತಮ್ಮದೇ ಪರ್ಯಾಯ ಪತ್ರಿಕೆಯನ್ನು, ವಿಜಯ ಟೈಮ್ಸ್ ಎಂಬ ಇಂಗ್ಲಿಷ್ ಪತ್ರಿಕೆಯನ್ನು ಟೈಮ್ಸ್ ದೊರೆಗಳಿಗೆ ಮಾರುವುದರ ಮೂಲಕ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದರು. ಹೀಗೆ ಪತ್ರಿಕೆಗಳನ್ನು ಮಾರುವಂತಾಗಲು ನಿರ್ಮಾಣಗೊಂಡ ಸನ್ನಿವೇಶಗಳಿಗೆ ಹಲವು ಆಯಾಮಗಳಿವೆ. ಕಾರಣಗಳು ಮಾತ್ರ ಇನ್ನೂ ನಿಗೂಢ.

ಈಗ ಮತ್ತೊಂದು ಇನ್ನಿಂಗ್ಸ್ ಆಡಲು ಸಂಕೇಶ್ವರರು ಪ್ಯಾಡು ಕಟ್ಟಿ ಇಳಿಯುತ್ತಿದ್ದಾರೆ. ಹೇಳಿಕೇಳಿ ಅವರು ಅಪ್ಪಟ ವ್ಯವಹಾರಸ್ಥರು. ರಾಜಕೀಯ ಜಾಣ್ಮೆಯಿಲ್ಲದೆ ಆ ಕ್ಷೇತ್ರದಲ್ಲಿ ಏಟು ತಿಂದಿದ್ದೇನೋ ನಿಜ. ಆದರೆ ವ್ಯವಹಾರದಲ್ಲಿ ಅವರು ನಿಸ್ಸೀಮರೆಂದು ಎಲ್ಲರಿಗೂ ಗೊತ್ತಿರುವುದರಿಂದಲೇ ಹೊಸ ಪತ್ರಿಕೆಯ ಸ್ವರೂಪ, ಉದ್ದೇಶ, ಗುರಿ ಇತ್ಯಾದಿಗಳ ಕುರಿತು ಮಾಧ್ಯಮ ಪಂಡಿತರಲ್ಲಿ ಸಾಕಷ್ಟು ಕುತೂಹಲವಿದೆ.

ಅದೆಲ್ಲ ಸರಿ, ಸಂಕೇಶ್ವರರ ಹೊಸ ಪತ್ರಿಕೆಗೆ ಸಾರಥಿಗಳು ಯಾರು? ನಮಗೆ ಗೊತ್ತಾಗಿರುವ ಮಾಹಿತಿ ಪ್ರಕಾರ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಹಾಗು ತಿಮ್ಮಪ್ಪ ಭಟ್ಟರ ಹೆಸರು ಮುಂಚೂಣಿಯಲ್ಲಿದೆ. ಇಬ್ಬರೂ ಸಜ್ಜನರು, ಸಂಭಾವಿತರು. ಇಬ್ಬರಿಗೂ ಹೊಸ ಪತ್ರಿಕೆಯನ್ನು ನಿರ್ವಹಿಸಲು ಬೇಕಾದ ಅನುಭವವಿದೆ. ಈ ಪೈಕಿ ಉದಯವಾಣಿ ಮಾಜಿ ಸಂಪಾದಕರಾದ ತಿಮ್ಮಪ್ಪ ಭಟ್ಟರು ಸಂಕೇಶ್ವರರ ಹೊಸ ಪತ್ರಿಕೆಯಲ್ಲಿ ಇದ್ದೇ ಇರುತ್ತಾರೆ ಎಂಬುದು ನಮಗೆ ಗೊತ್ತಾದ ಖಚಿತ ಮಾಹಿತಿ.

ಈಶ್ವರ ದೈತೋಟ ಅವರು ಹಿಂದೆ ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ, ಉದಯವಾಣಿ.. ಹೀಗೆ ಒಂದಾದ ಮೇಲೊಂದರಂತೆ ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದವರು. ಹಿರಿಯ ಪತ್ರಕರ್ತ ಮಹದೇವಪ್ಪ ಅವರೊಂದಿಗೆ ಸೇರಿ ಆರಂಭದ ದಿನಗಳಲ್ಲಿ ವಿಜಯ ಕರ್ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ್ದವರು. ಸಂಕೇಶ್ವರರ ಹೊಸ ಪತ್ರಿಕೆಗೆ ಅವರು ಸಂಪಾದಕರಾಗುತ್ತಾರಾ? ಕಾದು ನೋಡಬೇಕು.

ಇನ್ನು ಈ ಹೊಸ ಪತ್ರಿಕೆಗೆ ಸಿಬ್ಬಂದಿಯನ್ನು ತೆಗೆದುಕೊಳ್ಳುವ ಸಲುವಾಗಿ ಪತ್ರಕರ್ತರನ್ನು ಗುರುತಿಸುವ ಕೆಲಸ ಸದ್ದುಗದ್ದಲವಿಲ್ಲದೆ ನಡೆಯುತ್ತಿದೆ. ಉದಯವಾಣಿ, ವಿಜಯ ಕರ್ನಾಟಕ ಹಾಗು ಕನ್ನಡಪ್ರಭ ಪತ್ರಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆದ ಬದಲಾವಣೆಗಳಿಂದ ಇರಿಸುಮುರಿಸಿಗೆ ಒಳಗಾದ ಹಲವರು ಸಂಕೇಶ್ವರರ ಕಡೆ ವಾಲಬಹುದು.

ಸಂಕೇಶ್ವರರು ಏನನ್ನೇ ಮಾಡಿದರೂ ದೊಡ್ಡ ಮಟ್ಟದಲ್ಲಿ ಮಾಡುವವರು. ಪತ್ರಿಕೆ ಆರಂಭಿಸುವಾಗಲೇ ಹಲವು ಆವೃತ್ತಿಗಳೊಂದಿಗೇ ನುಗ್ಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಅವರಿಗೆ ಹೆಚ್ಚು ಸಿಬ್ಬಂದಿಯೂ ಬೇಕಾಗಬಹುದು. ಹೀಗಾಗಿ ಪತ್ರಕರ್ತರಿಗೆ ಮತ್ತೆ ಅವಕಾಶಗಳು ಒದಗಿ ಬಂದಂತಾಗಿದೆ.

ಕನ್ನಡದಲ್ಲಿ ಹೊಸ ದಿನಪತ್ರಿಕೆಯ ಪ್ರಯೋಗವನ್ನು ಮಾಡಲು ಎಲ್ಲರೂ ಅಂಜುತ್ತಾರೆ. ವಿಜಯ ಕರ್ನಾಟಕ ಹೊರತು ಪಡಿಸಿ ಹೊಸ ಪತ್ರಿಕೆಯ ಪ್ರಯೋಗ ಯಶಸ್ವಿಯಾದ ಉದಾಹರಣೆಗಳೂ ಸಹ ಇಲ್ಲ. ಹೀಗಿರುವಾಗ ಸಂಕೇಶ್ವರರ ಹೊಸ ಪತ್ರಿಕೆ ಹೇಗಿರುತ್ತದೆ? ಯಾವ ಮಟ್ಟದ ಪೈಪೋಟಿ ನೀಡುತ್ತದೆ? ಮತ್ತೊಂದು ಸುತ್ತಿನ ಬೆಲೆ ಸಮರ ಕನ್ನಡ ಪತ್ರಿಕಾರಂಗದಲ್ಲಿ ಶುರುವಾಗಬಹುದಾ?

ಕುತೂಹಲಗಳು ಸಾಕಷ್ಟಿವೆ. ನೋಡ್ತಾ ಇರೋಣ, ಏನೇನ್ ಆಗುತ್ತೆ ಅಂತ.

ಇದಿಷ್ಟು ಸಂಕೇಶ್ವರರ ಹೊಸ ಪತ್ರಿಕೆಯ ಕಥೆಯಾಯಿತು. ಸುವರ್ಣ ನ್ಯೂಸ್‌ನಿಂದ ತೆರೆಮರೆಗೆ ಸರಿದ ನಂತರ ಎಚ್.ಆರ್.ರಂಗನಾಥ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಲವರದ್ದು. ನಮಗೂ ಸಹ ಈ ಕುತೂಹಲ ಇದ್ದೇ ಇದೆ. ರಂಗನಾಥ್ ಅವರು ವಾಪಾಸು ಬರಲಿದ್ದಾರೆ, ಹೊಸ ಚಾನಲ್‌ನೊಂದಿಗೆ ಹಿಂದಿರುಗಲಿದ್ದಾರೆ. ಇದು ಸದ್ಯಕ್ಕೆ ನಮಗೆ ಗೊತ್ತಾಗಿರುವ ಅಪೂರ್ಣ ಮಾಹಿತಿ. ಹೇಗೆ, ಏನು ಎಂಬುದನ್ನು ಟ್ರಾಕ್ ಮಾಡುತ್ತಿರುತ್ತೇವೆ. ಗೊತ್ತಾದ ಕೂಡಲೇ ಹೇಳುತ್ತೇವೆ.

ಕೊನೆ ಕುಟುಕು: ಆದಿಕವಿ ಪಂಪ ಹೇಗೆ ಕವಿ ಮತ್ತು ಕಲಿ ಎರಡೂ ಆಗಿದ್ದನೋ ಹಾಗೆಯೇ ನಮ್ಮ ಡಿ.ಸಿ.ರಾಜಪ್ಪನವರು ಲಾಠಿ ಹಿಡಿದು ಸಮಾಜವನ್ನು ತಿದ್ದುತ್ತಾರೆ, ಲೇಖನಿ ಹಿಡಿದು ಸರಿ ದಾರಿಗೆ ತರುತ್ತಾರೆ.... ಹೀಗೆ ವಿಜಾಪುರ ರಕ್ಷಣಾಧಿಕಾರಿ ಡಿ.ಸಿ.ರಾಜಪ್ಪನವರನ್ನು ವಾಚಾಮಗೋಚರವಾಗಿ ಹೊಗಳಿದವರು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್. ವಿಜಾಪುರ ವೈಭವ ಎಂಬ ಸ್ಮರಣ ಸಂಚಿಕೆಯ ಬೆನ್ನುಡಿಯಲ್ಲಿ ಅವರು ಹೀಗೆ ಬರೆದಿದ್ದಾರೆ. ಅಭಿನವ ಪಂಪನನ್ನು ಹುಡುಕಿದ್ದಾಯಿತು. ಇನ್ನು ಅಭಿನವ ರನ್ನ, ಪೊನ್ನ, ರಾಘವಾಂಕ, ಕುಮಾರವ್ಯಾಸ ಇತ್ಯಾದಿಗಳನ್ನು ಹುಡುಕಿಕೊಡುವ ಹೊಣೆಯೂ ಜಿ.ಎನ್.ಮೋಹನ್‌ರದ್ದು.

Thursday, May 26, 2011

ಪತ್ರಕರ್ತರ ಪ್ರಶಸ್ತಿಯನ್ನು ಪತ್ರಿಕೋದ್ಯಮಿಗಳು ಪಡೆಯುವುದು ಎಷ್ಟು ಸರಿ?

ಪ್ರಜಾವಾಣಿಯ ನಿವೃತ್ತ ಸಹಾಯಕ ಸಂಪಾದಕ ಹಾಗು ಸಾಹಿತಿ ರಂಜಾನ್ ದರ್ಗಾ ಅವರು ಎರಡು ಘಟನೆಗಳು: ಉತ್ತರಿಸಲು ಸಾಧ್ಯವಾಗದ ಹಲವು ಪ್ರಶ್ನೆಗಳು ಎಂಬ ಲೇಖನಕ್ಕೆ ನೀಡಿರುವ ಒಂದು ಪ್ರತಿಕ್ರಿಯೆ ಗಂಭೀರ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಮೀಡಿಯಾ ಸಂಸ್ಥೆಗಳ ಮಾಲೀಕರು ಪತ್ರಕರ್ತರಿಗೆ ಕೊಡಲಾಗುವ ಪ್ರಶಸ್ತಿಗಳನ್ನು ಪಡೆಯುವುದು ಸರಿಯೇ ಎಂಬುದು ಈ ಬಹುಮುಖ್ಯವಾದ ಪ್ರಶ್ನೆ.

ನಿಜ, ಇಂಥದ್ದೊಂದು ಟ್ರೆಂಡ್ ಚಾಲ್ತಿಯಲ್ಲಿದೆ. ಇದನ್ನು ನಾವು ಸಬ್ಜೆಕ್ಟಿವ್ ಆಗಿ ಚರ್ಚಿಸುವುದು ಒಳ್ಳೆಯದು ಅನಿಸುತ್ತದೆ. ಹಿಂದೆ ಹೀಗೆ ಪ್ರಶಸ್ತಿ ಪಡೆದವರು ಯಾರು? ಯಾಕೆ? ಹೇಗೆ? ಇತ್ಯಾದಿ ಪ್ರಶ್ನೆಗಳು ಸದ್ಯಕ್ಕೆ ಇಲ್ಲಿ ಬೇಕಾಗಿಲ್ಲ. ಮಾಲೀಕರು ಪತ್ರಕರ್ತರ ಹೆಸರಿನ ಪ್ರಶಸ್ತಿ ಪಡೆಯುವುದು ಸರಿಯೇ ತಪ್ಪೇ ಎಂಬುದಷ್ಟೇ ನಮ್ಮ ಚರ್ಚೆಯ ವಿಷಯವಾಗಲಿ ಎಂಬುದು ನಮ್ಮ ಇಂಗಿತ.

ರಂಜಾನ್ ದರ್ಗಾ
ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುವ ಪ್ರಶಸ್ತಿಗಳನ್ನು ಪತ್ರಿಕಾ ಸಂಸ್ಥೆಗಳ ಮಾಲೀಕರಿಗೆ ನೀಡುವುದು ಸರ್ಕಾರಕ್ಕೆ ಮತ್ತು ಸರ್ಕಾರದ ಅಧೀನದಲ್ಲಿರುವ ಮಾಧ್ಯಮ ಅಕಾಡೆಮಿಯಂಥ ಸಂಸ್ಥೆಗಳಿಗೆ ಅತ್ಯಂತ ಸುಲಭದ, ಲಾಭದಾಯಕ ತೀರ್ಮಾನವಾಗಬಹುದು. ಇತ್ತೀಚಿಗೆ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡುವ ಮೂಲಕ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕ್ರಿಯೆಯೇ ಕಣ್ಣಿಗೆ ರಾಚುವಂತೆ ಕಂಡುಬರುತ್ತಿದೆ. ಕಳೆದ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಕರ್ತರನ್ನು ಆಯ್ಕೆ ಮಾಡುವ ಅನುಭವ, ಹಿರಿತನ, ಯೋಗ್ಯತೆಗಳಿಗಿಂತ ಹೆಚ್ಚಾಗಿ ಮಾಧ್ಯಮ ಕ್ಷೇತ್ರಗಳಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿರುವವರನ್ನೇ ಪರಿಗಣಿಸಿದ್ದನ್ನು ನಾವು ಗಮನಿಸಿದ್ದೇವೆ. ಮಾತ್ರವಲ್ಲದೆ ಪ್ರತಿ ಮಾಧ್ಯಮಕ್ಕೂ ಒಂದು ಪ್ರಶಸ್ತಿ ಎಂಬಂಥ ವಿಚಿತ್ರ ಮಾನದಂಡವನ್ನಿಟ್ಟುಕೊಂಡು ಪ್ರಶಸ್ತಿಗಳನ್ನು ಹಂಚಿದ್ದು ಢಾಳಾಗಿ ಕಾಣಿಸಿತು. ಸರ್ಕಾರ ಹೀಗೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ತನ್ನ ಲಾಭ-ನಷ್ಟದ ಲೆಕ್ಕಾಚಾರಗಳನ್ನು ಯೋಚಿಸುವಾಗ ಸಹಜವಾಗಿಯೇ ಮಾಧ್ಯಮ ಸಂಸ್ಥೆಗಳ ಒಟ್ಟಾರೆ ಹೊಣೆ ಹೊತ್ತ ಮಾಲೀಕರನ್ನು ಆಯ್ಕೆ ಮಾಡುವುದು ಅತ್ಯಂತ ಸಲೀಸಾದ ನಿರ್ಧಾರವಾಗಬಹುದು.

ಇಲ್ಲಿ ಎರಡು ಬಹುಮುಖ್ಯ ಪ್ರಶ್ನೆಗಳಿವೆ. ಒಂದು, ಪತ್ರಕರ್ತರ ಪ್ರಶಸ್ತಿಯನ್ನು ಸಂಸ್ಥೆಗಳ ಮಾಲೀಕರು, ಮ್ಯಾನೇಜ್‌ಮೆಂಟ್ ಹುದ್ದೆಗಳಲ್ಲಿರುವವರು ಪಡೆಯುವುದು ತಾಂತ್ರಿಕವಾಗಿ ಎಷ್ಟು ಸರಿ ಎಂಬುದು ಮೊದಲ ಪ್ರಶ್ನೆ. ಪತ್ರಿಕಾ ಸಂಸ್ಥೆಗಳ ಮಾಲೀಕರು ಪತ್ರಿಕೋದ್ಯಮಿಗಳೇ ಹೊರತು ಸಂಬಳ ಪಡೆದು ಹಗಲು-ರಾತ್ರಿ ದುಡಿಯುವ ಪತ್ರಕರ್ತರಾಗಿರುವುದಿಲ್ಲ. ಪತ್ರಿಕೋದ್ಯಮಿಗಳೇ ಪತ್ರಕರ್ತರಾಗಿರುವ ಸಣ್ಣ ಪತ್ರಿಕೆಗಳ ಮಾಲೀಕರಿದ್ದಾರೆ, ಅವರ ವಿಷಯ ಬೇರೆ. ಇವರು ಡಿಟಿಪಿ ಮಾಡುವುದರಿಂದ (ಹಿಂದೆ ಮೊಳೆ ಜೋಡಿಸುವುದರಿಂದ) ಹಿಡಿದು ಪೇಪರ್ ಬಂಡಲ್ ಹೊರುವವರೆಗೆ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ನಾವು ಇವರ ವಿಷಯ ಚರ್ಚಿಸುತ್ತಿಲ್ಲ. ದೊಡ್ಡ ಮಾಧ್ಯಮಗಳ ಮಾಲೀಕರು ರಿಪೋರ್ಟಿಂಗ್ ಮಾಡುವವರಲ್ಲ, ಕಾಪಿ ತಿದ್ದುವವರಲ್ಲ, ವಿನ್ಯಾಸ ಮಾಡುವವರಲ್ಲ, ಮತ್ತೊಂದು-ಮಗದೊಂದು ಮಾಡುವವರಲ್ಲ. ಹೀಗಿರುವಾಗ ಇವರು ಪತ್ರಕರ್ತರ ಪ್ರಶಸ್ತಿಯನ್ನು ಪಡೆಯುವುದು ತಾಂತ್ರಿಕವಾಗಿ ಎಷ್ಟು ಸರಿ? ಪತ್ರಿಕಾ ಸಂಸ್ಥೆಗಳ ಮಾಲೀಕರನ್ನು ಉದ್ಯಮಿಗಳು ಎಂದೇ ಪರಿಗಣಿಸಿ ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಗಳಿಗೆ ಆಯ್ಕೆ ಮಾಡುವುದು ಸರಿಯಾದ ಮಾರ್ಗವಲ್ಲವೆ?

ಎರಡನೆಯದು ನೈತಿಕ ಪ್ರಶ್ನೆ. ಮಾಧ್ಯಮ ಸಂಸ್ಥೆಯ ಮಾಲೀಕರು, ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಶಸ್ತಿ ಪಡೆದರೆ, ಒಬ್ಬ ಪತ್ರಕರ್ತನಿಗೆ ನ್ಯಾಯಯುತವಾದ ಹಕ್ಕನ್ನು ಕಿತ್ತುಕೊಂಡಂತಾಗುವುದಿಲ್ಲವೆ?

ಇದು ಪ್ರಶಸ್ತಿಗಳಿಗೆ ಮಾತ್ರವಲ್ಲ, ಪತ್ರಕರ್ತರಿಗೆ ದೊರೆಯುವ ಎಲ್ಲ ಸೌಲಭ್ಯಗಳಿಗೂ ಅನ್ವಯಿಸಿಕೊಂಡು ನಾವು ನೋಡಬಹುದಾಗಿದೆ.

ದಯವಿಟ್ಟು ಈ ಚರ್ಚೆಯಲ್ಲಿ ಪಾಲ್ಗೊಳ್ಳಿ ಮತ್ತು ಓಟ್ ಮಾಡಿ. ಚರ್ಚೆ ವ್ಯಕ್ತಿಗಳ, ಸಂಸ್ಥೆಗಳ ಸುತ್ತ ಹರಿದಾಡುವ ಬದಲು ವಿಷಯದ ಸುತ್ತಲೇ ಇರಲಿ ಎಂಬುದು ನಮ್ಮ ಮನವಿ.

Wednesday, May 25, 2011

ಗುಳೆ ಹೋದವರ ಹಿಂದೆ ಹೊರಟಿದೆ ಮನಸು...


ಹಾನಗಲ್‌ನ ಪ್ರಭಾಕರ್ ಸುದ್ದಿಯಾಗುತ್ತಿದ್ದಂತೆ, ಪತ್ರಕರ್ತ ಚಾಮರಾಜ ಸವಡಿ ಗುಳೆ ಹೋಗುವ ಅಸಹಾಯಕ ಜನರ ಕುರಿತು ತಾವು ಹಿಂದೆ ಬರೆದ ಲೇಖನವೊಂದನ್ನು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ. ಆ ಲೇಖನದ ಯಥಾವತ್ತು ಇಲ್ಲಿದೆ. ಇಂಥ ಹಲವು ಕಥೆಗಳು ಅವರ ಬ್ಲಾಗ್‌ನಲ್ಲಿವೆ. ಒಮ್ಮೆ ಚಾಮರಾಜ ಸವಡಿ ಎಂಬ ಅವರ ಬ್ಲಾಗ್‌ಗೆ ಭೇಟಿ ಕೊಡಿ.- ಸಂಪಾದಕೀಯ

(ಈ ಬರಹ ನವೆಂಬರ್ ೨೦೦೯ರಲ್ಲಿ ಬರೆದಿದ್ದು. ಇದನ್ನು ಮತ್ತೊಮ್ಮೆ ನಿಮ್ಮ ಮುಂದೆ ತರಲು ಸಂಪಾದಕೀಯ ಬ್ಲಾಗ್‌ನ  ಹಾನಗಲ್ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ... ಎಂಬ ಬರಹ ಕಾರಣ. ಹೀಗಾಗಿ, ಈ ಬರಹವನ್ನು ಸಂಪಾದಕೀಯ ಬ್ಲಾಗ್‌ಗೆ ಅರ್ಪಿಸುತ್ತಿದ್ದೇನೆ...)

ಹಲವು ವರ್ಷಗಳ ಹಿಂದಿನ ಘಟನೆ.

ಆಗ ನಾನು ಬೆಂಗಳೂರಿನ ಎಲ್ಲಾ ನಂಟನ್ನು ಕಡಿದುಕೊಂಡು, ಇನ್ನು ಮುಂದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆಂದು ಕೊಪ್ಪಳಕ್ಕೆ ಬಂದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬಂಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆಂದರೆ ಎರಡೇ- ಒಂದು ಹಣ, ಇನ್ನೊಂದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿಂದ ಪತ್ರಿಕೆಯೊಂದನ್ನು ಪ್ರಾರಂಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆಂಬಲವೂ ಸಿಗಲಿಲ್ಲ. ಯಾರಾದರೂ ಬಂಡವಾಳಶಾಹಿಗಳು ಮುಂದೆ ಬಂದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊಂದನ್ನು ರೂಪಿಸಿಕೊಟ್ಟೇನೆಂದು ನಾನು ಹಂಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹಂಬಲ ಮಾತ್ರ ಕೊಪ್ಪಳದ ಯಾವ ಬಂಡವಾಳಗಾರನಲ್ಲೂ ಇರಲಿಲ್ಲ. ಅಂಥವರ ಪರಿಚಯ ಕೂಡಾ ನನಗಿರಲಿಲ್ಲ.

ಹಾಗಿದ್ದರೂ ನನ್ನಲ್ಲೊಂದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊಂದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆಂಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿಂದ ಕೊಪ್ಪಳದಲ್ಲೇ ಮಾಡುವಂಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬಂದಿದ್ದು ಟ್ಯೂಷನ್.

ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇಂಗ್ಲಿಷ್ ಟ್ಯೂಶನ್ ಕ್ರಾಂತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊಂದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊಂದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮಂಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎಂಟು ತಿಂಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆಂಗಳೂರಿನ ನೆನಪುಗಳ ಪೈಕಿ ಒಂದಷ್ಟನ್ನು ಬರೆದಿಟ್ಟುಕೊಂಡೆ. ಬೆಂಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮಂಗಳೂರು ನನಗೆ ಎಂಟೇ ತಿಂಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು.

ಆಗಾಗ ಇಂಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒಂದರ್ಥದಲ್ಲಿ ಒಳ್ಳೆಯದೇ ಎಂದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒಂಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತಂತ್ರಗಳೆಂಥವು? ಮುಂದಿನ ದಿನಗಳಲ್ಲಿ ನಾನು ಯಾರನ್ನು ನಂಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎಂಬ ವಿಷಯಗಳು ಅಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮಂಗಳೂರಿನ ಎಂಟು ತಿಂಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒಂದು.

ಆ ಸಂದರ್ಭದಲ್ಲಿ ನನ್ನ ಗೆಳೆಯರೆನಿಸಿಕೊಂಡವರಿಂದ, ಬಂಧುಗಳಿಂದ, ಹಿತೈಷಿಗಳಿಂದ ನಾನು ದೂರವಿದ್ದೆ. ಬೆಂಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮಂಗಳೂರಿಗೆ ಟ್ಯೂಶನ್ ಹೇಳಲು ಬಂದು ನಿಂತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸಂಖ್ಯೆ ಆಗ ತುಂಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎಂಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನಂಬಬಹುದು? ಎಂಬುದನ್ನು ಅರಿಯಲು ಅಜ್ಞಾತವಾಸ ನನಗೆ ತುಂಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊಂದು ಅಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತಂದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎಂಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿಂದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ.

ಯಲಬುರ್ಗಾ ತಾಲ್ಲೂಕಿನ ಮಂಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊಂಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹಂಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎಂಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆಂದರೆ, ಮಂಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊಂದು ವರ್ಷವೂ ಗುಳೆ ಹೋಗುವ ಕುಟುಂಬಗಳನ್ನು ಅಲ್ಲಿ ಕಂಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅಂಕಿ ಅಂಶಗಳನ್ನು ನೀಡಿ ನಂಬಿಸಲು ಪ್ರಯತ್ನಿಸಲಿ. ಒಂದು ಮಾತಂತೂ ಸತ್ಯ-

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒಂದೇ ಒಂದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟುಂಬಗಳು ಗುಳೆ ಹೋಗಬೇಕಾಗುತ್ತದೆ.

ಅಂಥ ಒಂದಷ್ಟು ಕುಟುಂಬಗಳನ್ನು, ಅವು ಗುಳೆ ಹೋದ ದುರಂತವನ್ನು ನಾನು ಮಂಗಳೂರಿನಲ್ಲಿ ಕಣ್ಣಾರೆ ಕಂಡೆ. ಇದೆಲ್ಲಾ ನನ್ನ ಗಮನಕ್ಕೆ ಬಂದಿದ್ದು ಕೂಡ ತೀರಾ ಆಕಸ್ಮಿಕವಾಗಿ.

ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬಂದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿಂದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊಂಡ. ಅವನು ಆಚೆ ಹೋದ ನಂತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ ಎಂದು ದೂರಿದೆ.

ಒಂದು ಕ್ಷಣ ರಾಜಶೇಖರ ಪಾಟೀಲ್ ಮಾತಾಡಲಿಲ್ಲ. ನಂತರ ಉತ್ತರರೂಪವಾಗಿ ತಮ್ಮದೊಂದು ಅನುಭವ ಹೇಳಿದರು.

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು.

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕಂಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊಂದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನ ಬಂದಿತು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಂದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎಂದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿಂದಲೂ ಇಲ್ಲ ಎಂಬ ಉತ್ತರ ಬಂದಿತು. ಎಲ್ಲಿಗೆ ಹೋದ? ಎಂದು ಎಲ್ಲರೂ ಕೋಪ ಹಾಗೂ ಬೇಸರದಿಂದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬಂದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎಂಬುದು ಗೊತ್ತಾದಾಗಲಂತೂ ಅವನು ಅಪರಾಧಿ ಭಾವನೆಯಿಂದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮುಂಗೋಪಿ. ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ ದಾರಿ ಕಾಯಬೇಕೇನೋ? ಎಂದು ತರಾಟೆಗೆ ತೆಗೆದುಕೊಂಡರು. ಹುಡುಗನಿಗೆ ಏನು ಹೇಳಬೇಕೆಂಬುದೇ ತೋಚಲಿಲ್ಲ. ಸುಮ್ಮನೇ ನಿಂತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. ಬಸ್ ಸ್ಟ್ಯಾಂಡಿಗೆ ಹೋಗಿದ್ದೀನ್ರಿ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊಂಟಿದ್ರೀ. ಅವ್ರು ಮತ್ತ ಯಾವಾಗ ಬರ್ತಾರೋ ಗೊತ್ತಿಲ್ಲ.... ಅದಕ್ಕ ಲೇಟಾತ್ರೀ....

ರಾಜಶೇಖರ್ ಮಂಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮುಂದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ.

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅಂದರೆ ಮನಿ ನಡ್ಯಾಂಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು ಎಂದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ.

ಮುಂದೆ ನಾನು ಮಂಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎಂಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದುಃಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕಂಡು ಬಂದಿದ್ದು ಮಂಗಳೂರಿನ ಆಜ್ಞಾತವಾಸದಲ್ಲಿ!

ಮುಂದೆ ಕೊಪ್ಪಳಕ್ಕೆ ಬಂದೆ. ವಿಜಯ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒಂದು ಸುತ್ತು ಬಂದಿತು. ಆದರೆ ಮಂಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅಂಶಗಳು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವಂತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎಂಬ ಬಗ್ಗೆ ಅನೇಕ ಲೇಖನಗಳು ಬಂದವು.

ಅದು ಬಿಡಿ. ಇವತ್ತಿಗೂ ಬೇಸಿಗೆ ದಿನಗಳಲ್ಲಿ ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗುಂಪುಗಳೇ ಕಾಣುತ್ತವೆ. ಇನ್ನಾರು ತಿಂಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತುಂಬ ಮೋಡಗಳು ತುಂಬಿಕೊಂಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊಂಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ಬರ ಬರದಿರಲಿ ದೇವರೇ ಎಂಬ ಪ್ರಾರ್ಥನೆಯ ಜೊತೆಗೆ, ಪ್ರವಾಹವೂ ಬಾರದಿರಲಿ ದೇವರೇ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎಂದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮುಂದಿನ ಆರು ತಿಂಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ? ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎಂದಿನಂತೆ ನಾಟಕ ಬಯಲಾಟಗಳು, ಸಭೆ-ಸಮಾರಂಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸಂಬಂಧಿಕರು ಬರುತ್ತಾರೆ. ಅಂಗಡಿ ಮುಂಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮುಂದೆ,

ಚಾಮರಾಜ ಸವಡಿ
ಆಗೆಲ್ಲ ನನಗೆ, ದೇಶ ಪ್ರಗತಿಯತ್ತ ಧಾವಿಸುತ್ತಿದೆ ಎಂದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸಂಪರ್ಕ ಕ್ರಾಂತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವಂತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ.

ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿಂದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ.

ಏಕೆಂದರೆ, ನಾನೂ ಕೂಡ ಅವರ ಹಾಗೇ ಗುಳೆ ಬಂದವ! ಇವತ್ತಿಗೂ ವಾಪಸ್ ಊರಿಗೆ ಹೋಗುವ ಕನಸು ಕಾಣುತ್ತಿರುವವ.

(ಅವತ್ತು ಟ್ಯೂಷನ್ ತಪ್ಪಿಸುತ್ತಿದ್ದ ಹುಡುಗ ಈಗ ಹೈಸ್ಕೂಲ್ ಟೀಚರಾಗಿದ್ದಾನೆ. ನೇಮಕಾತಿ ಪತ್ರ ಬಂದಾಗ ಎಲ್ಲೆಲ್ಲೋ ಹುಡುಕಿ ನನ್ನ ನಂಬರ್ ಪತ್ತೆ ಮಾಡಿ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದ. ಅವನ ಫೋನ್ ಬಂದ ಆ ದಿನಗಳಲ್ದಾಗಲೇ ನಾನು ಮತ್ತೆ ನಿರುದ್ಯೋಗಿಯಾಗಿದ್ದೆ. ನಾಲ್ವರ ಕುಟುಂಬದ ಜವಾಬ್ದಾರಿಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಆದರೆ, ಅವನ ಫೋನ್ ನನ್ನನ್ನು ಮತ್ತೆ ಬಡಿದೆಬ್ಬಿಸಿತು. ನಾವು ಹಚ್ಚಿದ ದೀಪಗಳು ಎಲ್ಲೋ ಬೆಳಗುತ್ತಿವೆ ಎಂಬ ಖುಷಿ ಹೊಸ ಉತ್ಸಾಹ ತುಂಬಿತ್ತು. ಸಂಪಾದಕೀಯದ ಬರಹ ಮತ್ತೆ ಈ ನೆನಪನ್ನು ಉಕ್ಕಿಸಿದೆ. ಜೊತೆಗೆ ಖುಷಿಯನ್ನೂ... ಥ್ಯಾಂಕ್ಸ್ ಸಂಪಾದಕೀಯವೇ....)

- ಚಾಮರಾಜ ಸವಡಿ

Tuesday, May 24, 2011

ಎರಡು ಘಟನೆಗಳು: ಉತ್ತರಿಸಲು ಸಾಧ್ಯವಾಗದ ಕೆಲವು ಪ್ರಶ್ನೆಗಳು...

ಮೇ.೧೯ರಂದು ನಡೆದ ಘಟನೆ: ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ನ್ಯಾಷನಲ್ ಸ್ಕೂಲ್ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿದ ಮೈತ್ರೇಯಿ ಎಂಬ ಚಿತ್ರನಟಿಯ ಕಾರನ್ನು ಪೊಲೀಸ್ ಪೇದೆಯೊಬ್ಬರು ತಡೆಯುತ್ತಾರೆ. ಹಣವಿಲ್ಲ ಎಂಬ ಕಾರಣಕ್ಕೆ ತಕ್ಷಣ ದಂಡ ಕಟ್ಟಲು ಮೈತ್ರೇಯಿ ಮತ್ತು ಆಕೆಯ ಮೂವರು ಸಂಬಂಧಿಗಳು ನಿರಾಕರಿಸುತ್ತಾರೆ.

ಪೇದೆಗೂ ನಟಿಗೂ ಮಧ್ಯೆ ವಾಗ್ವಾದ ನಡೆಯುತ್ತದೆ. ನಟಿ ಮತ್ತು ಆಕೆಯ ಸಂಬಂಧಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತದೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೂ ಕಳುಹಿಸಲಾಗುತ್ತದೆ. ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಆರೋಪ ನಟಿಯ ಮೇಲೆ.

ಮೇ.೨೦ರಂದು ನಡೆದ ಇನ್ನೊಂದು ಘಟನೆ: ಕರ್ನಾಟಕ ಸರ್ಕಾರದ ಗೃಹ ಸಚಿವ ಆರ್.ಅಶೋಕ್ ಅವರ ಪುತ್ರ ಅಜಯ್ ಎಂಬುವವರು ಸಂಜೆ ಏಳರ ಸುಮಾರಿಗೆ ಫ್ರೇಜರ್‌ಟೌನ್ ವ್ಯಾಪ್ತಿಯ ಹೇನ್ಸ್ ರಸ್ತೆ ಜಂಕ್ಷನ್ ಬಳಿ ಒಂದು ಅಪಘಾತ ಪ್ರಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಅಜಯ್ ಅವರ ಕಾರು ಒಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ. ಬೈಕ್ ಸವಾರ ಕೆಳಗೆ ಬೀಳುತ್ತಾನೆ. ಅಜಯ್ ಮತ್ತು ಅವರ ನಾಲ್ವರು ಗೆಳೆಯರು ಕಾರಿನಿಂದಿಳಿದು ಬೈಕ್ ಸವಾರನನ್ನು ಥಳಿಸತೊಡಗುತ್ತಾರೆ.

ಸ್ಥಳಕ್ಕೆ ಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಗುಂಪುಗೂಡಿದ ಜನರು ಅಜಯ್ ಮತ್ತು ಅವರ ಗೆಳೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಾರೆ. ಗೋಪಾಲಕೃಷ್ಣ ಅವರು ಅಜಯ್ ಮತ್ತು ಸಹಚರರನ್ನು ಪೊಲೀಸ್ ಠಾಣೆಗೆ ಬರುವಂತೆ ಹೇಳುತ್ತಾರೆ.


ಈ ಸಂದರ್ಭದಲ್ಲಿ ಮತ್ತೆ ಜಟಾಪಟಿಯಾಗುತ್ತದೆ. ಡೆಕ್ಕನ್ ಹೆರಾಲ್ಡ್ ವರದಿ ಹೇಳುವ ಪ್ರಕಾರ, ಗೋಪಾಲಕೃಷ್ಣ ಅವರ ಎದೆಗೆ ಗುದ್ದಿ ಮೂಲೆಗೆ ತಳ್ಳಲಾಗುತ್ತದೆ. ಹೊಯ್ಸಳ ವಾಹನದ ಮೂಲಕ ಠಾಣೆಗೆ ಅಜಯ್ ಮತ್ತು ಇತರರನ್ನು ಕರೆದೊಯ್ಯಲಾಗುತ್ತದೆ. ಯಾವುದೇ ಪ್ರಕರಣ ದಾಖಲಿಸದೇ ಅವರುಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಕಳೆದ ಎರಡು ಮೂರು ದಿನಗಳಿಂದ ಟಿವಿ ಚಾನಲ್‌ಗಳಲ್ಲಿ ಮೈತ್ರೇಯಿಯದ್ದೇ ಸುದ್ದಿ. ಆಕೆ ಅಳುತ್ತ ಟಿವಿ ಸ್ಟುಡಿಯೋಗಳಲ್ಲಿ ಕುಳಿತು ನಾನು ಪೇದೆಯನ್ನು ಥಳಿಸಿಯೇ ಇಲ್ಲ. ಗುಂಪಿನಲ್ಲಿದ್ದ ಯಾರೋ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಗುಂಪಿನಲ್ಲಿದ್ದವರು ನಮ್ಮೆಲ್ಲರ ಮೇಲೂ ಹೇಳಲು ಸಾಧ್ಯವಿಲ್ಲದಂತೆ ನಡೆದುಕೊಂಡಿದ್ದಾರೆ. ಯಾಕೆ ನಮ್ಮನ್ನು ಬಲಿಪಶು ಮಾಡಲಾಯಿತೋ ಗೊತ್ತಿಲ್ಲ ಎನ್ನುತ್ತಿದ್ದಾರೆ.

ಎರಡೂ ಘಟನೆಗಳ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಕೆಲವು ಪ್ರಶ್ನೆಗಳಿವೆ.

ಯಾವ ದೃಷ್ಟಿಯಿಂದ ನೋಡಿದರೂ ಫ್ರೇಜರ್ ಟೌನ್‌ನಲ್ಲಿ ನಡೆದ ಘಟನೆ ಹೆಚ್ಚು ಮಹತ್ವದ್ದು. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದ ಘಟನೆ ಸಿಗ್ನಲ್ ಜಂಪ್‌ಗೆ ಸಂಬಂಧಿಸಿದರೆ, ಫ್ರೇಜರ್ ಟೌನ್ ಘಟನೆ ಅಪಘಾತಕ್ಕೆ ಸಂಬಂಧಿಸಿದ್ದು. ಮೊದಲ ಪ್ರಕರಣದ ಆರೋಪಿ ಸಿನಿಮಾ ನಟಿಯಾದರೆ, ಎರಡನೇ ಪ್ರಕರಣದ ಆರೋಪಿ ಈ ರಾಜ್ಯದ ಗೃಹ ಸಚಿವರ ಪುತ್ರ.

ಪ್ರಶ್ನೆಗಳು ಇವು:
ಫ್ರೇಜರ್ ಟೌನ್ ಪ್ರಕರಣದ ಕುರಿತು ಡೆಕ್ಕನ್ ಹೆರಾಲ್ಡ್‌ನಲ್ಲಿ ಘಟನೆಯ ಪೂರ್ತಿ ವಿವರವಿದೆ. ಪ್ರಜಾವಾಣಿಯಲ್ಲೂ ವರದಿ ಇದೆಯಾದರೂ ಯಾವ ಸಚಿವ, ಏನು ಎಂಬುದಿಲ್ಲ. ಮಿಕ್ಕಂತೆ ಯಾವ ಪತ್ರಿಕೆಗಳಲ್ಲೂ ಈ ಕುರಿತು ವಿಸ್ತ್ರತ ವರದಿ ಬಂದಹಾಗೆ ಕಾಣಲಿಲ್ಲ. ಯಾಕೆ, ಹೇಗೆ ಈ ವರದಿ ಇತರ ಪತ್ರಿಕೆಗಳಲ್ಲಿ ಮಿಸ್ ಆಯಿತು? ಅಥವಾ ಪ್ರಾಧಾನ್ಯತೆ ಕಳೆದುಕೊಂಡಿತು?

ಮೈತ್ರೇಯಿ ಪ್ರಕರಣವನ್ನು ಎಳೆದಾಡುತ್ತಿರುವ ಟಿವಿ ಚಾನಲ್‌ಗಳು ಅಜಯ್ ಪ್ರಕರಣವನ್ನೇಕೆ ಚರ್ಚೆಗೆ ಕೈಗೆತ್ತಿಕೊಳ್ಳುತ್ತಿಲ್ಲ? ಕನಿಷ್ಠ ಮೈತ್ರೇಯಿ ಪ್ರಕರಣದ ಜತೆಯೇ ಈ ಘಟನೆಯನ್ನು ಚರ್ಚಿಸದೇ ಹೋದದ್ದು ಏಕೆ?

ನಿಜ, ಫ್ರೇಜರ್ ಟೌನ್ ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ. ಠಾಣೆಯಲ್ಲಿ ದಾಖಲಾಗದ ಪ್ರಕರಣಗಳು ಸುದ್ದಿಯಾಗುವುದೇ ಇಲ್ಲವೇ? ಸುದ್ದಿಯಾಗಲೇಬಾರದೆ? ಘಟನೆಯಲ್ಲಿ ಗೃಹ ಮಂತ್ರಿಯ ಪುತ್ರ ಇದ್ದಿದ್ದನ್ನು ಬೆಂಗಳೂರು ಪೊಲೀಸ್ ಆಯುಕ್ತರೇ ಖಚಿತಪಡಿಸಿದ್ದಾರೆ. ಇಷ್ಟಾದ ಮೇಲೂ ಇದು ಸುದ್ದಿಯಲ್ಲವೇ?

ಮಹಿಳೆಯರು ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದರು ಎಂಬುದನ್ನು ಸುದ್ದಿ ಮಾಡಿದ ವರದಿಗಾರರಿಗೆ ಈ ಸುದ್ದಿ ಏಕೆ ಕಾಣಲಿಲ್ಲ. ಕೆಲ ಚಾನೆಲ್ ಗಳು ಈ ಸುದ್ದಿಯನ್ನು ತೀರಾ ಸಣ್ಣ ಸುದ್ದಿಯಂತೆ ಟ್ರೀಟ್ ಮಾಡಿವೆ. ಯಾಕೆ ಹೀಗೆ? ಸುಂದರ ಹುಡುಗಿಯರು ಇವರಿಗೆ ಈಜಿ ಟಾರ್ಗೆಟ್ ಆದರಾ?

Monday, May 23, 2011

ಜಗತ್ತು ಜೀವಂತವಾಗಿದೆ, ಪ್ರಳಯ ಸಿದ್ಧಾಂತಿಗಳು ಬೆತ್ತಲಾಗಿದ್ದಾರೆ


ಅನಾಹುತಕಾರಿ ಪ್ರಳಯ ಸಿದ್ಧಾಂತಿಗಳು ಮತ್ತೆ ಬೆತ್ತಲಾಗಿದ್ದಾರೆ. ಮೇ.೨೧ಕ್ಕೆ ಜಗತ್ತು ಸರ್ವನಾಶವಾಗಲಿದೆ, ಹಾಗಂತ ಬೈಬಲ್‌ನಲ್ಲಿ ಬರೆಯಲಾಗಿದೆ ಎಂದು ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಿದ್ದವರಿಗೆ ಈಗ ಮುಖವಿಲ್ಲ. ಇಂಥವರನ್ನು ನಂಬುವ ಅಮಾಯಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮುಂದೆಯಾದರೂ ಇಂಥವರ ಮಾತನ್ನು ನಂಬುವುದನ್ನು ಈ ಜನರು ಬಿಡುತ್ತಾರಾ? ಖಂಡಿತಾ ಇಲ್ಲ.


ಕ್ಯಾಲಿಫೋರ್ನಿಯಾದ ಫ್ಯಾಮಿಲಿ ರೇಡಿಯೋ ನೆಟ್‌ವರ್ಕ್ ಮೂಲಕ ೮೯ ವರ್ಷದ ನಿವೃತ್ತ ಸಿವಿಲ್ ಇಂಜಿನಿಯರ್ ಕ್ಯಾಂಪಿಂಗ್ ಈ ಪ್ರಳಯದ ವಾದವನ್ನು ಮಂಡಿಸಿದ್ದ.  ಈ ರೇಡಿಯೋ ನೆಟ್‌ವರ್ಕ್ ಅಮೆರಿಕದಾದ್ಯಂತ ಸುಮಾರು ೧೫೦ ರೇಡಿಯೋ ಸ್ಟೇಷನ್‌ಗಳನ್ನು ಹೊಂದಿದೆಯಲ್ಲದೆ, ಯೂರೋಪ್‌ನ ಹಲವು ದೇಶಗಳಲ್ಲೂ ತನ್ನ ಜಾಲವನ್ನು ಹೊಂದಿತ್ತು.


ಮೇ.೨೧ರ ಸಂಜೆ ೬ ಗಂಟೆಗೆ ಜಗತ್ತು ಅಂತ್ಯಗೊಳ್ಳಲಿದೆ ಎಂದು ಈ ರೇಡಿಯೋ ಒಂದು ವರ್ಷದಿಂದ ಪ್ರಚಾರ ನಡೆಸಿತ್ತು. ಇದನ್ನು ನಂಬಿಕೊಂಡೇ ೨೦೧೨ಕ್ಕೆ ಜಗತ್ತು ಕೊನೆಗೊಳ್ಳಲಿದೆ ಎನ್ನುತ್ತಿದ್ದವರು ನಂತರ ಈ ವರ್ಷವೇ ಮೇ.೨೧ಕ್ಕೆ ಎಲ್ಲ ಮುಗಿಯುತ್ತದೆ ಎಂದು ಹೇಳಲಾರಂಭಿಸಿದ್ದರು. ವಿಚಿತ್ರವೆಂದರೆ ಇದನ್ನು ಕೋಟ್ಯಂತರ ಜನರು ಪ್ರಳಯ ಆಗೇ ತೀರುತ್ತದೆ ಎಂದುಕೊಂಡಿದ್ದರು.


ಕ್ಯಾಂಪಿಂಗ್ ಇದೇ ರೀತಿ ೧೯೯೪ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಹೇಳಿದ್ದ. ಆಗಲೂ ಸಹ ಬೈಬಲ್‌ನಲ್ಲಿ ಹಾಗೆ ಬರೆಯಲಾಗಿದೆ ಎಂದು ಸಮರ್ಥಿಸಿಕೊಂಡಿದ್ದ. ೧೯೯೪ರಲ್ಲಿ ಏನೂ ಆಗದೇ ಹೋದಾಗ, ನನ್ನ ಲೆಕ್ಕಾಚಾರದಲ್ಲಿ ತಪ್ಪಾಗಿದೆ. ಪ್ರಳಯ ಆಗೋದು ೨೦೧೧ರ ಮೇ.೨೧ರಂದು ಎಂದು ಪ್ರಳಯದ ದಿನಾಂಕವನ್ನು ಮುಂದಕ್ಕೆ ಹಾಕಿದ್ದ.


ಈಗ ಫ್ಯಾಮಿಲಿ ರೇಡಿಯೋ ಹೇಳಿದ್ದೆಲ್ಲ ಠುಸ್ ಆಗಿದೆ. ಆದರೆ ತಮಾಶೆಯೆಂದರೆ ಡೊನೇಷನ್ ಗಳ ಮೂಲಕ ಸಂಗ್ರಹಿಸಿದ ಹಣದಿಂದ ರೇಡಿಯೋ ಆಸ್ತಿಪಾಸ್ತಿ ಮಾತ್ರ ಗಗನಕ್ಕೇರಿದೆ. ಅದರ ಆಸ್ತಿ ಮೌಲ್ಯ ಈಗ ೧೦೪ ಮಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚು.


ಈ ಪ್ರಳಯದ ಸಿದ್ಧಾಂತವನ್ನು ಹಿಡಿದು ಎಳೆದಾಡಿದ್ದು ನಮ್ಮ ಸುವರ್ಣ ನ್ಯೂಸ್ ಚಾನಲ್. ಕಳೆದ ಮೂರು ತಿಂಗಳಿನಿಂದಲೂ ಸುವರ್ಣ ನ್ಯೂಸ್‌ನಲ್ಲಿ ಈ ಸಂಬಂಧ ವಿಶೇಷ ಕಾರ್ಯಕ್ರಮಗಳು ನಡೆದವು. ಈತ ೯೪ರಲ್ಲಿ ಹೇಳಿದ್ದೆಲ್ಲ ಸುಳ್ಳಾಗಿದೆ ಎಂದು ಹೇಳುತ್ತಲೇ ಸುವರ್ಣದವರು ಪ್ರಳಯದ ಹೊಸ ಥಿಯರಿಯಿಂದ ಲಾಭ ಮಾಡಿಕೊಳ್ಳಲು ಯತ್ನಿಸಿದ್ದು ನಿಜ.


ಇದಕ್ಕಿಂತ ಮಹತ್ವದ ಮತ್ತೊಂದು ವಿಷಯವೆಂದರೆ ಜೀ ಟಿವಿಯ ಬ್ರಹ್ಮಾಂಡ ಪ್ರಭು ನರೇಂದ್ರ ಸ್ವಾಮಿ ತನ್ನ ಪ್ರಳಯದ ಸಿದ್ಧಾಂತವನ್ನು ಕಡ ತಂದಿದ್ದೂ ಸಹ ಇದೇ ಕ್ರಿಶ್ಚಿಯನ್ ಗುಂಪುಗಳ ಪ್ರಚಾರದಿಂದ. ಈತನೂ ಸಹ ಮೇ. ೪ನೇ ತಾರೀಖು ಜಗನ್ಮಾತೆ ಭೂಮಿಗೆ ಬರುತ್ತಾಳೆ, ಆಮೇಲೆ ನೋಡ್ತಾ ಇರಿ, ಆಗಬಾರದ್ದೆಲ್ಲ ಆಗುತ್ತದೆ ಎಂದು ವಟಗುಡುತ್ತಿದ್ದ. ಯಾವಾಗ ನಾವೆಲ್ಲರೂ ಒಂದೇ ಸಮನೆ ಈತನ ಕುಚೇಷ್ಟೆಗಳ ವಿರುದ್ಧ ತಿರುಗಿಬಿದ್ದವೋ ಇದ್ದಕ್ಕಿದ್ದಂತೆ ಜಗನ್ಮಾತೆಯ ಹೆಸರನ್ನು ಹೇಳುವುದನ್ನೇ ಬಿಟ್ಟ. ಪ್ರಳಯದ ಮಾತೂ ಸಹ ನಿಲ್ಲಿಸಿಬಿಟ್ಟ.


ಈಗ ಕ್ಯಾಂಪಿಂಗ್ ಮತ್ತು ಅವನ ಸಹಚರರು ಹೇಳಿದ್ದು ಸುಳ್ಳಾಗಿದೆ. ಕೋಟ್ಯಂತರ ಜನರನ್ನು ಭಯದಲ್ಲಿ ಮುಳುಗಿಸಿದ ಈ ಜನರನ್ನು ಜೀವನಪೂರ್ತಿ ಜೈಲಿನಲ್ಲಿ ಇಡಬೇಕಾಗಿದ್ದು ಅಮೆರಿಕದ ಕೆಲಸ. ಯಾವ ದೇಶದಲ್ಲೇ ಆಗಲಿ, ಇಂಥ ಬುರುಡೆ ಜ್ಯೋತಿಷಿಗಳು, ಜನರನ್ನು ದಿಕ್ಕುತಪ್ಪಿಸುವವರು ಹೀಗೆ ಸಿಕ್ಕಿಬಿದ್ದಾಗಲೆಲ್ಲ ಅವರನ್ನು ಜೈಲಿಗೆ ತಳ್ಳುವ ಕೆಲಸ ಆಗಬೇಕು. ಹಾಗಾದರೆ ಇಂಥವರ ಉಪಟಳ ಸ್ವಲ್ಪ ಮಟ್ಟಿಗೆ ತಗ್ಗಬಹುದೇನೋ?

Saturday, May 21, 2011

ಹಾನಗಲ್ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ...

ಇದೆಲ್ಲವೂ ಶುರುವಾಗಿದ್ದು ರಾಘವ್ ಗೌಡ ಎಂಬುವವರು ಫೇಸ್‌ಬುಕ್‌ನಲ್ಲಿ ಒಂದು ಮೆಸೇಜ್ ಕಳುಹಿಸುವುದರೊಂದಿಗೆ. ಯೂ ಟೂಬ್‌ನ ಒಂದು ಲಿಂಕ್ ಕಳುಹಿಸಿದ್ದ ರಾಘವ್ ಅದನ್ನು ಶೇರ್ ಮಾಡಲು ವಿನಂತಿಸಿದ್ದರು. ವಿಡಿಯೋವನ್ನು ಶೇರ್ ಮಾಡಿದ್ದಲ್ಲದೆ ಅದನ್ನು ಬ್ಲಾಗ್‌ನಲ್ಲೂ ಪ್ರಕಟಿಸಿದೆವು. ಸೂಕ್ಷ್ಮ ಮನಸ್ಸಿನ ಗೆಳೆಯರನೇಕರು ಅತ್ಯಂತ ಕಾಳಜಿಯಿಂದ ಪ್ರತಿಕ್ರಿಯಿಸಿದ್ದರು. ಎಲ್ಲರಿಗೂ ಆ ಹುಡುಗನ ಭವಿಷ್ಯದ ಕುರಿತು ಆತಂಕವಿತ್ತು. ಎಲ್ಲರ ಮಾತು ಕೇಳಿದ ನಂತರ ವಿಡಿಯೋದಲ್ಲಿ ಕಾಣಿಸಿಕೊಂಡ ಆ ಹುಡುಗನನ್ನು ಒಮ್ಮೆ ಭೇಟಿ ಮಾಡಲೇಬೇಕು ಎಂದನ್ನಿಸತೊಡಗಿತ್ತು. ಅದಕ್ಕಾಗಿ ತಡ ಮಾಡುವುದು ಬೇಡವೆಂದು ಗುರುವಾರ ರಾತ್ರಿ ಹಾನಗಲ್ ಕಡೆಗೆ ಹೊರಟೇಬಿಟ್ಟೆವು.

ಪ್ರಭಾಕರನಿಗೆ ಸಂಪಾದಕೀಯದ ಸ್ವೀಟು
ಹುಡುಗನ ಭೇಟಿಯಾಗುತ್ತಿದ್ದಂತೆ ನಾವು ಏನೇನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿದ್ದೆವು. ಮೊದಲು ಆ ಹುಡುಗನ ಮತ್ತು ಆತನ ಕುಟುಂಬದ ಕುರಿತು ಪೂರ್ಣ ಮಾಹಿತಿ ಪಡೆಯಬೇಕು. ಹುಡುಗನಿಗೊಂದು ಸೈಕಲ್ ಕೊಡಿಸಬೇಕು. ಆತನ ತಾಯಿಯ ಹೆಸರಲ್ಲಿ ಒಂದು ಬ್ಯಾಂಕ್ ಅಕೌಂಟ್ ತೆರೆಯಬೇಕು. ತಹಸೀಲ್ದಾರ್ ಕಚೇರಿಗೆ ಹೋಗಿ ಜಾತಿ ಪ್ರಮಾಣ ಪತ್ರವನ್ನು ಮಾಡಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಾಲೆಯವರನ್ನು ಸಂಪರ್ಕಿಸಿ ಸೈಕಲ್ ಕೊಡದೇ ಇರಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು, ಆತನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತಾಗಬೇಕು.. ಇತ್ಯಾದಿ ಯೋಚನೆಗಳಿದ್ದವು.

ಅದೆಲ್ಲ ಸರಿ, ಹೇಗೆ ಹುಡುಕುವುದು ಆತನನ್ನು? ಇದಕ್ಕಾಗಿ ನಾವು ಯು ಟೂಬ್ ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿದವರನ್ನೇ ಕೇಳಬೇಕಿತ್ತು, ಕೇಳಿದೆವು. ವಿಡಿಯೋ ಅಪ್ ಲೋಡ್ ಮಾಡಿದವರು ರಾಘವ್ ಅವರೇ ಆಗಿದ್ದರು. ಹೀಗಾಗಿ ಕೆಲಸ ಸಲೀಸಾಯಿತು. ಆದರೆ ರಾಘವ್ ಅವರಿಗೆ ಹುಡುಗನ ಕುರಿತು ಸಂಪೂರ್ಣ ಮಾಹಿತಿ ಇರಲಿಲ್ಲ. ಅವರ ಸ್ನೇಹಿತ ಟಿ.ಕೆ.ದಯಾನಂದ್ ಅವರು ತಮ್ಮ ಸ್ನೇಹಿತ ಚಂದ್ರು ಅವರೊಂದಿಗೆ ಈ ಕಿರುಚಿತ್ರ ಮಾಡಿದ್ದರು. ದಯಾನಂದ್ ಕೂಡ ಪತ್ರಕರ್ತರು. ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡಿ ನಂತರ ಟಿವಿ ವಾಹಿನಿಯಲ್ಲೂ ದುಡಿದು ಈಗ ಬಡಜನರ ಬದುಕಿನ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಮಲ ಹೊರುವವರ ಕುರಿತು ಅಧ್ಯಯನ ನಡೆಸುವ ಸಂದರ್ಭದಲ್ಲಿ ಹಾನಗಲ್ ಬಸ್ ನಿಲ್ದಾಣದಲ್ಲಿ ಈ ಹುಡುಗ ಅವರ ಕಣ್ಣಿಗೆ ಬಿದ್ದಿದ್ದ. ನಂತರ ರಾಘವ್ ಅವರಿಂದ ವಿಷಯ ತಿಳಿದ ದಯಾನಂದ್ ಹುಡುಗನ ಕುರಿತು ಒಂದಷ್ಟು ಮಾಹಿತಿ ಒದಗಿಸಿದರು. ಸ್ಥಳೀಯರಿಬ್ಬರ ದೂರವಾಣಿ ಸಂಖ್ಯೆಗಳನ್ನೂ ನೀಡಿದ್ದರು. ಹೀಗಾಗಿ ನಾವು ಸುಲಭವಾಗಿ ಹುಡುಗನ ಸಂಬಂಧಿಗಳನ್ನು ಸಂಪರ್ಕಿಸಲು ಸಾಧ್ಯವಾಯಿತು.

ಶುಕ್ರವಾರ ಬೆಳಿಗ್ಗೆ ೯-೩೦ರ ಹೊತ್ತಿಗೆ ಹಾನಗಲ್ ತಲುಪಿದಾಗ ಆಗಲೇ ಬಿಸಿಲು ತಾರಕಕ್ಕೇರುತ್ತಿತ್ತು. ಹಳೆ ಬಸ್ ನಿಲ್ದಾಣದಲ್ಲಿ ಇಳಿದುಕೊಳ್ಳಲು ಆ ಹುಡುಗನ ಸಂಬಂಧಿ ಸೂಚಿಸಿದ್ದರು. ಅಲ್ಲೇ ಇಳಿದೆವು. ಭೇಟಿಯಾಯಿತು. ಹೊಟ್ಟೆ ವಿಪರೀತ ಹಸಿಯುತ್ತಿದೆ ಎಂದು ಅವರಿಗೆ ಹೇಳಿ ಪಕ್ಕದಲ್ಲೇ ಇದ್ದ ಹೊಟೇಲ್ ಹೊಕ್ಕು ಕುಳಿತೆವು. ನಮಗೆ ಅಲ್ಲೇ ಮೊದಲ ಶಾಕ್. ನಾವು ಯಾವ ಹುಡುಗನನ್ನು ಹುಡುಕಿಕೊಂಡು ಅಷ್ಟು ದೂರ ಬಂದಿದ್ದೆವೋ ಅದೇ ಹುಡುಗ ಸೊಂಟಕ್ಕೊಂದು ಹಸಿರು ಬಣ್ಣದ ಟವಲ್ ಕಟ್ಟಿಕೊಂಡು ಅದೇ ಹೋಟೆಲ್‌ನಲ್ಲಿ ಪ್ಲೇಟು, ಲೋಟ ತೆಗೆದು ಟೇಬಲ್ ಒರೆಸುತ್ತಿದ್ದುದನ್ನು ನೋಡಿದೆವು. ಅವನೇ ನಾವು ವಿಡಿಯೋದಲ್ಲಿ ನೋಡಿದ ಲೋಕೇಶ. ಅವನ ನಿಜ ಹೆಸರು ಪ್ರಭಾಕರ ಹರಿಜನ.

ಎಷ್ಟೇ ಹಠ ಮಾಡಿದರೂ ಪ್ರಭಾಕರನ ಸಂಬಂಧಿ ನಮ್ಮಿಂದ ತಿಂಡಿಯ ಹಣ ನೀಡಲು ಬಿಡಲಿಲ್ಲ. ಪ್ರಭಾಕರನನ್ನು ನಾವು ಅಲ್ಲಿಂದ ಕರೆದುಕೊಂಡು ಸೀದಾ ಕಲ್ಲಹಕ್ಕಲದ ಹರಿಜನಕೇರಿಗೆ ಹೊರಟೆವು. ಮೊದಲು ಆತನ ತಾಯಿಯೊಂದಿಗೆ ನಾವು ಮಾತನಾಡಬೇಕಿತ್ತು.

ಕಲ್ಲಹಕ್ಕಲದ ಆ ಮನೆ ಸುಮಾರು ೧೦ ಅಡಿ ಅಗಲ, ೧೦ ಅಡಿ ಉದ್ದದ ಪುಟ್ಟ ಗೂಡು. ಒಳಗೆ ಕಾಲಿಡುತ್ತಿದ್ದಂತೆ ಪಕ್ಕದ ಮನೆಯಿಂದ ಪ್ರಭಾಕರನೇ ಹೋಗಿ ಕುರ್ಚಿಗಳನ್ನು ತಂದು ಹಾಕಿದ. ಮನೆಯಲ್ಲಿ ಪ್ರಭಾಕರನ ತಂಗಿ ಶಿಲ್ಪ, ತಮ್ಮ ಸಂದೇಶ, ಅಜ್ಜಿ ಭೀಮಮ್ಮ ಇದ್ದರು. ಶಿಲ್ಪ ೮ನೇ ತರಗತಿ ಪಾಸಾಗಿ ಈಗ ೯ಕ್ಕೆ ಕಾಲಿಟ್ಟಿದ್ದಾಳೆ. ಸಂದೇಶ ಐದನೇ ತರಗತಿಯಲ್ಲಿ ಓದುತ್ತಾನೆ. ಅಜ್ಜಿ ಭೀಮಮ್ಮಗೆ ಸುಮಾರು ೮೦ ವರ್ಷಗಳಾಗಿರಬಹುದು. ಆಕೆಗೆ ತಲೆ ಅಲ್ಲಾಡುವ ಖಾಯಿಲೆಯಿದೆ. (ಪಾರ್ಕಿನ್‌ಸನ್)

ನಾವು ಹೋಗಿ ಕುಳಿತ ಹತ್ತು ನಿಮಿಷಕ್ಕೆ ಪ್ರಭಾಕರನ ತಾಯಿ, ಮನೆಯೊಡತಿ ಶಾಂತವ್ವ ಬಂದರು. ಅವರು ಪುರಸಭೆಯಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುತ್ತಾರೆ. ಗಟಾರಗಳನ್ನು ಬಾಚಿ ಶುದ್ಧ ಮಾಡುವುದು ಆಕೆಯ ಕಾಯಕ. ಈ ಪುಟ್ಟ ಮನೆಯನ್ನು ಶಾಂತವ್ವ ಮತ್ತು ಮಕ್ಕಳು ಚೊಕ್ಕಟವಾಗಿಟ್ಟುಕೊಂಡಿದ್ದಾರೆ.

ಮನೆಯ ಮೂಲೆಯಲ್ಲಿ ಒಂದು ಕೋಳಿ ಸಿಟ್ಟಿನಿಂದ ಕೂಗುತ್ತಿತ್ತು. ನಾವು ದಿಢೀರನೆ ಬಂದ ಕಾರಣಕ್ಕೆ ಶಿಲ್ಪ ಕೋಳಿ ಮತ್ತು ಅದರ ಮರಿಗಳನ್ನು ಒಂದು ಕುಕ್ಕೆಯಡಿಯಲ್ಲಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಳು. ಆದರೆ ಕೋಳಿ ಒಲ್ಲೆಯೆನ್ನುತ್ತಿತ್ತು. ಯಾಕೆಂದರೆ ಅದರ ಒಂದು ಮರಿಯ ಕಾಲು ಮುರಿದುಹೋಗಿತ್ತು. ಆ ಮರಿಯನ್ನು ಮುಟ್ಟಲೂ ಸಹ ತಾಯಿ ಕೋಳಿ ಬಿಡುತ್ತಿರಲಿಲ್ಲ. ಹೋಗಲಿ ತಾಯಿಯನ್ನೇ ಮೊದಲು ಮುಚ್ಚಿ ಹಾಕೋಣವೆಂದರೆ ಅದು ಶಿಲ್ಪಳನ್ನು ಕುಕ್ಕಲು ಬರುತ್ತಿತ್ತು.

ಮಾಲತೇಶ ನಗರವಾಗಿ ಬದಲಾಗಿರುವ ಕಲ್ಲಹಕ್ಕಲ ಬಡಾವಣೆ
ನಮ್ಮ ಮಾತುಕತೆ ಶುರುವಾಯಿತು. ನಾವು ಬಂದ ಉದ್ದೇಶವನ್ನು ಮೊದಲು ನಿವೇದಿಸಿಕೊಂಡೆವು. ತಾಯಿ ಶಾಂತವ್ವ ತನ್ನ ಕಥೆ ಹೇಳುತ್ತಾ ಹೋದರು. ಮೊದಲ ಮಗನೇ ಪ್ರಭಾಕರ. ಸಿನಿಮಾ ನಟ ಟೈಗರ್ ಪ್ರಭಾಕರ್ ಅವರ ಅಭಿಮಾನಿಯಾಗಿದ್ದ ಹನುಮಂತಪ್ಪ ಅವರು ಮಗನಿಗೆ ಪ್ರಭಾಕರ್ ಹೆಸರನ್ನೇ ಇಟ್ಟಿದ್ದರು. ಸಂದೇಶ ಚಿಕ್ಕ ಮಗುವಿದ್ದಾಗಲೇ ಹನುಮಂತಪ್ಪ ತೀರಿಕೊಂಡಿದ್ದರು. ಶಾಂತವ್ವಳ ಪಾಲಿಗೆ ಅದು ಹೆಸರು ಗೊತ್ತಿಲ್ಲದ ಖಾಯಿಲೆ. ಹನುಮಂತಪ್ಪ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೂರು ಪುಟ್ಟಪುಟ್ಟ ಮಕ್ಕಳೊಂದಿಗೆ ಶಾಂತವ್ವ ವಿಧವೆ ಪಟ್ಟವನ್ನು ಹೊತ್ತಾದ ಮೇಲೆ ಆಕೆಯ ಮೈದುನನೇ ಮನೆಯಿಂದ ಆಚೆ ಕಳುಹಿಸುತ್ತಾನೆ. ಅಲ್ಲಿಂದ ಆಕೆಯ ಸಂಘರ್ಷದ ಬದುಕು ಆರಂಭವಾಗುತ್ತದೆ. ಹೇಗೋ ಹಠ ಹಿಡಿದು ಪುರಸಭೆಯಲ್ಲೇ ಗುತ್ತಿಗೆ ನೌಕರಿ ಹಿಡಿಯುತ್ತಾರೆ. ಸಾಲ ಮಾಡಿ, ಕಲ್ಲಹಕ್ಕಲ ಹರಿಜನಕೇರಿಯಲ್ಲೇ ಒಂದು ಸಣ್ಣ ಗೂಡು ಕಟ್ಟಿಕೊಳ್ಳುತ್ತಾರೆ. ಸಾಲಕ್ಕಾಗಿ ಅವರು ನೌಕರಿಯ ಪಗಾರ ಬಂದು ಬೀಳುವ ಬ್ಯಾಂಕಿನ ಪಾಸ್ ಬುಕ್ ಅನ್ನೇ ಅಡವಿಡುತ್ತಾರೆ. ಮನೆಯ ಸಾಲ-ಬಡ್ಡಿಯನ್ನು ಪ್ರತಿತಿಂಗಳೂ ತೀರಿಸುತ್ತ ಉಳಿದ ಹಣದಲ್ಲಿ  ಬದುಕು ಸಾಗಿಸುತ್ತಾರೆ.

ನಮಗೆ ಇದ್ದ ಕುತೂಹಲದ ಪ್ರಶ್ನೆಗಳನ್ನು ಒಂದೊಂದಾಗಿ ಕೇಳುತ್ತಾ ಹೋದೆವು. ಶಾಂತವ್ವಳ ಮನೆಯಲ್ಲಿ ಈಗ ಬೆಳಕು ಮೂಡಿದೆ. ಆಕೆಯ ಮನೆಗೆ ವಿದ್ಯುತ್ ಸಂಪರ್ಕವಿದೆ. ಒಂದು ಟ್ಯೂಬ್ ಲೈಟು ಇಡೀ ಮನೆಯನ್ನು ಬೆಳಗುತ್ತದೆ. ಮಿಕ್ಕಂತೆ ರೇಡಿಯೋ, ಟಿವಿ ಇತ್ಯಾದಿ ಯಾವುದೂ ಇದ್ದ ಹಾಗೆ ಕಾಣಲಿಲ್ಲ.

ನಮಗೆ ತುಂಬ ಪ್ರಮುಖವಾಗಿ ಕಾಡುತ್ತಿದ್ದ ಪ್ರಶ್ನೆ ಜಾತಿಪ್ರಮಾಣ ಪತ್ರದ್ದು. ಅದನ್ನೂ ಸಹ ಈಗ ಪಡೆಯಲಾಗಿದೆ. ಆದರೆ ಪ್ರಭಾಕರನಿಗೆ ಕಳೆದ ವರ್ಷ ಸ್ಕಾಲರ್‌ಶಿಪ್ ಕೊಟ್ಟಿಲ್ಲ. ಪ್ರಭಾಕರನಿಗಾಗಲೀ, ಶಿಲ್ಪಳಿಗಾಗಲಿ ಸರ್ಕಾರದ ಬೈಸಿಕಲ್ ಯೋಜನೆ ತಲುಪಿಲ್ಲ. ಇಬ್ಬರಿಗೂ ಒಂದೊಂದು ಸೈಕಲ್ ಸಿಗಬೇಕಿತ್ತು. ಆದರೆ ಅದು ದೊರಕಿಲ್ಲ. ನಮಗೆ ಗೊತ್ತಾದ ಮಾಹಿತಿ ಪ್ರಕಾರ ಜಾತಿಪ್ರಮಾಣ ಪತ್ರ ಸೈಕಲ್ ಪಡೆಯಲು ಬೇಕಾಗೇ ಇಲ್ಲ. ಇವರಿಬ್ಬರಿಗೂ ಸಹಜವಾಗಿಯೇ ಸೈಕಲ್ ಸಿಗಬೇಕಿತ್ತು. ಸೈಕಲ್‌ಗಳು ಸರಿಯಾದ ಪ್ರಮಾಣದಲ್ಲಿ ಬರುತ್ತಿಲ್ಲ. ಹೀಗಾಗಿ ಸಾಕಷ್ಟು ಮಕ್ಕಳು ವಂಚಿತರಾಗಿದ್ದಾರೆ ಎಂಬುದು ಸ್ಥಳೀಯರ ಮಾತು. ಪ್ರಭಾಕರನ ಶಾಲೆಗೆ ರಜೆ. ಶಾಲೆ ಆರಂಭವಾದ ಮೇಲೆ ಸಂಬಂಧಪಟ್ಟವರನ್ನು ಸಂಪರ್ಕಿಸಿದರೆ ಈ ಕುರಿತು ಪೂರ್ಣ ಮಾಹಿತಿ ದೊರೆಯಬಹುದು. ಶಿಲ್ಪ ಮತ್ತು ಸಂದೇಶರಿಗೆ ಕಳೆದ ಸರ್ತಿ ಸ್ಕಾಲರ್‌ಶಿಪ್ ಸಿಕ್ಕಿದೆ. ಆದರೆ ಪ್ರಭಾಕರನಿಗೆ ಸಿಕ್ಕಿಲ್ಲ. ತಂದೆಯ ಜಾತಿ ಸರ್ಟಿಫಿಕೇಟ್ ಕೊಟ್ಟಿಲ್ಲವೆಂಬ ಕಾರಣಕ್ಕೆ ಅದನ್ನು ತಡೆಹಿಡಿಯಲಾಗಿದೆ ಎಂಬುದು ಮನೆಯವರ ಮಾತು. ಯಾಕೆ ಹೀಗಾಯಿತು ಎಂಬುದನ್ನು ಶಾಲೆಯ ಮುಖ್ಯಸ್ಥರನ್ನು ಕೇಳಿದರೆ ಗೊತ್ತಾಗಬಹುದು.

ಪ್ರಭಾಕರನಿಗೆ ಓದುವ ಆಸಕ್ತಿಯಿದೆ. ಆದರೆ ತಾಯಿಯ ಕಷ್ಟಗಳನ್ನು ಅವನಿಂದ ನೋಡಲಾಗುತ್ತಿಲ್ಲ. ಅದಕ್ಕಾಗಿ ಈಗ ಹೊಟೇಲ್ ಒಂದರಲ್ಲಿ ಕ್ಲೀನರ್ ಕೆಲಸ ಮಾಡುತ್ತಾನೆ. ತಿಂಗಳಿಗೆ ನಾಲ್ಕು ನೂರು ರೂಪಾಯಿ ಪಗಾರ. ಬೆಳಿಗ್ಗೆ ೮ರಿಂದ ರಾತ್ರಿ ೮ರವರೆಗೆ ೧೨ ತಾಸಿನ ಬಿಡುವಿಲ್ಲದ ಕೆಲಸ. ೮ನೇ ತರಗತಿಯಲ್ಲಿ ಅವನು ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಜೂನ್ ಆರಂಭದಲ್ಲೇ ಮತ್ತೆ ಪರೀಕ್ಷೆಗಳು. ಪಾಸಾದರೆ ೯ನೇ ತರಗತಿಯಲ್ಲಿ ಮುಂದುವರೆಯುತ್ತಾನೆ, ಇಲ್ಲವಾದಲ್ಲಿ ಹೊಟೇಲ್ ಕಾಯಕ ಮುಂದುವರೆಯುತ್ತದೆ.

ಶಾಂತವ್ವ, ಪ್ರಭಾಕರ ಎಲ್ಲ ವಿಷಯಗಳನ್ನು ಹೇಳಿಕೊಂಡರು. ನಾವು ಆತನಿಗೆ ಅವನದೇ ವಿಡಿಯೋ ತೋರಿಸಿದೆವು. ನೋಡನೋಡುತ್ತಿದ್ದಂತೆ ಕೇರಿಯ ಹುಡುಗರೆಲ್ಲ ಅಲ್ಲಿ ಮುತ್ತಿಕೊಂಡರು. ಭಂಗಿ ಸಮುದಾಯದವರ ಒಟ್ಟು ೧೫ ಕುಟುಂಬಗಳು ಅಲ್ಲಿವೆ. ಎಲ್ಲರೂ ಒಂದೇ ಕುಟುಂಬದಂತೆ ಅಲ್ಲಿ ವಾಸಿಸುತ್ತಾರೆ. ಶಾಂತವ್ವ ಏನೇ ಬಡತನವಿದ್ದರೂ ಮಕ್ಕಳ ಓದಿಗೆ, ಬಟ್ಟೆ ಬರೆಗೆ, ಹೊಟ್ಟೆಗೆ ಕೊರತೆ ಮಾಡಿಲ್ಲ. ಛಲಕ್ಕೆ ಬಿದ್ದವಳಂತೆ ಮಕ್ಕಳನ್ನು ಸಾಕುತ್ತಿದ್ದಾರೆ, ಕಾಪಾಡಿಕೊಳ್ಳುತ್ತಿದ್ದಾರೆ. ಆಕೆಗೆ ಒಂದೇ ಸಂಕಟ. ಮಗ ಇಷ್ಟು ಚಿಕ್ಕ ವಯಸ್ಸಿಗೆ ದುಡಿಯಬೇಕಾ? ಅವನ ಓದು ಹಾಳಾಗುತ್ತಿರುವುದೇ ನನ್ನ ಹಾಳು ಕಷ್ಟಗಳಿಂದ ಎಂಬುದು.

ಒಂದು ಪಾಸ್‌ಬುಕ್ ಅಡಕ್ಕೆ ಇಟ್ಟಾಗಿತ್ತು. ಯಾವುದಾದರೂ ಬ್ಯಾಂಕಿನಲ್ಲಿ ಇನ್ನೊಂದು ಅಕೌಂಟು ಇದೆಯಾ ಎಂದು ಪ್ರಶ್ನಿಸಿದಾಗ ಶಾಂತವ್ವಗೆ ನೆನಪಾಗಿದ್ದು ಕರ್ನಾಟಕ ಬ್ಯಾಂಕಿನ ಅಕೌಂಟು. ಅದರ ಪಾಸ್ ಬುಕ್ ತರಿಸಿದೆವು. ಅದು ಯಾವತ್ತೋ ಸತ್ತು ಹೋದಂತಿತ್ತು.

ಹೊಸ ಸೈಕಲ್ ಮೇಲೆ ಪ್ರಭಾಕರನ ಸವಾರಿ
ಪ್ರಭಾಕರ ಮತ್ತವನ ತಾಯಿಯನ್ನು ಕರೆದುಕೊಂಡು ಅಲ್ಲಿನ ಕರ್ನಾಟಕ ಬ್ಯಾಂಕ್‌ಗೆ ತೆರಳಿದೆವು. ಶಾಂತವ್ವಳ ಅಕೌಂಟಿಗೆ ಒಂದಷ್ಟು ಹಣ ತುಂಬಿ ಅದನ್ನು ಮತ್ತೆ ಜೀವಂತಗೊಳಿಸಲಾಯಿತು. ಹೊಸ ಪಾಸ್‌ಬುಕ್ ಕೂಡ ದೊರೆಯಿತು. ನೋಡವ್ವ, ನಮ್ಮ ಸ್ನೇಹಿತರು ಭಾಳ ಜನ ಇದ್ದಾರೆ. ಅವರಲ್ಲಿ ಕೆಲವರು ನಿಮಗೆ ಸಹಾಯ ಮಾಡಬಹುದು. ಅದಕ್ಕಾಗಿ ಈ ಅಕೌಂಟು ಎಂದಾಗ ಶಾಂತವ್ವಳ ಬಾಯಿಂದ ಮಾತೇ ಹೊರಡಲಿಲ್ಲ.

ಹೊರಗೆ ಬ್ಯಾಂಕಿನ ಬಾಗಿಲಿನಲ್ಲಿ ನಿಂತು ಮಾತನಾಡುತ್ತಿದ್ದಾಗ ಊರಿನ ಹಿರಿಯರೊಬ್ಬರು ಸಿಡುಕಿದರು. ಅಡ್ಡ ಯಾಕೆ ನಿಂತಿದ್ದೀ ಎಂಬುದು ಅವರ ತಕರಾರು, ಸಿಡುಕು. ಹೋಗು, ಆ ಮೂಲೆಲಿ ನಿಂತುಕೊ ಹೋಗ್ ಎಂದು ದಬಾಯಿಸಿ ಆ ಸಜ್ಜನರು ಹೊರಟುಹೋದರು. ಶಾಂತವ್ವಳಂಥವರ ಜಾಗ ಎಲ್ಲಿ ಎಂಬುದನ್ನು ಇಂಥವರು ನಿರ್ಧರಿಸುತ್ತಲೇ ಬಂದಿದ್ದಾರೆ, ಆ ವಿಷಯ ಬಿಡಿ.

ನಂತರ ನಾವು ಹೋಗಿದ್ದು ಸೈಕಲ್ ಅಂಗಡಿಗೆ. ಹಾನಗಲ್‌ಗೆ ಬಂದ ಕೂಡಲೇ ನಾವು ವಿಚಾರಿಸಿದ್ದು ಇಲ್ಲಿ ಸೈಕಲ್ ಅಂಗಡಿ ಇದೆಯೇ ಎಂದು. ಸೈಕಲ್ ಅಂಗಡಿಯಲ್ಲಿ ಇದ್ದಿದ್ದೇ ಎರಡು ವೆರೈಟಿ ಸೈಕಲ್‌ಗಳು. ಒಂದನ್ನು ಆಯ್ಕೆ ಮಾಡಿ ಟೈರುಗಳಿಗೆ ಬ್ಲೋ ಹೊಡೆಸಿ ಪ್ರಭಾಕರನ ಕೈಗೆ ಕೊಟ್ಟಾಗ ಅವನು ಸ್ಥಬ್ದನಾಗಿದ್ದ. ನಡುಗುವ ಕೈಗಳಿಂದ ಸೈಕಲ್ ಹಿಡಿಯಲು ಯತ್ನಿಸಿ ಸೋತ. ನಂತರ ಆತನ ಸೋದರ ಸಂಬಂಧಿಯ ಕೈಗೆ ಸೈಕಲ್ ಒಪ್ಪಿಸಿ ಹೊರಟೆವು. ಪ್ರಭಾಕರ ಮತ್ತೆ ಸೈಕಲ್ ಹಿಡಿದು ಓಡಿಸುವಂತಾಗಿದ್ದು ಒಂದು ಗಂಟೆ ಕಳೆದ ನಂತರವೇ.

ನಮಗೆ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸವೇನೂ ಉಳಿದಿರಲಿಲ್ಲ. ಕೆಇಬಿಯಲ್ಲೂ ಕೆಲಸವಿರಲಿಲ್ಲ. ಎಲ್ಲವನ್ನೂ ಶಾಂತವ್ವಳೇ ಅಚ್ಚುಕಟ್ಟಾಗಿ ಮಾಡಿದ್ದಾರೆ. ಮತ್ತೆ ಮನೆಗೆ ಹೊರಟೆವು. ಒಂದಷ್ಟು ಸಿಹಿ ತಂದು ಅಲ್ಲಿದ್ದವರಿಗೆಲ್ಲ ಕೊಡಿಸಿದೆವು. ಪ್ರಭಾಕರ ತನ್ನ ಹೊಸ ಸೈಕಲ್ ಏರಿ ಒಂದು ರೌಂಡು ಬಂದ. ನಮ್ಮ ಖುಷಿಗಾಗಿ ಒಂದೆರಡು ಫೋಟೋಗಳನ್ನು ತೆಗೆದಿದ್ದಾಯಿತು.

ಮನೆಯೊಳಗೆ ಬಂದು ಕುಳಿತು, ಅಲ್ಲಿನ ಕತ್ತಲಿಗೆ ನಮ್ಮ ಕಣ್ಣುಗಳು ಹೊಂದಿಕೊಳ್ಳುವಷ್ಟರಲ್ಲಿ ೮೦ರ ವೃದ್ಧೆ ಭೀಮವ್ವ ಕಾಲಿಗೆ ಬಿದ್ದುಬಿಡೋದೆ? ಆಕೆಯ ಆ ಪ್ರತಿಕ್ರಿಯಿಂದ ಘಾಸಿಗೊಂಡು, ಆಕೆಯನ್ನು ಹಿಡಿದೆತ್ತಿ, ಆಕೆಯ ಕಾಲಿಗೆರಗಿ ಪ್ರತಿಯಾಗಿ ನಮಸ್ಕರಿಸಿ, ನೀವು ಹಿರಿಯರು ಹೀಗೆಲ್ಲ ಮಾಡಬಾರದು ಎಂದಾಗ ಭೀಮವ್ವ ದೇವರಂತೆ ಬಂದಿರಿ ಎಂದಷ್ಟೇ ಹೇಳಿತು.

ನಿಜ, ಒಬ್ಬ ಪ್ರಭಾಕರನ ಕುಟುಂಬಕ್ಕೆ ಹೀಗೆ ಸಹಾಯ ಮಾಡುವುದರಿಂದ ಇಡೀ ಸಮಾಜ ಉದ್ಧಾರವಾಗುವುದಿಲ್ಲ. ಇಂಥ ಕೋಟ್ಯಂತರ ಪ್ರಭಾಕರಗಳು ನಮ್ಮ ನಡುವೆ ಇದ್ದಾರೆ. ಸಹಾಯಕ್ಕಿಂತ ಅಗತ್ಯವಾಗಿ ಬೇಕಿರುವುದು ಸುಧಾರಣೆ. ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಹುಡುಕಿ ನಾವು ಚಿಕಿತ್ಸೆ ಕೊಡಬೇಕು. ಹೀಗಂದುಕೊಂಡು ಅವರೆಲ್ಲರಿಂದ ಬೀಳ್ಕೊಂಡು ಹೊರಡಲು ಅಣಿಯಾದೆವು.

ಇವರಿಗೆ ತಿನ್ನಲು, ಕುಡಿಯಲು ಏನಾದ್ರೂ ಕೊಡಬಹುದೇ, ಬೇಡವೇ? ಕೊಟ್ಟರೆ ತಗೋತಾರಾ ಇಲ್ವಾ? ಎಂಬ ಅನುಮಾನ ಅವರಿಗೆ. ಅದನ್ನು ಗಮನಿಸಿ ನಾವೇ ಒಂದು ಲೋಟ ನೀರು ಪಡೆದು ಕುಡಿದಾಗ ಅವರಿಗೆ ಅತಿಥಿಗಳನ್ನು ಸತ್ಕರಿಸಿದ ಸಣ್ಣ ಸಮಾಧಾನ. ಮುಂದಿನ ಬಾರಿ ಬಂದಾಗ ಊಟ ಮಾಡೇ ಹೋಗಬೇಕು ಎಂದು ಮನೆಯವರೆಲ್ಲರೂ ಹೇಳಿದಾಗ, ಮುಂದಿನ ಸರ್ತಿ ಊಟಕ್ಕಾಗಿಯೇ ಬರುತ್ತೇವೆ ಎಂದು ಹೇಳಿ ಹೊರಟೆವು.

ಶಾಂತವ್ವ, ಶಿಲ್ಪ, ಭೀಮವ್ವ, ಸಂದೇಶ ಹಾಗು ಪ್ರಭಾಕರ್
ಹಾನಗಲ್‌ನ ಈ ಕುಟುಂಬಕ್ಕೆ ದೊಡ್ಡದಾಗಿ ಎದುರಾಗಿರುವ ಸಂಕಟ ಮನೆಯದ್ದು. ಈಗಿರುವ ಈ ೧೫ ಕುಟುಂಬಗಳಿರುವ ಜಾಗವನ್ನು ರಸ್ತೆಗಾಗಿ ಮೀಸಲಾಗಿಸಲಾಗಿದೆ. ಹೀಗಾಗಿ ಈ ಕುಟುಂಬಗಳನ್ನು  ಇಲ್ಲಿಂದ ಮೂರ‍್ನಾಲ್ಕು ಕಿ.ಮೀ ದೂರದ ನವನಗರಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯಲಿದೆ. ಅಲ್ಲಿ ಇವರಿಗೆ ಇದೇ ರೀತಿ ಒಂದಷ್ಟು ಜಾಗವನ್ನು ನೀಡಬಹುದು. ಆಶ್ರಯ ಯೋಜನೆಯಡಿ ಈ ಕುಟುಂಬಗಳಿಗೆ ಸರ್ಕಾರವೇ ಮನೆ ಕಟ್ಟಿಕೊಡಬಹುದು. ಆದರೆ ಬರಿಯ ಜಾಗ ಕೊಟ್ಟರೆ ಮತ್ತೆ ಮನೆ ಕಟ್ಟಿಕೊಳ್ಳಲು ಹೇಗೆ ಹಣ ಹೊಂದಿಸುವುದು ಎಂಬುದು ಇವರೆಲ್ಲರ ಚಿಂತೆ.

ನಾವೆಲ್ಲರೂ ಸೇರಿ ಒಂದಷ್ಟು ಸಹಾಯ ಮಾಡಿದರೆ ಕನಿಷ್ಠ ಪ್ರಭಾಕರನ ಕುಟುಂಬವಾದರೂ ಸಮಸ್ಯೆಗಳಿಂದ ಮುಕ್ತವಾಗಬಹುದು. ಶ್ರೀಮತಿ ಶಾಂತವ್ವ ಹನುಮಂತಪ್ಪ ಕಲ್ಲಕಲ್ ಅವರ ಹಾನಗಲ್ ಶಾಖೆ ಕರ್ನಾಟಕ ಬ್ಯಾಂಕ್‌ನ ಅಕೌಂಟ್ ಸಂಖ್ಯೆ ೩೦೨೨೫೦೦೧೦೦೭೬೩೨೦೧. ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಎಲ್ಲರನ್ನೂ ವಿನಂತಿಸಿಕೊಳ್ಳುತ್ತೇವೆ. ಸಹಾಯ ಮಾಡಲು ಸಾಧ್ಯವಾಗದವರು ಈ ಕುಟುಂಬವನ್ನು ತುಂಬು ಮನಸ್ಸಿನಿಂದ ಹಾರೈಸಿದರೂ ಸಾಕು.

ನಾವು ಮಾಡಬೇಕಿರುವ ಕೆಲಸಗಳು ಇನ್ನೂ ಇವೆ. ಸರ್ಕಾರದ ಒಳ್ಳೆಯ ಯೋಜನೆಗಳಲ್ಲಿ ಒಂದಾದ ಸೈಕಲ್ ಕೊಡುವ ಯೋಜನೆ ಯಾಕಿನ್ನೂ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವುದರ ಕುರಿತು ಬೆಳಕು ಚೆಲ್ಲಬೇಕು. ಜಾತಿ ಪ್ರಮಾಣಪತ್ರಕ್ಕಾಗಿ ಅಧಿಕಾರಿಗಳು ನೀಡುವ ಕಿರುಕುಳಗಳು ನಿಲ್ಲಬೇಕು. ಇಂಥ ನಿರ್ಗತಿಕ ಜನರನ್ನು ಒಕ್ಕಲೆಬ್ಬಿಸುವಾಗ ಸರಿಯಾದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಹಾಗೆ ನಾವು ನೋಡಿಕೊಳ್ಳಬೇಕು. ಇದು ಕೇವಲ ಹಾನಗಲ್‌ನಲ್ಲಿ ಮಾತ್ರ ಆಗಬೇಕಿರುವ ಕೆಲಸವಲ್ಲ. ಎಲ್ಲೆಡೆ, ಮನುಷ್ಯತ್ವದಲ್ಲಿ ನಂಬಿಕೆ ಉಳ್ಳವರೆಲ್ಲರೂ ಮಾಡಬಹುದಾದ ಕೆಲಸವಿದು. ಆ ಕಡೆ ನಮ್ಮ ಗಮನ ಹರಿಸೋಣ. ಹಾಗೆಯೇ ಈ ಶಾಂತವ್ವಳ ಕುಟುಂಬವನ್ನು ಕನಿಷ್ಠ ೬ ತಿಂಗಳಿಗೊಮ್ಮೆಯಾದರೂ ಭೇಟಿ ಮಾಡಿ, ಅವರ ಪರಿಸ್ಥಿತಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ನಿಜ, ಇದು ಪ್ರಭಾಕರ್ ಒಬ್ಬನ, ಒಂದು ಕುಟುಂಬ ಸಮಸ್ಯೆಯಲ್ಲ. ಇಂಥ ಕಡುಕಷ್ಟದಲ್ಲೂ ಮಕ್ಕಳನ್ನು ಓದಿಸಲು ಶಾಂತಮ್ಮ ಬದ್ಧರಾಗಿದ್ದಾರೆ. ಇಂಥವರಿಗೆ ಎಲ್ಲ ಊರುಗಳಲ್ಲೂ ಗುರುತಿಸಿ ಅವರಿಗೆ ಸಹಾಯ ಮಾಡುವಂತಾಗಬೇಕು. ಆ ಕೆಲಸ ಪ್ರಭಾಕರನ ಮೂಲಕವೇ ಆರಂಭವಾಗಲಿ ಎಂದು ನಮ್ಮ ಬಯಕೆ.

ಪ್ರಭಾಕರ ತಂದೆ ಮತ್ತು ಅಜ್ಜಿಯ ಫೋಟೋಗಳು
ಹಾನಗಲ್‌ನಿಂದ ವಾಪಾಸು ಹಾವೇರಿಗೆ ಬಂದು ಹೊಟೆಲ್ ಒಂದರಲ್ಲಿ ಊಟಕ್ಕೆ ಕುಳಿತಾಗ ಸಪ್ಲೈ ಮಾಡಲು ಬಂದಿದ್ದು ಪ್ರಭಾಕರನ ವಯಸ್ಸಿನ ಒಬ್ಬ ಹುಡುಗ. ಸುಮ್ಮನಿರಲಾರದೆ ಅವನ ಪೂರ್ವಾಪರ ವಿಚಾರಿಸಿದೆವು. ಅವನಿಗೂ ತಂದೆಯಿಲ್ಲ. ತಾಯಿಗೆ ಖಾಯಿಲೆ, ದುಡಿಯುವ ಚೈತನ್ಯವಿಲ್ಲ. ೯ನೇ ತರಗತಿ ಪಾಸಾದೆ, ಆದರೆ ತಾಯಿಯನ್ನು ಸಾಕಬೇಕು, ಅದಕ್ಕಾಗಿ ಇಲ್ಲಿ ಕೆಲಸ ಮಾಡುತ್ತೇನೆ. ಕೆಲಸದ ಜತೆಗೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿ ಪಾಸು ಮಾಡ್ತೀನಿ ಎಂದ ಆ ಹುಡುಗ. ಪಟಪಟನೆ ಮಾತನಾಡಿ, ಈಗ ನಿಮಗೇನು ಕೊಡ್ಲಿ ಸರ್ರಾ, ಖಡಕ್ ರೊಟ್ಟಿ ಐತಿ, ಮೆದು ರೊಟ್ಟಿ ಐತಿ, ಏನು ಕೊಡ್ಲಿ? ಎಂದು ನಿರ್ಭಾವುಕನಾಗಿ ಪ್ರಶ್ನೆ ಹಾಕಿ, ತನಗೆ ಇನ್ನಷ್ಟು ಮಾತನಾಡಲು ಸಮಯವಿಲ್ಲವೆಂದು ಪರೋಕ್ಷವಾಗಿ ಸೂಚಿಸಿದ.

ಕಣ್ಣಲ್ಲಿ ಇನ್ನೊಬ್ಬ ಪ್ರಭಾಕರನ ಚಿತ್ರ ಕುಣಿಯತೊಡಗಿತ್ತು.

ಕಾಲುಮುರಿದ ಮರಿಯ ರಕ್ಷಣೆಗಾಗಿ ಸಿಟ್ಟಿಗೆದ್ದಿದ್ದ ತಾಯಿ ಕೋಳಿ, ದಿಢೀರನೆ ಕಾಲಿಗೆರಗುವ ಮೂಲಕ ಪ್ರತಿಕ್ರಿಯೆ ತೋರಿದ ಭೀಮವ್ವ, ಬ್ಯಾಂಕಿನ ಮುಂಭಾಗ ನಾಯಿಗೆ ಗದರುವಂತೆ ಗದರಿ ಗೊಣಗುತ್ತಾ ಹೋದ ಆ ಮರ್ಯಾದಸ್ಥ, ತಾಯಿನಾ ನಾನೇ ಸಾಕ್ತಿನಿ ಸರ್ರಾ ಎಂದಾ ಹೊಟೇಲ್ ಹುಡುಗ... ಇವರೆಲ್ಲರೂ ಕದಲದ ಚಿತ್ರಗಳಂತೆ ನಮ್ಮ ಕಣ್ಣುಗಳಲ್ಲಿ ಉಳಿದುಕೊಳ್ಳಲಿದ್ದಾರೆ ಅನ್ನಿಸುತ್ತಿದ್ದಂತೆ ರೈಲ್ವೈ ಸ್ಟೇಷನ್ ಹಾದಿ ಹಿಡಿದೆವು.

ಹಾನಗಲ್ ಎಂಬ ಊರಿನ ಆ ಹೊಳಪುಗಣ್ಣಿನ ಹುಡುಗ ಸೈಕಲ್ ಏರಿ ನಿಂತಾಗ....


ಇವನೇ ನಮ್ಮ ಪ್ರಭಾಕರ. ಪೂರ್ತಿ ಹೆಸರು ಪ್ರಭಾಕರ ಹರಿಜನ. ಹಾನಗಲ್‌ನ ಕಲ್ಲಹಕ್ಕಲದ ಹರಿಜನ ಕೇರಿಯ ಹನುಮಂತಪ್ಪ ಹರಿಜನ ಅವರ ಮೊದಲನೇ ಪುತ್ರ ಈತ. ಹನುಮಂತಪ್ಪ ಈಗ ಇಲ್ಲ, ತೀರಿದ್ದಾರೆ. ತಾಯಿ ಶಾಂತವ್ವ ಮುನಿಸಿಪಾಲಿಟಿ ಗಟಾರ ಬಳಿದು ಈತನನ್ನೂ, ಇನ್ನೆರಡು ಮಕ್ಕಳನ್ನೂ ಮತ್ತು ತನ್ನ ತಾಯಿಯನ್ನೂ ಸಾಕುತ್ತಾಳೆ. ಪ್ರಭಾಕರನ ಕುರಿತಾದ ಒಂದು ಕಿರುಚಿತ್ರ ನೋಡಿ ನಾವೆಲ್ಲರೂ ಆಘಾತಗೊಂಡಿದ್ದೆವು. ನೀವೆಲ್ಲರೂ ಕಾಳಜಿ ತೋರಿದಿರಿ. ಅವನನ್ನು ನೋಡಬೇಕೆಂದು ಹಾನಗಲ್‌ಗೆ ಹೋಗಿ, ಆತನ ಕುಟುಂಬದೊಂದಿಗೆ ಇದ್ದು ಬಂದಿದ್ದೇವೆ.

ಯಾರು ಈ ಹುಡುಗ? ಇವರ ಕುಟುಂಬದ ಕಥೆ ಏನು? ತನ್ನ ತಾಯಿಯ ಸಾಲ ತೀರಿಸಲೆಂದು ಹೊಟೆಲ್ ಒಂದರಲ್ಲಿ ಕ್ಲೀನರ್ ಕೆಲಸ ಮಾಡುತ್ತಿರುವ ಈತನನ್ನು ಮತ್ತೆ ಓದಿಗೆ ಹಚ್ಚುವುದು ಹೇಗೆ? ಈತನ ಜಾತಿ ಸರ್ಟಿಫಿಕೇಟ್‌ನ ಕಥೆ ಏನು? ಈ ಬಡ ಕುಟುಂಬಕ್ಕೆ ಸಹಾಯ ಮಾಡಲು ನಾವು ಸಣ್ಣದಾಗಿ ಯೋಜಿಸಿರುವುದಾದರೂ ಏನು? ಈ ಎಲ್ಲವನ್ನೂ ನಿಮ್ಮ ಜತೆ ಹೇಳಿಕೊಳ್ಳಬೇಕು. ಹಾಗೆಯೇ ಈತನಿಗೆ ನಿಮ್ಮ ಸಹಾಯವೂ ಬೇಕು.

ಅಂದಹಾಗೆ ಈತನ ಬಳಿ ಈಗಿರುವುದು ಅವನದೇ ಆದ ಹೊಚ್ಚ ಹೊಸ ಸೈಕಲ್. ಅದು ಆ ಹೊಳಪುಗಣ್ಣಿನ ಹುಡುಗನಿಗೆ ನಮ್ಮೆಲ್ಲರ ಪ್ರೀತಿಯ ಕೊಡುಗೆ. ಆ ಕಿರುಚಿತ್ರವನ್ನು ನೋಡಿದಾಗಿನಿಂದ ಸೈಕಲ್ ಎಂಬ ವಸ್ತುವೇ ವ್ಯವಸ್ಥೆಯ ಕ್ರೌರ್ಯದ, ನಮ್ಮ ಅಸಹಾಯಕತೆಯ ಸಂಕೇತದಂತೆ ಕಾಡುತ್ತಿತ್ತು. ಪ್ರಭಾಕರನ ಮೊಗದಲ್ಲಿ ಈಗ ಸಣ್ಣ ಗೆಲುವು, ನಮಗೆ ಪುಟ್ಟ ಖುಷಿ.

ಅವನ ಕುರಿತು, ಅವನ ತಾಯಿಯ ಕುರಿತು, ತಮ್ಮ-ತಂಗಿಯರ ಕುರಿತು ತುಂಬಾ ತುಂಬಾ ಹೇಳುವುದಿದೆ. ರಿಸರ್ವೇಷನ್ ಇಲ್ಲದೆ ರೈಲು ಹಿಡಿಯಬಾರದು. ಹಿಡಿದರೂ ನಿಲ್ಲಲೂ ಜಾಗವಿಲ್ಲದ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡಬಾರದು. ಇದನ್ನು ಉಲ್ಲಂಘಿಸಿದರ ಪರಿಣಾಮ ಕೊಂಚ ಆಯಾಸ. ಸ್ವಲ್ಪ ಟೈಮ್ ಕೊಡಿ, ಪ್ಲೀಸ್.

Wednesday, May 18, 2011

ಈ ಲೋಕೇಶನಿಗೆ ನ್ಯಾಯ ಕೊಡಿಸುವಿರಾ ಮಂತ್ರಿ ಮಹೋದಯರೇ?


ಇದು ಒಬ್ಬ ಲೋಕೇಶನ ಕಥೆಯಲ್ಲ. ಇಂಥ ಲಕ್ಷಾಂತರ ಲೋಕೇಶ್‌ಗಳು ಕರ್ನಾಟಕದಾದ್ಯಂತ ಇದ್ದಾರೆ. ಸದ್ಯಕ್ಕೆ ಕುರ್ಚಿ ಉಳಿಸಿಕೊಳ್ಳುವ ಕಾರ್ಯದಲ್ಲಿ ಬಿಜಿಯಾಗಿರುವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಸರ್ಕಾರ ಕೆಡವಲು ತುದಿಗಾಲಲ್ಲಿ ನಿಂತಿರುವ ವಿರೋಧಪಕ್ಷದ ನಾಯಕರುಗಳು ಕನಿಷ್ಠ ಈ ಒಬ್ಬ ಲೋಕೇಶನಿಗಾದರೂ ನ್ಯಾಯ ದೊರಕಿಸಿಕೊಡುವರೆ? ಮಾಸ್ಟರ್ ಕಿಶನ್‌ಗಾಗಿ ನಿಯಮಗಳನ್ನು ಸಡಿಲಿಸಬಲ್ಲವರು, ಈ ಅಸಹಾಯಕ ಜನರಿಗೆ ಜಾತಿ ಸರ್ಟಿಫಿಕೇಟ್, ಇತ್ಯಾದಿಗಳಿಗಾಗಿ ಪೀಡಿಸುವುದನ್ನು ನಿಲ್ಲಿಸುತ್ತಾರಾ? ಇದ್ಯಾವುದೂ ಸಾಧ್ಯವಾಗದಿದ್ದರೆ ಬಡವರಿಗೆ ಈ ದೇಶದಲ್ಲಿ ಬದುಕುವ ಹಕ್ಕು ಇಲ್ಲ ಎಂದು ಘೋಷಿಸುವ ಮೂಲಕ ಕಠೋರವಾಸ್ತವವನ್ನು ಒಪ್ಪಿಕೊಳ್ಳಲು ಇವರು ಸಿದ್ಧರಿದ್ದಾರೆಯೇ?

ನಮ್ಮ ಮೀಡಿಯಾಗಳಲ್ಲಿ ನಿಜವಾಗಿಯೂ ಪ್ರಧಾನ ಆದ್ಯತೆಯ ವರದಿಯಾಗಬೇಕಿದ್ದ ಇದು ಯೂ ಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ಈ ಮನಕಲಕುವ ಕಿರುಚಿತ್ರ ನಿರ್ಮಿಸಿದವರಿಗೆ ಒಂದು ಥ್ಯಾಂಕ್ಸ್. ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ. ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

ರಂಗಣ್ಣ ಇಲ್ಲದ ರಾಜಕಾರಣ ಬಿಕ್ಕಟ್ಟು ಮತ್ತು ಖಾಲಿತಲೆಯ ನಿರೂಪಕರು...


ರಾಜ್ಯ ರಾಜಕಾರಣದಲ್ಲಿ ಭರ್ಜರಿ ವಿದ್ಯಮಾನಗಳು. ಸರ್ಕಾರ ವಜಾಗೊಳಿಸಲು, ವಿಧಾನಸಭೆ ಅಮಾನತ್ತಿನಲ್ಲಿಡಲು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಕೇಂದ್ರ ಸರ್ಕಾರಕ್ಕೆ ನೀಡಿರುವ ಶಿಫಾರಸಿನಿಂದಾಗಿ ಕ್ಷಣಕ್ಷಣಕ್ಕೂ ತರೇಹವಾರಿ ಸುದ್ದಿಗಳು, ಬ್ರೆಕಿಂಗ್ ನ್ಯೂಸುಗಳು. ಕರ್ನಾಟಕದ ಮಾಧ್ಯಮಗಳಿಗೆ ಬಿಡುವಿಲ್ಲದ ಕೆಲಸ. ಸುದ್ದಿ ಚಾನಲ್‌ಗಳಂತೂ ಎಡೆಬಿಡದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.

ಆದರೆ, ಕನ್ನಡ ಸುದ್ದಿ ಚಾನಲ್‌ಗಳು ಇಂಥ ವಿದ್ಯಮಾನಗಳನ್ನು ವರದಿ, ವಿಶ್ಲೇಷಣೆ ಮಾಡುವಲ್ಲಿ ಇನ್ನೂ ಸಮರ್ಥವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇಂಥ ಬಿಕ್ಕಟ್ಟನ್ನು ಸರಿಯಾಗಿ ಅರ್ಥಮಾಡಿಕೊಂಡೇ ಇರದ ಸುದ್ದಿ ನಿರೂಪಕರು, ಸುತ್ತಮುತ್ತ ನಿಂತವರು ಹೇಳಿದ್ದನ್ನೇ ನಂಬಿ ವರದಿ ಮಾಡುವ ವರದಿಗಾರರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಸಂವಿಧಾನದ ೩೫೬ನೇ ಪರಿಚ್ಛೇದ ಅಂದರೆ ಏನು ಎಂದು ಗೊತ್ತಿಲ್ಲದವರು ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಏನನ್ನು ವರದಿ ಮಾಡಲು, ಏನನ್ನು ವಿಶ್ಲೇಷಿಸಲು ಸಾಧ್ಯ?

ಎಚ್.ಆರ್.ರಂಗನಾಥ್ ನಿರ್ಗಮನದ ನಂತರ ಸುವರ್ಣ ನ್ಯೂಸ್ ಸಪ್ಪೆಯಾಗಿದೆ ಎಂದು ಹಿಂದೆಯೇ ಹೇಳಿದ್ದೆವು. ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಮಾತು ಇನ್ನಷ್ಟು ಪರಿಣಾಮಕಾರಿಯಾಗಿ ಸಾಬೀತಾಯಿತು. ಇಂಗ್ಲಿಷ್ ಸುದ್ದಿವಾಹಿನಿಗಳ ಪತ್ರಕರ್ತರು ತೋರುವ ವೃತ್ತಿಪರತೆಯನ್ನು ರಂಗನಾಥ್ ಸುವರ್ಣದಲ್ಲಿ ತಂದಿದ್ದರು. ಕರ್ನಾಟಕದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಚಾನಲ್‌ಗಳ ಮೊರೆಹೊಗುತ್ತಿದ್ದವರನ್ನು ರಂಗನಾಥ್ ಸೆಳೆದಿದ್ದರು. ಈ ಬಾರಿ ರಂಗನಾಥ್ ಇಲ್ಲದ ಸುವರ್ಣ ನ್ಯೂಸ್ ಇಂಥ ವೃತ್ತಿಪರತೆಯನ್ನು ಕಳೆದುಕೊಂಡಿದ್ದು ವಿಷಾದನೀಯ. ಕನ್ನಡ ವೀಕ್ಷಕರೂ ಸಿಎನ್‌ಎನ್ ಐಬಿಎನ್, ಎನ್‌ಡಿಟಿವಿ, ಟೌಮ್ಸ್ ನೌ ಗಳನ್ನು ನೋಡಿ ಸುದ್ದಿ ದಾಹವನ್ನು ತಣಿಸಿಕೊಳ್ಳಬೇಕಾಯಿತು.

ಹಮೀದ್ ಪಾಳ್ಯ ಮತ್ತು ಗೌರೀಶ್ ಅಕ್ಕಿ ಉತ್ತಮ ನಿರೂಪಕರು ಎಂಬುದೇನೋ ನಿಜ. ಆದರೆ ರಾಜಕೀಯ, ಕಾನೂನು ವಿಶ್ಲೇಷಣೆಯಲ್ಲಿ ಅವರು ಇನ್ನೂ ಎಳಸು ಎಂಬುದು ಸಾಬೀತಾಯಿತು. ಇಬ್ಬರಲ್ಲೂ ಆತ್ಮವಿಶ್ವಾಸದ ಕೊರತೆ ಕಾಣಿಸಿತು. ಬಹಳಷ್ಟು ಸಂದರ್ಭಗಳಲ್ಲಿ ಹಮೀದ್ ಅವರು ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಅವರನ್ನೇ ಅವಲಂಬಿಸಬೇಕಾಯಿತು. ಪ್ರಶಾಂತ್ ದಿಲ್ಲಿ ವಿದ್ಯಮಾನಗಳನ್ನು ಚೆನ್ನಾಗೇನೋ ವಿಶ್ಲೇಷಿಸಿದರು. ಆದರೆ ರಂಗನಾಥ್ ಇದ್ದಿದ್ದರೆ ಅವರಿಂದ ಇನ್ನಷ್ಟು ಹೊರತೆಗೆಸಬಹುದಿತ್ತು ಅನಿಸಿತು.

ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕಾರಣಿಗಳು, ಕಾನೂನು ಪಂಡಿತರ ಜತೆಗಿನ ಚರ್ಚೆಯ ಸಂದರ್ಭದಲ್ಲೂ ಸಹ ರಂಗನಾಥ್ ಠೊಳ್ಳಾಗಿರುವ, ಬುರುಡೆ ಬಿಡುವ ಮಾತುಗಾರರನ್ನು ಬಹಳ ಸುಲಭವಾಗಿ ಬೆತ್ತಲಾಗಿಸುತ್ತಿದ್ದರು. ತಿಳಿವಳಿಕೆ ಇರುವ ಪ್ರಬುದ್ಧರಿಂದ ಸಂದರ್ಭಕ್ಕೆ ಅಗತ್ಯವಾದ, ಸನ್ನಿವೇಶವನ್ನು ಕಟ್ಟಿಕೊಡಬಲ್ಲ ಉತ್ತರಗಳನ್ನು ಹೊರತೆಗೆಸುತ್ತಿದ್ದರು. ಖಚಿತವಾದ ಪ್ರಶ್ನೆಗಳನ್ನು ಎಸೆಯುವ, ದಾರಿ ತಪ್ಪುವ ಉತ್ತರಗಳನ್ನು ನಿರ್ದಾಕ್ಷಿಣ್ಯವಾಗಿ ತುಂಡರಿಸುವ ಜಾಣ್ಮೆ ಮತ್ತು ಧೈರ್ಯವೂ ಅವರಿಗಿತ್ತು. ತಮ್ಮದೇ ವೃತ್ತಿಪರತೆಯನ್ನು ಅವರು ಎಲ್ಲ ಸಿಬ್ಬಂದಿಯಿಂದಲೂ ಬಯಸುತ್ತಿದ್ದರು. ಒಮ್ಮೆಮ್ಮೆ ಲೈವ್ ಕಾರ್ಯಕ್ರಮಗಳಲ್ಲಿ ಅವರು ತಮ್ಮ ವರದಿಗಾರರಿಗೆ ನೀಡುತ್ತಿದ್ದ ಸೂಚನೆಗಳು ಅವರಿಂದ ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ವೀಕ್ಷಕರಿಗೂ ಅರ್ಥ ಮಾಡಿಸುತ್ತಿದ್ದವು. ಎಚ್.ಡಿ.ದೇವೇಗೌಡ, ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಎಸ್.ಬಂಗಾರಪ್ಪ, ಡಿ.ಬಿ.ಚಂದ್ರೇಗೌಡ, ರಮೇಶ್ ಕುಮಾರ್.. ಹೀಗೆ ಘಟನಾನುಘಟಿ ನಾಯಕರುಗಳೊಂದಿಗೆ ರಂಗನಾಥ್ ಅತ್ಯಂತ ಆತ್ಮವಿಶ್ವಾಸದಿಂದ ಚರ್ಚೆಗಳನ್ನು ನಡೆಸಬಲ್ಲವರಾಗಿದ್ದರು. ಆದರೆ ರಂಗನಾಥ್ ಇಲ್ಲದ ಸುವರ್ಣದಲ್ಲಿ ಇದೆಲ್ಲವೂ ಈಗ ಕಣ್ಮರೆಯಾಗಿದೆ.

ಬೇರೆ ಚಾನಲ್‌ಗಳಲ್ಲಿ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಏನಿಲ್ಲ. ಇದ್ದಿದ್ದರಲ್ಲಿ ಟಿವಿ೯ನಲ್ಲಿ ಲಕ್ಷ್ಮಣ್ ಹೂಗಾರ್ ವಿಶ್ಲೇಷಣೆಗಳು ವಿಷಯದ ಆಳವನ್ನು ತಲುಪುತ್ತಿದ್ದವು. ಟಿವಿ೯ ರಾಜಕಾರಣಿಗಳ ಬೈಟ್‌ಗಳು, ಗ್ರಾಫಿಕ್ ಗಳು, ಪ್ರತಿಭಟನೆಗಳ ಚಿತ್ರಗಳು ಇತ್ಯಾದಿಗಳನ್ನೇ ಹೆಚ್ಚು ನೆಚ್ಚಿಕೊಂಡ ಹಾಗೆ ಕಂಡಿತು.

ಸಮಯ ಟಿವಿಯಲ್ಲಿ ಶಶಿಧರ ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದರಾದರೂ ಉಳಿದ ತಂಡದಿಂದ ಅವರಿಗೆ ತಕ್ಕ ಬೆಂಬಲ ದೊರೆತ ಹಾಗೆ ಕಾಣಲಿಲ್ಲ. ವಿಶೇಷವಾಗಿ ಅವರ ವರದಿಗಾರರು ಇನ್ನೂ ಪಕ್ವವಾಗಿಲ್ಲ. ಭಟ್ಟರು ಪ್ರಶ್ನೆ ಎಸೆಯುತ್ತಿದ್ದಂತೆ ನರ್ವಸ್ ಆಗುವ ವರದಿಗಾರರಿಂದ ಏನನ್ನು ನಿರೀಕ್ಷಿಸಬಹುದು?

ಜನಶ್ರೀಯಲ್ಲಿ ಅನಂತ್ ಚಿನಿವಾರ್ ಅವರ ನಿರ್ವಹಣೆ, ಅವರು ಬಳಸುವ ಭಾಷೆ ಸೊಗಸು. ತಮ್ಮ ವರದಿಗಾರರೊಂದಿಗೆ ಅವರು ಸಂವಹಿಸುವ ರೀತಿ ರಂಗನಾಥ್ ಅವರನ್ನು ನೆನಪಿಗೆ ತರುತ್ತದೆ. ಚರ್ಚೆಯ ಸಂದರ್ಭದಲ್ಲಿ ತುಂಬ ಮುಖ್ಯವಾದ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದರು. ಒನ್ಸ್ ಎಗೇನ್, ಅವರಿಗೂ ಸಹ ತಕ್ಕ ಸಿಬ್ಬಂದಿ ಬೆಂಬಲದ ವ್ಯವಸ್ಥೆ ಇದ್ದ ಹಾಗೆ ಕಾಣಲಿಲ್ಲ.

ಮೊನ್ನೆ ಶಶಿಧರ ಭಟ್ಟರು ತಮ್ಮ ಫೇಸ್‌ಬುಕ್‌ನ ವಾಲ್‌ನಲ್ಲಿ ಉತ್ತಮ ನಿರೂಪಕರು ಸಿಗುತ್ತಿಲ್ಲ, ಉತ್ಸಾಹ ಇರುವವರು ಮುಂದೆ ಬನ್ನಿ ಎಂದು ವಿನಂತಿಸಿದ್ದರು. ಇದು ಕೇವಲ ಸಮಯ ಟಿವಿ ಒಂದರ ಸಮಸ್ಯೆ ಅಲ್ಲ. ಎದುರಿನ ಮಾನಿಟರ್ ಮೇಲೆ ಬರುವ ಸುದ್ದಿ ಸಾಲುಗಳನ್ನು ಓದಲು ತಯಾರಿರುವ ಸಾಲುಸಾಲು ನಿರೂಪಕರು ನಮ್ಮ ಚಾನಲ್‌ಗಳಲ್ಲಿದ್ದಾರೆ. ಇವರುಗಳ ಪೈಕಿ ನೂರಕ್ಕೆ ೯೦ಕ್ಕೂ ಹೆಚ್ಚು ಮಂದಿಗೆ ತಾವೇ ಸ್ವತಃ ನಾಲ್ಕು ಸಾಲು ಸೃಷ್ಟಿಸಿ ಮಾತನಾಡಲು ಬರುವುದಿಲ್ಲ. ಇಂಥವರು ರಾಜಕೀಯ ಬಿಕ್ಕಟ್ಟು, ಸಾಂವಿಧಾನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೇಗೆ ತಾನೇ ಕಾರ್ಯಕ್ರಮಗಳನ್ನು ನಡೆಸಿಕೊಡಬಲ್ಲರು? ನ್ಯೂಸ್ ಚಾನಲ್‌ಗಳು ಎದುರಿಸಬೇಕಿರುವ, ಉತ್ತರ ಕೊಟ್ಟುಕೊಳ್ಳಲೇಬೇಕಿರುವ ಸೀರಿಯಸ್ ಆದ ಪ್ರಶ್ನೆ ಇದು.

ಅಂದ ಹಾಗೆ, ಎಚ್.ಆರ್.ರಂಗನಾಥ್ ಯಾವುದಾದರೂ ನ್ಯೂಸ್ ಚಾನಲ್‌ಗೆ ಬರುವಂತಾಗಲಿ. ನಾವು ಇಂಗ್ಲಿಷ್ ಚಾನಲ್‌ಗಳನ್ನು ನೋಡುವ ಕಷ್ಟವನ್ನು ಅವರು ತಪ್ಪಿಸುವಂತಾಗಲಿ.

Monday, May 16, 2011

ಮುನಿಯಪ್ಪ ಎಂಬ ಆದರ್ಶ, ಅಸಹಾಯಕ ತಂದೆಯ ಕಥೆ ಹುಟ್ಟಿಸಿದ ತಲ್ಲಣಗಳ ಸುತ್ತ...

ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ ಎಂಬ ನಿನ್ನೆಯ ಪ್ರಜಾವಾಣಿ ಸಾಪ್ತಾಹಿಕದ ಲೇಖನ ಓದಿದ ನಂತರ ಅದು ಎಬ್ಬಿಸಿದ ತಲ್ಲಣದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅರಗಿಸಿಕೊಳ್ಳಲು ಸಾಕಷ್ಟು ದಿನಗಳೇಬೇಕು. ಬಹುಶಃ ಇಂಥದ್ದೊಂದು ಲೇಖನವನ್ನು ಓದಿ ಎಷ್ಟು ದಿನಗಳಾಗಿದ್ದವೋ ಎಂದು ನಿಮಗನ್ನಿಸಿದರೆ ಆಶ್ಚರ್ಯವಿಲ್ಲ. ಡಾ.ಆಶಾ ಬೆನಕಪ್ಪ ಈ ಲೇಖನ ಬರೆದಿದ್ದಾರೆ.

ಹೃದ್ರೋಗದಿಂದ ಬಳಲುತ್ತಿರುವ ತನ್ನ ಮಗ ಹನುಮಂತಪ್ಪ ಎಂಬ ಹುಡುಗನನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ಕೊಪ್ಪಳದ ಬಡರೈತ ಮುನಿಯಪ್ಪ ಅವರನ್ನು ಹತ್ತಿರದಿಂದ ಗಮನಿಸಿ, ಆತನ ಚಟುವಟಿಕೆಗಳನ್ನು ಲೇಖಕಿ ಇಲ್ಲಿ ವರದಿ ಮಾಡುತ್ತ ಹೋಗುತ್ತಾರೆ. ಮುನಿಯಪ್ಪ ತನ್ನ ಮಗನಿಗಾಗಿ ಏನೇನು ಮಾಡುತ್ತಾರೆ, ಮಗ ಸತ್ತ ನಂತರ ಏನು ಮಾಡುತ್ತಾರೆ ಎಂಬುದನ್ನು ಓದುತ್ತಾ ಹೋದರೆ, ನಿಮ್ಮ ಕಣ್ಣುಗಳು ಆರ್ದ್ರವಾಗದೇ ಇರವು. ಮನುಷ್ಯ ಸಂಬಂಧಗಳ ಬೇರುಗಳು ಸಡಿಲಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮುನಿಯಪ್ಪ ಮತ್ತು ಹನುಮಂತಪ್ಪ ಎಂಬ ಈ ಅಪ್ಪ ಮಕ್ಕಳು ನಾವು ತಲೆ ಎತ್ತಿ ನೋಡಿದಷ್ಟು ಎತ್ತರಕ್ಕೆ ಬೆಳೆದು ನಿಂತಂತೆ ಅನಿಸುತ್ತದೆ.

ಆಶಾ ಅವರು ಈ ಲೇಖನ ಬರೆಯುವ ಮೂಲಕ ದೂರದೂರಗಳಿಂದ ತಮ್ಮ ಕರುಳ ಸಂಬಂಧಿಗಳ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವ ಬಾಯಿಸತ್ತ ಬಡವರ ಬದುಕನ್ನೇ ತೆರೆದಿಟ್ಟಿದ್ದಾರೆ. ಪ್ರತಿನಿತ್ಯ ಇಂಥವರು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಮುನ್ನ ತಮ್ಮ ಆಸ್ತಿ ಅಡವನ್ನು ಮಾರಿ ಬಂದಿರುತ್ತಾರೆ. ಕೈಗೆ ಸಿಕ್ಕ ಪುಡಿಗಾಸನ್ನು ಚಿನ್ನದ ಹಾಗೆ ಜೋಪಾನ ಮಾಡಿ, ಖರ್ಚು ಮಾಡುತ್ತಾರೆ. ಅರೆಹೊಟ್ಟೆಯಲ್ಲೇ ಎಲ್ಲೋ ಬಿದ್ದುಕೊಂಡು ಕಾಲ ದೂಡುತ್ತಾರೆ. ಅವರಿಗೆ ಯಾವ ರಾಜಕಾರಣಿಯ ಶಿಫಾರಸೂ ಇರುವುದಿಲ್ಲ. ಹೀಗಾಗಿ ಅವರ ಚಿಕಿತ್ಸಾ ವೆಚ್ಚದ ಬಿಲ್‌ಗಳು ಕಡಿತವಾಗುವುದಿಲ್ಲ. ಮುಖ್ಯಮಂತ್ರಿಯ ಫಂಡು ತಮ್ಮ ಕೆಲಸಕ್ಕೆ ಬರುತ್ತದೆ ಎಂಬುದೂ ಅವರಿಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಅವರು ವಿಧಾನಸೌಧದ ಮೆಟ್ಟಿಲುಗಳನ್ನು ಹತ್ತಿ ತಮ್ಮ ಕೆಲಸ ಮಾಡಿಸಿಕೊಳ್ಳಲಾರರು.

ಚಿಕಿತ್ಸೆಗೆ ಹಣ ಹೊಂದಿಸಿಕೊಂಡು ಬರುವಷ್ಟರಲ್ಲೇ ರೋಗಿಯ ಅರ್ಧ ಪ್ರಾಣ ಹೋಗಿರುತ್ತದೆ. ಆಸ್ತಿ ಮಾರಿ ಬಂದ ಹಣ ಕರಗುವಷ್ಟರಲ್ಲಿ ಪೂರ್ಣ ಪ್ರಾಣವೂ ಹೋಗಿಬಿಡುತ್ತದೆ. ಇಂಥವು ದಿನವೂ ನಡೆಯುತ್ತದೆ. ಆದರೆ ಯಾವ ಮಾಧ್ಯಮಗಳಲ್ಲೂ ಇವೆಲ್ಲ ದಾಖಲಾಗುವುದಿಲ್ಲ. ಬಡವರ ಬದುಕು ಅತ್ಯಂತ ಸಸ್ತಾ. ಅವರು ಬದುಕಿದ್ದರೂ ಸುದ್ದಿಯಾಗುವುದಿಲ್ಲ, ಸತ್ತರೂ ಸುದ್ದಿಯಾಗುವುದಿಲ್ಲ. ವಿಧಾನಸೌಧಕ್ಕೆ, ಕಾರ್ಪರೇಷನ್‌ಗೆ, ಐಪಿಎಲ್‌ಗೆ, ಶೇರು ಮಾರುಕಟ್ಟೆಗೆ, ಫ್ಯಾಷನ್ ಶೋಗೆ, ದೊಡ್ಡದೊಡ್ಡ ಸಂಸ್ಥೆಗಳ ಹೊಸ ಪ್ರಾಡಕ್ಟು ಬಿಡುಗಡೆಗಾಗಿ ಪಂಚತಾರಾ ಹೋಟೆಲ್‌ಗಳಿಗೆ, ರಾಜಕೀಯ ಪಕ್ಷಗಳ ಕಚೇರಿಗಳಿಗೆ ವರದಿಗಾರರನ್ನು ನಿಯುಕ್ತಿ ಮಾಡುವ ಮಾಧ್ಯಮಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿಗಾರರನ್ನು ಕಳುಹಿಸುವುದಿಲ್ಲ. ಅಪಘಾತ, ಕೊಲೆ ಇತ್ಯಾದಿಗಳು ನಡೆದು ಮೃತದೇಹಗಳು ಬಂದರೆ ಮಾತ್ರ ಇಲ್ಲಿ ಸುದ್ದಿ, ಮಿಕ್ಕಂತೆ ಇಲ್ಲಿ ನಮ್ಮ ಮೀಡಿಯಾಗಳಿಗೆ ಬೇಕಾದ ಸುದ್ದಿಗಳು ಹುಟ್ಟುವುದಿಲ್ಲ.

ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ನಮ್ಮ ಮೀಡಿಯಾಗಳು ಜಾಹೀರಾತು ಮಾಫಿಯಾದ ಕೈಗೆ ಸಿಕ್ಕವು. ಮೀಡಿಯಾಗಳ ಆದ್ಯತೆಗಳು ಬದಲಾದವು. ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಬದುಕಷ್ಟೇ ಮೀಡಿಯಾಗಳಿಗೆ ಮುಖ್ಯವಾಯಿತು. ಯಾಕೆಂದರೆ ಈ ವರ್ಗದವರೇ ಜಾಹೀರಾತುದಾರರ ಗ್ರಾಹಕರು. ಮೀಡಿಯಾಗಳಲ್ಲಿ ಕೆಲಸ ಮಾಡುವವರೂ ಸಹ ಈ ವರ್ಗಗಳಿಂದ ಬಂದವರೇ ಆಗಿದ್ದರಿಂದ ಸಹಜವಾಗಿ ಅವರು ಈ ಜನರ ಒಲವು-ನಿಲುವುಗಳನ್ನೇ ಪ್ರತಿನಿಧಿಸತೊಡಗಿದರು. ಮೀಡಿಯಾಗಳು ಹೆಚ್ಚು ಹೆಚ್ಚು ನಗರಕೇಂದ್ರಿತವಾದವು. ಹಳ್ಳಿಗಳ ಜನರ ಬದುಕು, ಬವಣೆಗಳಿಗೆ ಅಲ್ಲಿ ಜಾಗವಿಲ್ಲದಂತಾಯಿತು.

ಹಾಗಿದ್ದರೆ ಬಡವರ ಕಥೆಗಳನ್ನು ಹೇಳುವವರು ಯಾರು? ಬಡವರ ಜೋಪಡಿಗಳಲ್ಲಿ ಹುಟ್ಟುವ ಸುದ್ದಿಗಳನ್ನು ಬರೆಯುವವರು ಯಾರು? ನಿಜ ಹೇಳಿ, ನಮ್ಮ ಮೀಡಿಯಾಗಳು ಇವತ್ತಿನ ಪ್ರಜಾಪ್ರಭುತ್ವದ ಕಾಲದಲ್ಲಿ ಸಮಸ್ತ ಜನರ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿವೆಯೇ?

ಪ್ರಜಾವಾಣಿ ಸಾಪ್ತಾಹಿಕದ ಲೇಖನ ನಮ್ಮಲ್ಲಿ ತಲ್ಲಣ ಹುಟ್ಟಿಸುತ್ತದೆ.  ಮನುಷ್ಯ ಸಂಬಂಧಗಳ ಗಾಢತೆಯನ್ನು ಅದು ಪ್ರಭಾವಶಾಲಿಯಾಗಿ ಹೇಳುವುದರಿಂದ ನಮ್ಮ ಒಳಗನ್ನು ನೋಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಮುನಿಯಪ್ಪ ಒಂದು ಮಾನವೀಯ ಆದರ್ಶದ ಸಂಕೇತವಾಗಿ ನಮ್ಮ ಕಣ್ಣೆದುರು ಕಾಣುತ್ತಾರೆ. ಇಂಥ ನಿಜಮನುಷ್ಯರ ಸಂಖ್ಯೆ ಹೆಚ್ಚಲಿ. ಮೀಡಿಯಾಗಳ ಕಣ್ಣಿಗೆ ಇಂಥವರು ಆಗಾಗ ಕಾಣಿಸಿಕೊಳ್ಳುವಂತಾಗಲಿ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಮೀಡಿಯಾಗಳು ದಟ್ಟದರಿದ್ರನ, ಕಟ್ಟ ಕಡೆಯ ಮನುಷ್ಯನನ್ನೂ ತಲುಪುವಂತಾಗಲಿ, ಅವರುಗಳ ನಿಷ್ಕಳಂಕ ಬದುಕನ್ನು ಪ್ರತಿಬಿಂಬಿಸುವಂತಾಗಲಿ, ಅವರಿಗೆ ಆಗುತ್ತಿರುವ ಎಲ್ಲ ಅನ್ಯಾಯಗಳ ವಿರುದ್ಧವೂ ಪ್ರತಿಭಟಿಸುವಂತಾಗಲಿ.

ಲೇಖನ ಓದಿದ ನಂತರ ಕಣ್ಣುಗಳು ಮಂಜುಮಂಜು. ಮುನಿಯಪ್ಪ ಒಂದು ಪ್ರತಿಮೆಯಂತೆ, ಆದರ್ಶದಂತೆ, ಕನಸಿನಂತೆ ಎದೆಯೊಳಗೆ ಕದಲದೆ ನಿಂತುಬಿಟ್ಟಿದ್ದಾರೆ. ಪ್ರಜಾವಾಣಿಗೆ, ಡಾ.ಆಶಾ ಬೆನಕಪ್ಪ ಅವರಿಗೆ ಕೃತಜ್ಞತೆಗಳು. ನೀವು ಈ ಲೇಖನವನ್ನೂ ಓದಿಲ್ಲವಾದರೆ ದಯವಿಟ್ಟು ಕೆಳಗಿನ ಲಿಂಕ್ ಬಳಸಿ, ಓದಿ.
http://www.prajavani.net/web/include/story.php?news=2151&section=54&menuid=13

ಕಪಟ ಜ್ಯೋತಿಷಿಗಳ ವಿರುದ್ಧ ಸುಧೀಂದ್ರ ಹಾಲ್ದೊಡ್ಡೇರಿಯವರು ಬರೆದದ್ದು...


ಜನರನ್ನು ಮೌಢ್ಯದ ಅಂಧಕಾರದಲ್ಲಿ ಮುಳುಗಿಸಲು ಯತ್ನಿಸುತ್ತಿರುವ ಕಪಟ ಜ್ಯೋತಿಷಿಗಳು ಹಾಗು ಅವರಿಗೆ ವೇದಿಕೆ ಒದಗಿಸುತ್ತಿರುವ ಟಿವಿ ಚಾನಲ್‌ಗಳಿಗೆ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಚಾಟಿ ಬೀಸಿದ್ದಾರೆ. ವಿಜಯ ಕರ್ನಾಟಕದಲ್ಲಿ ನೆಟ್ ನೋಟ ಅಂಕಣ ಬರೆಯುವ ಹಾಲ್ದೊಡ್ಡೇರಿಯವರು ಹೇಗೆ ಕಪಟ ಜ್ಯೋತಿಷಿಗಳು ನಮ್ಮ ಮೀಡಿಯಾಗಳಲ್ಲಿ ವಿಜೃಂಭಿಸುತ್ತಿದ್ದಾರೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಭೀತಿಯನ್ನೇ ಸರಕು ಮಾಡಿಕೊಂಡಿರುವ ಮಾಧ್ಯಮಗಳು ಪ್ರಳಯದ ಭಯವನ್ನು ಸೃಷ್ಟಿಸುತ್ತಿರುವ ಕುರಿತು ಅವರು ಈ ಲೇಖನದಲ್ಲಿ ತಮ್ಮ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.


ಸುಧೀಂದ್ರ ಹಾಲ್ದೊಡ್ಡೇರಿ
ಕಪಟ ಜ್ಯೋತಿಷಿಗಳ ವಿರುದ್ಧ ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಇನ್ನಷ್ಟು ಲೇಖನಗಳು ಬರಬೇಕಿದೆ. ಹಿಂದೆ ಇದೇ ವಿಜಯ ಕರ್ನಾಟಕದಲ್ಲಿ ಲೋಕೇಶ್ ಕಾಯರ್ಗ ತಮ್ಮ ಸಕಾಲಿಕ ಅಂಕಣದಲ್ಲಿ ಬುರುಡೆ ಜ್ಯೋತಿಷಿಗಳ ಕುರಿತು ಬರೆದಿದ್ದರು. ಈಗ ಹಾಲ್ದೊಡ್ಡೇರಿಯವರು ಬರೆದಿದ್ದಾರೆ. ಅಗ್ಗದ ಪ್ರಚಾರಕ್ಕಾಗಿ, ಟಿಆರ್‌ಪಿ ಆಸೆಗಾಗಿ ಜ್ಯೋತಿಷ್ಯದ ಹೆಸರಲ್ಲಿ ದಂಧೆ ನಡೆಸುವವರ ವಿರುದ್ಧ ಇನ್ನಷ್ಟು ವ್ಯಾಪಕವಾಗಿ ಜನಾಭಿಪ್ರಾಯ ರೂಪುಗೊಳ್ಳಬೇಕಿದೆ.


ಹಾಲ್ದೊಡ್ಡೇರಿಯವರಿಗೆ ನಮ್ಮ ಥ್ಯಾಂಕ್ಸ್. ಹಾಗೆಯೇ ವಿಜಯ ಕರ್ನಾಟಕ ಪತ್ರಿಕೆಗೂ ಕೂಡ. ಈ ಕೆಳಗಿನ ಲಿಂಕ್ ಬಳಸಿ ನೀವು ಹಾಲ್ದೊಡ್ಡೇರಿಯವರ ಲೇಖನ ಓದಬಹುದು.
 http://www.vijaykarnatakaepaper.com/pdf/2011/05/16/20110516a_008101002.jpg 
ಅಥವಾ ಇಲ್ಲಿ ಒದಗಿಸಿರುವ ಪಿಡಿಎಫ್ ಚಿತ್ರದ ಮೇಲೂ ಕ್ಲಿಕ್ ಮಾಡಿ ಲೇಖನ ಓದಬಹುದು. 


ಅಂದ ಹಾಗೆ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನದ ಕುರಿತು ಹಾಲ್ದೊಡ್ಡೇರಿಯವರು ಫೇಸ್‌ಬುಕ್‌ನಲ್ಲಿ ಬರೆದದ್ದು ಹೀಗೆ: ಶ್ಲಾಘನೀಯ ಪ್ರಯತ್ನ, ನಿಮ್ಮೊಂದಿಗಿದ್ದೇನೆ. ಇಂದಿನ ವಿಜಯ ಕರ್ನಾಟಕ ಅಂಕಣ ಲೇಖನದ ಮೂಲಕ ನನ್ನದೊಂದು ಪುಟ್ಟ ಪ್ರಯತ್ನ ನಡೆದಿದೆ.
-ಸಂ

ದಿನೇಶ್ ಅಮೀನ್ ಮಟ್ಟು: ಕನ್ನಡ ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಅಪೂರ್ವ ಪತ್ರಕರ್ತ

ದಿನೇಶ್ ಅಮೀನ್ ಮಟ್ಟು
 ಪ್ರಜಾವಾಣಿಯ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಅವರು ೨೦೧೧ನೇ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಬರೆದಿರುವ ಲೇಖನ ಇಲ್ಲಿದೆ. ಪಿ.ಲಂಕೇಶರ ನಂತರ ಸಮಕಾಲೀನ ಜಗತ್ತನ್ನು ದಿನೇಶ್ ಅಮೀನ್ ಮಟ್ಟು ಅವರಷ್ಟು ಸೂಕ್ಷ್ಮಜ್ಞತೆಯಿಂದ ದಾಖಲಿಸಿದವರು ವಿರಳ. ಹೊಸ ತಲೆಮಾರಿನ ಪತ್ರಕರ್ತರಿಗೆ ದಿನೇಶ್ ಅವರ ಬರೆಹಗಳು ಪ್ರೇರಣೆಯನ್ನು ನೀಡಬಲ್ಲವು. ಆತ್ಮರತಿಯ, ಸ್ಟಾರ್‌ಗಿರಿಯ ಹಂಗಿಲ್ಲದಂತೆ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳನ್ನು ಕಟ್ಟಿಕೊಡಬಲ್ಲ, ಆ ಮೂಲಕವೇ ಜನಪರವಾದ ಸಂವೇದನೆಗಳನ್ನು ಓದುಗರಲ್ಲಿ ಉದ್ದೀಪಸಬಲ್ಲ ದಿನೇಶ್ ಕನ್ನಡ ಪತ್ರಿಕಾರಂಗದ ಆಸ್ತಿ. ಬಿಳಿಮಲೆಯವರು ಬರೆದಿರುವ ಈ ಲೇಖನ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆಯಾಗಿರುವ ದಿನೇಶ್ ಅವರು ಅದಕ್ಕೆ ಎಷ್ಟು ಅರ್ಹರು ಎಂಬುದನ್ನು ಸಾಬೀತುಪಡಿಸುತ್ತದೆ. ಸಂಪಾದಕೀಯ ಬಳಗದ ಪರವಾಗಿ ದಿನೇಶ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಲೇಖನವನ್ನು ಒದಗಿಸಿದಕ್ಕಾಗಿ ಬಿಳಿಮಲೆ ಅವರಿಗೆ ಥ್ಯಾಂಕ್ಸ್.
-ಸಂಪಾದಕೀಯ

ಪತ್ರಕರ್ತರ ನಡವಳಿಕೆಗಳು ಸಂಶಯಾಸ್ಪದವಾಗುತ್ತಿರುವ ಈ ಕಾಲದಲ್ಲಿ ಆ ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಹೋಗುತ್ತಿರುವ ಬೆರಳೆಣಿಕೆಯ ಕೆಲವೇ ಕೆಲವು ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಒಬ್ಬರು. ತಮ್ಮ ಬರೆಹಗಳ ಮೊದಲ ಹಂತದಲ್ಲಿ ಜನರ ಸಂವೇದನೆಗಳಿಗೆ ಸೂಕ್ಷ್ಮವಾಗಿ ಧ್ವನಿಯಾಗುವ ಅವರು, ಎರಡನೇ ಹಂತದಲ್ಲಿ ನಿಧಾನವಾಗಿ  ಸಾರ್ವಜನಿಕರ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯಾಗಿ ಉದೀಯಮಾನರಾಗುತ್ತಾರೆ. ವಿಸ್ತಾರವಾದ ಓದು, ಜನಗಳ ನಡುವಣ ನಿರಂತರ ಒಡನಾಟ, ಕನ್ನಡ ಭಾಷೆಯ ಮೇಲಿನ ಅಪೂರ್ವ ಹಿಡಿತಗಳ ಜೊತೆಗೆ ಅತ್ಯಂತ ಜನಪರವಾದ ಚಿಂತನಾಕ್ರಮಗಳ ಮೂಲಕ ದಿನೇಶ್ ಅವರು ಕರ್ನಾಟಕದ ಜನರ ಸಂವೇದನೆಗಳನ್ನು ಮತ್ತೆ ಮತ್ತೆ ಸೂಕ್ಷ್ಮಗೊಳಿಸುತ್ತಾ ಬಂದಿದ್ದಾರೆ. ಸಹೃದಯ ಸಾಮಾನ್ಯ ಜನತೆಯ ಕಣ್ಣುಗಳ ಮೂಲಕ ಅವರು ನಾಡನ್ನು ನೋಡುವ ಮತ್ತು ವಿವರಿಸುವ ರೀತಿ ಅಸಾಮಾನ್ಯವಾದುದು.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟು ಎಂಬ ಪುಟ್ಟ ಊರಿನಿಂದ ಹೊಟ್ಟೆಪಾಡಿಗಾಗಿ, ಮುಂಬೈಗೆ ವಲಸೆ ಹೋದ ತುಳು ಮಾತಾಡುವ ಕುಟುಂಬವೊಂದರಲ್ಲಿ ಮುಂಬೈಯಲ್ಲಿ ಜನಿಸಿದ ದಿನೇಶ್ (ಜನನ: ೧೯೫೯ )  ಅವರು ಮುಂಬೈಯ ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿವರೆಗೆ ಓದಿ ಆನಂತರದ ವಿದ್ಯಾಭ್ಯಾಸವನ್ನು ಕರಾವಳಿಯ ಕಿನ್ನಿಗೋಳಿ, ಹೆಜಮಾಡಿ ಮತ್ತು ಸುರತ್ಕಲ್ ಗಳಲ್ಲಿ ಮುಗಿಸಿದರು. ಇಲ್ಲಿ ಓದಿದ ವಿದ್ಯೆಗೂ ದಿನೇಶ್ ಮುಂದೆ ಹಿಡಿದ ಹಾದಿಗೂ ಅಂತಹ ಸಂಬಂಧ ಏನೂ ಇಲ್ಲ. ಆದರೆ, ಹಸಿರುಡುಗೆ ಹೊದ್ದ ಕರಾವಳಿಯ ತುಳು ಮಣ್ಣಿನ ಗುಣಗಳಾದ, ಸರಳ, ನೇರ, ಮತ್ತು ಸ್ಪಷ್ಟತೆಗಳು ದಿನೇಶ್ ಅವರ ದೊಡ್ಡ ಶಕ್ತಿಗಳಾಗಿ ಭವಿಷ್ಯದಲ್ಲಿ ನಿರಂತರವಾಗಿ ಅವರ ಬೆಂಬಲಕ್ಕೆ ನಿಂತವು.

ದಿನೇಶ್ ಅವರ ಚಿಂತನಾ ಕ್ರಮ ಮತ್ತು ಬರೆಹಗಳಿಗೆ ಉತ್ತಮ ಆರಂಭ ಸಿಕ್ಕಿದ್ದು ಮಂಗಳೂರಿನಲ್ಲಿ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟರು ಆರಂಭಿಸಿದ್ದ ಮುಂಗಾರು ಪತ್ರಿಕೆಯಲ್ಲಿ. ಜನ ಶಕ್ತಿ ಬೆಳೆತೆಗೆವ ಕನಸಿನೊಂದಿಗೆ ಆರಂಭವಾದ ಆ ಪತ್ರಿಕೆಯಲ್ಲಿ ಪಳಗಿದ ಅವರು ೧೯೮೯ ರಲ್ಲಿ ಪ್ರಜಾವಾಣಿ ಪತ್ರಿಕೆ ಸೇರಿದರು. ಮುಂದೆ ಆ ಪತ್ರಿಕೆಯ ಪ್ರಮುಖ ವರದಿಗಾರರಾಗಿ ಬೆಂಗಳೂರು, ಧಾರವಾಡ, ತುಮಕೂರು, ದೆಹಲಿಗಳಲ್ಲಿ ಕೆಲಸ ಮಾಡಿ, ಪ್ರಸ್ತುತ ಪ್ರಜಾವಾಣಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ ಮತ್ತು ತುಮಕೂರುಗಳಲ್ಲಿ ಅವರು ಅಲ್ಲಿನ ಸ್ಥಳೀಯ ಸಮಸ್ಯೆ , ಜಿಲ್ಲಾ ಪಂಚಾಯತ್ ಆಡಳಿತ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಸವಿವರ ವರದಿ ಮಾಡಿದರೆ, ದೆಹಲಿಯಿಂದ ಲೋಕಸಭೆ, ರಾಜ್ಯಸಭೆಗಳ ಕಲಾಪ ವರದಿ, ಕಾವೇರಿ-ಕೃಷ್ಣಾ ಜಲಮಂಡಳಿ ಸಭೆಗಳ ವರದಿ, ಸುಪ್ರಿಂ ಕೋರ್ಟಿನಲ್ಲಿ ಕರ್ನಾಟಕದ ಕುರಿತಾದ ಚರ್ಚೆಗಳ ವಿಸ್ತೃತ ವರದಿ ಮಾಡಿದರು. ಚುನಾವಣೆಗಳು ನಡೆದಾಗ, ಜನರ ಬಳಿಗೆ ತೆರಳಿ ನೇರ ವರದಿ ಮಾಡಿದರು. ಉತ್ತರ ಭಾರತಾದ್ಯಂತ ಅವರು ಪ್ರವಾಸ ಮಾಡಿದ್ದಾರೆ. ೨೦೦೨ ರಲ್ಲಿ ನಡೆದ ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷ ವರದಿ ಮಾಡಿದಾಗ ಕನ್ನಡದ ಓದುಗರು ಬೆಚ್ಚಿ ಬಿದ್ದರು. ಅಧಿಕಾರ ಹಿಡಿದವರ ಅಪಕ್ವ ಗ್ರಹಿಕೆಗಳು, ಆತುರದ ತೀರ್ಮಾನಗಳು, ಹಾಗೂ ಮುನ್ನೋಟವಿಲ್ಲದ ತೀರ್ಮಾನಗಳಿಂದಾಗಿ ದೇಶದಲ್ಲಾಗುವ ಅನಾಹುತಗಳನ್ನು ದಿನೇಶ್ ಅವರು ಪಕ್ಷಾತೀತವಾಗಿ, ಪೂರ್ವಾಗ್ರಹವಿಲ್ಲದೆ ಮಂಡಿಸುತ್ತಾರೆ. ಅವರು ಭಾಷಾಂಧರೂ ಅಲ್ಲ, ದೇಶಾಂಧರೂ ಅಲ್ಲ, ಬದಲು ಭಾರತದ ಒಕ್ಕೂಟ ವ್ಯವಸ್ಥೆಯ ಆಂತರಿಕ ತರ್ಕ ಮತ್ತು ಸಂಬಂಧಗಳನ್ನು ಪತ್ರಕರ್ತನೊಬ್ಬನ ದಿಟ್ಟತನದಲ್ಲಿ ಗ್ರಹಿಸಿ, ವಿಶ್ಲೇಶಿಸಿ ಮಂಡಿಸುವ ಅಸಾಧಾರಣ ಚೈತನ್ಯದ ಲೇಖಕ. ಕನ್ನಡ ಭಾಷೆ ದಿನೇಶ್ ಅವರಲ್ಲಿ ಹೊಸ ಕಸುವು ಕಂಡುಕೊಂಡಿತು. ಇದು ಸರಿಯಾಗಿ ಅರ್ಥವಾಗಲು ನಾವು  ದಿನೇಶ್ ಬರೆದ ಕಣ್ಣೆದುರಿನ ತಳಮಳ (೧೯೯೯), ದೆಹಲಿ ನೋ೧ ( ೨೦೦೮) ಮತ್ತು ನಾರಾಯಣ ಗುರು ( ೨೦೦೯)  ಕೃತಿಗಳನ್ನು ಓದಬೇಕು.

ಇಂದು ದೇಶದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆಂಬ ಖ್ಯಾತಿಗೆ ಒಳಪಟ್ಟಿರುವ, ದಿನೇಶ್ ಅಮೀನ್ ಅವರು ತಮ್ಮ ವೃತ್ತಿಯ ಭಾಗವಾಗಿ ದೇಶ ವಿದೇಶಗಳನ್ನು ಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುವುಗಳೆಂದರೆ, ೨೦೦೫ ರಲ್ಲಿ ಮಾಡಿದ ಬ್ರೂನೈ ದ್ವೀಪ, ಫಿಲಿಪ್ಪೀನ್ಸ್ ಮತ್ತು ಮಲೇಷಿಯಾಗಳ ಪ್ರವಾಸ,  ೨೦೦೬ ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೊತೆ ಮಾಡಿದ ಕತಾರ್ ಮತ್ತು ಮಸ್ಕತ್ ದೇಶಗಳ ಪ್ರವಾಸ. ೨೦೦೮ರಲ್ಲಿ ಆಗಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಡಾ.ಪುರುಷೋತ್ತಮ ಬಿಳಿಮಲೆ
ತಾವು ಕೆಲಸ ಮಾಡಿದ ಸ್ಥಳಗಳಲ್ಲಿ ಆಳವಾದ ನೆನಪುಗಳನ್ನು ದಿನೇಶ್ ಬಿಟ್ಟು ಹೋಗಿರುವುದಕ್ಕೆ ಕಾರಣ, ಅವರು ತಾವು ನೆಲೆಊರಿದ ಊರಿನ ಪ್ರಾದೇಶಿಕ ಗುಣಗಳನ್ನು ಮತ್ತು ಜನಗಳನ್ನು ಅರ್ಥಮಾಡಿಕೊಂಡ ಬಗೆ. ವರದಿ ಮಾಡುವುದಷ್ಟೇ ಅವರ ಕೆಲಸವಲ್ಲ, ಬದಲು ತಾವು ಕೆಲಸ ಮಾಡುತ್ತಿರುವ ಊರಿನ ಸಂವೇದನೆಗಳನ್ನು ಮತ್ತು ಅವುಗ ಸ್ವಭಾವಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಪ್ರಾದೇಶಿಕ ಅನನ್ಯತೆಯನ್ನು ಮರೆಯದೆ ಬರೆಯುತ್ತಾರೆ. ಹೀಗಾಗಿ ಅವರು ಮಂಗಳೂರಿನ  ಬಗ್ಗೆಯೂ, ಹುಬ್ಬಳ್ಳಿಯ ಬಗೆಯೂ ಒಂದೇ ರೀತಿಯಲ್ಲಿ ಬರೆಯುತ್ತಾರೆಂದು ನಮಗೆ ಅನಿಸುವುದಿಲ್ಲ.  ಮಂಗಳೂರಿನ ಬಗ್ಗೆ ಬರೆಯವಾಗ ದಿನೇಶ್‌ಗೆ ಶಿವರಾಮ ಕಾರಂತರು ಆದರ್ಶವಾದರೆ, ಹುಬ್ಬಳ್ಳಿ ಬಗ್ಗೆ ಬರೆಯುವಾಗ ಬೇಂದ್ರೆ ಆದರ್ಶ. ಇದೇ ಅವರ ಲೇಖನಗಳ ಸೃಜನಶೀಲತೆಯ ಗುಟ್ಟು. ಇದು ಇನ್ನೂ ಖಚಿತವಾಗಬೇಕಾದರೆ ನಾವು ಅವರ ದೆಹಲಿ ನೋಟ( ೨೦೦೮) ಕೃತಿಯನ್ನು ಓದಬೇಕು. ದೆಹಲಿ ರಾಷ್ಟ್ರದ ರಾಜಧಾನಿ, ಅಲ್ಲಿಂದ ಕರ್ನಾಟಕದ ಬಗ್ಗೆ ಬರೆಯುವಾಗ ಆ ಬರೆಹಕ್ಕೆ ರಾಷ್ಟ್ರೀಯ ಚೌಕಟ್ಟು ಇರಲೇಬೇಕು. ದೆಹಲಿ ನೋಟದ ಯಾವ ಲೇಖನವೂ ಈ ಚೌಕಟ್ಟನ್ನು ಮೀರಲೇ ಇಲ್ಲವಾದ್ದರಿಂದ ಅವುಗಳಿಗೆ ವಿಶೇಷವಾದ ಶಕ್ತಿ ಪ್ರಾಪ್ತಿಸಿದೆ. ರಾಜ್ಯದ ಸಮಸ್ಯೆಗಳು ಕೇಂದ್ರದಲ್ಲಿ ಹೇಗೆ ಪ್ರತಿನಿಧೀಕರಿಸಲ್ಪಡುತ್ತವೆ ಎಂದು ಕರ್ನಾಟಕದ ಜನರಿಗೆ ಮೊದಲ ಬಾರಿಗೆ ಸವಿಸ್ತಾರವಾಗಿ ತಿಳಿದದ್ದು ದಿನೇಶ್ ಅಂಕಣಗಳನ್ನು ಓದಲಾರಂಭಿಸಿದ ಮೇಲೆಯೇ. ಕೇಂದ್ರದಲ್ಲಿ ರಾಜ್ಯದ ದುರ್ಬಲ ಪ್ರತಿನಿಧೀಕರಣವನ್ನು ಅವರು ಪ್ರಖರ ಭಾಷೆಯಲ್ಲಿ ಅಷ್ಟೇ ಸೃಜನಶೀಲವಾಗಿ  ಪ್ರತೀತಗೊಳಿಸಿದರು. ಎಷ್ಟೋ ಹೋರಾಟಗಾರರು ಮತ್ತು ಜನಪ್ರತಿನಿಧಿಗಳು ದಿನೇಶ ಲೇಖನದಿಂದ ಪ್ರೇರಣೆ ಪಡೆದು ತಮ್ಮ ಹೋರಾಟದ ಹಾದಿಗಳನ್ನು ಹರಿತಗೊಳಿಸಿಕೊಂಡಿದ್ದಾರೆ. ಅವರ ಈಚಿನ ಅಂಕಣ ಅನಾವರಣ ವು ಪ್ರಜಾಸತ್ತಾತ್ಮಕ ವ್ಯವಸ್ಥೆಯ ದೌರ್ಬಲ್ಯ ಮತ್ತು ತಾಖತ್ತುಗಳನ್ನು ನಿಷ್ಪಕ್ಷಪಾತವಾಗಿ ಜನರ ಮುಂದಿರಿಸುತ್ತಿದೆ.

ದಿಟ್ಟವಾಗಿ ಬರೆಯುವ ದಿನೇಶ್ ಅವರ ಮೇಲೆ ಎಂತಹ ಒತ್ತಡಗಳಿರಬಹುದೆಂದು ನಾನು ಈಗ ಊಹಿಸಬಲ್ಲೆ. ಈ ಒತ್ತಡಗಳಿಗೆ ಬರಹಗಾರನೊಬ್ಬ ಬಲಿಯಾಗುವುದೆಂದರೆ, ಸುಲಭವಾಗಿ ಆರ್ಥಿಕವಾಗಿ ಭ್ರಷ್ಠನಾಗಿಬಿಡುವುದು, ಇಲ್ಲವೇ ನೈತಿಕ ದಿವಾಳಿತನದಿಂದ ಬರೆಹದ ಮೊನಚನ್ನು ಕಳೆದುಕೊಳ್ಳುವುದು. ದಿನೇಶ್ ಇಂಥ ಅಪಾಯಗಳಿಂದ ಪಾರಗಿ, ಸುರಕ್ಷಿತವಾಗಿ ಇದುವರೆಗೆ ಉಳಿದಿದ್ದಾರೆ. ಈ ಕಾಲದಲ್ಲಿ ಇದೊಂದು ಪವಾಡ ಸದೃಶ ಘಟನೆ. ಅದಕ್ಕಾಗಿ ಅವರನ್ನು ಎಲ್ಲ ಕನ್ನಡಿಗರ ಪರವಾಗಿ ಅಭಿನಂದಿಸುತ್ತೇನೆ.

Saturday, May 14, 2011

ಜೆ ಅಕ್ಷರದಿಂದ ಶುರುವಾಗುವ ಎಲ್ಲವೂ ಕೆಟ್ಟದ್ದು ಎನ್ನುತ್ತಾನೆ ಈ ಮಹಾತ್ಮ....


ಇಂಗ್ಲಿಷ್‌ನ ಜೆ ಅನ್ನೋ ಅಕ್ಷರನೇ ಸರಿ ಇಲ್ಲ. ಜಪಾನ್ ಕೂಡ ಜೆ ಅಕ್ಷರದಿಂದ ಶುರುವಾಗುತ್ತೆ. ಅದಕ್ಕೆ ಹಾಗೆಲ್ಲ ಭೂಕಂಪ, ಸುನಾಮಿ ಆಗಿದ್ದು. ಅಲ್ಲೆಲ್ಲ ಹೋಗೋದ್ಯಾಕೆ? ಇಲ್ಲೇ ನಮ್ಮ ಬೆಂಗಳೂರನ್ನೇ ತಗೋಳಿ, ಎಲ್ಲ ದೊಡ್ಡ, ದೊಡ್ಡ ರೌಡಿಗಳು,  ಎಲ್ಲ ಜೆ ಅಕ್ಷರದಿಂದನೇ ಇದಾರೆ. ಉದಾಹರಣೆಗೆ ಜಯರಾಜ್. ನಂಬರ್ ೫ ಮತ್ತು ೭ ಒಟ್ಟಿಗೆ ಇರಬಾರದು. ಅವೆರಡಕ್ಕೂ ಆಗಲ್ಲ. ಅವೆರಡು ಒಟ್ಟಿಗೆ ಇದ್ರೆ ಅನಾಹುತ ಸೃಷ್ಟಿ ಮಾಡಿಬಿಡುತ್ತವೆ.

ಇದನ್ನೆಲ್ಲ ಹೇಳ್ತಾ ಇರುವುದು, ಮೀಡಿಯಾಗಳ ಜ್ಯೋತಿಷ್ಯ ಪ್ರೇಮದಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಯವರ್ಧನ್ ಅನ್ನೋ ಸಂಖ್ಯಾಶಾಸ್ತ್ರ ಪ್ರವೀಣ. ಇವನಿಗೆ ವೇದಿಕೆ ಕಲ್ಪಿಸಿ ಕೊಡುತ್ತಿರುವುದು ಒನ್ಸ್ ಎಗೇನ್ ಸುವರ್ಣ ನ್ಯೂಸ್.

ಜೆ ಅಕ್ಷರದಿಂದ ಬೇರೆ ಯಾವ ದೇಶಗಳ ಹೆಸರು ಇಲ್ಲವೇ? ಹಾಗಿದ್ದರೆ ಜರ್ಮನಿಯಲ್ಲೇಕೆ ಭೂಕಂಪ ಆಗೋಲ್ಲ? ಜೆ ಅಕ್ಷರ  ಬಿಟ್ಟು  ಬೇರೆ ಅಕ್ಷರದಿಂದ ಶುರುವಾಗೋ ಯಾವ ರೌಡಿಗಳು ಈ ಮನುಷ್ಯನ ಕಣ್ಣಿಗೆ ಕಾಣುತ್ತಿಲ್ಲವೇ? ಜ್ಯೋತಿ ಬಾಫುಲೆ,  ಜವಹರಲಾಲ್ ನೆಹರೂ,  ಜಗಜೀವನ್ ರಾಮ್, ಜ್ಯೋತಿ ಬಸು, ಜಿಡ್ಡು ಕೃಷ್ಣಮೂರ್ತಿ, ಜಾರ್ಜ್ ಫರ್ನಾಂಡಿಸ್  ಇವರುಗಳೆಲ್ಲ ಯಾರು? ಇವರೂ ಸಹ ಸಮಾಜದ್ರೋಹಿಗಳ ಹಾಗೆ ಈತನಿಗೆ ಕಾಣಿಸಬಹುದೆ? ಈತನ ಪ್ರಕಾರ ಅ ಅಕ್ಷರ ಕೂಡ ಕೆಟ್ಟದಂತೆ. ಅದಕ್ಕೂ ಏನೋ ಒಂದು ತಲೆ ಬುಡ ಇಲ್ಲದ ವಿವರಣೆ  ಕೊಡುತ್ತಾನೆ. ಏನೋ ಹಾಳು ಬಡಿದುಕೊಂಡು ಹೋಗಲಿ. ಇದು ಅವನ ತಪ್ಪೋ, ಅವನು ನಂಬಿಕೊಂಡಿರುವ ಸಂಖ್ಯಾಶಾಸ್ತ್ರದ ತಪ್ಪೋ ಗೊತ್ತಿಲ್ಲ ಅಂತ ಸುಮ್ಮನೆ ಇರಬಹುದು. ದುರಂತ ಅಂದರೆ, ಸುವರ್ಣದವರು ಇಂಥವನ ಪಕ್ಕ, ರಾಮಕೃಷ್ಣರಾವ್ ಅವರಂಥ ಹಿರಿಯ ವಿಜ್ಞಾನಿಯನ್ನು ಕೂರಿಸಿ ಕಾರ್ಯಕ್ರಮ ನಡೆಸುತ್ತಾರೆ. ಆ ವಿಜ್ಞಾನಿ ಏನೇ ಲಾಜಿಕ್ ಮಾತಾಡಿದ್ರು, ಅದು ಹುಚ್ಚನ ಮುಂದೆ ಮಾತಾಡಿದ ಹಾಗೆ.

ಅಂದ ಹಾಗೆ ಮೇ ೨೧ ಕ್ಕೆ ಪ್ರಳಯ ಆಗುತ್ತೋ ಇಲ್ವೋ ಅನ್ನೋ ಬಗ್ಗೆ ಕಾರ್ಯಕ್ರಮ ಅದು. ಈ ಮನುಷ್ಯನ  ಪ್ರಕಾರ ೨೦೧೯, ತಪ್ಪಿದರೆ ೨೦೨೯ಕ್ಕೆ ಪ್ರಳಯ ಆಗೇ ಆಗುತ್ತಂತೆ. ಕಾರಣ, ನಂಬರ್ ೯!

ಏನಾಗಿದೆ ನಮ್ಮ ಮೀಡಿಯಾಗಳಿಗೆ? ಕೊಂಚವಾದರೂ ಸಂಕೋಚ, ಮುಜುಗರವೂ ಆಗುವುದಿಲ್ಲವೇ? ಇಷ್ಟು ಕಾಲ ನಾವು ಮೀಡಿಯಾಗಳಿಗೆ ಸಾಮಾಜಿಕ ಕಾಳಜಿ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದೆವು? ಮೀಡಿಯಾಗಳಿಗೆ ಕನಿಷ್ಠ ಕಾಮನ್‌ಸೆನ್ಸ್ ಕೂಡ ಇಲ್ಲವೇ ಎಂದು ಈಗ ಪ್ರಶ್ನಿಸಬೇಕಿದೆ. ಹೀಗೆ ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ಜನರು ಮೀಡಿಯಾಗಳಿಗೇಕೆ ಬರುತ್ತಾರೆ? ಇಂಥದ್ದೇ ಬುರುಡೆ ಜ್ಯೋತಿಷಿಗಳ ಮನೆಗಳಲ್ಲಿ ಅವರ ಸಹಾಯಕರ ಕೆಲಸವನ್ನೇಕೆ ಮಾಡಬಾರದು?

ಮಾತು ಕಟುವೆನ್ನಿಸಿದರೆ ಕ್ಷಮೆ ಇರಲಿ.

ನಾಳೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ...


ಪತ್ರಕರ್ತರಿಗೆ ಇದು ಚುನಾವಣೆ ಕಾಲ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯುತ್ತಿದೆ. ನಾಳೆಯೇ ಚುನಾವಣೆ. ರಾಜ್ಯ ಹಾಗು ಜಿಲ್ಲಾ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆಗೆ ನಾಳೆ ಮತದಾನ ನಡೆಯಲಿದೆ. ಈ ಚುನಾವಣೆಗಳು ಮುಗಿದ ತರುವಾಯ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ.

ಕಾರ್ಯನಿರತ ಪತ್ರಕರ್ತರ ಸಂಘವೇ ಪತ್ರಕರ್ತರ ಪಾಲಿಗೆ ದೊಡ್ಡ ಸಂಘಟನೆ. ರಾಜ್ಯದ ಎಲ್ಲೆಡೆಯೂ ಇದು ಹರಡಿಕೊಂಡಿದೆ. ಹಲವು ಜಿಲ್ಲಾ ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆದರೆ ರಾಜ್ಯ ಘಟಕದಲ್ಲಿ ಮಾತ್ರ ಎಲ್ಲವೂ ಸರಿಯಿಲ್ಲ. ಗುಂಪುಗಾರಿಕೆ, ಜಾತೀಯತೆ, ಸ್ವಪ್ರತಿಷ್ಠೆ ಇತ್ಯಾದಿಗಳಿಗೆ ಸಿಕ್ಕು ಸಂಘಟನೆ ನಲುಗಿ ಹೋಗಿದೆ. ಸಂಘದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲೂ ಸಹ ಸಾಧ್ಯವಾಗಲಿಲ್ಲ. ಈಗ ಬಾಡಿಗೆ ಕಟ್ಟಡದಲ್ಲಿ ಇರುವ ದುಸ್ಥಿತಿಗೆ ತಲುಪುವಂತಾಗಿದ್ದಕ್ಕೆ ಕಾರಣಗಳನ್ನು ಹುಡುಕಿಕೊಳ್ಳುವ ಗೋಜಿಗೆ ಯಾರೂ ಹೋದಂತಿಲ್ಲ. ಕೇಸು, ಕಟ್ಲೆ, ತಡೆಯಾಜ್ಞೆ ಇತ್ಯಾದಿಗಳಲ್ಲಿ ಮುಳುಗಿ ಹೋದ ಸಂಘ ಉದ್ಧಾರವಾಗುವುದಾದರೂ ಹೇಗೆ?

ಕಾರ್ಯ ನಿರತ ಪತ್ರಕರ್ತರ ಸಂಘವನ್ನು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಕೆಲವರು ಛೇಡಿಸುವುದುಂಟು. ಹಿಂದೆ ಗೊತ್ತುಗುರಿಯಿಲ್ಲದಂತೆ ಪತ್ರಕರ್ತರಲ್ಲದವರಿಗೆ ಸದಸ್ಯತ್ವ ಕೊಟ್ಟಿದ್ದರ ಪರಿಣಾಮ ಇದು. ಸಾಕಷ್ಟು ಮಂದಿ ಚುನಾವಣೆಗಳಲ್ಲಿ ಗೆಲ್ಲುವ ಸಲುವಾಗಿ ಮನೆಯವರು, ನೆಂಟರು ಇತ್ಯಾದಿಗಳನ್ನೆಲ್ಲ ಸದಸ್ಯರನ್ನಾಗಿಸಿದ್ದರು. ನಂತರ ಪತ್ರಕರ್ತರಲ್ಲದವರನ್ನು ಕಿತ್ತುಹಾಕಲು ಒಂದು ಹರಸಾಹಸವನ್ನೂ ಮಾಡಲಾಯಿತು. ಆದರೂ ಯೂನಿಯನ್ ಇನ್ನೂ ಒಂದು ಹದಕ್ಕೆ ಬಂದ ಹಾಗಿಲ್ಲ.

ಯೂನಿಯನ್ ನಿಜವಾಗಲೂ ಮಾಡಬೇಕಾಗಿರುವ ಕೆಲಸ ಏನು ಎಂಬುದೇ ಪದಾಧಿಕಾರಿಗಳಿಗೆ ಗೊತ್ತಿದ್ದಂತಿಲ್ಲ. ಅದರ ಕುರಿತು ಕಾಳಜಿಯೂ ಯಾರಲ್ಲೂ ಇದ್ದ ಹಾಗಿಲ್ಲ. ಒಂದು ಉದಾಹರಣೆ: ಸರ್ಕಾರದ ವಾರ್ತಾ ಇಲಾಖೆ ಪತ್ರಕರ್ತರಿಗೆ ನೀಡುವ ಮಾನ್ಯತಾ ಪತ್ರ ಎಷ್ಟು ಜನ ನಿಜವಾದ ಪತ್ರಕರ್ತರಿಗೆ ಸಿಕ್ಕಿದೆ? ಇತ್ತೀಚಿಗೆ ಈ ಮಾನ್ಯತಾ ಪತ್ರ ಪಡೆಯಲು ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವ ನಿಯಮಾವಳಿಗಳನ್ನು ಗಮನಿಸಿದರೆ ಹೊಸದಾಗಿ ಮಾನ್ಯತಾ ಪತ್ರವನ್ನು ಪಡೆಯುವುದು ದುಸ್ಸಾಧ್ಯವೆಂಬುದು ಗೊತ್ತಾಗುತ್ತದೆ. ಈ ಕುರಿತು ಯೂನಿಯನ್ ಧ್ವನಿ ಎತ್ತಿದೆಯೇ?

ಈಗೀಗ ಪತ್ರಿಕಾ ಸಂಸ್ಥೆಗಳು ಪತ್ರಕರ್ತರನ್ನು ಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುತ್ತಿವೆ. ಒಂದು ವರ್ಷದ ಅವಧಿಗೆ ಮಾತ್ರ ಈ ಗುತ್ತಿಗೆ, ನಂತರ ನವೀಕರಣಗೊಂಡರೆ ಇನ್ನೊಂದು ವರ್ಷ. ಬಾಡಿಗೆ ಮನೆಗಳ ಕರಾರು ಪತ್ರದಂತೆ ಪತ್ರಕರ್ತರ ನೇಮಕಾತಿಯ ಕರಾರು ಇರುತ್ತದೆ. ಬಾಂಡೆಡ್ ಲೇಬರ್‌ಗಳಂತೆ ಪತ್ರಿಕಾ ಸಂಸ್ಥೆಗಳನ್ನು ಪತ್ರಕರ್ತರನ್ನು ಬಳಸಿಕೊಳ್ಳುತ್ತಿವೆ. ಈ ಕುರಿತು ಯೂನಿಯನ್ ಧ್ವನಿಯೆತ್ತಬಹುದಿತ್ತಲ್ಲವೇ?

ಇತ್ತೀಚಿಗೆ ವಿಧಾನಸೌಧ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಯಮಾವಳಿ ತಂದಾಗ ಸಂಘಟನೆ ಪ್ರತಿಭಟಿಸಿ, ಸಂಘದ ಗುರುತಿನ ಚೀಟಿ ಇದ್ದವರಿಗೂ ಪ್ರವೇಶ ನೀಡುವ ಕುರಿತು ಆದೇಶ ಹೊರಡಿಸುವಲ್ಲಿ ಯಶಸ್ವಿಯಾಯಿತು. ಇಂಥದಕ್ಕೆ ತೋರುವ ಉತ್ಸಾಹವನ್ನು ಇತರ ಚಟುವಟಿಕೆಗಳಿಗೂ ಯಾಕೆ ಕೊಡುವುದಿಲ್ಲ ಎಂಬುದು ಹಲವರ ಪ್ರಶ್ನೆ. ಪತ್ರಕರ್ತರ ಮೇಲೆ ದಾಳಿಯಾದಾಗ ಒಂದು ಪತ್ರಿಕಾ ಹೇಳಿಕೆ ಕೊಡುವುದು ಮಾತ್ರ ಯೂನಿಯನ್ ಕೆಲಸವೇ?

ಇಂಥ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಾಳೆ ಚುನಾವಣೆ. ವಿಶೇಷವೆಂದರೆ ಮೇನ್ ಸ್ಟ್ರೀಮ್ ಎಂದು ಕರೆಯಲ್ಪಡುವ ಪ್ರಮುಖ ದಿನಪತ್ರಿಕೆಗಳ ಪತ್ರಕರ್ತರು ಈ ಕುರಿತು ತಲೆಯೇ ಕೆಡಿಸಿಕೊಂಡಿಲ್ಲ. ಅವರುಗಳಲ್ಲಿ ಬಹುತೇಕರು ಚುನಾವಣೆಯಲ್ಲಿ ಮತ ಚಲಾಯಿಸುವುದೂ ಅನುಮಾನ.

ಪತ್ರಕರ್ತರ ಸಂಘಟನೆಗಳ ಚುನಾವಣೆಗಳಲ್ಲೂ ಜಾತಿ-ಹಣದ ಬಳಕೆ ಹೇರಳವಾಗಿದೆ. ಮೊನ್ನೆ ನಡೆದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಜಾತಿಯ ವಿಕೃತ ಸ್ವರೂಪವನ್ನು ಕಂಡವರು ಹೇಸಿಗೆ ಪಟ್ಟುಕೊಂಡಿದ್ದಾಗಿದೆ. ಪ್ರೆಸ್ ಕ್ಲಬ್ ಚುನಾವಣೆಗೂ ಮುನ್ನ ನಡೆದ ಜಾತಿಕೂಟಗಳ ಸಭೆಗಳು, ಅದಕ್ಕೆ ಸ್ಪಾನ್ಸರ್ ಮಾಡಿದ ಆಯಾ ಜಾತಿಯ ರಾಜಕಾರಣಿಗಳು ಮತ್ತವರ ಛೇಲಾಗಳು ಮುಂಬರುವ ದಿನಗಳಲ್ಲಿ ಇನ್ನೇನನ್ನು ಮಾಡುತ್ತಾರೋ ಎಂಬ ಆತಂಕ ಮೂಡಿಸಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಸಭ್ಯರು ಆಯ್ಕೆಯಾಗಲಿ. ಪತ್ರಕರ್ತರ ನಿಜವಾದ ಸಮಸ್ಯೆಗಳನ್ನು ಬಿಡಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಿ ಎಂದು ಆಶಿಸೋಣ.

Wednesday, May 11, 2011

ಬ್ರಹ್ಮಾಂಡವನ್ನು ಹೊತ್ತುಕೊಂಡಿರುವ ಜೀ ಮುಖ್ಯಸ್ಥರಿಗೆ ಇನ್ನೊಂದು ಪತ್ರ...


ನಿಮ್ಮ ಜೀ ಕನ್ನಡ ವಾಹಿನಿಗೆ ಐದು ವರ್ಷಗಳು ತುಂಬಿವೆ. ಒಂದು ಕನ್ನಡ ಚಾನಲ್ ಯಾವುದೇ ಅಡೆತಡೆಯಿಲ್ಲದೆ ಐದುವರ್ಷ ಪೂರೈಸೋದು ಸಣ್ಣ ಮಾತಲ್ಲ. ಈ ವಾಹಿನಿಯನ್ನು ಕಟ್ಟಿಬೆಳೆಸಿದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಇದನ್ನು ಮುನ್ನಡೆಸಿದ ಮುಖ್ಯಸ್ಥರುಗಳಿಗೆ ಹಾರ್ದಿಕ ಶುಭಾಶಯಗಳು. ವಾಹಿನಿಯು ನಿಜವಾದ ಅರ್ಥದಲ್ಲಿ ಕನ್ನಡಿಗರ ಕಣ್ಮಣಿಯಾಗಿ ಬೆಳೆಯಲಿ ಎಂಬುದು ನಮ್ಮೆಲ್ಲರ ಹಾರೈಕೆ.

ನಿಮ್ಮ ಈ ಸಂತೋಷದ, ಸಡಗರದ ಸಮಯದಲ್ಲೂ ವಿಷಾದದ ಮಾತುಗಳನ್ನು ಹೇಳುವುದು, ಅದನ್ನು ನೀವು ಕೇಳುವುದು ಕಿರಿಕಿರಿ ಅನ್ನಿಸಬಹುದು. ಆದರೆ ಬೇರೆ ಆಯ್ಕೆಗಳಿಲ್ಲ, ಕೆಲವು ಮಾತುಗಳನ್ನು ಹೇಳಲೇಬೇಕು.

ನಾವು ಪ್ರಜ್ಞಾವಂತ ಕನ್ನಡಿಗರು ನಿಮಗೆ ಈ ಹಿಂದೆ ನೂರಾರು ಪತ್ರಗಳನ್ನು ಬರೆದಿದ್ದೆವು. ನಮ್ಮ ಆಕ್ಷೇಪಣೆ ಇದ್ದದ್ದು ನಿಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಕಾರ್ಯಕ್ರಮದ ಬಗ್ಗೆ. ನಿಮಗೆ ಪತ್ರಗಳನ್ನು ಬರೆದವರಲ್ಲಿ ಎಲ್ಲ ವಲಯದ, ವರ್ಗದ ಜನರಿದ್ದರು. ಈ ಪತ್ರಗಳಿಗೆ ಪ್ರತಿಯಾಗಿ ಮೊನ್ನೆ ಬದುಕು ಜಟಕಾ ಬಂಡಿ ಎಂಬ ರಿಯಾಲಿಟಿ ಶೋ ಒಂದರಲ್ಲಿ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ನಡೆಸುವ ನರೇಂದ್ರ ಶರ್ಮ ಎಂಬುವವರಿಂದ ಪ್ರತಿಕ್ರಿಯೆ, ಸ್ಪಷ್ಟನೆ ಕೊಡಿಸುವ ಪ್ರಯತ್ನ ನಡೆಯಿತು.

ಕಾರ್ಯಕ್ರಮದ ಕಡೆಯಲ್ಲಿ ಒಂದು ಸಾಲು ಹಿನ್ನೆಲೆಯಾಗಿ ಕೇಳುತ್ತದೆ. ಈ ಕಾರ್ಯಕ್ರಮಕ್ಕೆ ಅಂತರ್ಜಾಲದಲ್ಲಿ ಗುರೂಜಿ ನರೇಂದ್ರ ಬಾಬು ಶರ್ಮ ಅವರ ವಿರುದ್ಧ ಹಾಗು ಜೀ ಕನ್ನಡ ವಾಹಿನಿಯ ವಿರುದ್ಧ ನಕಾರಾತ್ಮಕ ಆಂದೋಲನ ನಡೆಸುತ್ತಿರುವವರನ್ನೂ ಆಹ್ವಾನಿಸಲಾಗಿತ್ತು. ಆದರೆ ಅವರು ಯಾರು ಬರಲಿಲ್ಲ. ಆದರೂ ಗುರೂಜಿಯವರು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಶ್ರೇಷ್ಠತೆ ಮೆರೆದರು...

ನಿಮಗೆ ಈ ಹಿಂದೆ ಬರೆದ ಪತ್ರವೂ ಯಾವುದೇ ನೈತಿಕ ಚೌಕಟ್ಟನ್ನು ಉಲ್ಲಂಘಿಸದ, ಸಭ್ಯ ಭಾಷೆಯ ವಿನಯಪೂರ್ವಕ ಪತ್ರವಾಗಿತ್ತು. ಅದನ್ನು ನಿಮಗೆ ಮತ್ತೊಮ್ಮೆ ನೆನಪಿಸಬಯಸುತ್ತೇವೆ. ನಮ್ಮ ವಿರೋಧ ಇರುವುದು ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಅಸಂವಿಧಾನಿಕ, ಅನೈತಿಕ, ಕೀಳು ಅಭಿರುಚಿಯ, ಅಸಹ್ಯ ಹುಟ್ಟಿಸುವ, ಮೌಢ್ಯವನ್ನು ಹೆಚ್ಚಿಸುವ, ಭೀತಿ ಹುಟ್ಟಿಸುವ ನರೇಂದ್ರ ಶರ್ಮ ಅವರ ಪ್ರವಚನಗಳಿಗೇ ಹೊರತು, ನಿಮ್ಮ ವಾಹಿನಿಯ ವಿರುದ್ಧವಲ್ಲ. ನೀವು ಸುಖಾಸುಮ್ಮನೆ ಈ ಆರೋಪವನ್ನು ಹೊರಿಸಿದ್ದೀರಿ. ಮಾತ್ರವಲ್ಲ, ನರೇಂದ್ರ ಶರ್ಮ ಅವರ ಅವಿವೇಕದ ಕ್ರಿಯೆಗಳನ್ನು ನಿಮ್ಮ ಬೆನ್ನ ಮೇಲೆ ಹೊತ್ತುಕೊಂಡಿದ್ದೀರಿ. ನೀವಾಗಿಯೇ ನೀವು ಆರೋಪಿಯ ಸ್ಥಾನವನ್ನು ಹೇರಿಕೊಳ್ಳುವ ಅಗತ್ಯವಾದರೂ ಏನಿತ್ತು, ನಮಗಂತೂ ಗೊತ್ತಾಗುತ್ತಿಲ್ಲ. ಜೀವಪರ, ವೈಜ್ಞಾನಿಕ ನಿಲುವುಗಳನ್ನು ಸಮರ್ಥಿಸುವವರಿಗೆ ನೀವು ಈಗ ಅನಾಮತ್ತಾಗಿ ಹೊತ್ತುಕೊಂಡಿರುವ ಬ್ರಹ್ಮಾಂಡದ ಹೊರೆ ದುಬಾರಿ ಅನ್ನಿಸುತ್ತದೆ.

ಇನ್ನು ನಮ್ಮ ಆಂದೋಲನವನ್ನು ನಕಾರಾತ್ಮಕ ಎಂದು ನೀವು ಕರೆದಿದ್ದೀರಿ. ಮುಗ್ಧ ಜನರನ್ನು ಪ್ರಳಯದ ಹೆಸರಿನಲ್ಲಿ ಸಾವಿನ ಭೀತಿಗೆ ನೂಕುತ್ತಿರುವ ಕಪಟ ಜ್ಯೋತಿಷಿಗಳ ವಿರುದ್ಧ ಧ್ವನಿಯೆತ್ತುವುದು ನಿಮಗೆ ನಕಾರಾತ್ಮಕ ಅನ್ನಿಸಿತೇ? ಇವತ್ತಿನಿಂದ ಜಗತ್ತಿನ ಸಮಸ್ತ ಜನರಲ್ಲೂ ರೋಗರುಜಿನಗಳು ಶುರುವಾಗುತ್ತದೆ (ಮಾರ್ಚ್೨೩, ಬೃಹತ್ ಬ್ರಹ್ಮಾಂಡ) ಎಂದು ಹೇಳುವ ರೋಗಿಷ್ಠ ವ್ಯಕ್ತಿಯ ವಿರುದ್ಧ ಮಾತನಾಡಿದರೆ ಅದು ನಕಾರಾತ್ಮಕವಾಗುತ್ತದೆಯೇ? ಟಿವಿಗಳಂಥ ಸಾರ್ವಜನಿಕ ಹೊಣೆಗಾರಿಕೆಯ ಮಾಧ್ಯಮಗಳಲ್ಲಿ ಬಳಸುವ ಭಾಷೆ ಎಲ್ಲೆ ಮೀರಬಾರದು ಎಂದು ವಿನಂತಿಸಿದರೆ ಅದು ನಕಾರಾತ್ಮಕ ಧೋರಣೆಯೇ? ಬೆಳಿಗ್ಗೆ ಎದ್ದ ಕೂಡಲೇ ಹಜಾಮರ ಮುಖ ನೋಡಬಾರದು ಎಂದು ಒಂದು ಜಾತಿಯ ಜನರನ್ನು ವಿನಾಕಾರಣ ನಿಂದಿಸಿ, ಅಪಮಾನಿಸಿದಾಗ ಅದನ್ನು ಪ್ರತಿಭಟಿಸುವುದು ನಕಾರಾತ್ಮಕ ಆಂದೋಲನವೇ?

ನರೇಂದ್ರ ಶರ್ಮ ಅವರಿಂದ ಸ್ಪಷ್ಟನೆ ಕೊಡಿಸುವ ನಿಮ್ಮ ಪ್ರಯತ್ನವೇ ಒಂದರ್ಥದಲ್ಲಿ ವಿಫಲಾಗಿದೆ. ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂದು ತನಗೆ ತಾನೇ ಹೇಳಿಕೊಂಡ ನರೇಂದ್ರ ಶರ್ಮ ಅವರು ತಾವು ಬಳಸುವ ಕೀಳು ಅಭಿರುಚಿಯ ಭಾಷೆಯನ್ನು ಬಿಡುವುದಿಲ್ಲ ಎಂದು ನಿಮ್ಮ ವೇದಿಕೆಯಲ್ಲೇ ಘಂಟಾಘೋಷವಾಗಿ ಹೇಳಿ, ನಿಮ್ಮ ವಾಹಿನಿಯ ಘನತೆಗೇ ಕುಂದುತಂದಿದ್ದಾರೆ.

ನಿಮ್ಮ ಕಚೇರಿಯಲ್ಲಿ ನೂರಾರು ಹೆಣ್ಣುಮಕ್ಕಳು ಕೆಲಸ ಮಾಡುತ್ತಾರೆ. ನಿಮ್ಮ-ನಮ್ಮ ಮನೆಗಳಲ್ಲೂ ಹೆಣ್ಣುಮಕ್ಕಳಿದ್ದಾರೆ. ಎಲ್ಲರೂ ಸೀರೆ ಉಡುವುದಿಲ್ಲ. ಬಹುತೇಕರು ಚೂಡಿದಾರ್‌ಗಳನ್ನು ಧರಿಸುತ್ತಾರೆ. ಮತ್ತೆ ಹಲವರು ಜೀನ್ಸ್ ಪ್ಯಾಂಟುಗಳನ್ನು ತೊಡುತ್ತಾರೆ. ಇವರೆಲ್ಲರಿಗೂ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದ್ದಾರೆ ನರೇಂದ್ರ ಶರ್ಮ. ಇದನ್ನು ಕೇಳಿದ ಮೇಲೂ ನಿಮ್ಮ ಆತ್ಮಸಾಕ್ಷಿ ಕೆರಳಲಿಲ್ಲವೆಂದರೆ ಯಾರು ಏನನ್ನು ಮಾಡಲು ಸಾಧ್ಯ? ನಿದ್ದೆ ಹೋದವರನ್ನು ಎಬ್ಬಿಸಬಹುದು, ನಿದ್ದೆ ಮಾಡಿದಂತೆ ನಟಿಸುತ್ತಿರುವವರನ್ನು ಎಬ್ಬಿಸಬಹುದೇ?

ನರೇಂದ್ರ ಶರ್ಮ ನೀಡುತ್ತಿದ್ದ ಉತ್ತರಗಳಿಂದ ಘಾಸಿಗೊಂಡಂತೆ, ಆಘಾತಗೊಂಡಂತೆ, ಆಶ್ಚರ್ಯಗೊಂಡಂತೆ, ಹೇಸಿಗೆ ಪಟ್ಟುಕೊಂಡಂತೆ ಹಾವಭಾವ ತೋರುತ್ತಿದ್ದ, ಮಾತನಾಡುತ್ತಿದ್ದ ನಿರೂಪಕಿ ಮಾಳವಿಕಾ ಕಾರ್ಯಕ್ರಮದ ಕಡೆಯ ಭಾಗದಲ್ಲಿ ನರೇಂದ್ರ ಶರ್ಮ ಅವರನ್ನು ಅಭಿನಂದಿಸಿದ್ದು ಯಾವ ಪುರುಷಾರ್ಥಕ್ಕೆ? ಏನಿದರ ಮರ್ಮ? ಆಕೆಗೆ ಹಾಗೆ ಮಾಡಲು ನಿರ್ದೇಶನ ನೀಡಲಾಗಿತ್ತೆ?

ನಿಮ್ಮ ಬದುಕು ಜಟಕಾ ಬಂಡಿಯ ಸಂವಾದಕ್ಕೆ ಎರಡು ದಿನ ಮೊದಲೇ ನಿಮಗೆ ಪತ್ರ ಬರೆದವರಿಗೆ ಆಹ್ವಾನ ನೀಡಬಹುದಿತ್ತಲ್ಲ? ಯಾಕೆ ನೀಡಲಿಲ್ಲ? ಯಾಕೆ ಬೆರಳೆಣಿಕೆಯ ಕೆಲವರಿಗೆ ಚಿತ್ರೀಕರಣ ನಡೆಯುವ ದಿನವೇ ಕೇವಲ ಎರಡು ಗಂಟೆ ಮುಂಚಿತವಾಗಿ ತಿಳಿಸಲಾಯ್ತು? ಆದರೂ ಯಾರೂ ಬರಲಿಲ್ಲ ಎಂದು ಯಾಕೆ ನಿಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ? ಇದೆಲ್ಲವೂ ಬಹಳ ಚೆನ್ನಾಗಿಯೇ ಅರ್ಥವಾಗುತ್ತದೆ.

ಬದುಕು ಜಟಕಾ ಬಂಡಿಯಲ್ಲಿ ಮಾಳವಿಕಾ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ನರೇಂದ್ರ ಶರ್ಮ ನೀಡಿದ್ದು ದಿಟ್ಟ ಉತ್ತರ ಎಂದು ದಟ್ಸ್ ಕನ್ನಡದಲ್ಲಿ ವರದಿಯಾಗಿದೆ. ಅದು ದಿಟ್ಟ ಉತ್ತರವಲ್ಲ, ವಿತಂಡವಾದ. ಒಮ್ಮೆ ಇಡೀ ಕಾರ್ಯಕ್ರಮವನ್ನು ಮತ್ತೊಮ್ಮೆ ನೋಡಿ. ಈತ ಜ್ಯೋತಿಷಿಯೂ ಅಲ್ಲ, ಧರ್ಮದರ್ಶಿಯೂ ಅಲ್ಲ, ವಿಜ್ಞಾನಿಯೂ ಅಲ್ಲ.  ಜನರ ನಂಬುಗೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಯಕಶ್ಚಿತ್ ವಂಚಕ ಎಂಬುದು ಸಾಬೀತಾಗುತ್ತದೆ. ಸರಿಯಾಗಿ ದೋಷಗಳಿಲ್ಲದಂತೆ ಒಂದು ವಾಕ್ಯ ಕನ್ನಡವನ್ನೂ ಮಾತನಾಡಲು ಬಾರದ ವ್ಯಕ್ತಿ ಈತ.

ಕಡೆಯ ಬಾರಿ ನಿಮ್ಮಲ್ಲಿ ಅತ್ಯಂತ ವಿನಯದಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ: ದಯವಿಟ್ಟು ಈ ಮೂರನೇ ದರ್ಜೆ ಕಾರ್ಯಕ್ರಮವನ್ನು ನಿಲ್ಲಿಸಿ.

ಐದು ವರ್ಷ ಪೂರೈಸಿದ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇವೆ.

Tuesday, May 10, 2011

ಬದುಕು ಜಟಕಾ ಬಂಡಿಯಲ್ಲಿ ಧರ್ಮದರ್ಶಿ ನರೇಂದ್ರ ಬಾಬು ಶರ್ಮ ಅನಾವರಣ...

 ಸ್ವಲ್ಪ ದಿನ ರಜೆ ತಗೋತೀವಿ ಅಂದಿದ್ವಿ. ಆದರೆ ಈಗ ಬರೀಲೇಬೇಕು. ಬದುಕು ಜಟಕಾ ಬಂಡಿಯಲ್ಲಿ ನರೇಂದ್ರ ಶರ್ಮ ಅವರ ದರ್ಶನವಾಗಿದೆ. ಅದು ನಮಗಾಗಿ ನಡೆದ ಕಾರ್ಯಕ್ರಮ. ನೀವು, ನಾವೆಲ್ಲ ಬರೆದ ನೂರಾರು ಪತ್ರಗಳಿಗೆ ಉತ್ತರವಾಗಿ ನಡೆದ ಕಾರ್ಯಕ್ರಮ. ಹೀಗಾಗಿ ಆ ಕುರಿತು ಬರೆಯಲೇಬೇಕು.

ನಿನ್ನೆ ರಾತ್ರಿ ೯ ಗಂಟೆಗೆ ಪ್ರಸಾರವಾದ ಬದುಕು ಜಟಕಾ ಬಂಡಿಯಲ್ಲಿ ಮಾಳವಿಕಾ ಅವಿನಾಶ್ ಅವರು ನರೇಂದ್ರ ಶರ್ಮ ಜತೆ ಸಂವಾದ ನಡೆಸಿದರು, ಜತೆಗೊಂದಿಷ್ಟು ಮಂದಿ ವೀಕ್ಷಕರು. ಇದು ಅತ್ಯಂತ ವ್ಯವಸ್ಥಿತವಾಗಿ ನರೇಂದ್ರ ಶರ್ಮ ಅವರನ್ನು ಸಮರ್ಥಿಸಲು ನಡೆದ ಕಾರ್ಯಕ್ರಮ. ಆದರೆ, ಇಂಥ ಕಾರ್ಯಕ್ರಮವನ್ನೂ ಸಹ ಜಾಣತನದಿಂದ ಬಳಸಿಕೊಳ್ಳಲು ಶರ್ಮ ವಿಫಲರಾದರು. ಅವರ ಬಾಯಿಹರುಕುತನ ಅವರ ಇನ್ನಷ್ಟು ವಿಕೃತಿಗಳನ್ನು ಅನಾವರಣಗೊಳಿಸಿತು.

ಪ್ರಳಯ ತಪ್ಪಿಸಲು ಐದು ಎಣ್ಣೆಯ ದೀಪಗಳನ್ನು ಹಚ್ಚಲು ಶರ್ಮ ನೀಡಿದ ಕರೆ, ಅದಕ್ಕೆ ಕರ್ನಾಟಕದ ಮುಗ್ಧ ಹೆಣ್ಣುಮಕ್ಕಳು ಪ್ರತಿಸ್ಪಂದಿಸಿದ ರೀತಿಯನ್ನು ಗಮನಿಸಿ, ಗಾಬರಿಯಾಗಿ ನಾವು ಮೊದಲು ಈ ವ್ಯಕ್ತಿಯ ಕುರಿತು ಬರೆದಿದ್ದೆವು. ನಂತರದ ದಿನಗಳಲ್ಲಿ ನರೇಂದ್ರ ಶರ್ಮ ಅವರನ್ನು ನಾವೆಲ್ಲರೂ ಸೇರಿ ಬಯಲುಗೊಳಿಸುತ್ತಾ ಹೋದೆವು, ಕನ್ನಡದ ಬ್ಲಾಗರ್‌ಗಳು ಒಬ್ಬರಾದ ಮೇಲೊಬ್ಬರಂತೆ ಬೃಹತ್ ಬ್ರಹ್ಮಾಂಡದ ಠೊಳ್ಳುತನವನ್ನು ಬಹಿರಂಗಪಡಿಸುತ್ತ ಬಂದರು. ಫೇಸ್‌ಬುಕ್‌ನಲ್ಲೊಂದು ಗುಂಪನ್ನೂ ಸೃಷ್ಟಿಸಿದೆವು. ನೂರಾರು ಪತ್ರಗಳು ಜೀ ಟಿವಿಗೆ ಹೋದ ನಂತರ ಅವರು ಏನನ್ನಾದರೂ ಮಾಡಲೇಬೇಕಿತ್ತು. ಮಾಡಿದ್ದು ಬದುಕು ಜಟಕಾ ಬಂಡಿ. ನರೇಂದ್ರ ಶರ್ಮ ಅವರೇ ಅದರ ಸಾಹೇಬ.

ನಿಜ, ಇದು ಜೀ ಟಿವಿಯವರು ನರೇಂದ್ರ ಶರ್ಮ ವಿರುದ್ಧದ ಎದ್ದಿರುವ ಆಕ್ರೋಶವನ್ನು ತಣ್ಣಗಾಗಿಸಲು ನಡೆಸಿದ ಪ್ರಯತ್ನ. ನಮ್ಮ ಪ್ರಶ್ನೆಗಳಿಗೆ ನರೇಂದ್ರ ಶರ್ಮ ಅವರಿಂದಲೇ ಉತ್ತರ ಕೊಡಿಸಿ ತೇಪೆ ಹಚ್ಚುವ ಯತ್ನ. ಆದರೆ ಬದುಕು ಜಟಕಾ ಬಂಡಿ ನಡೆಸಿಕೊಡುವ ಮಾಳವಿಕಾ ಅವಿನಾಶ್ ನಾವು ಮಾಡಬೇಕು ಎಂದುಕೊಂಡಿದ್ದನ್ನು ತಾವೇ ಮಾಡಿದ್ದಾರೆ. ನರೇಂದ್ರ ಶರ್ಮ ಅವರನ್ನು ಇನ್ನಷ್ಟು ಎಕ್ಸ್‌ಪೋಸ್ ಮಾಡಿದ್ದಾರೆ. ನರೇಂದ್ರ ಶರ್ಮಾ ಮಾತುಗಳನ್ನು ಕೇಳಿ ಮಾಳವಿಕಾ ಎಷ್ಟೋ ಸಲ ಬೆಚ್ಚಿ ಬಿದ್ದರು, ಸಿಟ್ಟಿಗೆದ್ದರು, ಪರಮಾಶ್ಚರ್ಯದ ಉದ್ಘಾರ ಹೊರಡಿಸಿದರು, ಹತಾಶೆಯಿಂದ ಸುಮ್ಮನಾದರು. ಮಾಳವಿಕಾ ಕನ್ನಡದ ಒಬ್ಬ ಸಭ್ಯ, ಸುಸಂಸ್ಕೃತ ಹೆಣ್ಣುಮಗಳಾಗಿ ಪ್ರಶ್ನೆಗಳನ್ನು ಕೇಳಿದರು. ಕೆಲವು ಬಾರಿ ಅನುನಯದಿಂದ, ಮತ್ತೆ ಕೆಲವೊಮ್ಮೆ ಅನುಕಂಪದಿಂದ. ಉತ್ತರಗಳು ಮಾತ್ರ ದುರಹಂಕಾರದ್ದು, ಠೊಳ್ಳುತನದ್ದು, ವಿತಂಡವಾದದ್ದು...

ನಿನ್ನೆ ಈ ಸಂವಾದವನ್ನು ನೋಡಿದವರಿಗೆ ಈ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಯಾಕೆ ವಿರೋಧಿಸಲಾಗುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿ ಅರ್ಥವಾಗಿರುತ್ತದೆ. ಹೀಗೆ ಅರ್ಥ ಮಾಡಿಸುವ ಕೆಲಸವನ್ನು ಮಾಳವಿಕಾ ತಮಗೇ ಗೊತ್ತಿಲ್ಲದಂತೆ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ.

ಇನ್ನು ಈ ಸಂವಾದದಲ್ಲಿ ನರೇಂದ್ರ ಶರ್ಮ ಹೇಳಿದ್ದೇನು? ಇಡೀ ಸಂವಾದದಲ್ಲಿ ನಾವು ಜೀ ಟಿವಿ ಮುಖ್ಯಸ್ಥರಿಗೆ ಬರೆದ ಬಹಿರಂಗ ಆಗ್ರಹ ಪತ್ರದ ಪ್ರಶ್ನೆಗಳನ್ನು ಯಥಾವತ್ತಾಗಿ ನರೇಂದ್ರ ಶರ್ಮ ಅವರಿಗೆ ಕೇಳಲಾಗುತ್ತಿತ್ತು. ಮಾಳವಿಕಾ ನಮ್ಮ ಪತ್ರದ ಒಂದು ಪ್ರತಿಯನ್ನು ಕೈಯಲ್ಲಿ ಇಟ್ಟುಕೊಂಡೇ ಕುಳಿತಿದ್ದರು. ನರೇಂದ್ರ ಶರ್ಮ ತನ್ನ ಮಾಮೂಲಿ ಉಡಾಫೆಯ ಶೈಲಿಯಲ್ಲೇ ಉತ್ತರಿಸುತ್ತಾ ಹೋದರು.

ಸಲ್ವಾರ್ ಕಮೀಜ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎಂದು ನಾನು ಹೇಳಿದ್ದು ನಿಜ. ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್, ಚೂಡಿದಾರ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ಈ ಡ್ರೆಸ್‌ಗಳನ್ನು ಹಾಕಿಕೊಂಡರೆ ಗಾಳಿಯಾಡೋದಿಲ್ಲ. ಕುಜ ಪ್ರಭಾವ ಬೀರೋದು ಗರ್ಭದ ಮೇಲೆ. ಹೀಗಾಗಿ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎಂದು ನರೇಂದ್ರ ಶರ್ಮ ಯಾವುದೇ ಭಿಡೆ ಇಲ್ಲದೆ ಹೇಳಿದರು.

ಇದರಿಂದ ಗಾಬರಿಗೊಂಡ ಮಾಳವಿಕಾ ನಾನು ೩೦ ವರ್ಷದಿಂದ ಚೂಡಿದಾರ್ ಹಾಕುತ್ತಾ ಬಂದಿದ್ದೇನೆ, ನನಗೆ ಕ್ಯಾನ್ಸರ್ ಬಂದಿಲ್ಲವಲ್ಲ? ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದರು.

ಯಾಕೆ ನೀವು ಮುಂಡೇವಾ ಇತ್ಯಾದಿಯಾಗಿ ಬೈಯುತ್ತೀರಾ, ಅಸಭ್ಯವಾಗಿ ಮಾತನಾಡುತ್ತೀರಾ ಎಂದು ಕೇಳಿದರೆ ನರೇಂದ್ರ ಶರ್ಮ ಅವರದು ಮಾಮೂಲಿ ಒರಟು ಉತ್ತರ. ಅದು ನನ್ನ ಶೈಲಿ, ನಾನು ಇರೋದೇ ಹೀಗೆ ಇತ್ಯಾದಿ. ನೀವು ಇದನ್ನೆಲ್ಲ ಮನೆಯಲ್ಲಿ ಇಟ್ಟುಕೊಳ್ಳಿ, ಸಾರ್ವಜನಿಕ ಟಿವಿ ಕಾರ್ಯಕ್ರಮಗಳಲ್ಲಿ ಹೀಗೆ ಮಾತನಾಡೋದು ಸರೀನಾ ಎನ್ನುತ್ತಾರೆ ಮಾಳವಿಕಾ. ಇಲ್ಲೂ ನಾನು ಹೀಗೇ ಮಾತಾಡೋದು ಎಂಬ ದುರಹಂಕಾರದ ಉತ್ತರ ಶರ್ಮಾ ಅವರದು. ನಿಮ್ಮ ಹತ್ರ ಬೈಸಿಕೊಳ್ಳೋಕೆ ನಮಗೇನು ಹಣೆಬರೆಹ ಎನ್ನುತ್ತಾರೆ ಮಾಳವಿಕಾ. ನೀವ್ಯಾಕೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡ್ಕೋತೀರಾ ಎಂದು ಮಾಳವಿಕಾ ಅವರನ್ನೇ ಗದರಿದರು ಸನ್ಮಾನ್ಯ ಶರ್ಮ ಅವರು.

ಸಾರ್ವಜನಿಕ ಜೀವನದಲ್ಲಿ ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕು. ನಮ್ಮ ಭಾಷೆಯ ಮೇಲೆ ಹತೋಟಿ ಇರಬೇಕು. ಅದು ಸಂಸ್ಕಾರವಲ್ಲವೇ ಎಂದು ಮಾಳವಿಕಾ ಪ್ರಶ್ನಿಸಿದರೆ ನರೇಂದ್ರ ಶರ್ಮ ಏನನ್ನೋ ಮಾತನಾಡಲು ಹೋಗಿ ಗೊಂದಲವೆಬ್ಬಿಸುತ್ತಾರೆ. ಸಹನೆಯಿಂದಲೇ ಮಾತನಾಡುತ್ತಿದ್ದ ಮಾಳವಿಕಾ ತಾಳ್ಮೆ ಕಳೆದುಕೊಂಡಹಾಗೆ ಕಾಣುತ್ತದೆ.

ತಾನು ಮದುವೆಯಾಗಿಲ್ಲ, ಆಗೋದು ಇಲ್ಲ. ಆದರೆ ಬ್ರಹ್ಮಾಚಾರಿಯಲ್ಲ ಎಂದು ನರೇಂದ್ರ ಶರ್ಮ ಹೇಳಿಕೊಳ್ಳುತ್ತಾರೆ. ಯಾಕೆ ಹೀಗೆ ಎಂದರೆ, ಚಿನ್ನದ ಪಂಜರ, ಹಕ್ಕಿ... ಇತ್ಯಾದಿ ಏನನ್ನೋ ಹೇಳಲು ಹೊರಡುತ್ತಾರೆ. ಇತರ ಧರ್ಮಗುರುಗಳನ್ನು ನಿಂದಿಸಲು ಆರಂಭಿಸುತ್ತಾರೆ. ಮಾಳವಿಕಾ ಅದಕ್ಕೆ ಅವಕಾಶ ನೀಡುವುದಿಲ್ಲ. ನಿಮ್ಮ ವಿಷಯ ಮಾತ್ರ ಹೇಳಿ, ಬೇರೆಯವರ ವಿಷಯ ಬೇಡ ಎಂದು ತಾಕೀತು ಮಾಡುತ್ತಾರೆ.

ಪ್ರಳಯವೆಲ್ಲ ನಡೆದು, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿಯುತ್ತದೆ ಎಂದು ನಾನೆಲ್ಲೂ ಹೇಳಿಲ್ಲ. ಉತ್ತರ ಭಾಗವೆಲ್ಲ ಮುಳುಗಿ ದಕ್ಷಿಣ ಮಾತ್ರ ಉಳಿಯುತ್ತದೆ ಎಂದು ಮಾತ್ರ ಹೇಳಿದ್ದೇನೆ ಎನ್ನುತ್ತಾರೆ ನರೇಂದ್ರ ಶರ್ಮ. ಆದರೆ ಬೆಳಗಾವಿಯ ಒಂದು ಹಳ್ಳಿ ದೇಶದ ರಾಜಧಾನಿಯಾಗುತ್ತದೆ ಎನ್ನುತ್ತಾರೆ. ಪ್ರಳಯ ನಿಜವಾಗಲೂ ಆಗುತ್ತಾ ಎಂದರೆ ಈಗ ಆಗ್ತಾ ಇರೋದು ಏನು? ಜಪಾನ್‌ನಲ್ಲಿ ಸುನಾಮಿ ಆಗುತ್ತೆ ಎಂದು ನಾನು ಹೇಳಿರಲಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಮಾಳವಿಕಾ ಸಾಕಷ್ಟು ಪ್ರತಿರೋಧದ ಪ್ರಶ್ನೆಗಳನ್ನು ಎಸೆಯುತ್ತಾರೆ. ಜಪಾನ್‌ನಲ್ಲಿ ಹಿಂದೆ ನೂರಾರು ಬಾರಿ ಭೂಕಂಪ ಆಗಿದೆ. ಸುನಾಮಿ ಕೂಡ ಆಗಿದೆ. ನೀವು ಹೇಳಿದ್ದಕ್ಕೆ ಆಗಬೇಕಿಲ್ಲ ಎಂದು ಹೇಳಿದರೂ ಶರ್ಮಾ ಒಪ್ಪುವುದಿಲ್ಲ.

ಸುನಾಮಿ ಅಂದ್ರೆ ಏನು, ಸ್ವಲ್ಪ ವೈಜ್ಞಾನಿಕವಾಗಿ ಹೇಳಿ ಎಂದರೆ ಮೊದಲು ಸುನಾಮಿಗೂ ಭೂಮಿಗೂ ಸಂಬಂಧವೇ ಇಲ್ಲ ಎನ್ನುತ್ತಾರೆ. ನಂತರ ಭೂಮಿ, ಪಾತಾಳ, ಪ್ಲೇಟು, ಸೂರ್ಯ ಕಿರಣ ಇತ್ಯಾದಿ ಏನನ್ನೋ ಹೇಳಿ ಮುಗಿಸುತ್ತಾರೆ. ಇದನ್ನು ಸೈನ್ಸ್ ಹೇಳುತ್ತಾ ಎಂದು ಮಾಳವಿಕಾ ಪ್ರಶ್ನಿಸಿದರೆ, ಸೈನ್ಸ್ ಯಾಕೆ, ನಾನು ಹೇಳ್ತೀನಿ ಎಂಬ ಉದ್ಧಟತನದ ಉತ್ತರ.

ನರೇಂದ್ರ ಶರ್ಮ ತನ್ನನ್ನು ತಾನು ಜ್ಯೋತಿಷಿ ಅಲ್ಲವೆಂದು ಈ ಕಾರ್ಯಕ್ರಮದಲ್ಲಿ ಘೋಷಿಸಿಕೊಂಡರು. ಬದಲಾಗಿ ಧರ್ಮದರ್ಶಿ ಎಂದು ಕರೆದುಕೊಂಡರು. ಅವರ ಪ್ರಕಾರ ಜ್ಯೋತಿಷ್ಯ ನಿಜ, ಜ್ಯೋತಿಷಿ ಸುಳ್ಳು. ಶಾಸ್ತ್ರ ನಿಜ, ಶಾಸ್ತ್ರಿ ಸುಳ್ಳು. ಅವರು ಆಲ್‌ರೌಂಡರ್ ಇದ್ದ ಹಾಗಂತೆ. ತನ್ನನ್ನು ತಾನು ಎಲ್ಲವನ್ನೂ ಬಲ್ಲವನು ಎಂದವರು ಘೋಷಿಸಿಕೊಂಡರು. ಎಂತೆಂಥ ದೊಡ್ಡ ದೊಡ್ಡ ಮಹಾತ್ಮರೂ ಸಹ ತಮ್ಮನ್ನು ತಾವು ಎಲ್ಲ ಬಲ್ಲವರು ಎಂದು ಹೇಳಿಕೊಳ್ಳಲಿಲ್ಲ, ಹಾಗೆ ಘೋಷಿಸಿಕೊಂಡ ಮೊದಲ ವ್ಯಕ್ತಿ ನೀವೇನೇ ಎಂದರು ಮಾಳವಿಕಾ. ನಾನು ದೇವರನ್ನು ನೋಡಿದ್ದೇನೆ ಎಂದು ಹೇಳಿಕೊಂಡರು ಶರ್ಮ. ಹೇಗಿದ್ದರು ದೇವರು ಎಂದರೆ ಮುದುಕಿ ರೂಪದಲ್ಲಿ, ಮಗುವಿನ ರೂಪದಲ್ಲಿ ಎಂಬ ಉತ್ತರ. ದೇವರ ಹಾಗೆ ಕಾಣಿಸೋದು ಬೇರೆ, ದೇವರನ್ನೇ ನೋಡೋದು ಬೇರೆ ಎಂದು ಮಾಳವಿಕಾ ಹೇಳಿದಾಗ, ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನೆ ಎಂದು ಹೇಳಿಕೊಂಡರು ಅವರು.

ಕಾರ್ಯಕ್ರಮದ ಮಧ್ಯೆ ಮಧ್ಯೆ ನರೇಂದ್ರ ಶರ್ಮ ಅವರ ಅನುಯಾಯಿಗಳಿಂದ ಪ್ರತ್ಯೇಕ ಬೈಟ್‌ಗಳು. ಗುರೂಜಿಯಿಂದ ನಮಗೆ ಒಳ್ಳೆಯದಾಗಿದೆ, ಅವರು ನಮ್ಮ ಬಾಳು ಬೆಳಗಿದರು ಇತ್ಯಾದಿ ಪರಾಕುಗಳು. ಕಡೆಗೆ ಮಾಳವಿಕಾ ಸಹ ಶರ್ಮಾ ಅವರನ್ನು ಅಭಿನಂದಿಸಿ ಕಾರ್ಯಕ್ರಮ ಮುಗಿಸುತ್ತಾರೆ.

ಕಡೆಯದಾಗಿ ನರೇಂದ್ರ ಶರ್ಮ, ತನ್ನ ವಿರುದ್ಧ ಟೀಕೆ ಮಾಡುವವರಿಗೆ ಉತ್ತರ ಹೇಳಲು ಯತ್ನಿಸುತ್ತಾರೆ. ನನ್ನಿಂದಲೂ ತಪ್ಪಾಗಿದ್ದರೆ, ಅದನ್ನು ಸರಿಯಾಗಿ ತನ್ನ ಗಮನಕ್ಕೆ ತಂದರೆ ತಿದ್ದಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ಹಿನ್ನೆಲೆ ಧ್ವನಿಯೊಂದು ಕೇಳಿಬರುತ್ತದೆ. ಅಂತರ್ಜಾಲದಲ್ಲಿ ಬೃಹತ್ ಬ್ರಹ್ಮಾಂಡ ಕುರಿತು ನಕಾರಾತ್ಮಾಕ ಆಂದೋಲನ ನಡೆಸುತ್ತಿರುವವರಿಗೆ ಈ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಲಾಗಿತ್ತು. ಯಾರೂ ಬರಲಿಲ್ಲ. ಆದರೂ ಗುರೂಜಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟರು... ಇತ್ಯಾದಿ ಹೇಳುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಏ.೨೭ರಂದು ಈ ಕಾರ್ಯಕ್ರಮದ ಚಿತ್ರೀಕರಣದ ಶೂಟಿಂಗ್ ನಡೆದಿದೆ. ಅಂದು ಮಧ್ಯಾಹ್ನ ೧ ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು ಬೆಳಿಗ್ಗೆ ೧೧ ಗಂಟೆಗೆ. ಅದೂ ತಮ್ಮ ಪತ್ರದಲ್ಲಿ ಮೊಬೈಲ್ ನಂಬರ್ ದಾಖಲಿಸಿದ ಕೆಲವರಿಗೆ ಮಾತ್ರ. ಕೆಂಗೇರಿ ಬಳಿಯ ಸ್ಟುಡಿಯೋದಲ್ಲಿ ನಡೆದ ಈ ಚಿತ್ರೀಕರಣಕ್ಕೆ ಕನಿಷ್ಠ ಒಂದು ದಿನ ಮೊದಲು ತಿಳಿಸಬಹುದಿತ್ತಲ್ಲವೇ? ಈ ಸತ್ಯ ಗೊತ್ತಿದ್ದೂ ಆಹ್ವಾನ ಕೊಟ್ಟರೂ ಯಾರೂ ಬರಲಿಲ್ಲ ಎಂದು ಹೇಳುವ ಆತ್ಮವಂಚನೆ ಯಾಕೆ? (ಇದನ್ನು ನಾವು ಅಂದೇ ಫೇಸ್‌ಬುಕ್‌ನ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಗುಂಪಿನಲ್ಲಿ ಬರೆದಿದ್ದೆವು.)

ಜೀ ಟಿವಿ ಮುಖ್ಯಸ್ಥರಿಗೆ ಈಗ ಕೇಳಬೇಕಾದ ಹಲವು ಹೊಸ ಪ್ರಶ್ನೆಗಳಿವೆ:
೧. ನಿನ್ನೆ ನಡೆದ ಬದುಕು ಜಟಕಾ ಬಂಡಿ ಕಾರ್ಯಕ್ರಮದ ಹಕೀಕತ್ತೇನು? ಇದರ ನಿಜವಾದ ಉದ್ದೇಶವೇನು?
೨. ನಿನ್ನೆಯ ಕಾರ್ಯಕ್ರಮ ನರೇಂದ್ರ ಶರ್ಮ ಅವರ ಠೊಳ್ಳುತನ, ಬಾಯಿಹರುಕತನ ಇನ್ನಷ್ಟು ಸ್ಪಷ್ಟವಾಗಿ ಬಹಿರಂಗಗೊಳಿಸುತ್ತದೆ. ಇನ್ನಾದರೂ ಈ ಕಾರ್ಯಕ್ರಮ ನಿಲ್ಲಿಸಬಹುದಲ್ಲವೆ?
೩. ನರೇಂದ್ರ ಶರ್ಮ ಅವರಿಂದ ಈ ಬಗೆಯ ಉದ್ಧಟತನದ ಸ್ಪಷ್ಟನೆಗಳನ್ನು ಕೊಡಿಸಿದ ಮಾತ್ರಕ್ಕೆ ಈ ಕಾರ್ಯಕ್ರಮದಿಂದ ಆಗಿರುವ ಅನಾಹುತಗಳನ್ನು ಮರೆಯಬಹುದೇ?
೪. ಇಷ್ಟೆಲ್ಲ ಆದರೂ ಆತ ಜೀನ್ಸ್ ಪ್ಯಾಂಟ್, ಚೂಡಿದಾರ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎನ್ನುತ್ತಾರೆ. ಅದರರ್ಥ ಕರ್ನಾಟಕದ ಅರ್ಧಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಅಂದರೆ ಎರಡು ಕೋಟಿಯಷ್ಟು ಹೆಂಗಸರಿಗೆ, ದೇಶದ ೨೦-೩೦ ಕೋಟಿ ಹೆಣ್ಣುಮಕ್ಕಳಿಗೆ ಆ ಖಾಯಿಲೆ ಬರಬೇಕು. ಹೀಗೆಲ್ಲ ಹೇಳುವ ಅನಾಹುತಕಾರಿ ಏಡ್ಸ್ ರೋಗವನ್ನು ನಿಮ್ಮ ಜತೆ ಇನ್ನೆಷ್ಟು ದಿನ ಇಟ್ಟುಕೊಳ್ಳುತ್ತೀರಿ?

ಜೀ ಟಿವಿ ಮುಖ್ಯಸ್ಥರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಾರರು.

ಒಂದೇ ಒಂದು ಸವಾಲು. ನರೇಂದ್ರ ಶರ್ಮ ನಿನ್ನೆ ಹೇಳಿಕೊಂಡ ಅವರ ಶೈಕ್ಷಣಿಕ ಅರ್ಹತೆಗಳು ನಿಜವೇ. ಎಂಎಸ್‌ಸಿ, ಎಂಎ, ಎರಡು ಪಿಎಚ್‌ಡಿ. ಈ ಎಲ್ಲ ಅರ್ಹತೆಗಳನ್ನು ಆತ ಸಾಬೀತುಪಡಿಸಿದರೆ ನಾವು ಬ್ಲಾಗಿಂಗ್ ಮಾಡುವುದನ್ನೇ ಬಿಟ್ಟುಬಿಡುತ್ತೇವೆ. ಈ ಸವಾಲನ್ನು ನರೇಂದ್ರ ಶರ್ಮ ಸ್ವೀಕರಿಸುತ್ತಾರೆಯೇ?

ನಮ್ಮ ಹೋರಾಟ ಅರ್ಧಕ್ಕೆ ನಿಂತಿದೆ. ಸದ್ಯಕ್ಕಂತೂ ಮೂಗು ಹಿಡಿದು ಬಾಯಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ನರೇಂದ್ರ ಶರ್ಮ ತನ್ನ ಕಾರ್ಯಕ್ರಮದಲ್ಲಿ ಈ ಮೊದಲಿನಂತೆ ಮಾತನಾಡುತ್ತಿಲ್ಲ. ಮೇ.೬ನೇ ತಾರೀಕು ಜಗನ್ಮಾತೆ ಬರುತ್ತಾಳೆ. ನಾನೇ ಸ್ವಾಗತಿಸುತ್ತಿದ್ದೇನೆ ಎನ್ನುತ್ತಿದ್ದ ಶರ್ಮ ಆ ಬಗ್ಗೆ ಬಾಯಿಬಿಡುತ್ತಿಲ್ಲ. ಜಗನ್ಮಾತೆಯ ಫ್ಲೈಟ್ ಏನಾದ್ರು ಮಿಸ್ ಆಯ್ತಾ, ಗೊತ್ತಿಲ್ಲ. ಇತ್ತೀಚಿಗೆ ಪ್ರಳಯದ ಪ್ರಸ್ತಾಪವೂ ನಿಂತಿದೆ. ಬಾಯಿಬಡುಕತನವನ್ನು ಕಡಿಮೆ ಮಾಡಿ ಎಂದು ಜೀ ಟಿವಿಯವರು ತಾಕೀತು ಮಾಡಿರಬಹುದು.

ಇಷ್ಟು ಬದಲಾವಣೆಗೆ ಕ್ರಿಯಾಶೀಲ ಅಂತರ್ಜಾಲಿಗರು ಕಾರಣವಾಗಿರುವುದು ಒಂದು ಹೆಮ್ಮೆ. ಇದರಲ್ಲಿ ಸಂಪಾದಕೀಯದ ಪಾಲು ತೀರಾ ಕಡಿಮೆ. ಜೀವಪರವಾಗಿ ಯೋಚಿಸುವ ಸಾವಿರಾರು ಮನಸ್ಸುಗಳಿಗೆ ಒಂದು ವೇದಿಕೆಯಾಗಿ ನಾವಿದ್ದೇವಷ್ಟೆ. ಈ ಎಲ್ಲ ಮನಸ್ಸುಗಳಿಗೂ ಅಭಿನಂದನೆಗಳು, ಕೃತಜ್ಞತೆಗಳು.

ಹಾಗಂತ ಈ ಅಭಿಯಾನವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವ ಹೊಣೆಗಾರಿಕೆಯನ್ನು ನಾವು ಮರೆತಿಲ್ಲ. ಬಹುಶಃ ಇನ್ನಷ್ಟು ದೀರ್ಘವಾಗಬಹುದಾದ ಈ ಆಂದೋಲನದಲ್ಲಿ ನೀವು ಸದಾ ನಮ್ಮ ಜತೆಗಿರುತ್ತೀರಿ ಎಂಬ ನಂಬುಗೆ ಇದೆ.

ಇವತ್ತು ಮಧ್ಯಾಹ್ನ ೨-೩೦ಕ್ಕೆ ಬದುಕು ಜಟಕಾ ಬಂಡಿಯ ಮರುಪ್ರಸಾರ ಇದೆ. ನಿನ್ನೆ ನೋಡದೇ ಇರುವವರು ತಪ್ಪದೆ ನೋಡಿ, ನಿಮಗೇನನ್ನಿಸಿತು ಹೇಳಿ.